Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ರೆಕ್ಕೆ ಬಿಚ್ಚಿ…
Share:
Poems May 8, 2024 ಕೆ.ಆರ್ ಮಂಗಳಾ

ರೆಕ್ಕೆ ಬಿಚ್ಚಿ…

‘ವರ್ಚ್ಯುವಲ್ ವರ್ಲ್ಡ್’ ಎನುವುದು
ಕಂಪ್ಯೂಟರ್ ಯುಗದ ಕೂಸಲ್ಲ ಸ್ವಾಮಿ…
ಅದರದು ಅನಾದಿ ಇತಿಹಾಸ
ಸರ್ವವ್ಯಾಪಿ, ಸರ್ವಶಕ್ತ ಸ್ವರೂಪಿ
ಸೂರ್ಯನ ಸುತ್ತ ಭೂಮಿ ಸುತ್ತಿದರೆ
ಇದರ ಕಿರುಬೆರಳಲ್ಲೇ
ಜಗ ಗಿರಕಿ ಹೊಡೆಯುತಿದೆ

ಹೇಗೆನ್ನುವಿರಾ?
ಗಮನವಿಟ್ಟು ಆಲಿಸಿ-

ಹುಟ್ಟಿ ಕಣ್ಣುಬಿಡುವ ಜೀವಕೆ
ನೆಲದ ನಂಟೇ ಸಿಗದಂತೆ
ಸುತ್ತುವವು ಜೋಡಿ ಸರಗಂಟು
ಹೆಸರು- ಮನೆತನ, ಗಂಡು- ಹೆಣ್ಣು,
ಗಳಿಗೆ- ನಕ್ಷತ್ರ, ಜಾತಿ- ವಿಜಾತಿ,
ನಮ್ಮವರು- ತಮ್ಮವರು, ಸರಿ- ತಪ್ಪು,
ಗೌರವ- ಅಭಿಮಾನಗಳ ಸ್ಥಾನಮಾನ
ಗೆಲುವು- ಸೋಲುಗಳ ಜಿದ್ದಾಜಿದ್ದಿ…

ಬೆಳೆಯುತ್ತಾ ಹೋದಂತೆ ಕಾಲಿಗೂ,ಕೈಗೂ,
ಇನ್ನಷ್ಟು ಸರಪಳಿಗಳ ಸರಮಾಲೆ
ಸುಖ-ಸವಲತ್ತುಗಳ ಹಂಬಲ,
ಕೂಡಿಗುಡ್ಡೆ ಹಾಕುವ ತೆವಲು
ಹಂಚಿಕೊಳ್ಳಲೊಪ್ಪದ ಜಿಗುಟು
ಜ್ಞಾನಿ ಎನಿಸಿಕೊಳುವ ಬಯಕೆ
ನಾಮುಂದು ತಾಮುಂದು ಎನುವ
ಮದ-ಮತ್ಸರಗಳ ಬಡಿವಾರ…

ಈ ನಡುವೆ ದೈವ ಭಕ್ತಿಯ ಸೋಗು
ಅರ್ಚನೆ- ಪೂಜೆ- ಆರಾಧನೆಗಳು
ವ್ರತ- ನೇಮ- ಉಪವಾಸಗಳು
ತೀರ್ಥಕ್ಷೇತ್ರ ಪುಣ್ಯಸ್ನಾನಗಳು
ಜಪ- ತಪ, ಯೋಗ- ಧ್ಯಾನಗಳು
ಕುಂಡಲಿನಿ ಜಾಗೃತಿಯ ಸರ್ಕಸ್ಸುಗಳು
ಚಕ್ರಗಳು, ಮಂಡಲಗಳು
ಶಾಸ್ತ್ರ ಪುರಾಣಗಳ ತಾಕೀತುಗಳು
ಧರ್ಮ– ಸಂಸ್ಕೃತಿಯ ಹೇರಿಕೆಗಳು
ಸಂಪ್ರದಾಯದ ಕಟ್ಟುಪಾಡುಗಳು…

ಸತ್ತವರಿಂದ, ಹೆತ್ತವರಿಂದ,
ನೆಂಟರಿಂದ, ನೆರೆಯವರಿಂದ,
ಶಾಲೆಯಿಂದ, ಓಣಿಗಳಿಂದ,
ಊರವರಿಂದ, ನಾಡವರಿಂದ,
ನೆನಪುಗಳಿಂದ, ನಂಬಿಕೆಗಳಿಂದ,
ತಲೆ ತಲೆಗೂ ಸಾಗಿಬಂದ
ಪಿತ್ರಾರ್ಜಿತ ಬಳುವಳಿಗಳಿವು…

ಈ ಅನಂತ ಆವರಣಗಳ
ಬಂಧವೇ ‘ವರ್ಚ್ಯುವಲ್ ರಿಯಾಲಿಟಿ’
ಇರುವಂತೇ ತೋರುತಿರುವ
ನಿಜವೆಂದೇ ನಂಬಿಸಿರುವ
ನಾವಪ್ಪಿ ಜೀವಿಸುವ ಮನೋಲೋಕ,
ಕಣ್ಣಿಗೆ ಕಾಣದ, ಮುಟ್ಟಲು ಸಿಗದ
‘ವರ್ಚ್ಯುವಲ್ ರಿಯಾಲಿಟಿ’
ವಸ್ತುಜಗತ್ತಿನ ನೆಲೆಯರಿಯದ
ಈ ಭ್ರಮೆಗಳಿಗೆಲ್ಲ ಜೀತಕಿದ್ದು
ದಿನರಾತ್ರಿ ಸೆಣಸಾಡಿ, ತೆವಳಿದ್ದೇ ಬಂತು
ರೆಕ್ಕೆಗಳು ಇರುವುದೇ ಮರೆತು ಹೋಗಿತ್ತು
ಜೊತೆಯಲೇ ಪ್ರಾಣಾಧಾರವಾಗಿದ್ದ
‘ರಿಯಲ್ ವರ್ಲ್ಡ್’ ಕಾಣದಾಗಿತ್ತು…

ಸಂತರು ತೋರಿದ, ಶರಣರು ಬದುಕಿದ
ಮಹಂತರು ಕಂಡ ನಿಜದ ನೆಲೆಯಲ್ಲಿ
ನಿರೀಕ್ಷೆಗಳಿಲ್ಲ, ನೋವುಗಳಿಲ್ಲ
ಬೇಕು-ಬೇಡಗಳ ಸುಳಿಗಳಿಲ್ಲ
ಸಂದೇಹಗಳಿಲ್ಲ, ಸಂಕುಚಿತತೆಯಿಲ್ಲ
ಪೂರ್ವಾಗ್ರಹಗಳಿಲ್ಲ, ಪರನಿಂದೆಗಳಿಲ್ಲ
ನಾನೀನೆಂಬ ಬೇಧಗಳಿಲ್ಲ
ನಿನ್ನೆಯ ಹಳಹಳಿಕೆಗಳಿಲ್ಲ
ನಾಳೆಯ ಹಳವಂಡಗಳಿಲ್ಲ
ಅದು ನಿರಾಳದಾಗಸದ ಪ್ರಶಾಂತತಾಣ

ಹಾರಲರಿಯದ ನಮ್ಮ ರೆಕ್ಕೆಗಳಿಗೆ
ಬಲವೂ ಬೇಕು, ಛಲವೂ ಬೇಕು
ಸುಳ್ಳಿನಾವರಣಗಳಿಂದ
ಬಿಡಿಸಿಕೊಳುವ ಶ್ರದ್ಧೆ ಬೇಕು
‘ನಿನ್ನ ಸ್ವಾತಂತ್ರ್ಯದಿ ನೀನಿರು ಮಗು’
ಎನುವ ಗುರು ವಾಕ್ಯದ ಸೂಚನೆಯಲಿ
ಬಿಡುಗಡೆಯ ದಾರಿ ಕಾಣಬೇಕು
ರೆಕ್ಕೆಗಳ ಬಿಚ್ಚಿ ಚಿಮ್ಮಬೇಕು.

Previous post ಗುಟುಕು ಆಸೆ…
ಗುಟುಕು ಆಸೆ…
Next post ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…

Related Posts

ನೆಟ್ಟ ನಂಜು ಹಾಲೀಂಟದು
Share:
Poems

ನೆಟ್ಟ ನಂಜು ಹಾಲೀಂಟದು

June 5, 2021 Bayalu
ಯಾರ ಮನೆ ಯಾರ ತೆನೆ ಯಾರ ಅನ್ನ ಯಾರ ಚಿನ್ನ ಸಾವಲಿ ಜೊತೆ ಬರಲಿಹುದೆ ಕಟ್ಟಿ ಒಯ್ಯಲಾಗುವುದೆ ಆ ಬಂಧು ಈ ಬಳಗ ಆ ಹಣವು ಈ ಎಣೆಯು ಕಟ್ಟು ಕಟ್ಟಿ ಇಟ್ಟ ಗಂಟು ಯಾರಿಗೊ ಹೋಗಲಿಕುಂಟು...
ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...

Comments 2

  1. ಶ್ರದ್ಧಾನಂದ ಸ್ವಾಮೀಜಿ, ವಿಜಯಪುರ
    May 9, 2024 Reply

    ರೆಕ್ಕೆ ಬಿಚ್ಚಿ ಕವನ ಓದುವುದರಲ್ಲಿ ಅನಂತ ಆಗಸದಿ ಹೊಸ ಬೆಳಕಿನ ಅರಿವಿನ ರವಿಯ ಕಂಡಂತೆ ಆಯಿತು.

  2. Padmalaya
    May 16, 2024 Reply

    ಭಾಷೆ ಇನ್ನೂ ಸ್ವಲ್ಪ ಬದಲಾದರೆ ಚೆಂದ.ನಿರೂಪಣೆ ಮಾಡುವಾಗ ಎಚ್ಚರವಾಗಿರಬೇಕಕಮ್ಮ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
July 10, 2023
ಮತ್ರ್ಯಲೋಕದ ಮಹಾಮನೆ
ಮತ್ರ್ಯಲೋಕದ ಮಹಾಮನೆ
January 15, 2026
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ನೀನು ನಾನಲ್ಲ…
ನೀನು ನಾನಲ್ಲ…
July 21, 2024
ಮೀನಿನ ಬಯಕೆ
ಮೀನಿನ ಬಯಕೆ
June 10, 2023
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
Copyright © 2026 Bayalu