Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿನ್ನದೊಂದು ಸ್ಪರ್ಶ
Share:
Poems February 16, 2026 ಕೆ.ಆರ್ ಮಂಗಳಾ

ನಿನ್ನದೊಂದು ಸ್ಪರ್ಶ

ಅಷ್ಟು ಸಲೀಸಲ್ಲಾ ಬಿಡು
ನಿನ್ನ ಕೈ ಹಿಡಿಯುವುದು
ಎದುರಿದ್ದೂ ಅವಿತಿರುವ
ನಿನ್ನಿರುವಿಗೆ ಅಡಿಯಿಡುವುದು…

ಇಲ್ಲೇ, ಇದೇ ಗಳಿಗೆಯಲ್ಲೇ…
ಈ ಕ್ಷಣವೇ…
ನೀನು ಪ್ರತ್ಯಕ್ಷವಂತೆ!
ಯಾರಾದರೂ ಬಂದಾರೆಯೇ
ಎಂದು ಕೈಚಾಚಿ
ಕಾಯುತ್ತಿರುವೆಯಂತೆ
ಗುರು ಹೀಗೆ ಹೇಳಿದಾಗ
ಎಷ್ಟು ಸುಲಭವೆಂದೆಣಿಸಿದ್ದೆ…

ಅಂದಿನಿಂದ ದಿನಬೆಳಗಾದರೆ
ನಿನ್ನ ಮುಟ್ಟುವ
ಒಂದೇ ಕೋರಿಕೆ
ಹಗಲು-ರಾತ್ರಿ
ನಿನ್ನದೊಂದು ಸ್ಪರ್ಶಕೆ
ಹಾತೊರೆವ ಮನಸ್ಸೇ
ನಿನ್ನ ತಲುಪದಂತೆ
ನೋಡಿಕೊಳ್ಳುವ ಸಂಚ
ತಿಳಿದು ಕಂಗಾಲಾದೆ!
ಹಂಬಲಿಸುವ ಮನದ
ಹುನ್ನಾರಗಳು ಒಂದೇ ಎರಡೇ…

ನೋಟದ ಮಿತಿಗೆ
ತೆರೆದು ನಿಂತ ಆಗಸವೂ
ಕಂಗಳೊಳಗೆ ಇಳಿಯದು!
ಕೇಳುವ ಮಿತಿಗೆ
ಮೌನದ ಭಾಷೆ ಕೇಳಿಸದು!
ಬಿಡದ ವಾಸನೆಗಳ ನಂಟು
ಬಗಲ ಮುಳ್ಳಾಗಿಹುದು!

ನಿನ್ನೂರ ನಕ್ಷೆ ಹಿಡಿದು
ಉಸಿರ ಎಳೆಯಗುಂಟ
ಇಳಿದುಬರುವಾಗ
ಮಾಯಗಾರನಂತೆ ನುಗ್ಗಿ
ಮೌನಕೆಡಸಿ ಮಾತಿಗೆಳೆದು
ದಿಕ್ಕುತಪ್ಪಿಸುವ ಚಿತ್ತದ ಕೇಡ
ಹೇಳಲಿ ಯಾರಿಗೆ?

ನಿನ್ನ ಜಾಡ ಹಿಡಿದು
ಎಚ್ಚರದಿ ನಡೆವಾಗಲೂ
ಯಾವುದೋ ನೆನಪುಗಳು
ಯಾರದೋ ಸದ್ದುಗಳು
ಒಂದರೊಳೊಂದು ತೂರಿ
ಎತ್ತೊಯ್ಯುವವು ದೂರಕೆ… ಬಹು ದೂರಕೆ…
ಅಂಗುಲಂಗುಲಕೆ ಸೀಳುವ
ಅಸಂಖ್ಯ ಹಾದಿಗಳತ್ತ
ಹೊರಹೊರಳಿ ದಣಿವವು ಕಾಲುಗಳು…
ಮತ್ತೆ ಆ ಗವ್ವನೆಯ ಕತ್ತಲೆ
ಗಪ್ಪೆಂದು ಅಮರಿಕೊಳ್ಳುವುದು.

ಅತ್ತ ತನ್ನ ಅಸ್ತಿತ್ವಕ್ಕಾಗಿ
ಚಡಪಡಿಸುವ ಮನಸೇ
ಶೂನ್ಯವಾಗಲೂ ಬಯಸುತ್ತಿದೆ…
ಇತ್ತ ತನ್ನ ಕೋಟಿ ರೂಪಗಳ
ತಾನೇ ಕೊಲ್ಲಲು
ಹಿಂದೇಟೂ ಹಾಕುತ್ತದೆ…
ಭವದೊಳು ಮುಳುಗಿಸಿ
ಬೆಪ್ಪಾಗಿ ನಿಲ್ಲುತ್ತದೆ…

ಬಲ್ಲೆ ನಾನು
ನನ್ನಿರುವಿಕೆಯಲ್ಲಿಯೇ
ನೀನಿರುವ ಗುಟ್ಟು!
ಏನ ಮಾಡಲಿ ಹೇಳು
ಈಜು ಬಲ್ಲವಳಲ್ಲಾ
ಒಳಸುಳಿವುಗಳ ಹರಿವು
ಅರಿತವಳಲ್ಲಾ
ಗುರುವಿನಂಗಿಯ ಚುಂಗ ಹಿಡಿದು
ಮಹಾಮೌನದ ಸಂಜ್ಞೆಗೆ
ಶರಣು ಬಂದಿರುವೆ.

Previous post ಕುರುಹೇ ಬಯಲು
ಕುರುಹೇ ಬಯಲು

Related Posts

ಗ್ರಹಣ
Share:
Poems

ಗ್ರಹಣ

December 9, 2025 ಡಾ. ಪಂಚಾಕ್ಷರಿ ಹಳೇಬೀಡು
ಗ್ರಹಣ ಹಿಡಿದದ್ದು ಯಾರಿಗೆ? ರವಿಗೋ, ಶಶಿಗೋ, ಮೂರ್ಖನಿಗೋ? ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು! ಸ್ಪರ್ಷ ಮೊದಲಿಲ್ಲ...
ನನ್ನ ಶರಣರು…
Share:
Poems

ನನ್ನ ಶರಣರು…

April 9, 2021 ಕೆ.ಆರ್ ಮಂಗಳಾ
ನನ್ನ ಶರಣರು ಅವರು- ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 1

  1. K S Mallesh
    Feb 17, 2026 Reply

    ನಿನ್ನದೊಂದು ಸ್ಪರ್ಷ ಒಳ್ಳೆಯ ಕವನ. ಕವನ ಎನ್ನುವುದಕ್ಕಿಂತಲೂ ಒಂದು ನಿಜ ಹಂಬಲಹೊತ್ತು ಹುಡುಕಾಡುತ್ತಿರುವ ವ್ಯಕ್ತಿಯೊಬ್ಬರ ಆತ್ಮಗಾಥೆ. ಬಿಡದ ಲೌಕಿಕದ ಸೆಳೆತಗಳಲ್ಲಿ ಸಿಲುಕಿ ಬೇಸತ್ತು  ಅಲೌಕಿಕಗಳೆಡೆಗೆ ಕಾತರಿಸುವ ಮನಕ್ಕೆ ಕಿಂಚಿತ್ ಅನುಗ್ರಹ ಸ್ಪರ್ಶ ರೂಪದಲ್ಲಿ
    ಸಿಕ್ಕರೆ ಸಾಕೆನಿಸಿದೆ.  ಸರಳ ಪದಗಳಲ್ಲಿ ತುಂಡು ಸಾಲುಗಳಲ್ಲಿ ಭಾವನೆಗಳ ಹೂಗೊಂಚಲಿದೆ. ನಿಮಗೆ ನಮನಗಳು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭವ ರಾಟಾಳ
ಭವ ರಾಟಾಳ
September 10, 2022
ಕಾಯಕಯೋಗಿನಿ ಕದಿರ ರೆಮ್ಮವ್ವೆ
ಕಾಯಕಯೋಗಿನಿ ಕದಿರ ರೆಮ್ಮವ್ವೆ
April 29, 2018
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಗುಟುಕು ಆಸೆ…
ಗುಟುಕು ಆಸೆ…
May 8, 2024
ಕೈಗೆಟುಕಿದ ಭಾವ ಬುತ್ತಿ
ಕೈಗೆಟುಕಿದ ಭಾವ ಬುತ್ತಿ
July 10, 2025
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಸೂರ್ಯ
ಸೂರ್ಯ
January 8, 2023
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
Copyright © 2026 Bayalu