Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನೆಂಬ ನಿನಾದ…
Share:
Poems January 15, 2026 ಕೆ.ಆರ್ ಮಂಗಳಾ

ನಾನೆಂಬ ನಿನಾದ…

ನಾ ಹುಟ್ಟುವ ಮುನ್ನ
ಹೇಗಿದ್ದೆ ನೆನಪಿಲ್ಲಾ
ಹುಟ್ಟಿನೊಡನೆ
ಬಂದ ಬಳುವಳಿಯೇ
ನಾನೆಂಬ ಎಳೆ
ಈ ಅಹಮಿಕೆಗೆ
ಪ್ರಾಣ ಒತ್ತೆಯಿಟ್ಟು
ಎಷ್ಟು ಯುಗಗಳಾದವು?

ಒಂದೆಳೆ ಇದ್ದುದು
ಒತ್ತೊತ್ತಾಗಿ ಸೇರುತ್ತಾ
ಬುಟ್ಟಿಯಾಗಿ, ಬಟ್ಟೆಯಾಗಿ
ಬಲೆಯಾಗಿ ನನ್ನ
ತನ್ನೊಳು ಬಂಧಿಸಿದ್ದ
ತಿಳಿಸಲು ನೀನೇ
ಬರಬೇಕಾಯಿತು ಗುರುವೇ.

ತಾ ಬೀಗಲು
ಒಂದೊಂದ ಹೆಸರಿಟ್ಟು
ರೂಪ ಕೊಟ್ಟು,
ಬಣ್ಣ ತುಂಬಿ
ನಂಟನಂತೆ, ನಲ್ಲನಂತೆ
ಚಂದದ ಮಾತುಗಳಲ್ಲಿ
ನಿಜವ ಮರೆಸುತ್ತಾ
ಕಾವಲುಗಾರನಂತೆ
ತನ್ನ ಹಿತವನೇ ಕಾವುದು

ತನ್ನಿರುವಿನ
ಸುಳುಹು ಸಿಗದಂತೆ
ನಾಜೂಕಾಗಿ
ಕಾರ್ಯಸಾಧಿಸುವ
ಅದರ ಪಟ್ಟುಗಳನರಿತು
ಕೋಡ ಹಿಡಿದು
ನೆಲಕ್ಕೆ ಚಚ್ಚಿ
ಕಂಡಲ್ಲಿ ಗುಂಡು ಸಿಡಿಸಿ
ಕೊಂದೇ ಬಿಟ್ಟೆನೆಂದು
ಅಂದುಕೊಳ್ಳುವಾಗಲೇ
ಇನ್ನೆಲ್ಲೋ ಚಿಗಿತು
ಮತ್ತೆಲ್ಲೋ
ಹೂ-ಕಾಯಿ ಬಿಟ್ಟು
ಕನ್ನಡಿಯ ಬಿಂಬದಂತೆ
ಅಣಕಿಸುತ್ತದೆ…
ಮುಪ್ಪಿಲ್ಲದುದಕೆ
ಸಾವುಂಟೆ?
ನನಗೂ- ನಿನಗೂ
ನಡುವೆ ನಿಂತಿದೆ
ಉಸಿರುಗಟ್ಟಿಸುವ
ಗಟ್ಟಿಗಾಜಿನ ಪರದೆ.

ಸಿಟ್ಟು- ಸೆಡವುಗಳ
ನೋವು ಕ್ಲೇಷಗಳ
ಭವದ ಬೇರು
ಎಲ್ಲಿದೆ ಎನುವುದ
ನಾನೀಗ ಬಲ್ಲೆ
ಒಳಗೂ-ಹೊರಗೂ
ತನಗಾಗಿಯೇ
ತಡಬಡಿಸುತ್ತದೆ
ಚೂರು ಧಕ್ಕೆಯಾದರೂ
ಸಿಡಿಲು ಬಡಿದಂತೆ
ಚಡಪಡಿಸುತ್ತದೆ
ಒತ್ತುತ್ತದೆ
ಎದೆ ಮೇಲೆ ಕುಳಿತು
ಮಣಭಾರದಂತೆ
ತೊಲಗಿಸು ತಂದೆ
ನಾನೆಂಬ ಹೊರೆಯ.

ಅರಿವಿನ ರೆಪ್ಪೆ
ತೆರೆಯದ ಕೂಸಿಗೆ
ಬಯಲ ಅನಾವರಣ!
ಮಾಗಿ ಕಾಲದಲಿ
ವಸಂತದ ವರ್ಣನೆಯೇ?
ನಮ್ಮಿಬ್ಬರ ನಡುವೆ
ನೆಲ-ಮುಗಿಲಿನಂತರ
ಕರುಣೆ ಇರಲಿ ಗುರುವೆ.

ಗುರು:
ನೆರಳಲಿ ನಿಂತು
ಕತ್ತಲು ಎನುವರೆ?
ಉಸಿರೇ ಇಲ್ಲದ
ನೆಲೆಯೇ ಕಾಣದ
ತೃಣಕಣ ಹಮ್ಮಿಗೆ
ಹೆದರುವುದೇ?

ಕೂಗಿ ಕರೆದರೂ
ಕಿವಿಗೊಡದಿರು
ಹತ್ತಿರ ಬಂದರೂ
ಗಮನಿಸದಿರು
ಎದುರೇ ನಿಂತರೂ
ಉತ್ತರಿಸದಿರು
ಮಾತಿನ ಕೂಟಕೆ
ಮರುಳಾಗದಿರು
ಮೌನದೊಳಗೂ
ಪಿಸುನುಡಿಯದಿದ್ದೊಡೆ
ಕೇಳದು ಎಂದಿಗೂ
ನಾನೆಂಬ ನಿನಾದ.

ಅರಿವಿಗೂ- ನಿನಗೂ
ಕೂದಲೆಳೆಯಂತರ
ಕೊರಗುವುದೇಕೆ ಕಂದಾ?
ಬೀಗುವ ಹಮ್ಮೇ
ಆಗುವ ಹಂಬಲ
ಎರಡೂ ಬೇಡ ಕೂಸೇ
ನೀ ನೀನಾಗಿದ್ದರೆ
ಅದುವೆ ಚೆನ್ನ
ಈ ಮರ್ಮವ ನೀನರಿಯೇ

ನಿನ್ನೆ-ನಾಳೆಗಳ
ನಂಟನು ಬಿಟ್ಟರೆ
ನಾನೆಂಬುದರ
ಸೊಂಟವೇ ಮುರಿವುದು
ನಿನ್ನ ಕಣ್ಣಲೇ
ನಿನ್ನನು ಕಂಡರೆ
ಹಮ್ಮಿನ ಭಾವವೇ
ಕರಗುವುದು.

ಈ ಕ್ಷಣದಲಿ
‘ಆ ಇಗೋ’ ಎಲ್ಲಿದೆ?
ಅದು ಕಾಲದ ಬಾಗಿಲ
ಕಾಯುವ ಕಾವಲು.
ಬಯಲ ಪ್ರೀತಿಯ
ಅನಂತದ ಶಿಶುವಿಗೆ
ಕಾಲದ ಸೂತಕ
ಕಾಡುವುದೇ?

Previous post ಬಯಲಾದ ದೇವರು
ಬಯಲಾದ ದೇವರು
Next post ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ

Related Posts

ತುದಿಗಳೆರಡು ಇಲ್ಲವಾದಾಗ…
Share:
Poems

ತುದಿಗಳೆರಡು ಇಲ್ಲವಾದಾಗ…

March 9, 2023 ಕೆ.ಆರ್ ಮಂಗಳಾ
ಭೂಮಿ- ಆಕಾಶದ ದೂರ ಅಳಿದಾಗ ಭುವಿಯ ಸೆಳೆತವೂ ಇಲ್ಲ ಆಗಸದ ಎಳೆತವೂ ಇಲ್ಲ. ಹಗಲು- ರಾತ್ರಿಗಳ ಭ್ರಮಣ ಸರಿದಾಗ ಬೆಳಗಿನ ಬಯಕೆಯೂ ಇಲ್ಲ ಕತ್ತಲೆಯ ಭಯವೂ ಇಲ್ಲ. ಧರ್ಮ- ಅಧರ್ಮಗಳ...
ಆಸರೆ
Share:
Poems

ಆಸರೆ

August 6, 2022 ಜ್ಯೋತಿಲಿಂಗಪ್ಪ
ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...

Comments 2

  1. Dr.Basavaraj Sabarad
    Jan 17, 2026 Reply

    ಮಂಗಳಾ ಅವರ ಕವಿತೆಗಳು ತುಂಬಾ ಅರ್ಥಪೂರ್ಣವಾಗಿವೆ.ಅಭಿನಂದನೆಗಳು.

  2. Dr. Shraddhananda swamiji, Vijayapura
    Feb 5, 2026 Reply

    The poem is really good.

Leave a Reply to Dr.Basavaraj Sabarad Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
May 8, 2024
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಖಾಲಿ ಕೊಡ ತುಳುಕಿದಾಗ…
ಖಾಲಿ ಕೊಡ ತುಳುಕಿದಾಗ…
October 5, 2021
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಯಾಲಪದದ ಸೊಗಡು
ಯಾಲಪದದ ಸೊಗಡು
December 13, 2024
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
Copyright © 2026 Bayalu