ಬಯಲಾದ ದೇವರು
ಈ
ದೇವರು
ಒಂದು ಕನಸು
ನಿಜವೂ ಅಹುದು
ಸುಳ್ಳೂ ಅಹುದು
ಕಲ್ಪನೆಯ ಹಾಗೆ
ಕಾಣುವುದು ಕಾಣದು
ನಂಬಿದರೆ ಕೇಡಿಲ್ಲ
ನಂಬದಿರಲೂ ಕೇಡಿಲ್ಲ
ಕೇಡೆಲ್ಲವೂ ನನ್ನವು
ಈ
ಸುಳ್ಳಿಗೊಂದು ಕಾಣಿಸಲಾರೆ ನಿಜ
ಹುಡುಕುತಿರುವೆ ಸತ್ಯ ಮಿಥ್ಯ
ಮೂಗನ ಕನಸೊಂದು ಮೌನದ ಮೊನೆಯಲಿದೆ
ಸುಳ್ಳು ಕತೆಗಳ ಸತ್ಯದ ಹುಡುಕಾಟ
ಜೀವ ಮರೆಯ ಸಾವು
ಸಾವಿನ ಮರೆಯ ಜೀವನ
ಬದುಕಿನ ಮರೆಯ ಬಯಲು
ಒಣಗಿದ ಎಲೆ
ಉದುರಲು ಕಾಯುತಿರುವ ಚಿಗುರು
ಮೌನವಾದಷ್ಟೂ ಕ್ಷೇಮ
ಹೆತ್ತ ಕರುವ ನೆಕ್ಕಿ ನೆಕ್ಕಿ ತೊಳೆದು ನಿಲಿಸುವ ತಾಯತನ
ನಾ ಹೆತ್ತ ಕೂಸಲ್ಲವೇ…
ಈ ದೇವರು ಬಯಲೇ…





Comments 3
Vijaya Bagevadi
Jan 20, 2026ಸುಳ್ಳು ಕತೆಗಳ ಸತ್ಯದ ಹುಡುಕಾಟ😟
Dr. Umesh Soraba
Jan 23, 2026ಜ್ಯೋತಿಲಿಂಗಪ್ಪ ಶಿವನಕೆರೆ ಅವರ ಕವಿತೆಗಳಿಗೆ ಭಾವಲೋಕದ ಸತ್ಯ-ಮಿಥ್ಯಗಳೊಂದಿಗೆ ಸೆಣಸುವ ಆರೋಗ್ಯಕರ ಜವಾಬ್ದಾರಿಯ ನಡೆಯೊಂದು ಇದ್ದೇ ಇದೆ. ಇದು ‘ಬಯಲಾದ ದೇವರು’ ಕವಿತೆಯಲ್ಲೂ ಮುಂದುವರೆದಿರುವುದನ್ನು ಕಾಣಬಹುದು… ದೇವರ ಅಸ್ತಿತ್ವದ ಕುರಿತು ಈಗಾಗಲೇ ಇರುವ ಪ್ರಚಲಿತ ವ್ಯಾಖ್ಯಾನ-ವಿವರಣೆಗಳ ಮಧ್ಯೆ ಈ ಕವಿತೆಯಲ್ಲಿ ದೇವರು ಕುರಿತು ಆಲೋಚಿಸಿರುವ ಬಗೆ ಭಿನ್ನವೂ ಆಪ್ತವೂ ಆದುದು. ಈ ದೇವರನ್ನು ನಂಬಿದರೂ ಕೇಡಿಲ್ಲ…. ನಂಬದಿರಲೂ ಕೇಡಿಲ್ಲ…. ಒಣಗಿದ ಎಲೆ ಉದುರಲು ಕಾಯುತಿರುವ ಚಿಗುರಿನಂತೆ ಈ ದೇವರು ಮರಮರಳಿ ಹೊಸತಾಗುವ ರೂಪಕ. ಹುಟ್ಟು- ಸಾವುಗಳ ಮಧ್ಯೆ ಬದುಕಿನ ಸ್ಥಿತಿಸ್ಥಾಪಕತೆಗೆ ಕಾರಕ… ಹೀಗೆ ದೇವರು ಮತ್ತು ದೇವರ ಅಸ್ತಿತ್ವ ಮಾನವ ಪ್ರಜ್ಞೆಯಲ್ಲಿ ನಿಂತ ಬಗೆಯನ್ನು ಕವಿ ಇಲ್ಲಿ ಭಾವಿಸಿದ ಮತ್ತು ಭಾಷ್ಯೀಕರಿಸಿದ ಬಗೆ ವಿಶಿಷ್ಟವಾಗಿದೆ. ಕವಿಗೆ ಅಭಿನಂದನೆಗಳು.
ನವೀನ್ ಕುಮಾರ್, ಬೆಟಗೇರಿ
Feb 5, 2026ನಿಜ, ಸುಳ್ಳು ಎರಡೂ ಆಗಿರುವುದರಿಂದಲೇ ಆ ದೇವರು ಮನುಷ್ಯನ ಹಳಬಂಡ ಕನಸು, ಕವನ ಚೆನ್ನಾಗಿದೆ.