Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನೆಂಬ ನಿನಾದ…
Share:
Poems January 15, 2026 ಕೆ.ಆರ್ ಮಂಗಳಾ

ನಾನೆಂಬ ನಿನಾದ…

ನಾ ಹುಟ್ಟುವ ಮುನ್ನ
ಹೇಗಿದ್ದೆ ನೆನಪಿಲ್ಲಾ
ಹುಟ್ಟಿನೊಡನೆ
ಬಂದ ಬಳುವಳಿಯೇ
ನಾನೆಂಬ ಎಳೆ
ಈ ಅಹಮಿಕೆಗೆ
ಪ್ರಾಣ ಒತ್ತೆಯಿಟ್ಟು
ಎಷ್ಟು ಯುಗಗಳಾದವು?

ಒಂದೆಳೆ ಇದ್ದುದು
ಒತ್ತೊತ್ತಾಗಿ ಸೇರುತ್ತಾ
ಬುಟ್ಟಿಯಾಗಿ, ಬಟ್ಟೆಯಾಗಿ
ಬಲೆಯಾಗಿ ನನ್ನ
ತನ್ನೊಳು ಬಂಧಿಸಿದ್ದ
ತಿಳಿಸಲು ನೀನೇ
ಬರಬೇಕಾಯಿತು ಗುರುವೇ.

ತಾ ಬೀಗಲು
ಒಂದೊಂದ ಹೆಸರಿಟ್ಟು
ರೂಪ ಕೊಟ್ಟು,
ಬಣ್ಣ ತುಂಬಿ
ನಂಟನಂತೆ, ನಲ್ಲನಂತೆ
ಚಂದದ ಮಾತುಗಳಲ್ಲಿ
ನಿಜವ ಮರೆಸುತ್ತಾ
ಕಾವಲುಗಾರನಂತೆ
ತನ್ನ ಹಿತವನೇ ಕಾವುದು

ತನ್ನಿರುವಿನ
ಸುಳುಹು ಸಿಗದಂತೆ
ನಾಜೂಕಾಗಿ
ಕಾರ್ಯಸಾಧಿಸುವ
ಅದರ ಪಟ್ಟುಗಳನರಿತು
ಕೋಡ ಹಿಡಿದು
ನೆಲಕ್ಕೆ ಚಚ್ಚಿ
ಕಂಡಲ್ಲಿ ಗುಂಡು ಸಿಡಿಸಿ
ಕೊಂದೇ ಬಿಟ್ಟೆನೆಂದು
ಅಂದುಕೊಳ್ಳುವಾಗಲೇ
ಇನ್ನೆಲ್ಲೋ ಚಿಗಿತು
ಮತ್ತೆಲ್ಲೋ
ಹೂ-ಕಾಯಿ ಬಿಟ್ಟು
ಕನ್ನಡಿಯ ಬಿಂಬದಂತೆ
ಅಣಕಿಸುತ್ತದೆ…
ಮುಪ್ಪಿಲ್ಲದುದಕೆ
ಸಾವುಂಟೆ?
ನನಗೂ- ನಿನಗೂ
ನಡುವೆ ನಿಂತಿದೆ
ಉಸಿರುಗಟ್ಟಿಸುವ
ಗಟ್ಟಿಗಾಜಿನ ಪರದೆ.

ಸಿಟ್ಟು- ಸೆಡವುಗಳ
ನೋವು ಕ್ಲೇಷಗಳ
ಭವದ ಬೇರು
ಎಲ್ಲಿದೆ ಎನುವುದ
ನಾನೀಗ ಬಲ್ಲೆ
ಒಳಗೂ-ಹೊರಗೂ
ತನಗಾಗಿಯೇ
ತಡಬಡಿಸುತ್ತದೆ
ಚೂರು ಧಕ್ಕೆಯಾದರೂ
ಸಿಡಿಲು ಬಡಿದಂತೆ
ಚಡಪಡಿಸುತ್ತದೆ
ಒತ್ತುತ್ತದೆ
ಎದೆ ಮೇಲೆ ಕುಳಿತು
ಮಣಭಾರದಂತೆ
ತೊಲಗಿಸು ತಂದೆ
ನಾನೆಂಬ ಹೊರೆಯ.

ಅರಿವಿನ ರೆಪ್ಪೆ
ತೆರೆಯದ ಕೂಸಿಗೆ
ಬಯಲ ಅನಾವರಣ!
ಮಾಗಿ ಕಾಲದಲಿ
ವಸಂತದ ವರ್ಣನೆಯೇ?
ನಮ್ಮಿಬ್ಬರ ನಡುವೆ
ನೆಲ-ಮುಗಿಲಿನಂತರ
ಕರುಣೆ ಇರಲಿ ಗುರುವೆ.

ಗುರು:
ನೆರಳಲಿ ನಿಂತು
ಕತ್ತಲು ಎನುವರೆ?
ಉಸಿರೇ ಇಲ್ಲದ
ನೆಲೆಯೇ ಕಾಣದ
ತೃಣಕಣ ಹಮ್ಮಿಗೆ
ಹೆದರುವುದೇ?

ಕೂಗಿ ಕರೆದರೂ
ಕಿವಿಗೊಡದಿರು
ಹತ್ತಿರ ಬಂದರೂ
ಗಮನಿಸದಿರು
ಎದುರೇ ನಿಂತರೂ
ಉತ್ತರಿಸದಿರು
ಮಾತಿನ ಕೂಟಕೆ
ಮರುಳಾಗದಿರು
ಮೌನದೊಳಗೂ
ಪಿಸುನುಡಿಯದಿದ್ದೊಡೆ
ಕೇಳದು ಎಂದಿಗೂ
ನಾನೆಂಬ ನಿನಾದ.

ಅರಿವಿಗೂ- ನಿನಗೂ
ಕೂದಲೆಳೆಯಂತರ
ಕೊರಗುವುದೇಕೆ ಕಂದಾ?
ಬೀಗುವ ಹಮ್ಮೇ
ಆಗುವ ಹಂಬಲ
ಎರಡೂ ಬೇಡ ಕೂಸೇ
ನೀ ನೀನಾಗಿದ್ದರೆ
ಅದುವೆ ಚೆನ್ನ
ಈ ಮರ್ಮವ ನೀನರಿಯೇ

ನಿನ್ನೆ-ನಾಳೆಗಳ
ನಂಟನು ಬಿಟ್ಟರೆ
ನಾನೆಂಬುದರ
ಸೊಂಟವೇ ಮುರಿವುದು
ನಿನ್ನ ಕಣ್ಣಲೇ
ನಿನ್ನನು ಕಂಡರೆ
ಹಮ್ಮಿನ ಭಾವವೇ
ಕರಗುವುದು.

ಈ ಕ್ಷಣದಲಿ
‘ಆ ಇಗೋ’ ಎಲ್ಲಿದೆ?
ಅದು ಕಾಲದ ಬಾಗಿಲ
ಕಾಯುವ ಕಾವಲು.
ಬಯಲ ಪ್ರೀತಿಯ
ಅನಂತದ ಶಿಶುವಿಗೆ
ಕಾಲದ ಸೂತಕ
ಕಾಡುವುದೇ?

Previous post ಬಯಲಾದ ದೇವರು
ಬಯಲಾದ ದೇವರು
Next post ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ

Related Posts

ಎಲ್ಲಿದ್ದೇನೆ ನಾನು?
Share:
Poems

ಎಲ್ಲಿದ್ದೇನೆ ನಾನು?

February 10, 2023 ಕೆ.ಆರ್ ಮಂಗಳಾ
ನರನಾಡಿಗಳಲ್ಲೋ ರಕ್ತ ಮಾಂಸಗಳಲ್ಲೋ ಮಿದುಳಿನಲೋ ಹೃದಯದಲೋ, ಚರ್ಮದ ಹೊದಿಕೆಯಲೋ ಎಲ್ಲಿದ್ದೇನೆ ನಾನು? ಬಾಡುವ ದೇಹದಲೋ ಬದಲಾಗೋ ವಿಚಾರಗಳಲೋ ಬೆಂಬಿಡದ ಭಾವಗಳಲ್ಲೋ ಬೇರೂರಿದ...
ಎಲ್ಲಿದೆ ಈ ಕ್ಷಣ?
Share:
Poems

ಎಲ್ಲಿದೆ ಈ ಕ್ಷಣ?

October 21, 2024 ಕೆ.ಆರ್ ಮಂಗಳಾ
ವರ್ತಮಾನದಲ್ಲಿ ನಡೆಯಲರಿಯದೆ ನುಡಿಯಲರಿಯದೆ ಬಾಳಲರಿಯದೆ ಕಳದೇ ಹೋಗುವ ಬದುಕು ಕಾಣಲಾರದು ಯಾಕೆ- ‘ಈ ಕ್ಷಣ’? ರಾಗಾಲಾಪಗಳ ಬಣ್ಣಗಳಲಿ ಮಿಂದೇಳುತಿರುವಾಗ ಬಯಕೆ ಬೇಗುದಿಗಳಲಿ...

Comments 2

  1. Dr.Basavaraj Sabarad
    Jan 17, 2026 Reply

    ಮಂಗಳಾ ಅವರ ಕವಿತೆಗಳು ತುಂಬಾ ಅರ್ಥಪೂರ್ಣವಾಗಿವೆ.ಅಭಿನಂದನೆಗಳು.

  2. Dr. Shraddhananda swamiji, Vijayapura
    Feb 5, 2026 Reply

    The poem is really good.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
ಕಾಣಿಕೆಯ ರೂಪದ ಕಪ್ಪುಹಣ
ಕಾಣಿಕೆಯ ರೂಪದ ಕಪ್ಪುಹಣ
April 29, 2018
ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
September 14, 2024
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಲಿಂಗಾಯತ ಧರ್ಮ ಸಂಸ್ಥಾಪಕರು
ಲಿಂಗಾಯತ ಧರ್ಮ ಸಂಸ್ಥಾಪಕರು
April 6, 2024
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
Copyright © 2026 Bayalu