Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ತುದಿಗಳೆರಡು ಇಲ್ಲವಾದಾಗ…
Share:
Poems March 9, 2023 ಕೆ.ಆರ್ ಮಂಗಳಾ

ತುದಿಗಳೆರಡು ಇಲ್ಲವಾದಾಗ…

ಭೂಮಿ- ಆಕಾಶದ ದೂರ ಅಳಿದಾಗ
ಭುವಿಯ ಸೆಳೆತವೂ ಇಲ್ಲ
ಆಗಸದ ಎಳೆತವೂ ಇಲ್ಲ.

ಹಗಲು- ರಾತ್ರಿಗಳ ಭ್ರಮಣ ಸರಿದಾಗ
ಬೆಳಗಿನ ಬಯಕೆಯೂ ಇಲ್ಲ
ಕತ್ತಲೆಯ ಭಯವೂ ಇಲ್ಲ.

ಧರ್ಮ- ಅಧರ್ಮಗಳ ವಾದಗಳು ಸೋತಾಗ
ಧರ್ಮಾಂಧತೆಯೂ ಇಲ್ಲ
ಅಧರ್ಮದ ಜಂಜಡವೂ ಇಲ್ಲ.

ಪಾಪ- ಪುಣ್ಯಗಳ ಗುಟ್ಟು ಬಿಚ್ಚಿದಾಗ
ನರಕ ಭೀತಿಯೂ ಇಲ್ಲ
ಸ್ವರ್ಗದ ಆಸೆಯೂ ಇಲ್ಲ.

ದ್ವೈತ- ಅದ್ವೈತಗಳ ಮೇಲಾಟ ನಿಂತಾಗ
ಎರಡೆಂಬ ಭಿನ್ನತೆ ಇಲ್ಲ
ಬ್ರಹ್ಮ ನಾನೆಂಬ ಧಾಷ್ಟ್ಯವೂ ಇಲ್ಲ.

ಸಾಕಾರ- ನಿರಾಕಾರಗಳ ಗೊಂದಲ ಬಿಟ್ಟಾಗ
ಮೂರ್ತಿಗಳ ಹಂಗೂ ಇಲ್ಲ
ಕಾಣದುದರ ಕಲ್ಪನೆಯೂ ಇಲ್ಲ.

ರೂಪ- ವಿರೂಪಗಳ ದಿಟ್ಟಿಸಿ ಕಂಡಾಗ
ಸೌಂದರ್ಯದ ಬಣ್ಣನೆಯೂ ಇಲ್ಲ
ಕುರೂಪದ ಹೇವರಿಕೆಯೂ ಇಲ್ಲ.

ಸೋಲು- ಗೆಲುವುಗಳ ಒಳಹೊಕ್ಕು ಬಂದಾಗ
ಬೀಳುವ ಭಯವೂ ಇಲ್ಲ
ಬೀಗುವ ಭ್ರಮೆಯೂ ಇಲ್ಲ.

ಸುಖ- ದುಃಖಗಳ ಸುಳಿಯ ತೆಗೆದಾಗ
ಹಿತದ ಮೈಮರೆವಿಕೆ ಇಲ್ಲ
ತಲ್ಲಣದ ದುಗುಡವೂ ಇಲ್ಲ.

ಜ್ಞಾನ- ಅಜ್ಞಾನದ ಜಾಡ ತಿಳಿದಾಗ
ನಾ ಬಲ್ಲೆನೆಂಬ ಕೋಡೂ ಇಲ್ಲ
ಅರಿಯೆನೆಂಬ ಅಳುಕೂ ಇಲ್ಲ.

ಶ್ರೇಷ್ಠ- ಕನಿಷ್ಠತೆಯ ಹುಸಿಯನರಿತಾಗ
ಹಿರಿದೆಂಬ ಹೊಗಳಿಕೆ ಇಲ್ಲ
ಕಿರಿದೆಂಬ ತಾತ್ಸಾರವಿಲ್ಲ.

ಇದೆ- ಇಲ್ಲಗಳ ಹೊಯ್ದಾಟ ಮರೆಯಾದಾಗ
ಇರುವುದರ ಗುಂಗೂ ಇಲ್ಲ
ಇಲ್ಲದುದರ ಗುಲ್ಲೂ ಇಲ್ಲ.

ಬೇಕು- ಬೇಡಗಳ ಆಯ್ಕೆಗಳು ಸರಿದಾಗ
ಇನ್ನೇನಿದೆ ಹಾತೊರೆವುದಕೆ?
ಬೇಡೆಂದು ಬೇಸರಿಸುವುದಕೆ?

ತಾನು- ಎದಿರು ಎನುವ ಮಾಯೆ ಹರಿದಾಗ
ನಾನೆನ್ನುವ ಅಹಮಿಕೆ ಎಲ್ಲಿದೆ?
ನೀನೆನುವ ಬೇಧವಾದರೂ ಎಲ್ಲಿ?

Previous post ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
Next post ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ

Related Posts

ಮೀನಿನ ಬಯಕೆ
Share:
Poems

ಮೀನಿನ ಬಯಕೆ

June 10, 2023 ಡಾ. ಕೆ. ಎಸ್. ಮಲ್ಲೇಶ್
ಒಮ್ಮೆ ಒಂದು ಪುಟ್ಟ ಮೀನು ಈಜಿ ದಡದ ಬಳಿಗೆ ಬಂದು ಕೆರೆಯ ಪಕ್ಕ ಮನುಜನೊಬ್ಬನನ್ನು ಕಂಡಿತು ಬಟ್ಟಲಂತ ಕಣ್ಣ ತೆರೆದು ಪುಟ್ಟ ಮೀನು ನಗೆಯ ಸೂಸಿ ಗೆಳೆಯನಾಗು ನನಗೆ ಎನುತ ಅಂಗಲಾಚಿತು...
ಬಿಂಬ-ಪ್ರತಿಬಿಂಬ
Share:
Poems

ಬಿಂಬ-ಪ್ರತಿಬಿಂಬ

February 5, 2020 ಜ್ಯೋತಿಲಿಂಗಪ್ಪ
ನೀನು ಅಲ್ಲಿ ಉಂಟೆಂದು ನಾನು ಇಲ್ಲಿ ತೆವಳಿ ತೆವಳಿ ಬಳಲಿದೆ ನೀನು ಎಲ್ಲಿರುವೆ ಎಂಬುದು ನನ್ನ ಕಣ್ಣರಿವು ಎಂಬುದ ನಾನಲ್ಲದೆ ನೀನರಿದೆಯಾ ಹೇಳೇ ಅಕ್ಕಾ ಬೆಳಕ ತಿಂದಲ್ಲದೆ ಕನ್ನಡಿಯಲಿ...

Comments 3

  1. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Mar 11, 2023 Reply

    ನಿಜ..ಎರಡರ ಹಂಗು ತೊರೆದರೆ ಏನೂ ಉಳಿಯದು.ಸರಳವಾಗಿ ಹೇಳಿರುವ ಇರಿ.

  2. ಸುನಂದಾ ರಾಚಣ್ಣ, ದಾವಣಗೆರೆ
    Mar 12, 2023 Reply

    ತುದಿಗಳೆರಡು ಇಲ್ಲವಾದಾಗ ಏನು ಇವೆ, ಏನೂ ಇಲ್ಲ ಎಂದಾಗ, ಇದು ಭ್ರಮೆಯೋ, ಕಲ್ಪನೆಯೋ, ನಿಜವೋ ಸುಳ್ಳೋ ತಿಳಿಯದೇ ತಲೆಕೆರೆದುಕೊಂಡಾಗ ಸಿಕ್ಕಿದ್ದು ಬಯಲು, ಬರೀ ಬಯಲು, ಅಲ್ಲೇನು ಹುಡುಕಲಿ? ಆದಿ, ಅಂತ್ಯ ಎರಡೂ ಇಲ್ಲ, ಬದುಕು ಸಾಗುತಿದೆ, ಜೀವನ ಎಂಥ ವಿಸ್ಮಯ ಅಲ್ಲವೇ?

  3. ಅಂಬಾರಾಯ ಬಿರಾದಾರ
    Mar 14, 2023 Reply

    ತುದಿ ಮೊದಲಿಲ್ಲದ ಘನ ಬಯಲು
    👌👍👌👍

Leave a Reply to ಸುನಂದಾ ರಾಚಣ್ಣ, ದಾವಣಗೆರೆ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
February 11, 2022
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ನಾನು ಯಾರು?
ನಾನು ಯಾರು?
December 8, 2021
Copyright © 2026 Bayalu