Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮೀನಿನ ಬಯಕೆ
Share:
Poems June 10, 2023 ಡಾ. ಕೆ. ಎಸ್. ಮಲ್ಲೇಶ್

ಮೀನಿನ ಬಯಕೆ

ಒಮ್ಮೆ ಒಂದು ಪುಟ್ಟ ಮೀನು
ಈಜಿ ದಡದ ಬಳಿಗೆ ಬಂದು
ಕೆರೆಯ ಪಕ್ಕ ಮನುಜನೊಬ್ಬನನ್ನು ಕಂಡಿತು
ಬಟ್ಟಲಂತ ಕಣ್ಣ ತೆರೆದು
ಪುಟ್ಟ ಮೀನು ನಗೆಯ ಸೂಸಿ
ಗೆಳೆಯನಾಗು ನನಗೆ ಎನುತ ಅಂಗಲಾಚಿತು

ನನ್ನ ಸ್ನೇಹ ಏಕೆ ಬೇಕು
ನಿನ್ನ ಮನದ ಆಸೆ ಏನು
ಎನಲು ಮನುಜ ಮೀನು ತನ್ನ ಬಯಕೆ ತಿಳಿಸಿತು
ಹುಟ್ಟಿದಾಗಿನಿಂದ ನನಗೆ
ಇದೇ ಕೆರೆಯ ಅದೇ ನೀರು
ಹಗಲು ರಾತ್ರಿ ಒಂದೆ ಬದುಕು ಸಹಿಸೆನೆಂದಿತು

ಗೆಳೆಯ ನೀನು ನಡೆವ ನೆಲವು
ಎಂಥ ಚಂದ ಎಂಥ ಅಂದ
ನನಗು ನೆಲದ ಮೇಲೆ ನಡೆವ ಆಸೆಯೆಂದಿತು
ಮಣ್ಣು ಚೆನ್ನ ಹಣ್ಣು ಚೆನ್ನ
ಹೂವು ಚೆನ್ನ ಎಲೆಯು ಚೆನ್ನ
ನೀರಿಗಿಂತ ನೆಲವೆ ಚೆನ್ನವೆನುತ ನಲಿಯಿತು

ಮೀನಿನಾಸೆ ಕೇಳಿ ಮನುಜ
ಒಳಗೊಳಗೇ ದಿಗಿಲುಗೊಂಡ
ತೋರಗೊಡದೆ ನೆಲದ ಬದುಕ ಕಲಿಸಲೊಪ್ಪಿದ
ಒಂದು ಗಳಿಗೆ ನೆಲದಿ ತವೆಸಿ
ಮತ್ತೆ ನೀರಿನೊಳಗೆ ಇಳಿಸಿ
ಹಂತ ಹಂತವಾಗಿ ನೆಲದ ನಡೆಯ ಕಲಿಸಿದ

ನೀರ ಮರೆತು ನೆಲದ ಸಂಗ
ಬಯಸಿ ಬಂದ ಪುಟ್ಟ ಮೀನು
ಹರುಷದಿಂದ ನೆಲದ ಮೇಲೆ ಕುಣಿದು ನಲಿಯಿತು
ಓಣಿ ಮಕ್ಕಳೊಡನೆ ಆಡಿ
ಊರನೆಲ್ಲ ಸುತ್ತಿ ಬಳಸಿ
ಬೆಟ್ಟ ಹತ್ತಿ ಹಳ್ಳ ದಾಟಿ ಬೆಳೆಯತೊಡಗಿತು

ಒಮ್ಮೆ ನಸುಕಿನಲ್ಲಿ ಎದ್ದು
ದೂರ ಪಯಣಕೆಂದು ಮೀನು
ತಿನಿಸ ಗಂಟಿನೊಡನೆ ಊರ ಗಡಿಯ ದಾಟಿತು
ಇದ್ದಕಿದ್ದ ಹಾಗೆ ಮೋಡ
ಕವಿದು ಬಾನ ತುಂಬ ತುಂಬಿ
ಗುಡುಗು ಸಿಡಿಲಿನೊಡನೆ ಮೋಡ ಮಳೆಯ ಸುರಿಸಿತು

ಎಂದೂ ಬಾರದಂತ ಮಳೆಯು
ಬಿಡದೆ ಸುರಿಯತೊಡಗಿದಂತೆ
ನೆಲಕೆಲ್ಲವು ನೀರು ಸೇರಿ ಮಡುವೆ ಆಯಿತು
ಸುತ್ತ ಮುತ್ತ ನೀರೆ ತುಂಬಿ
ನೆಲದ ಗುರುತೆ ಇಲ್ಲವಾಗಿ
ಮೀನು ಮಳೆಯ ನೀರಿನೊಳಗೆ ಮುಳುಗಿಹೋಯಿತು

(ಬಯಕೆ ನಿರೀಕ್ಷೆ ಆಕಾಂಕ್ಷೆಗಳು ರೆಕ್ಕೆಗಳಂತೆ. ಅವುಗಳನ್ನು ಕಟ್ಟಿಕೊಂಡು ನಿಂತ ನೆಲವನ್ನೇ ಬಿಟ್ಟು ಹಾರತೊಡಗಿದರೆ ಕ್ಷಣಕಾಲ ಮಿರುಗು ಬಣ್ಣದ ಮಾಯಾಲೋಕವೊಂದು ನಮ್ಮನ್ನು ಸೆಳೆಯಬಲ್ಲದು. ಅವಘಡವೊಂದಕ್ಕೆ ಸಿಕ್ಕಿ ದಿಕ್ಕುತಪ್ಪಿ ಬಿದ್ದರೆ ನಿಂತ ನೆಲವೂ ಸಿಗದೆ ಬದುಕು ದುರಂತಮಯವಾಗಬಹುದು.)
(/ತಿರುಕನೋರ್ವನೂರಾ ಮುಂದೆ… ರಾಗದಲ್ಲಿ ಓದಿಕೊಳ್ಳಿ)

Previous post ಹುಲಿ ಸವಾರಿ…
ಹುಲಿ ಸವಾರಿ…
Next post ತುತ್ತೂರಿ…
ತುತ್ತೂರಿ…

Related Posts

ನೆಟ್ಟ ನಂಜು ಹಾಲೀಂಟದು
Share:
Poems

ನೆಟ್ಟ ನಂಜು ಹಾಲೀಂಟದು

June 5, 2021 Bayalu
ಯಾರ ಮನೆ ಯಾರ ತೆನೆ ಯಾರ ಅನ್ನ ಯಾರ ಚಿನ್ನ ಸಾವಲಿ ಜೊತೆ ಬರಲಿಹುದೆ ಕಟ್ಟಿ ಒಯ್ಯಲಾಗುವುದೆ ಆ ಬಂಧು ಈ ಬಳಗ ಆ ಹಣವು ಈ ಎಣೆಯು ಕಟ್ಟು ಕಟ್ಟಿ ಇಟ್ಟ ಗಂಟು ಯಾರಿಗೊ ಹೋಗಲಿಕುಂಟು...
ನಾನೊಂದು ನೀರ್ಗುಳ್ಳೆ
Share:
Poems

ನಾನೊಂದು ನೀರ್ಗುಳ್ಳೆ

September 6, 2023 ಕೆ.ಆರ್ ಮಂಗಳಾ
ಕಾಲದ ಊದುಗೊಳವೆಯಲಿ ನಿರಂತರವಾಗಿ ಉಕ್ಕುತಿವೆ ಅನಂತಾನಂತ ನೀರ್ಗುಳ್ಳೆ ಎಲ್ಲಕೂ ಒಂದೇ ಹುಟ್ಟು ಒಂದೇ ಬಗೆಯ ಸಂಯೋಜನೆ ನಾ ಬೇರೆ ನೀ ಬೇರೆ ಅಂವ ಬೇರೆ ಇಂವ ಬೇರೆ ನಾ ಮೇಲು ನೀ ಕೆಳಗೆ...

Comments 7

  1. Prabhudeva
    Jun 15, 2023 Reply

    ನೈಜತೆಯಿಂದ ಕೂಡಿದ ಕವನ

  2. ಕುಮುದಿನಿ, ತಿಪಟೂರು
    Jun 15, 2023 Reply

    ವಾವ್… ಕವನ ಹೃದಯಸ್ಪರ್ಶಿಯಾಗಿದೆ.

  3. ಸುನಂದಾ ರಾಚಣ್ಣ, ಡಾವಣಗೆರೆ
    Jun 16, 2023 Reply

    ಮೀನಿನ ಬಯಕೆ- ಮಲ್ಲೇಶ ಅವರ ಈ ಕವನವು ನಾನು ನಾಲ್ಕನೆಯ ಕ್ಲಾಸಿನಲ್ಲಿ ಓದಿದ ತಿರುಕನ ಕನಸು ಕವನವನ್ನು ನೆನಪಿಸಿತು. ಮೀನು ಕೂಡಾ ಮಾನವನಂತೆ ಕನಸು ಕಂಡಿರಬೇಕು. ಮನದ ಆಸೆ ತೀರಿಸಿಕೊಳ್ಳಲು ಮಣ್ಣು, ಹಣ್ಣು, ಹೂವು, ಎಲೆ ಚಂದವಾಗಿ ನೀರಿಗಿಂತ ನೆಲವೇ ಚಂದವೆಂದು ಆನಂದಿಸಿ, ತಿರುಕನಂತೆ ರಾಜ ವೈಭವದಿಂದ ಮೆರೆದು ನಂತರ ನೆರೆ ರಾಜ್ಯ ಯುದ್ಧಕ್ಕೆ ಬಂದಾಗ ಹೆದರಿ ಕಣ್ತೆರೆದಾಗ ಕನಸೆಂದು ನಿರಾಸೆಯಾಯಿತು. ಅಂತೆಯೇ ಮೀನು ಎಲ್ಲಾ ಆಸೆಗಳನ್ನು ಬೆನ್ನು ಹತ್ತಿ ಹೋಗುವಾಗ ಮಳೆಗೆ ಸಿಕ್ಕು ಮುಳುಗಿಹೋಯಿತು. ಕವನ ತುಂಬಾ ಚೆನ್ನಾಗಿದೆ, ಓದಿ ಖುಷಿಯಾಯಿತು.

  4. Kalavathi
    Jun 16, 2023 Reply

    ಈ ಕವಿತೆಯು ಬೇರೆ ಯಾವುದೇ ಸ್ಥಳದಲ್ಲಿ ಅಥವಾ ಯಾವುದೇ ಸ್ಥಾನದಲ್ಲಿರುವ ಸಂತೋಷವನ್ನು ಕಂಡುಹಿಡಿಯಲು ಬಯಸುವ ಮಾನವನಿಗೆ ತುಂಬಾ ಸಂಬಂಧಿಸಿದೆ. ಆದರೆ ನಿಜವಾದ ಸತ್ಯವೆಂದರೆ ನೀವು ಇರುವ ಸ್ಥಳದಲ್ಲಿ ನೀವು ಸಂತೋಷವಾಗಿರಬೇಕು.ಕವನ ತು೦ಬಾ ಚೆನ್ನಾಗಿದೆ.

  5. Sheela
    Jun 17, 2023 Reply

    It is indeed nice poem

  6. Kavana
    Jun 18, 2023 Reply

    ಈ ಕವಿತೆ ಎಲ್ಲೋ ನಿಮ್ಮ ಸಂತೋಷವನ್ನು ಹುಡುಕುವ ಬದಲು ನಿಮ್ಮಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕೆಂದು ಹೇಳುತ್ತದೆ. ಕವಿತೆ ಚೆನ್ನಾಗಿ ಬರೆಯಲಾಗಿದೆ.

  7. ಕೆ. ಎಸ್. ಮಲ್ಲೇಶ್
    Jun 18, 2023 Reply

    ಬಯಲು ಬಳಗದ ಸಹೃದಯ ಓದುಗರೇ
    ನನ್ನ ಕವನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಓದಿ ಸಂತಸವೂ ತೃಪ್ತಿಯೂ ಉಂಟಾದವು. ನಿಮ್ಮಲ್ಲೇ ಮೂಡಬಹುದಾದ ಭಾವನೆಗಳಿಗೆ ನಾನು ಅಕ್ಷರ ರೂಪ ಕೊಟ್ಟಿದ್ದೇನೆ ಅಷ್ಟೇ. ನಿಮಗೂ, ಬರೆಯಿರೆಂದು ಪ್ರೋತ್ಸಾಹಿಸುವ ಶ್ರೀಮತಿ ಮಂಗಳಾ ಅವರಿಗೂ ನನ್ನ ನಮನಗಳು.

Leave a Reply to ಕೆ. ಎಸ್. ಮಲ್ಲೇಶ್ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
February 11, 2022
ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
March 9, 2023
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಗುರುಪಥ
ಗುರುಪಥ
January 4, 2020
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ಸುಮ್ಮನೆ ಇರು
ಸುಮ್ಮನೆ ಇರು
December 6, 2020
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
Copyright © 2025 Bayalu