Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿನ್ನದೊಂದು ಸ್ಪರ್ಶ
Share:
Poems February 16, 2026 ಕೆ.ಆರ್ ಮಂಗಳಾ

ನಿನ್ನದೊಂದು ಸ್ಪರ್ಶ

ಅಷ್ಟು ಸಲೀಸಲ್ಲಾ ಬಿಡು
ನಿನ್ನ ಕೈ ಹಿಡಿಯುವುದು
ಎದುರಿದ್ದೂ ಅವಿತಿರುವ
ನಿನ್ನಿರುವಿಗೆ ಅಡಿಯಿಡುವುದು…

ಇಲ್ಲೇ, ಇದೇ ಗಳಿಗೆಯಲ್ಲೇ…
ಈ ಕ್ಷಣವೇ…
ನೀನು ಪ್ರತ್ಯಕ್ಷವಂತೆ!
ಯಾರಾದರೂ ಬಂದಾರೆಯೇ
ಎಂದು ಕೈಚಾಚಿ
ಕಾಯುತ್ತಿರುವೆಯಂತೆ
ಗುರು ಹೀಗೆ ಹೇಳಿದಾಗ
ಎಷ್ಟು ಸುಲಭವೆಂದೆಣಿಸಿದ್ದೆ…

ಅಂದಿನಿಂದ ದಿನಬೆಳಗಾದರೆ
ನಿನ್ನ ಮುಟ್ಟುವ
ಒಂದೇ ಕೋರಿಕೆ
ಹಗಲು-ರಾತ್ರಿ
ನಿನ್ನದೊಂದು ಸ್ಪರ್ಶಕೆ
ಹಾತೊರೆವ ಮನಸ್ಸೇ
ನಿನ್ನ ತಲುಪದಂತೆ
ನೋಡಿಕೊಳ್ಳುವ ಸಂಚ
ತಿಳಿದು ಕಂಗಾಲಾದೆ!
ಹಂಬಲಿಸುವ ಮನದ
ಹುನ್ನಾರಗಳು ಒಂದೇ ಎರಡೇ…

ನೋಟದ ಮಿತಿಗೆ
ತೆರೆದು ನಿಂತ ಆಗಸವೂ
ಕಂಗಳೊಳಗೆ ಇಳಿಯದು!
ಕೇಳುವ ಮಿತಿಗೆ
ಮೌನದ ಭಾಷೆ ಕೇಳಿಸದು!
ಬಿಡದ ವಾಸನೆಗಳ ನಂಟು
ಬಗಲ ಮುಳ್ಳಾಗಿಹುದು!

ನಿನ್ನೂರ ನಕ್ಷೆ ಹಿಡಿದು
ಉಸಿರ ಎಳೆಯಗುಂಟ
ಇಳಿದುಬರುವಾಗ
ಮಾಯಗಾರನಂತೆ ನುಗ್ಗಿ
ಮೌನಕೆಡಸಿ ಮಾತಿಗೆಳೆದು
ದಿಕ್ಕುತಪ್ಪಿಸುವ ಚಿತ್ತದ ಕೇಡ
ಹೇಳಲಿ ಯಾರಿಗೆ?

ನಿನ್ನ ಜಾಡ ಹಿಡಿದು
ಎಚ್ಚರದಿ ನಡೆವಾಗಲೂ
ಯಾವುದೋ ನೆನಪುಗಳು
ಯಾರದೋ ಸದ್ದುಗಳು
ಒಂದರೊಳೊಂದು ತೂರಿ
ಎತ್ತೊಯ್ಯುವವು ದೂರಕೆ… ಬಹು ದೂರಕೆ…
ಅಂಗುಲಂಗುಲಕೆ ಸೀಳುವ
ಅಸಂಖ್ಯ ಹಾದಿಗಳತ್ತ
ಹೊರಹೊರಳಿ ದಣಿವವು ಕಾಲುಗಳು…
ಮತ್ತೆ ಆ ಗವ್ವನೆಯ ಕತ್ತಲೆ
ಗಪ್ಪೆಂದು ಅಮರಿಕೊಳ್ಳುವುದು.

ಅತ್ತ ತನ್ನ ಅಸ್ತಿತ್ವಕ್ಕಾಗಿ
ಚಡಪಡಿಸುವ ಮನಸೇ
ಶೂನ್ಯವಾಗಲೂ ಬಯಸುತ್ತಿದೆ…
ಇತ್ತ ತನ್ನ ಕೋಟಿ ರೂಪಗಳ
ತಾನೇ ಕೊಲ್ಲಲು
ಹಿಂದೇಟೂ ಹಾಕುತ್ತದೆ…
ಭವದೊಳು ಮುಳುಗಿಸಿ
ಬೆಪ್ಪಾಗಿ ನಿಲ್ಲುತ್ತದೆ…

ಬಲ್ಲೆ ನಾನು
ನನ್ನಿರುವಿಕೆಯಲ್ಲಿಯೇ
ನೀನಿರುವ ಗುಟ್ಟು!
ಏನ ಮಾಡಲಿ ಹೇಳು
ಈಜು ಬಲ್ಲವಳಲ್ಲಾ
ಒಳಸುಳಿವುಗಳ ಹರಿವು
ಅರಿತವಳಲ್ಲಾ
ಗುರುವಿನಂಗಿಯ ಚುಂಗ ಹಿಡಿದು
ಮಹಾಮೌನದ ಸಂಜ್ಞೆಗೆ
ಶರಣು ಬಂದಿರುವೆ.

Previous post ಕುರುಹೇ ಬಯಲು
ಕುರುಹೇ ಬಯಲು
Next post ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2

Related Posts

ನೀರು… ಬರಿ ನೀರೇ?
Share:
Poems

ನೀರು… ಬರಿ ನೀರೇ?

December 13, 2024 ಜ್ಯೋತಿಲಿಂಗಪ್ಪ
ಕತ್ತಲೆಂಬುದು ಕಣ್ಣ ಮುಂದೋ ಕಣ್ಣ ಹಿಂದೋ… ಜ್ಞಾನ ಎಂಬುದು ಅರಿವಲ್ಲ ಅರಿದರೆ ಅಜ್ಞಾನ… ಕತ್ತಲ ಒಳಗಣ ಬೆಳಕ ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ ಜ್ಞಾನವೇನು...
ನಾನೊಂದು ನೀರ್ಗುಳ್ಳೆ
Share:
Poems

ನಾನೊಂದು ನೀರ್ಗುಳ್ಳೆ

September 6, 2023 ಕೆ.ಆರ್ ಮಂಗಳಾ
ಕಾಲದ ಊದುಗೊಳವೆಯಲಿ ನಿರಂತರವಾಗಿ ಉಕ್ಕುತಿವೆ ಅನಂತಾನಂತ ನೀರ್ಗುಳ್ಳೆ ಎಲ್ಲಕೂ ಒಂದೇ ಹುಟ್ಟು ಒಂದೇ ಬಗೆಯ ಸಂಯೋಜನೆ ನಾ ಬೇರೆ ನೀ ಬೇರೆ ಅಂವ ಬೇರೆ ಇಂವ ಬೇರೆ ನಾ ಮೇಲು ನೀ ಕೆಳಗೆ...

Comments 2

  1. K S Mallesh
    Feb 17, 2026 Reply

    ನಿನ್ನದೊಂದು ಸ್ಪರ್ಷ ಒಳ್ಳೆಯ ಕವನ. ಕವನ ಎನ್ನುವುದಕ್ಕಿಂತಲೂ ಒಂದು ನಿಜ ಹಂಬಲಹೊತ್ತು ಹುಡುಕಾಡುತ್ತಿರುವ ವ್ಯಕ್ತಿಯೊಬ್ಬರ ಆತ್ಮಗಾಥೆ. ಬಿಡದ ಲೌಕಿಕದ ಸೆಳೆತಗಳಲ್ಲಿ ಸಿಲುಕಿ ಬೇಸತ್ತು  ಅಲೌಕಿಕಗಳೆಡೆಗೆ ಕಾತರಿಸುವ ಮನಕ್ಕೆ ಕಿಂಚಿತ್ ಅನುಗ್ರಹ ಸ್ಪರ್ಶ ರೂಪದಲ್ಲಿ
    ಸಿಕ್ಕರೆ ಸಾಕೆನಿಸಿದೆ.  ಸರಳ ಪದಗಳಲ್ಲಿ ತುಂಡು ಸಾಲುಗಳಲ್ಲಿ ಭಾವನೆಗಳ ಹೂಗೊಂಚಲಿದೆ. ನಿಮಗೆ ನಮನಗಳು

  2. ಜ್ಯೋತಿಲಿಂಗಪ್ಪ, ಬೆಂಗಳೂರು
    Feb 24, 2026 Reply

    ಸ್ಪರ್ಶ…ಒಳ್ಳೆಯ ಸ್ಪರ್ಶ..ಓದು
    ತುಂಬಾ ಮುದ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕೈಗೆಟುಕಿದ ಭಾವ ಬುತ್ತಿ
ಕೈಗೆಟುಕಿದ ಭಾವ ಬುತ್ತಿ
July 10, 2025
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು
August 11, 2025
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
Copyright © 2026 Bayalu