Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿನ್ನದೊಂದು ಸ್ಪರ್ಶ
Share:
Poems February 16, 2026 ಕೆ.ಆರ್ ಮಂಗಳಾ

ನಿನ್ನದೊಂದು ಸ್ಪರ್ಶ

ಅಷ್ಟು ಸಲೀಸಲ್ಲಾ ಬಿಡು
ನಿನ್ನ ಕೈ ಹಿಡಿಯುವುದು
ಎದುರಿದ್ದೂ ಅವಿತಿರುವ
ನಿನ್ನಿರುವಿಗೆ ಅಡಿಯಿಡುವುದು…

ಇಲ್ಲೇ, ಇದೇ ಗಳಿಗೆಯಲ್ಲೇ…
ಈ ಕ್ಷಣವೇ…
ನೀನು ಪ್ರತ್ಯಕ್ಷವಂತೆ!
ಯಾರಾದರೂ ಬಂದಾರೆಯೇ
ಎಂದು ಕೈಚಾಚಿ
ಕಾಯುತ್ತಿರುವೆಯಂತೆ
ಗುರು ಹೀಗೆ ಹೇಳಿದಾಗ
ಎಷ್ಟು ಸುಲಭವೆಂದೆಣಿಸಿದ್ದೆ…

ಅಂದಿನಿಂದ ದಿನಬೆಳಗಾದರೆ
ನಿನ್ನ ಮುಟ್ಟುವ
ಒಂದೇ ಕೋರಿಕೆ
ಹಗಲು-ರಾತ್ರಿ
ನಿನ್ನದೊಂದು ಸ್ಪರ್ಶಕೆ
ಹಾತೊರೆವ ಮನಸ್ಸೇ
ನಿನ್ನ ತಲುಪದಂತೆ
ನೋಡಿಕೊಳ್ಳುವ ಸಂಚ
ತಿಳಿದು ಕಂಗಾಲಾದೆ!
ಹಂಬಲಿಸುವ ಮನದ
ಹುನ್ನಾರಗಳು ಒಂದೇ ಎರಡೇ…

ನೋಟದ ಮಿತಿಗೆ
ತೆರೆದು ನಿಂತ ಆಗಸವೂ
ಕಂಗಳೊಳಗೆ ಇಳಿಯದು!
ಕೇಳುವ ಮಿತಿಗೆ
ಮೌನದ ಭಾಷೆ ಕೇಳಿಸದು!
ಬಿಡದ ವಾಸನೆಗಳ ನಂಟು
ಬಗಲ ಮುಳ್ಳಾಗಿಹುದು!

ನಿನ್ನೂರ ನಕ್ಷೆ ಹಿಡಿದು
ಉಸಿರ ಎಳೆಯಗುಂಟ
ಇಳಿದುಬರುವಾಗ
ಮಾಯಗಾರನಂತೆ ನುಗ್ಗಿ
ಮೌನಕೆಡಸಿ ಮಾತಿಗೆಳೆದು
ದಿಕ್ಕುತಪ್ಪಿಸುವ ಚಿತ್ತದ ಕೇಡ
ಹೇಳಲಿ ಯಾರಿಗೆ?

ನಿನ್ನ ಜಾಡ ಹಿಡಿದು
ಎಚ್ಚರದಿ ನಡೆವಾಗಲೂ
ಯಾವುದೋ ನೆನಪುಗಳು
ಯಾರದೋ ಸದ್ದುಗಳು
ಒಂದರೊಳೊಂದು ತೂರಿ
ಎತ್ತೊಯ್ಯುವವು ದೂರಕೆ… ಬಹು ದೂರಕೆ…
ಅಂಗುಲಂಗುಲಕೆ ಸೀಳುವ
ಅಸಂಖ್ಯ ಹಾದಿಗಳತ್ತ
ಹೊರಹೊರಳಿ ದಣಿವವು ಕಾಲುಗಳು…
ಮತ್ತೆ ಆ ಗವ್ವನೆಯ ಕತ್ತಲೆ
ಗಪ್ಪೆಂದು ಅಮರಿಕೊಳ್ಳುವುದು.

ಅತ್ತ ತನ್ನ ಅಸ್ತಿತ್ವಕ್ಕಾಗಿ
ಚಡಪಡಿಸುವ ಮನಸೇ
ಶೂನ್ಯವಾಗಲೂ ಬಯಸುತ್ತಿದೆ…
ಇತ್ತ ತನ್ನ ಕೋಟಿ ರೂಪಗಳ
ತಾನೇ ಕೊಲ್ಲಲು
ಹಿಂದೇಟೂ ಹಾಕುತ್ತದೆ…
ಭವದೊಳು ಮುಳುಗಿಸಿ
ಬೆಪ್ಪಾಗಿ ನಿಲ್ಲುತ್ತದೆ…

ಬಲ್ಲೆ ನಾನು
ನನ್ನಿರುವಿಕೆಯಲ್ಲಿಯೇ
ನೀನಿರುವ ಗುಟ್ಟು!
ಏನ ಮಾಡಲಿ ಹೇಳು
ಈಜು ಬಲ್ಲವಳಲ್ಲಾ
ಒಳಸುಳಿವುಗಳ ಹರಿವು
ಅರಿತವಳಲ್ಲಾ
ಗುರುವಿನಂಗಿಯ ಚುಂಗ ಹಿಡಿದು
ಮಹಾಮೌನದ ಸಂಜ್ಞೆಗೆ
ಶರಣು ಬಂದಿರುವೆ.

Previous post ಕುರುಹೇ ಬಯಲು
ಕುರುಹೇ ಬಯಲು
Next post ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2

Related Posts

ನನ್ನ-ನಿನ್ನ ನಡುವೆ
Share:
Poems

ನನ್ನ-ನಿನ್ನ ನಡುವೆ

June 5, 2021 ಕೆ.ಆರ್ ಮಂಗಳಾ
ನನ್ನ-ನಿನ್ನ ನಡುವೆ ಗೋಡೆ ಎಬ್ಬಿಸಿದವರಾರು ಪರದೆ ಬಿಟ್ಟವರಾರು? ಕತ್ತಲು ತುಂಬಿದವರಾರು? ಮಂಜು ಕವಿಸಿದವರಾರು? ನಿನ್ನಿಂದ ನನ್ನ ದೂರ ಮಾಡಿದವರಾರು? ನನ್ನ-ನಿನ್ನ ನಡುವೆ ಕಂದ...
WHO AM I?
Share:
Poems

WHO AM I?

June 17, 2020 Chittara K. V
I have a wide brain And a open mind I think a lot at times But I come to a point To ask myself- Who am I? I swallow the pain But speak with the...

Comments 2

  1. K S Mallesh
    Feb 17, 2026 Reply

    ನಿನ್ನದೊಂದು ಸ್ಪರ್ಷ ಒಳ್ಳೆಯ ಕವನ. ಕವನ ಎನ್ನುವುದಕ್ಕಿಂತಲೂ ಒಂದು ನಿಜ ಹಂಬಲಹೊತ್ತು ಹುಡುಕಾಡುತ್ತಿರುವ ವ್ಯಕ್ತಿಯೊಬ್ಬರ ಆತ್ಮಗಾಥೆ. ಬಿಡದ ಲೌಕಿಕದ ಸೆಳೆತಗಳಲ್ಲಿ ಸಿಲುಕಿ ಬೇಸತ್ತು  ಅಲೌಕಿಕಗಳೆಡೆಗೆ ಕಾತರಿಸುವ ಮನಕ್ಕೆ ಕಿಂಚಿತ್ ಅನುಗ್ರಹ ಸ್ಪರ್ಶ ರೂಪದಲ್ಲಿ
    ಸಿಕ್ಕರೆ ಸಾಕೆನಿಸಿದೆ.  ಸರಳ ಪದಗಳಲ್ಲಿ ತುಂಡು ಸಾಲುಗಳಲ್ಲಿ ಭಾವನೆಗಳ ಹೂಗೊಂಚಲಿದೆ. ನಿಮಗೆ ನಮನಗಳು

  2. ಜ್ಯೋತಿಲಿಂಗಪ್ಪ, ಬೆಂಗಳೂರು
    Feb 24, 2026 Reply

    ಸ್ಪರ್ಶ…ಒಳ್ಳೆಯ ಸ್ಪರ್ಶ..ಓದು
    ತುಂಬಾ ಮುದ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
September 14, 2024
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಅಲ್ಲಮಪ್ರಭುದೇವರ ಸ್ವರವಚನಗಳು
ಅಲ್ಲಮಪ್ರಭುದೇವರ ಸ್ವರವಚನಗಳು
December 9, 2025
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
Copyright © 2026 Bayalu