Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಷ್ಟವಿಧಾರ್ಚನೆ – ಷೋಡಶೋಪಚಾರ
Share:
Articles November 1, 2018 ಡಾ. ಪಂಚಾಕ್ಷರಿ ಹಳೇಬೀಡು

ಅಷ್ಟವಿಧಾರ್ಚನೆ – ಷೋಡಶೋಪಚಾರ

ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗಕ್ಕೆ ಪ್ರಥಮ ಪ್ರಾಶಸ್ತ್ಯ. ಯಾವುದೇ ವ್ಯಕ್ತಿ ಲಿಂಗಾಯತನೆನಿಸಿಕೊಳ್ಳಬೇಕಾದರೆ ಆತನು ಇಷ್ಟಲಿಂಗವನ್ನು ಸದಾ ಧರಿಸಿರಬೇಕು. ಯಾರು ಇಷ್ಟಲಿಂಗವನ್ನು ಧರಿಸಬಹುದು? ಜಗತ್ತಿನ ಯಾವುದೇ ಭೂ ಪ್ರದೇಶದ, ಯಾವುದೇ ಜಾತಿ, ಜನಾಂಗದ, ಧರ್ಮದ, ಅಂತಸ್ತಿನ ಭೇದವಿಲ್ಲದೆ, ಗಂಡು-ಹೆಣ್ಣೆಂಬ ಲಿಂಗ ಭೇದವಿಲ್ಲದೆ, ವಯಸ್ಸಿನ ಭೇದವಿಲ್ಲದೆ ವರ್ಷದ ಯಾವುದೇ ದಿನದಲ್ಲಿ, ದಿನದ ಯಾವುದೇ ಸಮಯದಲ್ಲಿ ಸೂಕ್ತವೆನಿಸಿದ ಗುರುವಿನ ಮಾರ್ಗದರ್ಶನದಲ್ಲಿ ಇಷ್ಟಲಿಂಗ ದೀಕ್ಷೆ ಹೊಂದಿ ಲಿಂಗಾಯತನಾಗಬಹುದು. ಒಮ್ಮೆ ಲಿಂಗದೀಕ್ಷಿತನಾದ ಮೇಲೆ ಆ ಲಿಂಗವನ್ನು ಎಂದೂ ಯಾವ ಸಮಯದಲ್ಲೂ ತನ್ನ ದೇಹದಿಂದ ಬೇರ್ಪಡಿಸಬಾರದು. ತನ್ನ ಅಂಗದ ಮೇಲಿನ ಇಷ್ಟಲಿಂಗಕ್ಕೆ ತನ್ನ ಆತ್ಮಕ್ಕೆ ಕೊಡುವಷ್ಟೇ ಗೌರವ ಕೊಡಬೇಕು. ಇಷ್ಟಲಿಂಗವು ನಿರಾಕಾರ ದೇವರ ಸಾಕಾರ ರೂಪವಾದುದರಿಂದ, ನಿರಾಕಾರ ಪರಮಾತ್ಮನನ್ನು ಅಂಗೈಯ್ಯ ಮೇಲಣ ಲಿಂಗಯ್ಯನಲ್ಲೇ ಕಾಣಬಹುದು. ನಿರಾಕಾರ ದೇವರ ಕಾಣುವಿಕೆಗಾಗಿ ಇಷ್ಟಲಿಂಗ ನಿಷ್ಠೆ, ಪೂಜೆ ಅವಶ್ಯ. ಇಷ್ಟಲಿಂಗ ಪೂಜೆ ಹೇಗೆ ಮಾಡುವುದು, ಯಾವಾಗ ಮಾಡವುದು ಎಂಬ ವಿಚಾರವಾಗಿ ಹಲವಾರು ವಚನಗಳು ಲಭ್ಯವಿವೆ. ಇವುಗಳಲ್ಲಿ ಕೆಲವು ವಚನಗಳು ತಾತ್ವಿಕವಾಗಿದ್ದರೆ ಮತ್ತೆ ಕೆಲವು ಅತಾತ್ವಿಕವಾಗಿವೆ. ತಾತ್ವಿಕ ವಚನಗಳು ನಿಜವಾಗಿಯೂ ಶರಣರಿಂದಲೇ ರಚಿಸಲ್ಪಟ್ಟವಾಗಿದ್ದರೆ ಅತಾತ್ವಿಕ ವಚನಗಳು ಭಿನ್ನವಿಚಾರದವರಿಂದ ರಚನೆಯಾಗಿರುವ ಸಾಧ್ಯತೆಗಳಿವೆ. ಇಂಥಾ ವಚನಗಳನ್ನು ಹೊಸದಾಗಿ ಸೃಷ್ಟಿಸಿ ಶರಣರ ಅಂಕಿತನಾಮದೊಂದಿಗೆ ಸೇರಿಸಿ ವಚನ ಕಟ್ಟುಗಳೊಳಗೆ ತೂರಿಸಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಲಿಂಗಪೂಜೆಯು ಶರಣರ ದೃಷ್ಟಿಯಲ್ಲಿ ಪ್ರಮುಖವಾಗಿ ನೆನಹು, ನಿರೀಕ್ಷಣೆ ಮತ್ತು ಅನುಸಂಧಾನ ಎಂಬ ಮೂರು ಘಟ್ಟಗಳಿಂದ ಕೂಡಿದೆ. ಅಲ್ಲಿ ಯಾವ ಆಡಂಬರಕ್ಕೆ ಆಸ್ಪದವಿಲ್ಲ. ಕೆಲವು ವಚನಗಳಲ್ಲಿ ಅಷ್ಟವಿಧಾರ್ಚನೆ  ಮತ್ತು ಷೋಡಷೋಪಚಾರಗಳ ಮೂಲಕ ಲಿಂಗ ಪೂಜಿಸಿ ಅದರ ಒಲುಮೆ ಪಡೆಯಬೇಕೆಂದು ಸೂಚಿಸಿದ್ದರೆ ಅನೇಕ ವಚನಗಳಲ್ಲಿ  ಅಷ್ಟವಿಧಾರ್ಚನೆ  ಮತ್ತು ಷೋಡಷೋಪಚಾರಗಳನ್ನು ಅಲ್ಲಗಳೆಯಲಾಗಿದೆ. ಅಲ್ಲಿ ಸಹಜ ಆಚರಣೆಯನ್ನು ಮಾತ್ರ ಪುಷ್ಠೀಕರಿಸಲಾಗಿದೆ. ಅನೇಕ ಲಿಂಗಾಯತರು ಗೊತ್ತಿದ್ದೋ ಗೊತ್ತಿಲ್ಲದೆಯೋ ನಾನಾರೀತಿಯ ಆಚರಣೆಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.  ಅಂದಿನ ಶೈವರು ಚರಲಿಂಗಗಳನ್ನು ತಮ್ಮೊಡನೆ ಇಟ್ಟುಕೊಂಡು ಅವುಗಳಿಗೆ ದಿನಕ್ಕೆ ಮೂರು ಬಾರಿ ಪೂಜೆ, ಅರ್ಚನೆ ಮಾಡುತ್ತಿದ್ದರು, ಬಹುಶಃ ಅಷ್ಟವಿಧಾರ್ಚನೆ  ಮತ್ತು ಷೋಡಷೋಪಚಾರಗಳು ಶೈವ ಮೂಲದವಾಗಿದ್ದು, ಚರಲಿಂಗಗಳಿಗೆ ಮಾಡುತ್ತಿದ್ದ ಆಚರಣೆಗಳೆಂದು ಊಹಿಸಬಹುದು. ಏಕೆಂದರೆ ಈ ಆಚರಣೆಗಳು ಶರಣರ ವೈಚಾರಿಕ ನೆಲೆಗಟ್ಟಿನಲ್ಲಿ ನಿಲ್ಲುವುದಿಲ್ಲ.

ಮೊದಲಿಗೆ ಅಷ್ಟವಿಧಾರ್ಚನೆ  ಮತ್ತು ಷೋಡಷೋಪಚಾರ ಎಂದರೇನೆಂದು ಅರಿಯಲು ಪ್ರಯತ್ನಿಸೋಣ. ಬಸವಣ್ಣನವರದ್ದೆಂದು ಹೇಳಲಾಗುವ ಈ ವಚನದಲ್ಲಿ  “ಎನ್ನಿಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವೆನು. ಅವಾವುವಯ್ಯಾ ಎಂದಡೆ; ಜಲಗಂಧಾಕ್ಷತಂ ಚೈವ ಪುಷ್ಪಂ ಚ ಧೂಪದೀಪಯೋ ನೈವೇದ್ಯಂ ಚೈವ ತಾಂಬೂಲಂ ಯಥೇಚ್ಛಾಷ್ಟವಿಧಾರ್ಚನಂ ಇನ್ನು  ಷೋಡಶೋಪಚಾರಗಳು; ಸುಖತಲ್ಪಂ ಸುವಸ್ತ್ರಂ ಚ ಆಭರಣಾನುಲೇಪನಂ ಛತ್ರಚಾಮರವ್ಯಜನಂ ದರ್ಪಣಂ ನಾದವಾದ್ಯಯೋ ನೃತ್ಯಂ ಗೀತಂ ತಥಾ ಸ್ತೋತ್ರಂ ಪುಷ್ಪಾಂಜಲೀ ಪ್ರಣಾಮಕಂ ಪ್ರದಕ್ಷಿಣಂ ಚ ಮೇ ಯಕ್ತಂ ಷೋಡಶಂ ಚೋಪಚಾರಕಂ  ಈ ಕ್ರಮವಿಡಿದು ಇಷ್ಟಲಿಂಗಾರ್ಚನೆಯ ಮಾಡಿ ನಿಮ್ಮಲ್ಲಿ ಕೂಡುವೆನು, ಕೂಡಲಸಂಗಮದೇವಾ.”

ಅಷ್ಟವಿಧಾರ್ಚನೆ: ಎಂಟು ಪದಾರ್ಥಗಳಿಂದ ಮಾಡುವ ಪೂಜೆ: ಅವು- ೧) ಜಲ, ೨) ಗಂಧ, ೩) ಅಕ್ಷತೆ, ೪) ಪುಷ್ಪ, ೫) ಧೂಪ, ೬) ದೀಪ, ೭) ನೈವೇದ್ಯ, ೮) ತಾಂಬೂಲ.

ಷೋಡಶೋಪಚಾರಗಳು ಯಾವುವೆಂದರೆ: ೧) ಸುಖತಲ್ಪ, ೨) ಸುವಸ್ತ್ರ,  ೩) ಆಭರಣ, ೪) ಅನುಲೇಪನ, ೫) ಛತ್ರ, ೬) ಚಾಮರ, ೭) ವ್ಯಂಜನ,  ೮) ದರ್ಪಣ, ೯) ನಾದ, ೧೦) ವಾದ್ಯ, ೧೧) ನೃತ್ಯ, ೧೨) ಗೀತ, ೧೩) ಸ್ತೋತ್ರ, ೧೪) ಪುಷ್ಪಾಂಜಲೀ,  ೧೫) ಪ್ರಣಾಮ, ೧೬) ಪ್ರದಕ್ಷಿಣ,

ಅಷ್ಟವಿಧಾರ್ಚನೆಯ ಮೂಲಕ ಜಲ, ಗಂಧ, ಅಕ್ಷತೆ, ಪುಷ್ಪ, ಧೂಪ, ದೀಪಗಳನ್ನು ಲಿಂಗಕ್ಕೆ ಪಂಚಭೂತಗಳ ಸಮರ್ಪಣಾ ಭಾವದಿಂದ ಅರ್ಪಿಸುವುದು. ಲಿಂಗಕ್ಕೆ ನೈವೇದ್ಯ ಅರ್ಪಿಸುವುದು ಮತ್ತು ಅದರ ಪ್ರತಿಫಲವಾಗಿ ಪ್ರಸಾದವನ್ನು ಪಡೆಯುವುದು, ಆದರೆ ತಾಂಬೂಲವನ್ನು ಲಿಂಗಕ್ಕೆ ಏತಕ್ಕಾಗಿ ಅರ್ಪಿಸಬೇಕು ಎಂಬುದು ಪ್ರಶ್ನೆ?  ಆದರೆ ಅಲ್ಲಮಪ್ರಭುದೇವರು ತಮ್ಮ ಒಂದು ವಚನದಲ್ಲಿ  “ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ, ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ? ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ, ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ? ಸುಯಿಧಾನವನರ್ಪಿಸಿ ಫಲವ ಬೇಡುವರಯ್ಯಾ ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ? ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು, ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ!” ಎಂದು ನಮ್ಮನ್ನು ಸುತ್ತಿರುವ ಅಷ್ಟವಿಧಾರ್ಚನೆಯ ಮೇಲಿನ ನಂಬಿಕೆಯ ಪ್ರಸ್ತುತತೆಯನ್ನು ಪ್ರಶ್ನಿಸಿ, ವೈಚಾರಿಕತೆಯ ಬೀಜವನ್ನು ಬಿತ್ತುತ್ತಿದ್ದಾರೆ.

ಪಂಚಭೂತಗಳಾದಿಯಾಗಿ ಸೃಷ್ಟಿಯಲ್ಲಿ ತೋರುವ ಎಲ್ಲವೂ ಪರಮಾತ್ಮನ ಕೊಡುಗೆ, ಆ ವಸ್ತುಗಳನ್ನು ಪುನಃ ಪರಮಾತ್ಮನಿಗೆ ಅರ್ಪಿಸುವುದೆಂದರೇನು? ಅವುಗಳನ್ನು ನಾವು ಪರಮಾತ್ಮನಿಗೆ ಅರ್ಪಿಸಲಾದೀತೇ? ಇದು ಕೇವಲ ತೋರಿಕೆಯ ಆಡಂಬರವಲ್ಲವೇ? ನಾವು ಮುಖ್ಯವಾಗಿ ಪರಮಾತ್ಮನಿಗೆ ಅರ್ಪಿಸಬೇಕಾದ್ದು ಯಾವುದೇ ಹೊರಗಿನ ವಸ್ತುಗಳನ್ನಲ್ಲ ಬದಲಿಗೆ ಇಡಿಯಾಗಿ ನಮ್ಮನ್ನೇ ಅರ್ಪಿಸಿಕೊಳ್ಳಬೇಕು! ತನ್ನನ್ನು ತಾನು ಅರ್ಪಿಸಿಕೊಂಡ ಬಳಿಕ ಅಷ್ಟವಿಧಾರ್ಚನೆಯ ಹಂಗು ಲಿಂಗವಂತನಿಗೆ ಇಲ್ಲ!

ಇನ್ನು ಷೋಡಶೋಪಚಾರ: ಮೇಲೆ ತಿಳಿಸಿದ ಷೋಡಶೋಪಚಾರಗಳನ್ನು ಅಂಗೈಯ್ಯ ಮೇಲಿನ ಇಷ್ಟಲಿಂಗಕ್ಕೆಂತು ಮಾಡುವುದು? ಇವುಗಳಲ್ಲಿ ಏನಾದರೂ ಅರ್ಥವಿದೆಯೇ, ವೈಚಾರಿಕತೆ ಇದೆಯೇ ಎಂದು ಆಲೋಚಿಸಬೇಕಿದೆ. ದುರ್ದೈವವೆಂದರೆ ನಮಗೆ ಈ ವಿಚಾರಗಳನ್ನು ತಿಳಿಸಿ ಹೇಳಬೇಕಾಗಿದ್ದ ಸಮಾಜದ ಋಣದಲ್ಲಿರುವ ಮಠಾಧಿಪತಿಗಳು ಇಂಥಾ ಆಚರಣೆಗಳನ್ನು ಸ್ವತಃ ಮಾಡುತ್ತಿರುವುದನ್ನು ನೋಡಿದರೆ ಶರಣ ಕ್ರಾಂತಿಯನ್ನು, ಶರಣರ ವೈಚಾರಿಕತೆಯನ್ನು ಇವರು ಎಷ್ಟು ಅರ್ಥಮಾಡಿಕೊಂಡಿದ್ದಾರೆ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದಾರೆ ಎಂದು ಜನ ಸಾಮಾನ್ಯರು ಯೋಚಿಸುವಂತಾಗಿದೆ.

ಶರಣ ಸಕಳೇಶ ಮಾದರಸರು, “ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವ ಮಿಟ್ಟೆಯಭಂಡರ ಕಂಡು, ನಾಚಿತ್ತೆನ್ನ ಮನ. ಉಪಚಾರವೇಕೊ ಶಿವಲಿಂಗದ ಕೂಡೆ ಶ್ವಪಚರಿಗಲ್ಲದೆ? ಸಕಳೇಶ್ವರಯ್ಯಾ, ಇಂತಪ್ಪ ಮಾದಿಗ ವಿದ್ಯಾಭ್ಯಾಸದವರನೊಲಿಯಬಲ್ಲನೆ?” ಎಂದು ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವುದನ್ನು ಖಂಡಿಸುತ್ತಾರೆ. ಲಿಂಗವಂತನು ಶಿವಲಿಂಗಕ್ಕೆ ಈ ರೀತಿಯ ಉಪಚಾರಗಳನ್ನು ಮಾಡಬಾರದೆಂದು ಇಲ್ಲಿ ಖಂಡಿತವಾಗಿ ತಿಳಿಸಿದ್ದಾರೆ.  ಮಡಿವಾಳ ಮಾಚಿದೇವರೂ ಅದೇ ರೀತಿಯಲ್ಲಿ, “ಅಯ್ಯಾ, ತನ್ನ ತಾನರಿಯದೆ ನಾವು ಏಕಾರತಿ ದ್ವಿಯಾರತಿ  ತ್ರಯಾರತಿ ಚತುರಾರತಿ ಪಂಚಾರತಿ  ಷಡಾರತಿ ಸಪ್ತಾರತಿ ಅಷ್ಟಾರತಿ ನವಾರತಿ ದಶಾರತಿ ಕಡ್ಡಿಬತ್ತಿ ಕರ್ಪುರಾರತಿ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸುವ ಇಷ್ಟಲಿಂಗ ಪೂಜಕರೆಂದು ನುಡಿದುಕೊಂಬ ಬದ್ಧಭವಿ ಶುದ್ಧಶೈವ ಮರುಳು ಮಾನವರೆನಗೊಮ್ಮೆ ತೋರದಿರಯ್ಯ.” ಎಂದು ನುಡಿದು ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ಮಾಡುವುದು ಬಸವಮಾರ್ಗದ ಲಿಂಗಪೂಜೆಯಲ್ಲ, ಅದು ಬಸವ ಸಿದ್ಧಾಂತವಲ್ಲ ಎಂದು ಖಡಾಖಂಡಿತವಾಗಿ ಖಂಡಿಸುತ್ತಾರೆ. ಇವು ಬದ್ಧಭವಿಗಳು ಮಾಡುವ ಶುದ್ಧಶೈವದ ಆಚರಣೆ ಎಂದು ಸ್ಪಷ್ಟವಾಗಿ ಅರುಹಿದ್ದಾರೆ. ಲಿಂಗಾಯತರು, ಇಷ್ಟಲಿಂಗಾರಾಧಕರು ತಮ್ಮ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು  ಮಾಡುವುದು ಸಲ್ಲದು ಎಂಬುದು ಈ ವಚನಗಳಿಂದ ಸ್ಪಷ್ಟವಾಗುವುದು.

ಗುರು ಬಸವಣ್ಣನವರ ಈ ವಚನದಲ್ಲಿ “ಅಷ್ಟಷಷ್ಟಿಯಾದವರೆಲ್ಲ ತೀರ್ಥವಾಸಿಗಳಪ್ಪರೆ?  ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವರೆಲ್ಲ ಲಿಂಗಾರ್ಚಕರಪ್ಪರೆ, ಅಯ್ಯಾ? ವೇಷವ ಹೊತ್ತು ಗ್ರಾಸಕ್ಕೆ ತಿರುಗುವ ಈ ವೇಷ ದುರಾಚಾರಿಗಳ ಮೆಚ್ಚುವನೆ ಕೂಡಲಸಂಗಮದೇವ?”  ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವವರೆಲ್ಲಾ ಲಿಂಗಾರ್ಚಕರೇ ಎಂದು ಪ್ರಶ್ನಿಸಿದ್ದಾರೆ.

ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ತಿರಸ್ಕರಿಸಿರುವ ಕೆಲವು ವಚನಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.

೧) ಅಷ್ಟವಿಧಾರ್ಚನೆ ಷೋಡಶೋಪಚಾರವ  ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ. ಲಿಂಗವೆಂದರಿಯದೆ, ಜಂಗಮವೆಂದರಿಯದೆ, ಪ್ರಸಾದವೆಂದರಿಯದೆ ಆನು ಬೆಂದೆನಯ್ಯಾ. ಕೂಡಲಸಂಗಮದೇವಾ, ಆನು ಮಾಡುವುದೆಲ್ಲವೂ ಉಪಚಾರವಯ್ಯಾ. (ಬಸವಣ್ಣ)

೨) ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಲಾಗದು, ಮಾಡಿದರು ಮಾಡಿರಿ ಬೇಡಿ ಮಾಡಲಾಗದು. ಬೇಡಿ ಮಾಡಿದ ಭಕ್ತಿ ಈಡಾಗಲರಿಯದು ಕೂಡಲಚೆನ್ನಸಂಗಯ್ಯಾ. (ಚೆನ್ನಬಸವಣ್ಣ)

೩) ಅಂಗಲಿಂಗಸಂಬಂಧವೆಂಬ ದ್ವಂದ್ವವನಳಿದು, ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗ ಹರಿದು, ಸೋಹಂ ಸೋಹಂ ಎನುತ್ತಿದ್ದಿತ್ತು. ಸೋಹಂ ಸೋಹಂ ಎಂಬ ಸುಖದ ಸವಿಯ, ಮಹಾದಾನಿ ಸೊಡ್ಡಳಲಿಂಗವಾರೋಗಣೆಯ ಮಾಡಿ,  ನಿಜನಿವಾಸಿಯಾದ ಕಾರಣ, ನಾನು ನಾಮಸೀಮೆಗೆಟ್ಟೆನಯ್ಯ. (ಸೊಡ್ಡಳ ಬಾಚರಸ)

೪) ಸತ್ತುವೇ ಲಿಂಗ, ಚಿತ್ತುವೇ ಅಂಗ, ಆನಂದವೇ ಸಮರಸ, ನಿತ್ಯವೇ ಪ್ರಸಾದ, ಪರಿಪೂರ್ಣವೇ ಪ್ರಕಾಶ, ಅಖಂಡಮಯ ತಾನಾದ ಶರಣನು. ಉಪಾಧಿ ನಿರುಪಾಧಿಸಹವೆಂಬ ಮಾಟತ್ರಯದ ಕೋಟಲೆಯ ಕಾಣ ನೋಡಾ. ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬ ಕಷ್ಟಕರ್ಮವ ಹೋದ್ದ ನೋಡಾ. ಕೂಟ ಬಟ್ಟೆಗಳ ಕೂಡೆ ಕೂರ್ಮೆಸುಖಾನುಭಾವ ಕುರುಹಿಟ್ಟು ಹೇಳಿಕೊಳ್ಳನೋಡಾ. ಉಚ್ಛಿಷ್ಟ ವಾಕ್ಯಮಥನವನನುಕರಿಸ ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿರ್ದ ಅಚ್ಚಶರಣ. (ದೇಶಿಕೇಂದ್ರ ಸಂಗನಬಸವಯ್ಯ)
ಶರಣನಾದವನು ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬ ಕಷ್ಟಕರ್ಮವ ಮಾಡಲಾಗದೆಂದಿದ್ದಾರೆ.

೫) ಹರಹರಾ ನೀವಿಪ್ಪಠಾವನರಿಯದೆ, ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವರ ದಿಟ್ಟತನವ ನೋಡಾ! ಶಿವಶಿವಾ ನಿಮ್ಮ ಶ್ರೀಮುಖವನರಿಯದೆ ಸಕಲ ಪದಾರ್ಥವ ನಿಮಗರ್ಪಿಸಿ ಪ್ರಸಾದವ ಕೊಂಡೆವೆಂದೆಂಬವರ ಎದೆಗಲಿತನವ ನೋಡಾ! ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ ಆರು ಮೆಚ್ಚುವರು ಹೇಳಾ ಗುಹೇಶ್ವರಾ? (ಅಲ್ಲಮಪ್ರಭುದೇವರು)

೬) ಧೂಪ ದೀಪಾರತಿಯ ಬೆಳಗುವಡೆ, ನೀನು ಸ್ವಯಂಜ್ಯೋತಿಪ್ರಕಾಶನು. ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು. ಅಷ್ಟವಿಧಾರ್ಚನೆಯ ಮಾಡುವಡೆ, ನೀನು ಮುಟ್ಟಬಾರದ ಘನವೇದ್ಯನು. ನಿತ್ಯನೇಮಂಗಳ ಮಾಡುವಡೆ ನಿನಗೆ ಅನಂತನಾಮಂಗಳಾದವು ಗುಹೇಶ್ವರಾ. (ಅಲ್ಲಮಪ್ರಭುದೇವರು)

೭) ಮಜ್ಜನಕ್ಕೆರೆವಡೆ; ನೀನು ಶುದ್ಧ ನಿರ್ಮಲದೇಹಿ. ಪೂಜೆಯ ಮಾಡುವಡೆ; ನಿನಗೆ ಗಗನಕಮಲಕುಸುಮದ ಅಖಂಡಿತಪೂಜೆ. ಧೂಪದೀಪಾರತಿಗಳ ಬೆಳಗುವಡೆ; ನೀನು ಸ್ವಯಂ ಜ್ಯೋತಿಪ್ರಕಾಶನು. ಅರ್ಪಿತವ ಮಾಡುವಡೆ; ನೀನು ನಿತ್ಯತೃಪ್ತನು.
ಅಷ್ಟವಿಧಾರ್ಚನೆಗಳ ಮಾಡುವಡೆ; ನೀನು ಮುಟ್ಟಬಾರದ ಘನವೇದ್ಯನು. ನಿತ್ಯನೇಮಗಳ ಮಾಡುವಡೆ; ನಿನಗೆ ಅನಂತನಾಮಂಗಳಾದವು ಗುಹೇಶ್ವರಾ. (ಅಲ್ಲಮಪ್ರಭುದೇವರು)

೮) ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ?  ನೀನು ಬಹಿರಂಗವ್ಯವಹಾರದೂರಸ್ಥನು. ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ?  ನೀನು ವಾಙ್ಮನಕ್ಕತೀತನು.  ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ? ನೀನು ನಾದಾತೀತನು.  ಭಾವಜ್ಞಾನದಿಂದ ಒಲಿಸುವೆನೆ ಅಯ್ಯಾ? ನೀನು ಮತಿಗತೀತನು.  ಹೃದಯ ಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ?  ನೀನು ಸರ್ವಾಂಗ ಪರಿಪೂರ್ಣನು. ಒಲಿಸಲೆನ್ನಳವಲ್ಲ ನೀನೊಲಿವುದೆ ಸುಖವಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ. (ಅಕ್ಕಮಹಾದೇವಿ)

೯) ಆಸೆಯುಳ್ಳವಂಗೆ ಮಾಟಕೂಟವಲ್ಲದೆ, ನಿರಾಸೆಯುಳ್ಳವಂಗೆ ಮಾಟಕೂಟವೇಕೆ ?  ಮನಪರಿಣಾಮಿಗೆ ಮತ್ಸರವೇಕೆ? ಸುತ್ತಿದ ಮಾಯಾಪ್ರಪಂಚವ ಜರಿದವಂಗೆ ಅಂಗನೆಯರ ಹಿಂದು ಮುಂದೆ ತಿರುಗಲೇಕೆ? ಅಮುಗೇಶ್ವರನೆಂಬ ಲಿಂಗವನರಿದವಂಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ? (ಅಮುಗೆ ರಾಯಮ್ಮ)

೧೦) ಗುರುಪ್ರೇಮಿಯಾದಡೆ ಚತುರ್ವಿಧಭಕ್ತಿಯಿಂದ ತನುವ ದಂಡಿಸಲಾಗದು. ಲಿಂಗಪ್ರೇಮಿಗಳಾದಡೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಮನವ ಬಳಲಿಸಲಾಗದು. ಜಂಗಮಪ್ರೇಮಿಗಳಾದಡೆ ಅನ್ನ ವಸ್ತ್ರ ಹದಿನೆಂಟು ಜೀನಸಿನ ಧಾನ್ಯ ಮೊದಲಾದ ಷೋಡಶಭಕ್ತಿಯಿಂದ ಆತ್ಮನ ಬಳಲಿಸಲಾಗದು. ಇಂತಪ್ಪ ಭಕ್ತರಿಗೆ ಭವ ಹಿಂಗದು ; ಮುಕ್ತಿಯು ತೋರದು… ತಮ್ಮ ನಿಜವ ಮರೆದು ಕರ್ಮಕಾಂಡಿಗಳಾದ ಕಾರಣ… ಇಂತಪ್ಪವರ ಬ್ಥಿನ್ನಕ್ರಿಯಾಚಾರವನು ಮುಕ್ತಿ ಎಂಬುದು ಕರತಳಾಮಳಕವಾಗಿ ತೋರುವದು ಕಾಣೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ. (ಕಾಡಸಿದ್ಧೇಶ್ವರ)

೧೧)ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನು, ಅರಸರಿಯದ ಬಿಟ್ಟಿ ಮಾಡುವೆನು. ಎನ್ನ ತಾಗಿದ ಸುಖವ ಜಂಗಮಕ್ಕರ್ಪಿಸಲರಿಯದ ಉಪಚಾರಿಯಾನು. ಸ್ಥಾವರ ಜಂಗಮವನರಿಯದ ಪೂಜಕ ನಾನು. ಮತ್ತೆ ನಾಚದೇ  ಕೂಡಲಸಂಗಮದೇವಯ್ಯಾ, ಜಂಗಮವೆನ್ನ ಪ್ರಾಣಲಿಂಗವೆಂಬೆನು. (ಬಸವಣ್ಣ)

ಹೀಗೆ ಹಲವಾರು ವಚನಗಳಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ಶರಣರು ತಿರಸ್ಕರಿಸಿರುವುದನ್ನು ನೋಡಬಹುದು. ಆದರೆ ಬಸವಣ್ಣನವರ ಕೆಲ ವಚನಗಳಲ್ಲಿ ಮಾತ್ರ  ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ಮಾಡಬೇಕೆಂದು ಹೇಳುತ್ತವೆ. ಶರಣರು ಕರ್ಮಠ ವ್ಯವಸ್ಥೆಯ ವಿರುದ್ಧ ಸರಳೀಕೃತವಾದ ವ್ಯವಸ್ಥೆಯನ್ನು ಆಗು ಮಾಡಿಕೊಟ್ಟರು. ಆದರೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳು ಶರಣರ ವಿಚಾರಧಾರೆಗೆ ವಿರುದ್ಧವಾಗಿವೆ.

ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ಪುಷ್ಟೀಕರಿಸುವ ವಚನಗಳು.

೧) “ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು, ಮಾಡಿದ ಪೂಜೆಯ ನೋಡುವುದಯ್ಯಾ. ಶಿವತತ್ವಗೀತವ ಪಾಡುವುದು, ಶಿವನ ಮುಂದೆ ನಲಿದಾಡುವುದಯ್ಯಾ. ಭಕ್ತಿಸಂಭಾಷಣೆಯ ಮಾಡುವುದು, ನಮ್ಮ ಕೂಡಲಸಂಗನ ಕೂಡುವುದು.”

೨) ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ನಿಮ್ಮ ಮುಟ್ಟಲರಿಯದರ ಕಂಡಡೆ, ಅಯ್ಯ ಎಂತೆಂಬೆನವರ ಆವ ಭಾವದಲ್ಲಿ, ಆವ ಜ್ಞಾನದಲ್ಲಿ, ಆವ ಮುಖದಲ್ಲಿ ಅರಿವವರದಾರಯ್ಯಾ ಏನೆಂಬೆ ನಿಮ್ಮಲ್ಲಿ ಸಮ್ಯಕ್ಕರಾದ ಸತ್ಯಶರಣರ ಕಂಡು,
ಕೂಡಲಸಂಗಮದೇವಾ, ಅವರನಯ್ಯ ಎಂಬೆನು.

೩) ಅಷ್ಟವಿಧಾರ್ಚನೆ ಷೋಡಶೋಪಚಾರವ ಅಂದಂದಿನ ಕೃತ್ಯವ ಅಂದಂದಿಗೆ ಆನು ಮಾಡಿ ಶುದ್ಧನಯ್ಯಾ. ಹಂಗು ಹರಿಯಿಲ್ಲದ ಕಾರಣ, ಕೂಡಲಸಂಗಮದೇವ ನಿಷ್ಫಲದಾಯಕನಾಗಿ ಆನು ಮಾಡಿ ಶುದ್ಧನಯ್ಯಾ. (ಬಸವಣ್ಣ)

ಬಸವಣ್ಣನವರು  ಮೂಲತಃ ಹುಟ್ಟಿನಿಂದ ಶೈವಬ್ರಾಹ್ಮಣರು, ಶೈವಬ್ರಾಹ್ಮಣ ಸಂಪ್ರದಾಯದಲ್ಲಿ ಸ್ಥಾವರಶಿವಲಿಂಗ ಪೂಜೆ ಪ್ರಚಲಿತವಾಗಿತ್ತು ಮತ್ತು ಆ ಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳು ಆಚರಣೆಯಲ್ಲಿದ್ದವು. ಬಸವಣ್ಣನವರೂ ಹೊಸಧರ್ಮದ ಆವಿಷ್ಕಾರಕ್ಕೂ ಮುನ್ನ ಸ್ಥಾವರ ಶಿವಲಿಂಗವನ್ನು ಪೂಜಿಸುತ್ತಿದ್ದರು. ಆ ದಿನಗಳಲ್ಲಿ ಸ್ಥಾವರಲಿಂಗಕ್ಕೆ ಸಂಪ್ರದಾಯದಂತೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ಮಾಡುತ್ತಿದ್ದರು. ಕ್ರಮೇಣ ಸ್ಥಾವರಲಿಂಗವು ಜಗದ ಸಮಸ್ಯೆಗಳಿಗೆ ಪರಿಹಾರವಾಗಲಾರದು ಎಂದು ಮನಗಂಡು ಇಷ್ಟಲಿಂಗವನ್ನು ತಮ್ಮ ದಿವ್ಯಜ್ಞಾನದಿಂದ ಆವಿಷ್ಕರಿಸಿದರು.

ಇಷ್ಟಲಿಂಗವು ಜಗದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಲು ಶಕ್ತವಾಯಿತು! ಇದರಿಂದ ಬಸವಣ್ಣನವರಿಗೆ ಆದ ಆನಂದ ಅಪರಿಮಿತ, ವರ್ಣಿಸಲಸದಳ. ಆ ಆನಂದದ ಉತ್ತುಂಗದಲ್ಲಿದ್ದ ಬಸವಣ್ಣನವರು ಆರಂಭದ ದಿನಗಳಲ್ಲಿ  ಶೈವ ಮೂಲದ  ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ಇಷ್ಟಲಿಂಗ ಪೂಜೆಗೂ ಅಳವಡಿಸಿಕೊಂಡರು. ಅದಕ್ಕೆ ಗುರು ಬಸವಣ್ಣನವರ ಈ ವಚನವೇ ಸಾಕ್ಷಿ. “ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು, ಮಾಡಿದ ಪೂಜೆಯ ನೋಡುವುದಯ್ಯಾ. ಶಿವತತ್ವಗೀತವ ಪಾಡುವುದು, ಶಿವನ ಮುಂದೆ ನಲಿದಾಡುವುದಯ್ಯಾ. ಭಕ್ತಿಸಂಭಾಷಣೆಯ ಮಾಡುವುದು, ನಮ್ಮ ಕೂಡಲಸಂಗನ ಕೂಡುವುದು.”  ಈ ಆಚರಣೆಗಳು ಅಲ್ಲಮಪ್ರಭುದೇವರು ಅನುಭವ ಮಂಟಪಕ್ಕೆ ಬರುವವರೆಗೂ ಮುಂದುವರೆದಿತ್ತು. ಅಲ್ಲಮಪ್ರಭು ದೇವರು ಬಸವಣ್ಣನವರ ಮಹಾಮನೆಗೆ ಬಂದಾಗ ಬಸವಣ್ಣನವರು ಇಷ್ಟಲಿಂಗಪೂಜೆಯಲ್ಲಿ ನಿರತರಾಗಿದ್ದರು,  ಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳ ಆಚರಣೆಯಲ್ಲಿದ್ದ ಬಸವಣ್ಣನವರಿಗೆ ಪ್ರಭುದೇವರನ್ನು ಇದಿರುಗೊಂಡು ಸ್ವಾಗತಿಸಲು ಬಹಳ ಸಮಯ ಹಿಡಿಯಿತು. ಪ್ರಭುದೇವರಿಗೆ ಬಹಳ ಹೊತ್ತು ಕಾಯ್ದು ಸಹನೆ ಮೀರಿತ್ತು! ಆಗ ಪ್ರಭುದೇವರು ಹೀಗೆ ಹೇಳಿದ್ದಾರೆ “ಹರಹರಾ ನೀವಿಪ್ಪ ಠಾವನರಿಯದೆ, ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವರ ದಿಟ್ಟತನವ ನೋಡಾ! ಶಿವಶಿವಾ ನಿಮ್ಮ ಶ್ರೀಮುಖವನರಿಯದೆ ಸಕಲ ಪದಾರ್ಥವ ನಿಮಗರ್ಪಿಸಿ ಪ್ರಸಾದವ ಕೊಂಡೆವೆಂದೆಂಬವರ ಎದೆಗಲಿತನವ ನೋಡಾ! ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ ಆರು ಮೆಚ್ಚುವರು ಹೇಳಾ ಗುಹೇಶ್ವರಾ?” ಎಂದು ಪ್ರಭುದೇವರು ಬಸವಣ್ಣನವರನ್ನು ಛೇಡಿಸುತ್ತಾರೆ. ಶರಣರ ಪ್ರಕಾರ ಜಂಗಮವೇ ಲಿಂಗ, ಪ್ರಭುದೇವರಂಥಾ ಜಂಗಮಲಿಂಗವೇ ಮನೆಗೆ ಬಂದಿರುವಾಗ ಬಸವಣ್ಣನವರು ಒಳಗೆ ಅಷ್ಟವಿಧಾರ್ಚನೆ ಷೋಡಶೋಪಚಾರದಲ್ಲಿ ನಿರತರಾಗಿದ್ದು ಸರಿಯಲ್ಲವೆಂದು ಹಳಿಯುತ್ತಾರೆ. ಆಗ ಬಸವಣ್ಣನವರು ಎಚ್ಚೆತ್ತು ತಮ್ಮನ್ನು ತಾವು ಪರೀಕ್ಷೆಗೊಳಪಡಿಸಿಕೊಂಡು ಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳಂಥಾ ಆಚರಣೆಗಳು ಡಾಂಭಿಕ ಆಡಂಬರವೆಂದು ಭಾವಿಸಿ ಈ ರೀತಿಯಾಗಿ ನೊಂದುಕೊಂಡಿದ್ದಾರೆ “ಅಷ್ಟವಿಧಾರ್ಚನೆ ಷೋಡಶೋಪಚಾರವ  ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ. ಲಿಂಗವೆಂದರಿಯದೆ, ಜಂಗಮವೆಂದರಿಯದೆ, ಪ್ರಸಾದವೆಂದರಿಯದೆ ಆನು ಬೆಂದೆನಯ್ಯಾ. ಕೂಡಲಸಂಗಮದೇವಾ, ಆನು ಮಾಡುವುದೆಲ್ಲವೂ ಉಪಚಾರವಯ್ಯಾ…”

ಬಸವಣ್ಣನವರ ವ್ಯಕ್ತಿತ್ವವೇ ಹಾಗೆ,  ಹಮ್ಮುಬಿಮ್ಮಿನದಲ್ಲ, ಸರಳ ನೇರ ನಡೆನುಡಿ. ವಿಚಾರ ಪಲ್ಲಟಗಳನ್ನು ಬಹಳ ಸಲೀಸಾಗಿ ಅಂಗೀಕರಿಸಿ ಅಳವಡಿಸಿಕೊಳ್ಳುತ್ತಿದ್ದರು. ಹಾಗಾಗಿ ಕಲ್ಯಾಣಕ್ಕೆ ಪ್ರಭುದೇವರ ಆಗಮನದ ನಂತರ ಬಸವಣ್ಣನವರು ಅಷ್ಟವಿಧಾರ್ಚನೆ ಷೋಡಶೋಪಚಾರಗಳಂಥಾ ಕರ್ಮಠ ಆಚರಣೆಗಳನ್ನು ನಿಲ್ಲಿಸಿ, ಸರಳ ಸಹಜ ಲಿಂಗಾಂಗ ಯೋಗವನ್ನು ಆಚರಿಸಿ ಬೋಧಿಸಿದರು. ಸಹಜ ಲಿಂಗಾಂಗ ಯೋಗದಲ್ಲಿ ನೆನಹು, ನಿರೀಕ್ಷಣೆ ಮತ್ತು ಅನುಸಂಧಾನ ಎಂಬ ಸೂತ್ರದೊಂದಿಗೆ  ಸ್ಥೂಲ ಸೂಕ್ಷ್ಮ ಕಾರಣ ತನುಗಳು ಇಷ್ಟಲಿಂಗ ಪ್ರಾಣಲಿಂಗ ಮತ್ತು ಭಾವಲಿಂಗಗಳೆಂಬ ಲಿಂಗತ್ರಯಗಳೆನಿಸಿ ಸಾಧಕನ ಸರ್ವಾಂಗವೂ ಲಿಂಗಮಯವಾಗುವುದೆಂಬ ಹೊಸ ಸೂತ್ರವನ್ನು ಅರುಹಿದರು. ಶರಣನ ತನು ಲಿಂಗತನು, ಶರಣನ ಕಾಯಕ ಲಿಂಗದ ಕಾಯಕ, ಶರಣನ ಭಾವ ನಿರ್ಭಾವ, “ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ‍ಈ ಲೋಕದೊಳಗೆ ಮತ್ತೆ ಅನಂತಲೋಕ ‍‍ಶಿವಲೋಕ, ಶಿವಾಚಾರವಯ್ಯಾ. ‍‍‍ಶಿವಭಕ್ತನಿದ್ದ ಠಾವೆ ದೇವಲೋಕ,  ‍‍ಭಕ್ತನಂಗಳವೆ ವಾರಣಾಸಿ, ಕಾಯವೆ ಕೈಲಾಸ, ಇದು ಸತ್ಯ, ಕೂಡಲಸಂಗಮದೇವಾ.” ಇಂತು ಲಿಂಗಾಯತನ ನಡೆಶುದ್ಧ ನುಡಿಶುದ್ಧ ಮನಶುದ್ಧ ಭಾವಶುದ್ಧ.

Previous post ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
Next post ಬೆಳಗಿನ ಬೆಳಗು ಮಹಾಬೆಳಗು
ಬೆಳಗಿನ ಬೆಳಗು ಮಹಾಬೆಳಗು

Related Posts

ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
Share:
Articles

ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು

July 4, 2021 Bayalu
ಪ್ರಸ್ತುತ ಲೇಖನದಲ್ಲಿ ‘ವಚನ ಗುಮ್ಮಟ’ವೆಂದು ಪ್ರಶಂಸಿಸಲ್ಪಟ್ಟ ಫ.ಗು. ಹಳಕಟ್ಟಿಯವರ (1880-1964) ಜೀವನ ಚರಿತ್ರೆಯನ್ನು ಅವಲೋಕಿಸುವ ಪ್ರಯತ್ನ ಮಾಡಲಾಗಿದೆ. ಅವರ ಜೀವನ...
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
Share:
Articles

ಶರಣರ ಚರಿತ್ರೆಯ ಮೇಲೆ ಹೊಸಬೆಳಕು

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣದಲ್ಲಿ ಕಂಬದ ಮಾರಿ ತಂದೆ ಎಂದು ಪ್ರಸಿದ್ಧಗೊಂಡ ವಚನಕಾರ ಕದಂಬರ ರಾಜ್ಯದ ಇಂದಿನ ಪೊಂಡ ತಾಲೂಕಿನ ಕಾವಳೆ ಪುಟ್ಟ ಹಳ್ಳಿಯ ಮೀನುಗಾರ. ಬಸವಾದಿ ಶರಣರ ಅನುಭಾವ ಕ್ರಾಂತಿಗೆ...

Comments 9

  1. ಬಸವರಾಜ ಹಂಡಿ
    Nov 2, 2018 Reply

    ಅಷ್ಟವಿಧಾರ್ಚನೆ – ಷೋಡಶೋಪಚಾರ

    ಡಾ. ಪಂಚಾಕ್ಷರಿ ಹಳೇಬೀಡು ಶರಣರ ಈ ಲೇಖನ ಅದ್ಬುತವಾಗಿ ಮೂಡಿಬಂದಿದೆ.
    ಕಳೆದ 3-4 ಲೇಖನಗಳ ಹಾದಿಯಲ್ಲಿ ಈ ಲೇಖನವು ಮೂಡಿ ಬಂದಿದೆ.
    ವಚನಗಳಲ್ಲಿ ಉಲ್ಲೇಖವಾಗಿರುವ ಕೆಲವು ಮೂಡ ನಂಬಿಕೆಗಳನ್ನು ಹಾಗೂ ಕೆಲವು ತಪ್ಪು ಆಚರಣೆಗಳನ್ನು ವಚನಗಳ ಮೂಲಕ ಪರಿಹರಿಸಲು ಪ್ರಯತ್ನಿಸಿದ್ದಾರೆ.

    ಡಾ. ಪಂಚಾಕ್ಷರಿ ಹಳೇಬೀಡು ಶರಣರು ವಚನವನ್ನು ಬಹಳ ಆಯಾಮಗಳಿಂದ( ಸಂದರ್ಭ, ಜ್ಞಾನ ಹಾಗು ವಚನಗೆ ಸಂಬದ ಪಟ್ಟ ಇನ್ನೊಂದು ವಚನ) ನೋಡುತ್ತಾರೆ ಹಾಗು ಬಹಳ ಅಂಶಗಳನ್ನು ಗಣನಗೆ ತಂದು ವಚನಗಳನ್ನು ಆರ್ತೈಸುತ್ತಾರೆ. ಈ ಕ್ರಿಯೆಯೆ ಮುಖಾಂತರ from end to end he covers completely ( 360 degree completion ).

    ಈ ಕೃತಕವಾದ ಅಷ್ಟವಿಧಾರ್ಚನೆ ಮತ್ತು ಷೋಡಶೋಪಚಾರ ವಚನಗಳು ಹೇಳಲಿಕ್ಕೆ ಸಾಧ್ಯವಿಲ್ಲ. ಪ್ರಾರಂಭದ ಕೆಲವು ವಚನಗಳಲ್ಲಿ ಮಾತ್ರ ಇವೆ.

    ಡಾ. ಪಂಚಾಕ್ಷರಿ ಹಳೇಬೀಡು ಶರಣರಗೆ ನಮ್ಮೆಲ್ಲ ಬಸವ ಅನುಯಾಯಿಗಳಿಂದ ಈ ಅದ್ಬುತ ಹಾಗು ವಿರಳವಾದ ಜ್ಞಾನ ದಾಸೋಹಕ್ಕೆ ಧನ್ಯವಾದಗಳು ಹಾಗು ಶರಣು ಶರಣಾರ್ಥಿಗಳು. ಬಯಲು ತಂಡಕ್ಕೆ ಸಹ ಶರಣು ಶರಣಾರ್ಥಿಗಳು.

  2. sharada A.M
    Nov 3, 2018 Reply

    ಪ್ರತಿ ತಿಂಗಳು ಕಾಯುವಂತೆ ಮಾಡಿದ ಬಯಲು ಲೇಖನಗಳ ಬಗ್ಗೆ ಹೆಮ್ಮೆ ಹೆಚ್ಚುತ್ತಿದೆ.
    ಆಡಂಬರದ ಪೂಜೆಗಳು ಮಾನಸಿಕ ನೆಮ್ಮದಿ ಕೊಡುವುದಿಲ್ಲ, ಸಮಾಧಾನ ತರುವುದಿಲ್ಲ. ಆದ್ದರಿಂದ ದೇವರಿಗೆ ಹಿಡಿಸುವುದಿಲ್ಲ. ಶರಣರು ಇವನ್ನೆಲ್ಲ ಒಪ್ಪಲು ಸಾಧ್ಯವೇ ಇಲ್ಲ. ನಿಮ್ಮ ತರ್ಕ ಸರಿಯಾಗಿದೆ ಅಣ್ಣಾ.

  3. Gangadhar navale
    Nov 3, 2018 Reply

    “ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ……..” ಎನ್ನುವ ಬಸವಣ್ಣನವರ ವಚನ ನೀವು ಲೇಖನದಲ್ಲಿ ಪ್ರಸ್ತಾಪ ಮಾಡಿದ ವಿಚಾರಕ್ಕೆ ಸೂಕ್ತವಾಗಿ ಹೊಂದುತ್ತದೆ. ಇವುಗಳನ್ನೆಲ್ಲ ದಾಟಿ ಹೋದವರು ಶರಣರು ಮತ್ತು ಬಸವಣ್ಣನವರು.

  4. jeevan koppad
    Nov 5, 2018 Reply

    ದೇವರು ಕೊಟ್ಟಿದ್ದನ್ನು ದೇವರಿಗೆ ಕೊಡುವುದರಲ್ಲಿ ಯಾವುದೇ ಅರ್ಥವಿಲ್ಲ. ಕೆರೆಯ ನೀರನು ಕೆರೆಗೆ ಚಲ್ಲಿದಂತೆ, ಷೋಡಶೋಪಚಾರಗಳ ವಿಷಯ ನನಗೆ ಗೊತ್ತಿರಲಿಲ್ಲ. ಚೆನ್ನಾಗಿ ಬರೆದಿದ್ದೀರಿ ಅಣ್ಣಾವರೆ.

  5. kavitha hiremat
    Nov 5, 2018 Reply

    ಇಷ್ಟಲಿಂಗಕ್ಕೆ ಷೋಡಶೋಪಚಾರ ಮಾಡೋದು ಹೇಗೆ? ಅದು ಸಾಧ್ಯವೂ ಇಲ್ಲ. ಹರಿಹರನ ರಗಳೆಯಲ್ಲಿ ಬಸವಣ್ಣನವರು ಮತ್ತು ಶರಣರ ಪೂಜೆಯನ್ನು ವಿವರಿಸುವಾಗ ಅಷ್ಟವಿಧಾರ್ಚನೆ, ಷೋಡಶೋಪಚಾರಗಳ ವಿವರಣೆಗಳೇ ತುಂಬಿಕೊಂಡಿವೆ. ಇವುಗಳನ್ನು ಓದಿದವರು ಲಿಂಗ ಪೂಜೆಯ ಕುರಿತು ತಪ್ಪು ಕಲ್ಪನೆಗಳನ್ನು ತುಂಬಿಕೊಳ್ಳುತ್ತಾರೆ. ನಿಮ್ಮಂತೆ ಪ್ರತಿಯೊಂದನ್ನು ಬಿಡಿಸಿ ಹೇಳುವವರು ಬೇಕು.

  6. anilkumar sajjan
    Nov 10, 2018 Reply

    ಅಷ್ಟವಿಧಾರ್ಚನೆಯಂಥ ಭಾರೀ ಪೂಜೆಗಳನ್ನು ಭಯಭಕ್ತಿಯಿಂದ ಮಾಡುವವರನ್ನು ನೋಡಿದ್ದೇನೆ. ಪಂಚಪೀಠದ ಸ್ವಾಮಿಗಳು, ಅನೇಕ ಇತರೆ ಸ್ವಾಮಿಗಳು ಹೀಗೆ ಪೂಜೆ ಮಾಡಿ ಭಕ್ತರನ್ನು ಹೆದರಿಸುತ್ತಾರೆ ಎಂದು ನನಗೆ ಅನಿಸುತ್ತದೆ. ಚಿಕ್ಕವನಿದ್ದಾಗಲೆಲ್ಲ ಇಂತ ಪೂಜೆ ನೋಡಿದರೆ ಪುಣ್ಯ ಎಂದು ಹಿರಿಯರು ನಮಗೆ ಹೇಳುತ್ತಿದ್ದರು, ಈಗ ಅದೆಲ್ಲ ಬೂಟಾಟಿಕೆ ಎನಿಸುತ್ತದೆ. ದೇವರನ್ನು ಭಕ್ತರಿಂದ ದೂರ ಮಾಡುವ ಸಂಚು ಇದು. ಲೇಖನ ತುಂಬಾ ಚೆನ್ನಾಗಿದೆ.

  7. ಗಂಗಾಧರ ನಾಯಕ್, ಜಗಳೂರು
    Nov 12, 2018 Reply

    “ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವ ಮಿಟ್ಟೆಯಭಂಡರ ಕಂಡು, ನಾಚಿತ್ತೆನ್ನ ಮನ…” ಎನ್ನುವ ವಚನ ಬಹಳ ಸಲ ಓದಿದೆ. ಗೊಡ್ಡು ಕ್ರಿಯಾಚರಣೆಗಳನ್ನು ಹೀನಾಯವಾಗಿ ಉಗಿದು ಆಚೆಗಟ್ಟಿದ ಶರಣರ ಧರ್ಮದಲ್ಲಿ ಮತ್ತೆ ಎಲ್ಲವನ್ನೂ ತುರುಕಿಸಿದವರಿಗೆ ಹೇಗೆ ಬೈಯಬೇಕು. ಜನರನ್ನು ದಿಕ್ಕುತಪ್ಪಿಸುತ್ತಿರುವವರು ಸ್ವಾಮಿಗಳು, ಇವರಿಗೆ ಮೂಲ ತಿಳುವಳಿಕೆ ಕೊಡಬೇಕು.

  8. ಶೈಲಾ ನಾಗೇಗೌಡ
    Nov 14, 2018 Reply

    ಪರಮಾತ್ಮನ ಕೊಡುಗೆಯನ್ನು ಪರಮಾತ್ಮನಿಗೆ ನಾನು ಕೊಡುವೆ ಎಂದು ಅರ್ಪಿಸುವುದು ಅರ್ಥವಿಲ್ಲದ ಆಚರಣೆ. ಭಕ್ತಿಯೆಂದರೆ ಪೂಜೆ ಎಂದು ಅರ್ಥವೇ?

  9. karthik mannur
    Nov 29, 2018 Reply

    ಇದು ಲಿಂಗಾಯತದ ನಿಜವಾದ ಸಮಸ್ಯೆ ಅಂತ ನನ್ನ ಅಭಿಪ್ರಾಯ, ಪೂಜೆಯ ವಿಷಯದಲ್ಲೇ ನಾವು ದಾರಿ ತಪ್ಪಿದ್ದೇವೆ, ಸರಿಯಾದ ಮಾರ್ಗದರ್ಶನದ ಕೊರತೆ, ನಮ್ಮ ವಿಚಾರಕ್ಕೆ ವಚನಗಳನ್ನು ಬಗ್ಗಿಸಿಕೊಳ್ಳುವುದು ದೊಡ್ಡ ಅಪರಾಧ. ಆ ಅಪರಾಧ ಎಲ್ಲರಿಂದಲೂ ನಡೆಯುತ್ತಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
WHO AM I?
WHO AM I?
June 17, 2020
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ನೋಟದ ಕೂಟ…
ನೋಟದ ಕೂಟ…
May 10, 2023
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
Copyright © 2025 Bayalu