Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನೆಂಬ ನಿನಾದ…
Share:
Poems January 15, 2026 ಕೆ.ಆರ್ ಮಂಗಳಾ

ನಾನೆಂಬ ನಿನಾದ…

ನಾ ಹುಟ್ಟುವ ಮುನ್ನ
ಹೇಗಿದ್ದೆ ನೆನಪಿಲ್ಲಾ
ಹುಟ್ಟಿನೊಡನೆ
ಬಂದ ಬಳುವಳಿಯೇ
ನಾನೆಂಬ ಎಳೆ
ಈ ಅಹಮಿಕೆಗೆ
ಪ್ರಾಣ ಒತ್ತೆಯಿಟ್ಟು
ಎಷ್ಟು ಯುಗಗಳಾದವು?

ಒಂದೆಳೆ ಇದ್ದುದು
ಒತ್ತೊತ್ತಾಗಿ ಸೇರುತ್ತಾ
ಬುಟ್ಟಿಯಾಗಿ, ಬಟ್ಟೆಯಾಗಿ
ಬಲೆಯಾಗಿ ನನ್ನ
ತನ್ನೊಳು ಬಂಧಿಸಿದ್ದ
ತಿಳಿಸಲು ನೀನೇ
ಬರಬೇಕಾಯಿತು ಗುರುವೇ.

ತಾ ಬೀಗಲು
ಒಂದೊಂದ ಹೆಸರಿಟ್ಟು
ರೂಪ ಕೊಟ್ಟು,
ಬಣ್ಣ ತುಂಬಿ
ನಂಟನಂತೆ, ನಲ್ಲನಂತೆ
ಚಂದದ ಮಾತುಗಳಲ್ಲಿ
ನಿಜವ ಮರೆಸುತ್ತಾ
ಕಾವಲುಗಾರನಂತೆ
ತನ್ನ ಹಿತವನೇ ಕಾವುದು

ತನ್ನಿರುವಿನ
ಸುಳುಹು ಸಿಗದಂತೆ
ನಾಜೂಕಾಗಿ
ಕಾರ್ಯಸಾಧಿಸುವ
ಅದರ ಪಟ್ಟುಗಳನರಿತು
ಕೋಡ ಹಿಡಿದು
ನೆಲಕ್ಕೆ ಚಚ್ಚಿ
ಕಂಡಲ್ಲಿ ಗುಂಡು ಸಿಡಿಸಿ
ಕೊಂದೇ ಬಿಟ್ಟೆನೆಂದು
ಅಂದುಕೊಳ್ಳುವಾಗಲೇ
ಇನ್ನೆಲ್ಲೋ ಚಿಗಿತು
ಮತ್ತೆಲ್ಲೋ
ಹೂ-ಕಾಯಿ ಬಿಟ್ಟು
ಕನ್ನಡಿಯ ಬಿಂಬದಂತೆ
ಅಣಕಿಸುತ್ತದೆ…
ಮುಪ್ಪಿಲ್ಲದುದಕೆ
ಸಾವುಂಟೆ?
ನನಗೂ- ನಿನಗೂ
ನಡುವೆ ನಿಂತಿದೆ
ಉಸಿರುಗಟ್ಟಿಸುವ
ಗಟ್ಟಿಗಾಜಿನ ಪರದೆ.

ಸಿಟ್ಟು- ಸೆಡವುಗಳ
ನೋವು ಕ್ಲೇಷಗಳ
ಭವದ ಬೇರು
ಎಲ್ಲಿದೆ ಎನುವುದ
ನಾನೀಗ ಬಲ್ಲೆ
ಒಳಗೂ-ಹೊರಗೂ
ತನಗಾಗಿಯೇ
ತಡಬಡಿಸುತ್ತದೆ
ಚೂರು ಧಕ್ಕೆಯಾದರೂ
ಸಿಡಿಲು ಬಡಿದಂತೆ
ಚಡಪಡಿಸುತ್ತದೆ
ಒತ್ತುತ್ತದೆ
ಎದೆ ಮೇಲೆ ಕುಳಿತು
ಮಣಭಾರದಂತೆ
ತೊಲಗಿಸು ತಂದೆ
ನಾನೆಂಬ ಹೊರೆಯ.

ಅರಿವಿನ ರೆಪ್ಪೆ
ತೆರೆಯದ ಕೂಸಿಗೆ
ಬಯಲ ಅನಾವರಣ!
ಮಾಗಿ ಕಾಲದಲಿ
ವಸಂತದ ವರ್ಣನೆಯೇ?
ನಮ್ಮಿಬ್ಬರ ನಡುವೆ
ನೆಲ-ಮುಗಿಲಿನಂತರ
ಕರುಣೆ ಇರಲಿ ಗುರುವೆ.

ಗುರು:
ನೆರಳಲಿ ನಿಂತು
ಕತ್ತಲು ಎನುವರೆ?
ಉಸಿರೇ ಇಲ್ಲದ
ನೆಲೆಯೇ ಕಾಣದ
ತೃಣಕಣ ಹಮ್ಮಿಗೆ
ಹೆದರುವುದೇ?

ಕೂಗಿ ಕರೆದರೂ
ಕಿವಿಗೊಡದಿರು
ಹತ್ತಿರ ಬಂದರೂ
ಗಮನಿಸದಿರು
ಎದುರೇ ನಿಂತರೂ
ಉತ್ತರಿಸದಿರು
ಮಾತಿನ ಕೂಟಕೆ
ಮರುಳಾಗದಿರು
ಮೌನದೊಳಗೂ
ಪಿಸುನುಡಿಯದಿದ್ದೊಡೆ
ಕೇಳದು ಎಂದಿಗೂ
ನಾನೆಂಬ ನಿನಾದ.

ಅರಿವಿಗೂ- ನಿನಗೂ
ಕೂದಲೆಳೆಯಂತರ
ಕೊರಗುವುದೇಕೆ ಕಂದಾ?
ಬೀಗುವ ಹಮ್ಮೇ
ಆಗುವ ಹಂಬಲ
ಎರಡೂ ಬೇಡ ಕೂಸೇ
ನೀ ನೀನಾಗಿದ್ದರೆ
ಅದುವೆ ಚೆನ್ನ
ಈ ಮರ್ಮವ ನೀನರಿಯೇ

ನಿನ್ನೆ-ನಾಳೆಗಳ
ನಂಟನು ಬಿಟ್ಟರೆ
ನಾನೆಂಬುದರ
ಸೊಂಟವೇ ಮುರಿವುದು
ನಿನ್ನ ಕಣ್ಣಲೇ
ನಿನ್ನನು ಕಂಡರೆ
ಹಮ್ಮಿನ ಭಾವವೇ
ಕರಗುವುದು.

ಈ ಕ್ಷಣದಲಿ
‘ಆ ಇಗೋ’ ಎಲ್ಲಿದೆ?
ಅದು ಕಾಲದ ಬಾಗಿಲ
ಕಾಯುವ ಕಾವಲು.
ಬಯಲ ಪ್ರೀತಿಯ
ಅನಂತದ ಶಿಶುವಿಗೆ
ಕಾಲದ ಸೂತಕ
ಕಾಡುವುದೇ?

Previous post ಬಯಲಾದ ದೇವರು
ಬಯಲಾದ ದೇವರು

Related Posts

ನನ್ನ ಬುದ್ಧ ಮಹಾಗುರು
Share:
Poems

ನನ್ನ ಬುದ್ಧ ಮಹಾಗುರು

January 4, 2020 ಪದ್ಮಾಲಯ ನಾಗರಾಜ್
ನನ್ನ ಬುದ್ಧ ಮಹಾಗುರುವು… ಧರ್ಮವಲ್ಲ ದೈವವಲ್ಲ ನುಡಿಯಲ್ಲ ಪಡಿಯಲ್ಲ ವಿಗ್ರಹವಲ್ಲ ಅನುಗ್ರಹವಲ್ಲ ಸಂಭ್ರಮವಲ್ಲ ಉತ್ಸವವಲ್ಲ ಸುಖವಲ್ಲ ದುಃಖವಲ್ಲ ವಾದವಲ್ಲ ಬೇಧವಲ್ಲ ಮಂತ್ರವಲ್ಲ...
ಅನಾದಿ ಕಾಲದ ಗಂಟು…
Share:
Poems

ಅನಾದಿ ಕಾಲದ ಗಂಟು…

November 10, 2022 ಕೆ.ಆರ್ ಮಂಗಳಾ
ಹಗುರಾಗುತಿದೆ ಹೃದಯ ಹೆಗಲ ಹೊರೆ ಇಳಿದು ಭೂಮಿಗಿಂತಲೂ ವಜನ ಹತ್ತಿಗಿಂತಲೂ ಹಗುರ ಹೊರಲಾಗದ ಭಾರ ಹೊತ್ತಿದ್ದ ಎದೆಗೆ, ಈಗ ಎಂಥದೋ ನಿರಾಳ… ಕಣ್ಣುಬಿಟ್ಟಾಗಿನಿಂದ ಕಂಡದ್ದು ಎಲ್ಲೆಲ್ಲೋ...

Comments 1

  1. Dr.Basavaraj Sabarad
    Jan 17, 2026 Reply

    ಮಂಗಳಾ ಅವರ ಕವಿತೆಗಳು ತುಂಬಾ ಅರ್ಥಪೂರ್ಣವಾಗಿವೆ.ಅಭಿನಂದನೆಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
April 6, 2024
ನನ್ನ ಶರಣರು…
ನನ್ನ ಶರಣರು…
April 9, 2021
ಈ ಬಳ್ಳಿ…
ಈ ಬಳ್ಳಿ…
October 21, 2024
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
Copyright © 2026 Bayalu