
ಲಿಂಗಾಯತ ಧರ್ಮದ ನಿಜದ ನಿಲುವು
ಪ್ರಜಾವಾಣಿ ದಿನಪತ್ರಿಕೆಯ ಸಂಪಾದಕೀಯ ಪುಟದಲ್ಲಿ ‘ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವೇ?’ ಎಂಬ ನನ್ನ ಲೇಖನಕ್ಕೆ ಪ್ರತಿಕ್ರಿಯೆ ಎನ್ನುವಂತೆ ಡಾ ಚಿದಾನಂದ ಮೂರ್ತಿಯವರು 13 ಪುಟಗಳ ಲೇಖನವನ್ನು ನನಗೆ ಕಳಿಸಿದ್ದಾರೆ. ಅದು 21 ಜೂನ 2017ರಂದು ಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸಿ ಅವರು ನಡೆಸಿದ ಪತ್ರಿಕಾಗೋಷ್ಟಿಯ ಲಿಖಿತ ಪ್ರತಿ. ನನ್ನ ಲೇಖನಕ್ಕಿಂತ ಮೊದಲೇ ಅದರ ಅಂಶಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಅದರ ತಲೆಬರಹ ‘ವೀರಶೈವರು ಹಿಂದೂಗಳಲ್ಲ ಎಂಬುದು ಅವಿವೇಕದ ವಾದ’. ಅದರಲ್ಲಿನ ‘ಅವಿವೇಕ’ದಂತಹ ಪದಪ್ರಯೋಗವು ಡಾ.ಚಿದಾನಂದ ಮೂರ್ತಿಯವರಂಥ ಎತ್ತರದ ವ್ಯಕ್ತಿಗೆ ಶೋಭೆ ತರುವಂಥದಲ್ಲ. ಹಿಂದೊಮ್ಮೆ ವಿಧಾನಸೌಧದಲ್ಲಿ ಸರ್ಕಾರದಿಂದ ದೇವರ ದಾಸಿಮಯ್ಯನ ಜಯಂತಿಯನ್ನು ಆಚರಿಸುತ್ತಿದ್ದಾಗ ಅದನ್ನು ವಿರೋಧಿಸಿ ತುಂಬಿದ ಸಭೆಯಲ್ಲಿ ಮೂರ್ತಿಗಳು ಹುಚ್ಚರಂತೆ ಘೋಷಣೆ ಕೂಗಿದ್ದನ್ನು ಸಾರ್ವಜನಿಕರು ಮರೆತಿಲ್ಲ.
ಚಿದಾನಂದ ಮೂರ್ತಿಯವರು ಪಂಚಪೀಠಗಳ ಮುಖವಾಣಿಯಂತೆ ವರ್ತಿಸುತ್ತಿದ್ದಾರೆ. ಲಿಂಗಾಯತ ಮತ್ತು ವೀರಶೈವದ ನಡುವಿನ ತಿಕ್ಕಾಟಕ್ಕೆ ಸಂಬಂಧಿಸಿ 1998ರಲ್ಲಿ ‘ವಚನಶೋಧ’ ಎಂಬ ತಮ್ಮ ಗ್ರಂಥದಲ್ಲಿ, “ಸಿದ್ಧಾಂತ ಶಿಖಾಮಣಿಯ ಕಾಲ ಕ್ರಿ.ಶ. 1160-80ಕ್ಕಿಂತ ನಿಶ್ಚಿತವಾಗಿಯೂ ಹಿಂದೆಯಲ್ಲ, ಬಹುಶಃ 13-14ನೇ ಶತಮಾನದ ಕೃತಿ” ಎಂದು ಬರೆದಿದ್ದರು. ಮರುವರ್ಷ 1999ರಲ್ಲಿ ಅವರ ಗುರುಗಳೂ, ಪಂಚಪೀಠಗಳಲ್ಲಿ ಒಂದಾದ ಕಾಶೀ ಪೀಠದ ಶ್ರೀ ಚಂದ್ರಶೇಖರ ಸ್ವಾಮಿಯವರು ‘ಸಿದ್ಧಾಂತ ಶಿಖಾಮಣಿ ಸಮೀಕ್ಷಾ’ ಎಂಬ ತಮ್ಮ ಪಿಎಚ್.ಡಿ. ಪ್ರಬಂಧ ಪ್ರಕಟಿಸಿ ಸಿದ್ಧಾಂತ ಶಿಖಾಮಣಿಯು ರಾಮಾಯಣಕ್ಕಿಂತ ಹಳೆಯ ಗ್ರಂಥ ಎಂಬ ಅಭಿಪ್ರಾಯವನ್ನು ತೇಲಿಬಿಟ್ಟರು. ಆಗ ಪೇಚಿಗೆ ಸಿಲುಕಿದ ಚಿದಾನಂದ ಮೂರ್ತಿಯವರು 2000ದಲ್ಲಿ ‘ವೀರಶೈವಧರ್ಮ: ಭಾರತೀಯ ಸಂಸ್ಕೃತಿ’ ಎಂಬ ಇನ್ನೊಂದು ಗ್ರಂಥ ಬರೆದರು. ಅದರಲ್ಲಿ ಅವರ ಅಭಿಪ್ರಾಯ: “ನಾನೇನೋ ಸಿದ್ಧಾಂತ ಶಿಖಾಮಣಿಯ ಕರ್ತೃ ಬಸವನ ಹಿರಿಯ ಸಮಕಾಲೀನನೆಂದು, ಅದು ಬಸವನ ಕಾಲದಲ್ಲೇ ರಚಿತವಾಗಿದ್ದು, ಬಸವನ ಅಧ್ಯಯನಕ್ಕೆ ಲಭ್ಯವಾಗಿತ್ತೆಂದು ಸಾಧಾರವಾಗಿ ತರ್ಕಿಸಿದ್ದೇನೆ.” ಹೀಗಿದೆ ಅವರ ಬೌದ್ಧಿಕ ಪ್ರಾಮಾಣಿಕತೆ! ಉಪಜಾತಿಯ ಅಭಿಮಾನ ಮತ್ತು ಗುರುಸೇವಾ ಭಾವನೆಗಳು ಅವರು ಉಲ್ಟಾಹೊಡೆಯಲು ಕಾರಣವಾಗಿರಬಹುದು! 2003ರಲ್ಲಿ ಕಾಶೀ ಶ್ರೀಗಳ ಮತ್ತು ಚಿದಾನಂದ ಮೂರ್ತಿಯವರ ಬದಲಾದ ಅಭಿಪ್ರಾಯವು ಸಂಪೂರ್ಣವಾಗಿ ಸತ್ಯಕ್ಕೆ ದೂರವೆಂದು ಕುಂದೂರಿನ ಇಮ್ಮಡಿ ಶಿವಬಸವ ಶ್ರೀಗಳು ‘ಸಿದ್ಧಾಂತಶಿಖಾಮಣಿ ಹಾಗೂ ಶ್ರೀಕರಭಾಷ್ಯ: ನಿಜದ ನಿಲುವು’ ಎಂಬ ಗ್ರಂಥದಲ್ಲಿ ಸಿದ್ಧಪಡಿಸಿದ್ದಾರೆ!
ಡಾ.ಚಿದಾನಂದ ಮೂರ್ತಿಯವರ ವಾದಗಳಿಗೆ ಉತ್ತರಿಸದಿದ್ದರೆ ಅವನ್ನು ನಾನು ಒಪ್ಪಿದ್ದೇನೆಂದು ಅರ್ಥೈಸುವ ಸಾಧ್ಯತೆಯಿದೆ. ಅವರು ಕನ್ನಡ ಸಾಹಿತ್ಯದ ಮಹಾನ್ ಸಂಶೋಧಕರು. ಆದ್ದರಿಂದ ಸಾರ್ವಜನಿಕರು ಅವರ ವಾದ ಸತ್ಯವೆಂದು ತಿಳಿಯುವ ಸಾಧ್ಯತೆಯೂ ಇದೆ. ತದ್ವಿರುದ್ಧವಾಗಿ, ಅವರ ವಾದದ ಪ್ರತಿ ಅಂಶವೂ ಸತ್ಯಕ್ಕೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. 2000ದಿಂದ ಬಸವಣ್ಣನವರ ಬಗ್ಗೆ ಅವರು ಅದೇ ತರಹದ ವಾದಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಸುಳ್ಳೊಂದನ್ನು ನೂರಾರು ಸಲ ಹೇಳಿದರೆ ಅದನ್ನು ಜನ ಸತ್ಯವೆಂದು ನಂಬುತ್ತಾರೆಂದು ಅವರು ತಿಳಿದಂತಿದೆ.
ಡಾ. ಚಿದಾನಂದ ಮೂರ್ತಿಯವರು ನನಗೆ ಕಳಿಸಿದ ಪತ್ರದಲ್ಲಿ ಅವರ ಸ್ವತಂತ್ರವಾದ ವಾದಗಳೇ ಇಲ್ಲ! ಬದಲಿಗೆ ಅದರ ಎರಡುಮೂರಾಂಶ ಭಾಗವು ಮಠಾಧಿಪತಿಗಳ ಮತ್ತು ಕೆಲವು ಪ್ರಸಿದ್ಧ ವ್ಯಕ್ತಿಗಳ ಅಭಿಪ್ರಾಯಗಳನ್ನು ಹೊಂದಿದೆ. ಪ್ರಮುಖ ಮಠಾಧಿಪತಿಗಳಲ್ಲಿ ರಂಭಾಪುರಿ ಪೀಠದ ಪ್ರಸನ್ನ ರೇಣುಕರ, ಕೇದಾರ ಪೀಠದ ರಾವಳ್ ಭೀಮಾಶಂಕರ ಸ್ವಾಮಿಗಳ, ಕಾಶೀ ಪೀಠದ ಚಂದ್ರಶೇಖರ ಶಿವಾಚಾರ್ಯರ, ಶ್ರೀಶೈಲ ಪೀಠದ ಉಮಾಪತಿ ಪಂಡಿತಾರಾಧ್ಯರ, ಡಾವಣಗೆರೆ ಸದ್ಯೋಜಾತ ಸ್ವಾಮಿಗಳ, ಲಿಂ.ಹಾನಗಲ್ ಕುಮಾರಸ್ವಾಮಿಗಳ, ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಮತ್ತು ದಿವಂಗತ ಸಿದ್ಧಯ್ಯ ಪುರಾಣಿಕರ ಹೇಳಿಕೆಗಳಿವೆ. ಇವರೆಲ್ಲರೂ ಪಂಚಪೀಠಗಳಿಗೆ ಸಂಬಂಧಿಸಿದವರೆಂದು ಬೇರೆ ಹೇಳಬೇಕಿಲ್ಲ. ಅವರೇ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಹೇಳುವವರು. ಪಂಚಾಚಾರ್ಯರೇ ಲಿಂಗಾಯತ ಧರ್ಮ ಸ್ಥಾಪಿಸಿದರೆಂದೂ, ಲಿಂಗಾಯತವು ಹಿಂದೂ ಧರ್ಮದ ಭಾಗವೆಂದೂ, ಲಿಂಗಾಯತರು ವೇದ, ಆಗಮ, ಉಪನಿಷತ್ತು, ಬ್ರಾಹ್ಮಣಿಕ, ಅರಣ್ಯಕಗಳನ್ನು ಒಪ್ಪುತ್ತಾರೆಂದೂ ವಾದಿಸುವವರು ಉಪಜಾತಿಯಿಂದ ಜಂಗಮರು. ಡಾ.ಚಿದಾನಂದ ಮೂರ್ತಿಗಳು ಅದೇ ಗುಂಪಿನವರೆಂಬುದು ಬಹುತೇಕರಿಗೆ ಗೊತ್ತಿದೆ. ಇದು ಓತಿಕಾಟದ ಜಗಳದಲ್ಲಿ ಬೇಲಿಯೇ ಸಾಕ್ಷಿಯೆಂಬಂತೆ ಭಾಸವಾಗುತ್ತಿದೆ!
ವೀರಶೈವ/ಲಿಂಗಾಯತರಲ್ಲದ ಕೆಲವು ಗಣ್ಯರ ಹೇಳಿಕೆಗಳನ್ನೂ ನೀಡಿದ್ದಾರೆ. ಬಹಳ ವಿಚಿತ್ರವೆಂದರೆ ಸ್ವಾಮಿ ವಿವೇಕಾನಂದರ, ಗಾಂಧೀಜಿಯವರ, ಶ್ರೀ ವೀರೇಂದ್ರ ಹೆಗ್ಗಡೆಯವರ, ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ, ಶ್ರೀ ಪೇಜಾವರ ಸ್ವಾಮಿಗಳ, ಶ್ರೀ ಶಿವರಾಮ ಕಾರಂತರ, ಶ್ರೀ ಆಲೂರ ವೆಂಕಟರಾವ್ ಅವರ ಮತ್ತು ರಾಮಕೃಷ್ಣ ಆಶ್ರಮದ ಸ್ವಾಮಿ ಹರ್ಷಾನಂದ ಅವರ ಹೇಳಿಕೆಗಳು ಯಾವುದೇ ರೀತಿಯಲ್ಲಿ ಲಿಂಗಾಯತಕ್ಕೆ ಅಥವಾ ವೀರಶೈವಕ್ಕೆ ಅಥವಾ ಹಿಂದೂ ಧರ್ಮ ಮತ್ತು ಲಿಂಗಾಯತದ ನಡುವಿನ ಸಂಬಂಧಕ್ಕೆ ಸಂಬಂಧಿಸಿಯೇ ಇಲ್ಲ. ಅವರೆಲ್ಲ ಕೇವಲ ಹಿಂದೂ ಧರ್ಮದ ವಿಶೇಷತೆಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಿಹೊಗಳಿದ್ದಾರೆಯೇ ಹೊರತು ಲಿಂಗಾಯತ/ವೀರಶೈವ ಧರ್ಮ ಮತ್ತು ಹಿಂದೂ ಧರ್ಮಗಳ ಕುರಿತು ತುಲನಾತ್ಮಕವಾಗಿ ಚಕಾರ ಶಬ್ದವನ್ನೂ ಎತ್ತಿದ್ದು ಆ ಉದ್ಧರಣಗಳಲ್ಲಿ ಇಲ್ಲವೇ ಇಲ್ಲ! ಆದ್ದರಿಂದ ಅವುಗಳ ವಿಶ್ಲೇಷಣೆ ಅನಗತ್ಯ.
ಆದರೆ ಮುಖ್ಯ ಪ್ರಶ್ನೆಗಳಿಗೆ ಸಂಬಂಧವೇ ಇಲ್ಲದ ಇಂತಹ ಉದ್ಧರಣಗಳನ್ನು ಡಾ. ಚಿದಾನಂದ ಮೂರ್ತಿ ಏಕೆ ನೀಡಿದ್ದಾರೆ? ಉತ್ತರ ಬಹಳ ಸರಳ: ತಮ್ಮ ಅಪಾರವಾದ ಓದಿನ ಪ್ರದರ್ಶನ ಮತ್ತು ಅಮಾಯಕರನ್ನು ದಾರಿ ತಪ್ಪಿಸುವ ಉದ್ದೇಶ ಅದರಲ್ಲಿದೆ ಎನ್ನದೇ ಗತಿಯಿಲ್ಲ. ಲ್ಯಾಟಿನ್ ಭಾಷೆಯಲ್ಲಿ ಇಂಥ ವಾದಕ್ಕೆ ‘ಆಗ್ರ್ಯುಮೆಂಟಮ್ ಎಡ್ ಹಾಮಿನಮ್’ ಎನ್ನುತ್ತಾರೆ. ಅಭಿಪ್ರಾಯವನ್ನು ವಿಶ್ಲೇಷಿಸಿ ಅರ್ಥೈಸಿ ಒಪ್ಪಬೇಕೇ ಹೊರತು ಯಾರ ಅಭಿಪ್ರಾಯವಿದು ಎಂಬುದನ್ನು ನೋಡಿ ಒಪ್ಪುವುದು ಅಥವಾ ತಿರಸ್ಕರಿಸುವುದು ಬುದ್ಧಿವಂತರ ಲಕ್ಷಣವಲ್ಲ.
ವೀರಶೈವವು ಪಂಚಾಚಾರ್ಯರು ಹೇಳುವಂತೆ ಹಿಂದೂ ಧರ್ಮದ ಭಾಗವಾಗಿದ್ದರೆ ಅದು ಎಂದೂ ಲಿಂಗಾಯತವಾಗದು. ಲಿಂಗಾಯತ-ವೀರಶೈವ ದ್ವಂದ್ವದ ಸಮಸ್ಯೆ ಇಂದು ನಿನ್ನೆಯದಲ್ಲ: ಅದು ಆರು ಶತಮಾನಗಳಿಂದ ಅಂತ್ಯ ಕಾಣದ ಸಮಸ್ಯೆ. ಈ ಸಮಸ್ಯೆಯನ್ನು ಸೃಷ್ಟಿಸಿದವರು ವಿವಿಧ ಪ್ರಕಾರದ ಹಿಂದೂ ಶೈವ ಪಂಥಗಳಿಂದ ಬಂದು ಬಸವಣ್ಣನವರ ‘ಲಿಂಗಾಯತ’ವನ್ನು ಸೇರಿದವರು. ಅವರಲ್ಲಿ ಕಾಳಾಮುಖಿಗಳು, ಪಾಶುಪತ್ಯರು, ಕಾಪಾಲಿಕರು, ಲಕುಲೀಶರು, ಕೆಲವು ನಾಥಪಂಥಿಗಳು ಮತ್ತು ಆಂಧ್ರದ ಆರಾಧ್ಯ ಶೈವ ಬ್ರಾಹ್ಮಣರು ಪ್ರಮುಖರು. ಆದರೆ 15ನೆಯ ಶತಮಾನದ ಅಂತ್ಯದ ಸುಮಾರಿಗೆ ಮೇಲೆ ತಿಳಿಸಿದ ಮೊದಲನೆಯ ಐದು ಪಂಥಿಕರು ಬಹುತೇಕ ಬಸವಣ್ಣನವರನ್ನು ಒಪ್ಪಿ, ತಮ್ಮ ಮೂಲರೂಪ ಕಳೆದುಕೊಂಡು ಲಿಂಗಾಯತದ ಇಂದಿನ ‘ವಿರಕ್ತ ಮಠ’ಗಳಾಗಿ ಪರಿವರ್ತನೆಗೊಂಡರು. ಆದ್ದರಿಂದಲೇ ವಿರಕ್ತ ಮಠಗಳು ಹೆಚ್ಚಾಗಿ ಬಸವಣ್ಣನವರ ತತ್ವಗಳನ್ನು ಪಾಲಿಸುತ್ತಿವೆ ಮತ್ತು ವೀರಶೈವರ ಪಂಚಾಚಾರವನ್ನು ಆದಷ್ಟು ಬದಿಗಿಡಲು ಪ್ರಯತ್ನಿಸುತ್ತಿವೆ. ಅದರಿಂದಲೇ ಉದ್ಭವವಾಗಿದ್ದು ಗುರು-ವಿರಕ್ತರ ಸಮಸ್ಯೆ!
ಆದರೆ ಆಂಧ್ರದ ಆರಾಧ್ಯ ಬ್ರಾಹ್ಮಣರು ತಮ್ಮ ಮೂಲ ಬ್ರಾಹ್ಮಣ್ಯವನ್ನೂ ಬಿಡದೇ, ಬಸವಣ್ಣ ಮತ್ತು ಶರಣರು ಸ್ಥಾಪಿಸಿದ ‘ಲಿಂಗಾಯತ’ವನ್ನೂ ಪರಿಪೂರ್ಣವಾಗಿ ಪಾಲಿಸದೇ ಎರಡನ್ನೂ ಸೇರಿಸಿ ಬಸವ ಧರ್ಮವನ್ನು ಹದಗೆಡಿಸಿ ಬಿಟ್ಟರು. ತಮ್ಮ ಪ್ರಾಬಲ್ಯವನ್ನು ಸಾಧಿಸಲು ಯಾವುದೇ ಐತಿಹಾಸಿಕ ಆಧಾರವಿಲ್ಲದ, ಕಟ್ಟುಕತೆಗಳನ್ನು ಆಧರಿಸಿದ ಪಂಚಪೀಠಗಳನ್ನು ಸೃಷ್ಟಿಸಿದರು. ‘ವೀರಶೈವ’ವೆಂಬ ಹೊಸ ವಾದ ಹುಟ್ಟು ಹಾಕಿ ಕ್ಲಿಷ್ಟ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ. ವಿರಕ್ತ ಮಠಗಳ ಯತಿಗಳನ್ನೂ ದಾರಿತಪ್ಪಿಸುವ ಕಾರ್ಯಗಳನ್ನು ಇಪ್ಪತ್ತನೆಯ ಶತಮಾನದ ಆದಿಯಿಂದ ಪಂಚಪೀಠದ ಪ್ರವರ್ತಕರು ಪ್ರಾರಂಭಿಸಿದ್ದಾರೆ. ಅದು ಹೇಗೆ ಎಂಬುದನ್ನು ಮುಂದೆ ವಿಶ್ಲೇಷಿಸಲಾಗಿದೆ. ಅವರು ನಿರ್ಮಿಸಿದ ಅಧ್ವಾನಗಳು ಹೀಗಿವೆ:
(1) “ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ಆಗಮದ ಮೂಗು ಕೊಯ್ಯುವೆ” ಎಂದವರು ಬಸವಣ್ಣ. “ವೇದವೆಂಬುದು ಓದಿನ ಮಾತು, ಪುರಾಣವೆಂಬುದು ಪುಂಡರ ಗೋಷ್ಟಿ” ಎಂದವರೂ ಶರಣರೇ. “ಸ್ಮೃತಿಗಳು ಸಮುದ್ರದ ಪಾಲಾಗಲಿ, ಶ್ರುತಿಗಳು ವೈಕುಂಠವ ಸೇರಲಿ, ಆಗಮಗಳು ವಾಯುವ ಹೊಂದಲಿ, ಎಮ್ಮ ನುಡಿ ಮಹಾಲಿಂಗದ ಗ್ರಂಥಿಯಾಗಲಿ” ಎಂದಿದ್ದ ಸಿದ್ಧರಾಮಯ್ಯನವರ ಧರ್ಮದಲ್ಲಿ ವೇದ, ಆಗಮ, ಶಾಸ್ತ್ರ, ಪುರಾಣ, ಉಪನಿಷತ್ತುಗಳನ್ನು ಪಂಚಪೀಠಗಳು ಸೇರಿಸಿಬಿಟ್ಟವು. ಆದ್ದರಿಂದಲೇ ವೇದ ಮತ್ತು ಶೈವಾಗಮಗಳನ್ನು ಆಧರಿಸಿದ ಸಿದ್ಧಾಂತ ಶಿಖಾಮಣಿಯನ್ನು ತಮ್ಮ ಮೂಲಗ್ರಂಥವೆಂದು ವಾದಿಸುತ್ತಿದ್ದಾರೆ. ಅದು 14ನೆಯ ಶತಮಾನದಲ್ಲಿ ಬರೆದ ಗ್ರಂಥವೆಂಬುದಕ್ಕೆ ಆ ಗ್ರಂಥದಲ್ಲಿ ಅದರ ಲೇಖಕನು ನೀಡಿದ ಆಧಾರಗಳೇ ಸಾಕು!
(2) ವರ್ಣಾಶ್ರಮ ಸಿದ್ಧಾಂತವನ್ನು ಆಧರಿಸಿದ ಜಾತಿಪದ್ಧತಿಯನ್ನೂ, ಜಾತಿಯನ್ನು ಆಧರಿಸಿದ ಕರ್ಮ ಸಿದ್ಧಾಂತವನ್ನೂ, ಕರ್ಮ ಸಿದ್ಧಾಂತವನ್ನು ಆಧರಿಸಿದ ಪಾಪ ಮತ್ತು ಪುಣ್ಯಗಳನ್ನೂ, ಪಾಪ-ಪುಣ್ಯಗಳನ್ನು ಆಧರಿಸಿದ ಸ್ವರ್ಗ ಮತ್ತು ನರಕಗಳನ್ನೂ, ಸ್ವರ್ಗ-ನರಕಗಳನ್ನು ಆಧರಿಸಿದ ಜನ್ಮ-ಪುನರ್ಜನ್ಮಗಳನ್ನೂ ಲಿಂಗಾಯತವು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಇವುಗಳಿಗೆ ಸಂಬಂಧಿಸಿದ ಶರಣರ ಭಾಷೆ ಹೇಗಿದೆ ನೋಡಿ: “ಮರ್ಮವನ್ನು ಅರಿದವಂಗೆ ಕರ್ಮವಿಲ್ಲ” ಎಂದವರು ಚೆನ್ನಬಸವಣ್ಣ. “ಮನದೊಳಗೆ ಘನ ವೇದ್ಯವಾದ ಬಳಿಕ ಪುಣ್ಯವಿಲ್ಲ ಪಾಪವಿಲ್ಲ” ಎಂಬುದು ಅಲ್ಲಮರ ಉವಾಚ. ಬಸವಣ್ಣನವರು ಹೇಳಿದ್ದು: “ಇಹಲೋಕ ಪರಲೋಕ ಬೇರಿಲ್ಲ ಕಾಣಿರೊ, ಸತ್ಯವ ನುಡಿವುದೇ ಸ್ವರ್ಗಲೋಕ, ಮಿಥ್ಯವ ನುಡಿವುದೇ ನರಕಲೋಕ.” “ಇಹಲೋಕವೆಂದೇನು ಪರಲೋಕವೆಂದೇನು….ನಾನು ನೀನಾದ ಬಳಿಕ” ಎಂಬುದು ಸಿದ್ಧರಾಮರ ನಂಬಿಕೆ. “ಇಹಲೋಕ ಪರಲೋಕ ತಾನಿರ್ದಲ್ಲಿ” ಎಂಬುದು ಮತ್ತೆ ಅಲ್ಲಮರ ಮಾತು. “ಹುಟ್ಟುವಾತ ನಾನಲ್ಲವಯ್ಯಾ, ಹೊಂದುವಾತ ನಾನಲ್ಲವಯ್ಯಾ, ನಿಜನರಿದ ಬಳಿಕ ಮತ್ತೆ ಹುಟ್ಟಲುಂಟೇ?” ಎಂಬುದು ಆದಯ್ಯನ ವಾದ. ಹೀಗೆ ಶರಣರು ಹಿಂದೂ ಧರ್ಮದ ಮೂಲ ತತ್ವಗಳನ್ನೇ ತಿರಸ್ಕರಿಸಿದವರು. ಅವರೇ ಲಿಂಗಾಯತದ ಸಂಸ್ಥಾಪಕರು!
ಆದರೆ ವೇದ ಪ್ರಣೀತ ವರ್ಣಾಶ್ರಮ ಧರ್ಮದಿಂದ ಹುಟ್ಟಿದ ಕರ್ಮ ಸಿದ್ಧಾಂತವನ್ನು, ಅದರಿಂದ ಹುಟ್ಟಿದ ಜಾತಿ ಪದ್ಧತಿಯನ್ನು, ಕರ್ಮ ಸಿದ್ಧಾಂತದಿಂದ ಹುಟ್ಟಿದ ಪಾಪ ಪುಣ್ಯಗಳನ್ನು, ಪಾಪ-ಪುಣ್ಯಗಳಿಂದ ಹುಟ್ಟಿದ ಸ್ವರ್ಗ ನರಕಗಳನ್ನು, ಸ್ವರ್ಗ-ನರಕಗಳಿಂದ ಹುಟ್ಟಿದ ಜನ್ಮ-ಪುನರ್ಜನ್ಮಗಳನ್ನು ನಂಬುವ ಹಿಂದೂ ಧರ್ಮವು ಮತ್ತು ಅವೆಲ್ಲವುಗಳಿಗೆ ಆಧಾರವಾದ ವೇದ ಆಗಮಗಳು ವೀರಶೈವರಿಗೆ ಸರ್ವಮಾನ್ಯವಾಗಿವೆ ಎಂದು ಘನ ವಿದ್ವಾಂಸರಾದ ಚಿದಾನಂದ ಮೂರ್ತಿಯವರು ಮತ್ತು ಅವರ ಪಂಚಪೀಠಾಧ್ಯಕ್ಷರುಗಳೂ ಬಹಳ ಭಾವುಕರಾಗಿ ವಾದಿಸುತ್ತಾರೆ. ಹಾಗಾದರೆ ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಎಂಬುದು ಹೇಗೆ ಸಾಧ್ಯ? ಇದು ಪೂರ್ವ-ಪಶ್ಚಿಮಗಳನ್ನು ಒಂದುಗೂಡಿಸುವಂತೆ ಕಾಣುತ್ತದೆ! ಈ ಹಿನ್ನೆಲೆಯಲ್ಲಿ ಬಸವಣ್ಣನವರ ಶುದ್ಧ ಲಿಂಗಾಯತವನ್ನು ಅಶುದ್ಧಗೊಳಿಸಿದವರು ಯಾರು? ಆ ಮೂಲಕ ಈಗಿನ ಆಂತರಿಕ ವೈರುಧ್ಯಗಳಿಗೆ ಗೊಂದಲಗಳಿಗೆ ಕಾರಣರಾದವರು ಯಾರು ಎಂಬುದು ಸ್ಪಷ್ಟವಾಗಬಹುದಲ್ಲವೇ?
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿದಾನಂದ ಮೂರ್ತಿಯವರು “1904ರಷ್ಟು ಹಿಂದೆಯೇ ವೀರಶೈವ ಮಹಾಸಭೆಯು ‘ವೀರಶೈವರು ಹಿಂದೂಗಳು’ ಎಂಬ ನಿರ್ಣಯ ತೆಗೆದುಕೊಂಡಿತ್ತು… ಆದರೆ 1940ರಲ್ಲಿ ಅದೇ ಮಹಾಸಭೆ ಉಲ್ಟಾಹೊಡೆದು ವೀರಶೈವರು ಹಿಂದೂಗಳಲ್ಲವೆಂದು ನಿರ್ಣಯ ಕೈಗೊಂಡಿತು” ಎಂದು ಬರೆದಿದ್ದಾರೆ. ಹೌದು, 1904ರ ನಿರ್ಣಯಕ್ಕೆ ಯಾರು ಕಾರಣರು ಮತ್ತು ಯಾಕೆ ಎಂಬುದನ್ನು ಐತಿಹಾಸಿಕ ಸಂದರ್ಭಗಳ ಮಾಹಿತಿಯೊಂದಿಗೆ ಮುಂದೆ ವಿವರ ನೀಡಿದ್ದೇನೆ.
ಮುಂದುವರೆದು, ಚಿದಾನ0ದ ಮೂರ್ತಿಯವರು ಹಡಪದ ಸಮಾಜದವರು, ಶಿವಾಚಾರದ ನಗರ್ತರು, ತಲಕಾಡಿನ ವೆಲ್ಲಾಳ ಗೌಡರು, ವಾಲ್ಮಿಕಿ ಸಮಾಜದ ಹಿರಿಯರು, 2015ರ ಜಾತಿ ಜನಗಣತಿಯಲ್ಲಿ ತಮ್ಮನ್ನು ಹಿಂದೂ ಎಂದು ಬರೆಸಲು ಒತ್ತಾಯಿಸಿದ್ದರು. ವೀರಶೈವರ ಕಾಶೀ ಪೀಠದ ಶ್ರೀಗಳು ಮತ್ತು ಜಂಗಮರೂ ಅದೇ ಬೇಡಿಕೆಯನ್ನು ಬೆಂಬಲಿಸಿದ್ದರು ಎಂದು ಬರೆದಿದ್ದಾರೆ. ಹೌದು, ಆದರೆ ಅಂಥ ಕೆಳಜಾತಿಯವರನ್ನು ವೀರಶೈವರು ಹೇಗೆ ನಡೆಸಿಕೊಂಡರು ಮತ್ತು ಯಾಕೆ ಎಂಬುದನ್ನೂ ಮುಂದೆ ವಿವರಿಸಿದ್ದೇನೆ. ಜಂಗಮರು ಮತ್ತು ವೀರಶೈವರ ಕಾಶೀ ಪೀಠದ ಶ್ರೀಗಳು ಹಿಂದೂ ಎಂದು ಬರೆಸಲು ಒತ್ತಾಯಿಸಿದ ಹಿನ್ನೆಲೆ ಏನು ಎಂಬುದರ ಸಂಪೂರ್ಣ ವಿವರವನ್ನು ಮುಂದೆ ಬರೆದಿದ್ದೇನೆ.
ಇವಲ್ಲದೇ ಜಾತಿ ಜನಗಣತಿಯ ಬಗ್ಗೆ ನಾನು ಪ್ರಜಾವಾಣಿಯಲ್ಲಿ 19-2-2015ರಂದು ಮತ್ತು 16-3-2015ರಂದು ಹಾಗೂ 20-5-2016 (ಕೊಪ್ಪಳ) ಬರೆದ ಲೇಖನಗಳಲ್ಲಿ ಜಾತಿ ಜನಗಣತಿಗೆ ಲಿಂಗಾಯತರು ಏಕೆ ವಿರೋಧಿಸುತ್ತಾರೆ ಎಂಬ ಬಗ್ಗೆ ಇನ್ನಷ್ಟು ಕಾರಣಗಳನ್ನು ನೀಡಿದ್ದನ್ನು ನೋಡಬಹುದು.
(3) 14ನೆಯ ಶತಮಾನದಿಂದ ಮೇಲೆ ವಿವರಿಸಿದ ಗೊಂದಲಗಳನ್ನು ಸೃಷ್ಟಿಸಿದವರು ಪಂಚಾಚಾರ್ಯರು. ಲಿಂಗಾಯತದಲ್ಲಿ ಲಿಂಗಧಾರಣವನ್ನು ‘ಸೂತ್ರಗಳ’ ಮಟ್ಟಕ್ಕೆ ಮುಟ್ಟಿಸಿ ಅದಕ್ಕೆ ಪುರೋಹಿತಶಾಹಿಯನ್ನು ಸೃಷ್ಟಿಸಿದವರು (‘ಲಿಂಗಧಾರಣ ಚಂದ್ರಿಕೆ’ಯಂತಹ ಗ್ರಂಥಗಳ ಮೂಲಕ) ಆರಾಧ್ಯ ಬ್ರಾಹ್ಮಣರು. ಬಸವಣ್ಣ ಯಾರಿಗೂ ಲಿಂಗ ಕಟ್ಟಲಿಲ್ಲ (ಒಬ್ಬನನ್ನು ಬಿಟ್ಟು). ಕಟ್ಟಿಕೊಳ್ಳಲು ಯಾರಿಗೂ ಒತ್ತಾಯ ಮಾಡಲಿಲ್ಲ. ತೋಳಿನ ಬಲದಿಂದ ಲಿಂಗಾಯತ ಧರ್ಮ ಹುಟ್ಟಲಿಲ್ಲ. ಆದರೆ ತೋಳ್ಬಲದಿಂದ ಅದನ್ನು ನಿರ್ನಾಮ ಮಾಡುವ ಪ್ರಯತ್ನಗಳು ನಡೆದವು.
ಬಸವಣ್ಣನವರು ಯಾವುದೇ ಮಠಗಳನ್ನು ಸ್ಥಾಪಿಸಲಿಲ್ಲ. ಯಾವ ಮಠದ ಮುಖ್ಯಸ್ಥರೂ ಆಗಲಿಲ್ಲ. ಅನುಭವ ಮಂಟಪಕ್ಕೆ ಅಲ್ಲಮರನ್ನು ಅಧ್ಯಕ್ಷರನ್ನಾಗಿ ಮಾಡಿದ ಬಸವಣ್ಣನವರ ಮನೋಭೂಮಿಕೆಯನ್ನು ಗಮನಿಸಬೇಕು. 15ನೆಯ ಶತಮಾನದ ‘ಶೂನ್ಯ ಸಂಪಾದನೆ’ಯಲ್ಲಿ ಬರುವ ಮಠಗಳೆಲ್ಲವೂ ಬಸವ ಪೂರ್ವದ ಮಠಗಳಲ್ಲ. ಈಗಿರುವ ಲಿಂಗಾಯತ ಮಠಗಳೆಲ್ಲವೂ ಬಸವಣ್ಣನವರ ನಂತರ ಲಿಂಗಾಯತವನ್ನು ಸೇರಿದವರ ಮಠಗಳು.
ಬಸವಣ್ಣನವರ ‘ಜಂಗಮ’ವನ್ನು ಜಾತಿಯ ರೂಪಕ್ಕೆ ತಿರುಗಿಸಿ, ಆ ಜಾತಿಯವರಿಗೆ ಪುರೋಹಿತಶಾಹಿಯ ಅಧಿಕಾರ ನೀಡಿದವರು ಪಂಚಾಚಾರ್ಯರು. ಬಸವಣ್ಣನವರು ಪುರೋಹಿತಶಾಹಿಯನ್ನು ಬಗ್ಗು ಬಡಿದರೆ, ಪಂಚಪೀಠಗಳು ತಮ್ಮದೇ ಆದ ಪುರೋಹಿತಶಾಹಿಯನ್ನು ಸೃಷ್ಟಿಸಿ ಅವರಿಗೆ ‘ಪಟ್ಟದ ದೇವರು’, ‘ಶಾಖಾ ಮಠಗಳು’ ಇತ್ಯಾದಿ ಹೆಸರಿಟ್ಟರು. ಅವರ ಅನುಯಾಯಿಗಳಿಗೆ ‘ಪೂಜ್ಯವಾನ’ ಆದವರು ಪಂಚಪೀಠಗಳಿಗೆ ವಿಧೇಯರಾದ ಇಂದಿನ ಹಿರೇಮಠ, ಚಿಕ್ಕಮಠದ ಸ್ವಾಮಿಗಳು!
(4) ವಿಜಯನಗರದ ಅರಸರ ಕಾಲದಿಂದ (14ನೇ ಶತಮಾನ) ಸುಮಾರು 1940ರ ವರೆಗೆ (ಐದು ಶತಮಾನಗಳಲ್ಲಿ) ಪಂಚಾಚಾರ್ಯರು ಲಿಂಗಾಯತ ಧರ್ಮೀಯರನ್ನು ಎಂಥ ಅಂಧಕಾರಕ್ಕೆ ತಳ್ಳಿದ್ದರೆಂದರೆ ತಾವೆಲ್ಲ ಹಿಂದೂಧರ್ಮದ ಅನುಯಾಯಿಗಳೇ ಎಂದು ನಂಬಿದ್ದರು ಮತ್ತು ಆ ಧರ್ಮದ ಎಲ್ಲ ಅನಾಚಾರಗಳನ್ನೂ ಆಚರಿಸುತ್ತಿದ್ದರು. ಸುಮುಹೂರ್ತ, ಹಿಂದೂ ಹಬ್ಬಹುಣ್ಣಿಮೆಗಳು, ಮಡಿ-ಮೈಲಿಗೆಗಳನ್ನು ನಂಬುತ್ತಿದ್ದರು. 1880ರ ಸುಮಾರಿಗೆ ಮೈಸೂರಿನ ಲಿಂಗಾಯತರು ತಾವೂ ಬ್ರಾಹಣರೆಂದು ವಾದಿಸತೊಡಗಿದರು. ಆದರೆ ಅದನ್ನು ಬ್ರಾಹ್ಮಣರು ಒಪ್ಪುತ್ತಿರಲಿಲ್ಲ. ಕ್ಷೌರಿಕರು, ಮಾದಿಗರು, ಸಮಗಾರರು ಲಿಂಗಾಯತರಾಗಿರುವಾಗ ನೀವೆಂಥ ಬ್ರಾಹ್ಮಣರೆಂದು ಅಂದಿನ ಶುಭೋದಯ ಪತ್ರಿಕೆಯಲ್ಲಿ ಲಿಂಗಾಯತರನ್ನು ಹೀಗಳೆಯುತ್ತಿದ್ದರು. ಆದ್ದರಿಂದ ಆಗಿನ ಲಿಂಗಾಯತ ಮುಖಂಡರುಗಳಾದ ಎನ್.ಆರ್. ಕರಿಬಸವಶಾಸ್ತ್ರಿಗಳು, ಪಿ.ಆರ್.ಕರಿಬಸವಶಾಸ್ತ್ರಿಗಳು, ಯಜಮಾನ ವೀರಸಂಗಪ್ಪನವರಂಥವರು ಕೆಳವರ್ಗದ ಲಿಂಗಾಯತರು ಲಿಂಗಾಯತರಲ್ಲವೆಂದು ವಾದಿಸಿದ್ದರು ಎಂಬುದನ್ನು ಸ್ಟಾರ್ ಆಫ್ ಮೈಸೂರು ಪತ್ರಿಕೆ ದಾಖಲಿಸಿದೆ.
ವೀರಶೈವರಲ್ಲಿ ಕೆಳಜಾತಿಯ ಲಿಂಗಾಯತರು ವೀರಶೈವರಲ್ಲವೆಂಬ ಮೈಸೂರಿನ ಆರಾಧ್ಯರ ವಾದದ ಪರಿಣಾಮ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಬಹುಕಡೆ ಹರಡಿತು. ಇದು ಪಂಚಾಚಾರ್ಯರ ಮಹಿಮೆ. ಅದು ಮುಂದುವರೆಯಿತು. ಆದ್ದರಿಂದಲೇ ಹಡಪದ, ನಾಯಕ, ಮಡಿವಾಳ, ಗಾಣಿಗರಂತಹ ಕೆಳಜಾತಿಯ ಲಿಂಗಾಯತರು ಹಿಂದೂ ಎಂದು ಜನಗಣತಿಯಲ್ಲಿ ಬರೆಯಿಸಲು ಮುಂದಾಗಿದ್ದರೆ ಅದಕ್ಕೆ ಕಾರಣ ಹಿಂದೂ ಧರ್ಮದ ಜಾತಿಪದ್ಧತಿಯನ್ನು ಲಿಂಗಾಯತರು ಮ��ಂದುವರೆಸಿ ಮೇಲೆ-ಕೆಳಗೆ ಎಂಬ ಭೇದಭಾವ ಅನುಸರಿಸುತ್ತಿರುವ ಚಿದಾನಂದ ಮೂರ್ತಿಯಂಥವರು ಮತ್ತು ಅವರ ಪಂಚಪೀಠದ ಗುರುಗಳು! ಆದಾಗ್ಯೂ ಚಿದಾನಂದ ಮೂರ್ತಿಗಳು ಲಿಂಗಾಯತರು ‘ಒಡೆದು ಆಳುವ’ ನೀತಿಯನ್ನು ಅನುಸರಿಸುತ್ತಾರೆಂದು ಬರೆಯುವುದು ಒಂದು ವಿಪರ್ಯಾಸದ ವ್ಯಂಗ್ಯವಲ್ಲವೆ?
ಮೇಲೆ ತಿಳಿಸಿದ ಐತಿಹಾಸಿಕ ಕಾರಣಗಳಲ್ಲದೆ ದೇಶದ ಇಂದಿನ ವಿಚಿತ್ರ ಸನ್ನಿವೇಶದಲ್ಲಿ ತಮ್ಮನ್ನು ಹಿಂದೂ ಎಂದು ಬರೆಯಿಸಿ ಸರ್ಕಾರದಿಂದ ರಿಜರ್ವೇಶನ್ ಸೌಲಭ್ಯ ಪಡೆಯುವುದು ಕೆಳವರ್ಗದ ಲಿಂಗಾಯತರ ಮತ್ತು ಮೇಲ್ವರ್ಗದ ಜಂಗಮರ ಉದ್ದೇಶವಾಗಿತ್ತು. ಆದರೆ ಜಂಗಮರು ‘ಬೇಡಜಂಗಮ’ರೆಂದು ರಿಜರ್ವೇಶನ ಉಳಿಸಲು ಹಂಬಲಿಸಿದರೆ ಲಿಂಗಾಯತ ಧರ್ಮಕ್ಕೆ ಏಕೆ ಅಂಟಿಕೊಂಡಿದ್ದಾರೆ? ಕಾಶೀ ಶ್ರೀಗಳಿಗೆ ಲಿಂಗಾಯತರು ಹಿಂದೂಗಳಾಗಿ ಉಳಿದರೆ ಮಾತ್ರ ಅವರ ಅಸ್ತಿತ್ವಕ್ಕೆ ಧಕ್ಕೆಯಿಲ್ಲ. ಲಿಂಗಾಯತರು ಲಿಂಗಾಯತರಾದರೆ ವೀರಶೈವಕ್ಕೆ ಮೂರು ಕವಡೆ ಬೆಲೆಯಿರುವುದಿಲ್ಲ. ಅಂತೂ ಸರ್ಕಾರದ ‘ಒಡೆದು ಆಳುವ’ ನೀತಿಗೆ ಕೈಗೂಡಿಸಿದವರು ಚಿದಾನಂದ ಮೂರ್ತಿಗಳು ಮತ್ತು ಅವರ ಪಂಚಪೀಠದ ಗುರುಗಳು!
(5) ಲಿಂಗಾಯತರೂ ಬ್ರಾಹ್ಮಣರೆಂಬ ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಿಂದ ಇಪ್ಪತ್ತನೇ ಶತಮಾನದ ಮಧ್ಯದ (1940ರ) ವರೆಗಿನ ಹಿನ್ನೆಲೆಯಲ್ಲಿ ಎದ್ದುಬಂದವರು ದಕ್ಷಿಣ ಮತ್ತು ಮಧ್ಯ ಕರ್ನಾಟಕದಲ್ಲಿ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಮತ್ತು ಉತ್ತರ ಕರ್ನಾಟಕದಲ್ಲಿ ಕಾಶೀನಾಥಶಾಸ್ತ್ರಿಗಳು. ಅವರಿಬ್ಬರ ಉದ್ದೇಶವೆಂದರೆ (ಅ) ವೀರಶೈವ ಸಮಾಜವನ್ನು ಸಂಘಟಿಸುವುದು; ಮತ್ತು (ಬ) ಪಂಚಾಚಾರ್ಯರ ತತ್ವಗಳನ್ನು ಸುಸಂಘಟಿತವಾಗಿ ಪ್ರಚಾರ ಮಾಡುವುದು. ಅದಕ್ಕಾಗಿ ಧಾರವಾಡ ಜಿಲ್ಲೆಯ ನಾಗನೂರಿನವರಾದ ಕಾಶೀನಾಥಶಾಸ್ತ್ರಿಗಳು ತಮ್ಮ ಉದ್ದೇಶಕ್ಕೆ ಹೆಚ್ಚು ಅವಕಾಶವಿರುವ ಮೈಸೂರಿನಲ್ಲಿ ‘ಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್’ನ್ನು ಸ್ಥಾಪಿಸಿದರು. ‘ಪಂಚಾಚಾರ್ಯ ಪ್ರಭಾ’ ಎಂಬ ನಿಯತಕಾಲಿಕವನ್ನು ಮತ್ತು ‘ಕಾಶೀನಾಥ ಗ್ರಂಥಮಾಲಾ’ ಎಂಬ ಪುಸ್ತಕ ಪ್ರಕಾಶನ ಮಾಲಿಕೆಯನ್ನು ಪ್ರಾರಂಭಿಸಿದರು. ಅವುಗಳ ಮುಖ್ಯ ಉದ್ದೇಶವೆಂದರೆ ವಿರಕ್ತ ಮಠಗಳ, ಬಸವ ಧರ್ಮದ ಹಾಗೂ ಶರಣರ ವಿರುದ್ಧ ಅಲ್ಲಸಲ್ಲದ ಅನಾಗರಿಕ ಲೇಖನಗಳನ್ನು, ಗ್ರಂಥಗಳನ್ನು ಪ್ರಕಟಿಸುವುದು ಮತ್ತು ಪಂಚಾಚಾರ್ಯರನ್ನು ಪ್ರಸಿದ್ಧಗೊಳಿಸುವುದೇ ಆಗಿತ್ತು. ಇವರೇ ಸಿದ್ಧಾಂತ ಶಿಖಾಮಣಿಯನ್ನು ತಮ್ಮ ಉದ್ದೇಶಕ್ಕೆ ತಕ್ಕಂತೆ ತಿದ್ದಿ ಬರೆದು ಪ್ರಚಾರ ಮಾಡಿದರು.
ಕಾಶೀನಾಥಶಾಸ್ತ್ರಿಗಳ ಪ್ರಚೋದನೆಯಿಂದ ಶಾಂತಪ್ಪ ಕುಬಸದ ಅವರು ಬರೆದ ‘ಬಸವಾದಿ ನಿಜತತ್ವ ದರ್ಪಣವು’ ಎಂಬ ಗ್ರಂಥದಲ್ಲಿ ಬಸವಣ್ಣ ಮತ್ತು ಇತರ ಶರಣರ ವಿರುದ್ಧ 200 ಉದ್ಧಟ ಪ್ರಶ್ನೆಗಳನ್ನು ಕೇಳಲಾಗಿತ್ತು. ಆ ಅವಮಾನಕರ ಪುಸ್ತಕವನ್ನು ನಿರ್ಬಂಧಿಸಲು ಧಾರವಾಡದ ಸಿದ್ಧರಾಮಪ್ಪ ಪಾವಟೆಯವರು ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ದಾವೆ ಹೂಡಿ ಗೆದ್ದರು. ಆಗ ಗ್ರಂಥಕರ್ತರು ಕ್ಷಮೆ ಕೇಳಬೇಕಾಯಿತು. ಈ ದುಷ್ಟನ ನಿಜಜೀವನ ಚರಿತ್ರೆಯನ್ನು ಪಂಚಾಚಾರ್ಯ ಪ್ರೆಸ್ ನಲ್ಲಿ ಮ್ಯಾನೇಜರ್ ಆಗಿದ್ದ ಎನ್.ಗುಂಡಾಶಾಸ್ತ್ರಿ ಎಂಬವರು ಬರೆದಿದ್ದಾರೆ. ಇವೆಲ್ಲವೂ ಪಂಚಾಚಾರ್ಯರ ಆಶೀರ್ವಾದದಿಂದ ನಡೆದ ಕೃತ್ಯಗಳು!
(6) ಇನ್ನು ಶ್ರೀ ಹಾನಗಲ್ಲ ಕುಮಾರಸ್ವಾಮಿಗಳ ಬಗ್ಗೆ ಒಂದಿಷ್ಟು ಮಾಹಿತಿಗಳು ಅಗತ್ಯ. ಹೈದರಾಬಾದ ನಿಝಾಮನ ಆಡಳಿತಕ್ಕೊಳಪಟ್ಟ ಪರಳಿ ವೈಜನಾಥ ದೇವಸ್ಥಾನದಲ್ಲಿ (ಈಗ ಮಹಾರಾಷ್ಟ್ರದ ಬೀಡ ಜಿಲ್ಲೆಯಲ್ಲಿದೆ) ಪೂಜೆ ಮಾಡುತ್ತಿದ್ದ ಬ್ರಾಹ್ಮಣರ ಸ್ಥಾನಗಳಲ್ಲಿ ಲಿಂಗಾಯತರನ್ನು ನೇಮಿಸಬೇಕೆಂಬ ವಿವಾದ ನಿಝಾಮನ ಹೈಕೋರ್ಟ್ ಮಟ್ಟ ತಲುಪಿತ್ತು. ಆ ವ್ಯಾಜ್ಯದಲ್ಲಿ ಮುಖ್ಯ ವಾದವೆ0ದರೆ ಲಿಂಗಾಯತರು ‘ಲಿಂಗೀ ಬ್ರಾಹ್ಮಣರು’, ಆದ್ದರಿಂದ ವೈಜನಾಥ (ಶಿವ)ನ ಪೂಜೆ ಮಾಡುವ ಅಧಿಕಾರವನ್ನು ಲಿಂಗಾಯತರಿಗೆ ಕೊಡಬೇಕು ಎಂಬುದಾಗಿತ್ತು. ಇದು ಮೈಸೂರಿನ ಲಿಂಗಾಯತರಿಂದ ಪಡೆದ ಪ್ರೇರಣೆಯಿಂದ ಉದ್ಭವಿಸಿದ ವ್ಯಾಜ್ಯವಾಗಿತ್ತು. ಆ ವ್ಯಾಜ್ಯದ ಹಿನ್ನೆಲೆಯ ನಾಯಕರಲ್ಲಿ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳೂ ಒಬ್ಬರು! ಇಂದೋರಿನಲ್ಲಿ ಸಂಸ್ಕೃತ ಶಾಲೆಯ ಪ್ರಾಚಾರ್ಯರಾಗಿದ್ದ ಧಾರವಾಡ ಜಿಲ್ಲೆಯ ವಿರುಪಾಕ್ಷ ಒಡೆಯರ ಅವರು ಕುಮಾರಸ್ವಾಮಿಗಳ ಕೋರಿಕೆಯಂತೆ (ಎಕ್ಸಪರ್ಟ್)ವಕಾಲತ್ತು ವಹಿಸಿದರು. ಲಿಂಗಾಯತರು ‘ಲಿಂಗೀ ಬ್ರಾಹ್ಮಣ’ರೆಂದು ನ್ಯಾಯಾಲಯಕ್ಕೆ (ಟ್ರಿಬ್ಯುನಲ್ಗೆ) ಮನವರಿಕೆ ಮಾಡಿಕೊಟ್ಟರು. ವೈಜನಾಥನ ಪೂಜಾರಿಕೆ ಲಿಂಗಾಯತರಿಗೆ ದೊರೆಯಿತು. ನೋಡಿ ಹೇಗಿದೆ ಪಂಚಾಚಾರ್ಯರ ಪ್ರಭಾವ: ಎಲ್ಲಿಯ ಬಸವ ಎಲ್ಲಿಯ ಲಿಂಗೀ ಬ್ರಾಹ್ಮಣರು!
(7) ಮಹಾ ಮೇಧಾವಿಯಾಗಿದ್ದ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ 1904ರಲ್ಲಿ ‘ಅಖಿಲ ಭಾರತ ವೀರಶೈವ ಮಹಾಸಭೆ’ ಸ್ಥಾಪಿಸಲಾಯಿತು. ಇತ್ತೀಚೆಗೆ ಸುಮಾರು ಹತ್ತು ವರ್ಷಗಳ ಹಿಂದೆ ಅದನ್ನು ‘ವೀರಶೈವ-ಲಿ0ಗಾಯತ ಮಹಾಸಭೆ’ಯೆಂದು ಬದಲಿಸಲಾಗಿದೆ. ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ 1904ರಲ್ಲಿ ನಡೆದ ಮಹಾಸಭೆಯ ಮೊದಲ ಅಧಿವೇಶನದಲ್ಲಿಯೇ “ವೀರಶೈವರು ವೇದ ಉಪನಿಷತ್ತುಗಳನ್ನು, ಶಾಸ್ತ್ರ ಪುರಾಣಗಳನ್ನು, ಆಗಮಗಳನ್ನು ಒಪ್ಪುತ್ತಾರೆ”, “ವೀರಶೈವರು ಹಿಂದೂಗಳು”, “ಲಿಂಗಾಯತ ಮಠಗಳಿಗೆ ಜಂಗಮ ಜಾತಿಯವರನ್ನೇ ಸ್ವಾಮಿಗಳಾಗಿ ನೇಮಿಸಬೇಕು” ಎಂಬೆಲ್ಲ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಹಾಗಾದರೆ ಮಹಾಸಭೆ ಅಂಥ ನಿರ್ಣಯಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡಿದವರು ಯಾರು ಎನ್ನುವುದನ್ನೂ ಚಿದಾನಂದ ಮೂರ್ತಿಗಳು ಹೇಳಿದ್ದರೆ ಒಳ್ಳೆಯದಿತ್ತು!
ಈ ಅಂಶಗಳನ್ನು 36 ವರ್ಷಗಳ ಬಳಿಕ 1940ರಲ್ಲಿ ನಡೆದ ಮಹಾಸಭೆಯ ಅಧಿವೇಶನದಲ್ಲಿ ರದ್ದುಗೊಳಿಸಲಾಯಿತು! ಇದನ್ನೇ ಡಾ.ಚಿದಾನಂದ ಮೂರ್ತಿಯವರು ಬಹುದೊಡ್ಡ ತಪ್ಪುಯೆನ್ನುವಂತೆ ನನಗೆ ಕಳಿಸಿದ ಪತ್ರದಲ್ಲಿ ಬಿಂಬಿಸಿದ್ದಾರೆ. ಹಾಗಾದರೆ, ಪ್ರಕಾಂಡ ಪಂಡಿತರನ್ನು ಹೊಂದಿದ ಅಖಿಲ ಭಾರತ ವೀರಶೈವ ಮಹಾಸಭೆಯು ಆ ನಿರ್ಣಯಗಳನ್ನು ಏಕೆ ಬದಲಿಸಿತು ಎನ್ನುವುದನ್ನೂ ಚಿದಾನಂದ ಮೂರ್ತಿಗಳು ಹೇಳುವುದಿಲ್ಲ. ಅದನ್ನು ಹೇಳಿದರೆ ಅವರ ಹೂರಣವೇ ಹಳಸಿಬಿಡುತ್ತದೆ!
(8) ವೀರಶೈವ ಧರ್ಮದ ಪ್ರಚಾರವನ್ನು ಸುಸಜ್ಜಿತವಾಗಿ ಮಾಡಲು ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು 1919ರಲ್ಲಿ ಪಂಚಪೀಠಗಳ ಶಾಖೆಗಳ ಮುಖ್ಯಸ್ಥರಾಗಿದ್ದ ಎಲ್ಲ ಪಟ್ಟ ಚರಾಧಿಕಾರಿಗಳ ಸಮ್ಮೇಳನವನ್ನು ನಡೆಸಿದರು ಮತ್ತು ‘ಅಖಿಲ ಭಾರತೀಯ ಗುರುವರ್ಗೋತ್ತೇಜಕ ಸಂಘ’ವನ್ನೂ ಸ್ಥಾಪಿಸಿದರು. ಆ ಮೂಲಕ ವೀರಶೈವ ಪಂಥದ ಗುರುವರ್ಗಕ್ಕೆ ಸುಸಜ್ಜಿತ ಪ್ರಚಾರಕ್ಕೆ ಅವಕಾಶವಾಯಿತು. ಎಂಥ ಮುಂಧೋರಣೆ!
(9) ಬಸವಣ್ಣನವರಿಗೆ ಮತ್ತು ಶರಣರಿಗೆ ಹಾಗೂ ಶರಣ ಸಾಹಿತ್ಯಕ್ಕೆ ವಿರಕ್ತ ಮಠಗಳ ಸ್ವಾಮಿಗಳು ಒತ್ತು ನೀಡುತ್ತಾರೆ. ಸಿದ್ಧಾಂತ ಶಿಖಾಮಣಿಗೆ ಅಷ್ಟು ಮಹತ್ವ ಕೊಡುವುದಿಲ್ಲ. ಹಿಂದೂ ಶೈವ ಧರ್ಮವನ್ನು ಒಪ್ಪುವುದಿಲ್ಲ. ಅದನ್ನು ಕಡಿಮೆ ಮಾಡಿ ಸಿದ್ಧಾಂತ ಶಿಖಾಮಣಿ, ವೇದ ಉಪನಿಷತ್ತು, ಆಗಮಗಳನ್ನು ವಿರಕ್ತರು ಒಪ್ಪಿಕೊಳ್ಳುವಂತೆ ಮಾಡುವ ಅಗತ್ಯತೆಯನ್ನು ಶ್ರೀ ಕುಮಾರಸ್ವಾಮಿಗಳು ಮನಗಂಡರು. ಆಗ ಅವರಿಗೆ ಹೊಳೆದ ಬಹು ಮುಂಧೋರಣೆಯ ಉಪಾಯವೆಂದರೆ ಎಲ್ಲ ವೀರಶೈವ-ಲಿಂಗಾಯತ ವಟುಗಳಿಗೆ ಒಂದೇ ರೀತಿಯ ತರಬೇತಿ ನೀಡಿದರೆ ಆ ವ್ಯತ್ಯಾಸಗಳೆಲ್ಲವೂ ತಾವಾಗಿಯೇ ಹೊರಟುಹೋಗುತ್ತವೆ ಎಂಬ ವಿಚಾರ. ಅದಕ್ಕಾಗಿ ಅವರು ಬದಾಮಿಗೆ ಸಮೀಪದ ‘ಶಿವಯೋಗ ಮಂದಿರ’ದಲ್ಲಿ ವಟುಗಳ ತರಬೇತಿ ಕೇಂದ್ರವನ್ನು 1910ರಲ್ಲಿ ಸ್ಥಾಪಿಸಿದರು. ಅದೀಗ ಚೆನ್ನಾಗಿ ಬೆಳೆದಿದೆ.
ಶಿವಯೋಗ ಮಂದಿರದಲ್ಲಿ ಎಲ್ಲ ವೀರಶೈವ-ಲಿಂಗಾಯತ ವಟುಗಳಿಗೆ ಪ್ರಮುಖವಾಗಿ ವೀರಶೈವರ ಸಿದ್ಧಾ0ತ ಶಿಖಾಮಣಿ, ಶಕ್ತಿವಿಶಿಷ್ಟಾದ್ವೈತ, ವೇದ, ಉಪನಿಷತ್ತು, ಆಗಮ, ಲಿಂಗಧಾರಣ ಪದ್ಧತಿ, ದೀಕ್ಷೆ, ಅಯ್ಯಾಚಾರ ಇತ್ಯಾದಿಗಳನ್ನು ಕಲಿಸಲಾಗುತ್ತದೆ. ಶಿವಯೋಗ ಮಂದಿರದಲ್ಲಿ ತರಬೇತಿ ಪಡೆದ ಸ್ವಾಮಿಗಳಿಗೆ ಹೆಚ್ಚಿನ ಮನ್ನಣೆ ಇದೆ. ಬಸವನ ವಿಶ್ವಮಾನವೀಯ, ಸಮಾನತೆಯ ಯಾವುದೇ ಅಂಶಗಳಿಗೆ ಆ ತರಬೇತಿಯಲ್ಲಿ ಮಹತ್ವವಿರಲಿಲ್ಲ. ಇತ್ತೀಚೆಗೆ ಹತ್ತು ವರ್ಷಗಳ ಹಿಂದೆ ಕೆಲವು ಬದಲಾವಣೆ ಮಾಡಲಾಗಿದೆಯೆಂದು ಓರ್ವ ಸ್ವಾಮಿಗಳು ನನಗೆ ತಿಳಿಸಿದ್ದಾರೆ. ಏನು ಬದಲಾವಣೆಯಾಗಿದೆ ಎಂಬುದು ಗೊತ್ತಿಲ್ಲ. ಚಿದಾನಂದ ಮೂರ್ತಿಯವರು ತಮ್ಮ ಪತ್ರದಲ್ಲಿ ಶಿವಯೋಗ ಮಂದಿರದ ಸ್ಥಾಪನೆಯ ಅಂಶವನ್ನೂ ಪ್ರಸ್ತಾಪಿಸಿದ್ದಾರೆ. ಹೇಗಿದೆ ನೋಡಿ ಲಿಂಗಾಯತರನ್ನು ದಿಕ್ಕುತಪ್ಪಿಸುವ ಪ್ರಯತ್ನಗಳು!
ಕಳೆದ 107 ವರ್ಷಗಳಲ್ಲಿ ಶಿವಯೋಗ ಮಂದಿರದಲ್ಲಿ ತರಬೇತಿ ಪಡೆದ ಸುಮಾರು ಎಂಟುನೂರು ಗುರು-ವಿರಕ್ತ ಮಠಗಳ ಬಹುತೇಕ ಲಿಂಗಾಯತ ಸ್ವಾಮಿಗಳು ಈಗ ನಿಜವಾಗಿಯೂ ಅಂತರಾತ್ಮದಲ್ಲಿ ತಾವು ಅಲ್ಲಿ ಪಡೆದ ತರಬೇತಿಯ ಅಂಶಗಳನ್ನು ಆಚರಿಸುತ್ತಾರೆ.
ಇವೆಲ್ಲವುಗಳ ಹೊರತಾಗಿಯೂ ಅನೇಕ ವಿರಕ್ತ ಮಠಗಳ ಸ್ವಾಮಿಗಳು ನಿಷ್ಟೆಯಿಂದ ಶರಣ ತತ್ವಗಳನ್ನು ಪಾಲಿಸುತ್ತಾರೆ ಮತ್ತು ಅವುಗಳ ಪ್ರಚಾರಕ್ಕೆ ತಮ್ಮ ಜೀವಮಾನವನ್ನೇ ಮುಡುಪಾಗಿಟ್ಟಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳು, ಚಿತ್ರದುರ್ಗ, ಧಾರವಾಡ, ಅಥಣಿ, ಹುಬ್ಬಳ್ಳಿಯ ಮುರಾಘಾಮಠಾಧೀಶರು, ಸಿರಿಗೆರೆಯ ತರಳಬಾಳು ಮಠಾಧೀಶರು, ಗದುಗಿನ ತೋಂಟದಾರ್ಯರು, ಇಳಕಲ್ಲ ಮಹಾಂತ ಸ್ವಾಮಿಗಳು, ಮೈಸೂರಿನ ಸುತ್ತೂರು ಶ್ರೀಗಳು, ಶಿವಮೊಗ್ಗ ಮತ್ತು ಸಾಗರದ ಬೆಕ್ಕಿನಕಲ್ಮಠದ ಸ್ವಾಮಿಗಳು, ಭಾಲ್ಕಿಯ ಪಟ್ಟದ ದೇವರು, ಕಲಬುರ್ಗಿಯ ಶರಣ ಬಸವೇಶ್ವರ ಮಠದ ಜೊತೆಗೆ ಇನ್ನೂ ನೂರಾರು ವಿರಕ್ತ ಮಠಗಳು ಶರಣ ತತ್ವಗಳ ಪರಿಪಾಲನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇಲ್ಲದಿದ್ದರೆ ಇಂದು ಬಸವ ತತ್ವ ನಿರ್ನಾಮವಾಗಬಹುದಿತ್ತು.
ಪಂಚಾಚಾರರ ಬಗ್ಗೆ ಒಂದಿಷ್ಟು ಮಾಹಿತಿ ಅಗತ್ಯವೆನಿಸುತ್ತದೆ. ಸಿದ್ಧಾಂತ ಶಿಖಾಮಣಿಯ ಆಂತರಿಕ ವಿರೋಧಾಭಾಸಗಳನ್ನು ಗಮನಿಸಿದರೆ ಐವರು ಪಂಚಾಚಾರ್ಯರಲ್ಲಿ ಈರ್ವರ ಅಸ್ತಿತ್ವಕ್ಕೆ (ಕಾಶೀ ಮತ್ತು ಕೇದಾರ ಪೀಠಗಳಿಗೆ) ಯಾವುದೇ ಐತಿಹಾಸಿಕ, ಪೌರಾಣಿಕ ಆಧಾರವೇ ಇಲ್ಲ. ಈ ಐವರನ್ನು ‘ಆಚಾರ್ಯ’ರನ್ನಾಗಿ ಮಾಡಿದವರು ಯಾರು? ಯಾವಾಗ? ಎಂಬುದಕ್ಕೆ ಸೂಕ್ತ ತೃಪ್ತಿಕರ ಆಧಾರಗಳೇ ಇಲ್ಲ. ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಲ್ಲಿ ಧರ್ಮ ಪ್ರಚಾರ ಮಾಡಿದ್ದೇವೆಂದೂ, ರಾಮಾಯಣದ ವಿಭೀಷಣನಿಗೆ ಸಲಹೆ ನೀಡಿದ್ದೇವೆಂದೂ, ಅಗಸ್ತ್ಯನಿಗೆ ಶಿವನ ಮಹಿಮೆಯನ್ನು ವಿವರಿಸಿದ್ದೇವೆಂದೂ, ಶಂಕರಾಚಾರ್ಯರರಿಗೆ ಚಂದ್ರಮೌಳೀಶ್ವರಲಿಂಗವನ್ನು ನೀಡಿದ್ದೇವೆಂದೂ ಸಿದ್ಧಾಂತ ಶಿಖಾಮಣಿಯ ಲೇಖಕರು ಹೇಳುತ್ತಾರೆ.
ಇಂತೆಲ್ಲ ಚಮತ್ಕಾರಿ ಕಾರ್ಯಗಳನ್ನು ಮಾಡಿದ ಈ ಪಂಚ ಪೀಠಗಳ ಬಗ್ಗೆ ಯಾವುದೇ ವೇದ, ಆಗಮ, ಉಪನಿಷತ್ತು, ಬ್ರಾಹ್ಮಣಕ, ಅರಣ್ಯಕ ಅಥವಾ ಶಂಕರಾಚಾರ್ಯರರಿಗೆ ಸಂಬಂಧಿಸಿದ ಗ್ರಂಥಗಳಲ್ಲೂ, ರಾಮಾಯಣದಲ್ಲೂ ಅಥವಾ ಭಾರತದ ಸುದೀರ್ಘ ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ಹಳೆಯ ಗ್ರಂಥದಲ್ಲಿಯೂ ಪಂಚಾಚಾರ್ಯರ ಬಗ್ಗೆ ಒಂದು ಚಕಾರ ಶಬ್ದವೂ ಇಲ್ಲ. ಹಾಗಾದರೆ, ಅವರ ಇತಿಹಾಸವೆಲ್ಲ ಸ್ವಯಂ-��ಿರ್ಮಿತ ಕಟ್ಟುಕತೆಗಳೇ? ಅವನ್ನೆಲ್ಲ ಸೃಷ್ಟಿಸಿದವರು ಯಾರು, ಏಕೆ, ಹೇಗೆ ಯಾವಾಗ?
ಹೌದು, ವಿಜಯನಗರದ ದೊರೆಗಳಲ್ಲಿ ಸಂಗಮ ವಂಶದ ರಾಜರು 14-15ನೇ ಶತಮಾನಗಳಲ್ಲಿ ಅವರಿಗೆ ರಾಜಾಶ್ರಯ ನೀಡಿ ವಚನ ಸಾಹಿತ್ಯದ ಬೆಳವಣಿಗೆಯನ್ನು ಪ್ರೋತ್ಸಾಹಿಸಿದರು. ಪುಂಗನೂರು, ಕೆಳದಿ ಮತ್ತು ಕೊಡಗಿನ ಅರಸರು ಲಿಂಗಾಯತರಾಗಿದ್ದರು. ಮೈಸೂರಿನ ಒಡೆಯರೂ 17ನೇ ಶತಮಾನದ ವರೆಗೆ ಲಿಂಗಾಯತರಾಗಿದ್ದರು. ಆದರೆ ಅವರ್ಯಾರೂ ಪಂಚಪೀಠಗಳನ್ನು ಸ್ಥಾಪಿಸಲಿಲ್ಲ.
ಈ ಎಲ್ಲ ಅಂಶಗಳನ್ನು ಸಾಧಾರವಾಗಿ ಬಳಸಿಕೊಂಡು ಲಿಂಗಾಯತವು ಸ್ವತಂತ್ರ ಧರ್ಮವೆಂದೂ, ಪಂಚಪೀಠಗಳು ನಂತರದ ಅಧ್ವಾನಗಳೆಂದೂ ಸಿದ್ಧಪಡಿಸಲು ಅಪಾರವಾದ ಐತಿಹಾಸಿಕ ಸಾಮಗ್ರಿ ಈಗ ಲಭ್ಯವಿದೆ. ಅದು ಆಧುನಿಕ ಯುಗದಲ್ಲಿ ನಡೆದ ವಚನಶಾಸ್ತ್ರ ಸಾಹಿತ್ಯದ ಆವಿಷ್ಕಾರಗಳು ನಿರ್ಮಿಸಿದ ಗಂಭೀರ ಬೆಳವಣಿಗೆ. ಇಂದು ಲಿಂಗಾಯತ ಸಮುದಾಯವು ಅತ್ಯಂತ ಕಠಿಣ ಆಂತರಿಕ ವೈರುಧ್ಯಗಳಿಂದ, ತಿಕ್ಕಾಟಗಳಿಂದ, ವಿವಿಧ ಪಾಂಥಿಕ ಸಮಸ್ಯೆಗಳಿಂದ ತತ್ತರಿಸಿ ಹೋಗಿದೆ. ಈಗ ನಮಗೆ ಬೇಕಿರುವುದು ಇಂದಿನ ವೈಜ್ಞಾನಿಕ ಯುಗಮಾನದ ಮನೋಭಾವಕ್ಕೆ ಸಂಪೂರ್ಣವಾಗಿ ಸರಿಹೊಂದುವ 12ನೆಯ ಶತಮಾನದ ಬಸವಣ್ಣನವರ ಲಿಂಗಾಯತ ಧರ್ಮವೇ ಹೊರತು ಪಂಚಾಚಾರ್ಯರು ಅಶುದ್ಧಗೊಳಿಸಿರುವ, ನೂರೆಂಟು ಆಂತರಿಕ ವೈರುಧ್ಯಗಳಿಂದ ಕೂಡಿದ ವೀರಶೈವವಲ್ಲ.
12ನೇ ಶತಮಾನದ ಬಸವಣ್ಣನವರು ಮತ್ತು ಶರಣರು ಸ್ಥಾಪಿಸಿದ ಲಿಂಗಾಯತದ ಮರುಆವಿಷ್ಕಾರವು 20ನೆಯ ಶತಮಾನದ ಅವಿಸ್ಮರಣೀಯ ಸೋಜಿಗಗಳಲ್ಲಿ ಒಂದಾಗಿದೆ. ಶಾಶ್ವತ ಸತ್ಯವನ್ನು ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ. ಅದಕ್ಕೆ ಮೂಲ ಆಧಾರವೆಂದರೆ ಹತ್ತಾರು ಸಾವಿರ ವಚನಗಳನ್ನು ಪತ್ತೆಹಚ್ಚಿ, ಪರಿಷ್ಕರಿಸಿ, ಪ್ರಕಟಿಸಿದ್ದು. ಅದರ ಹಿಂದೆ ಫ.ಗು. ಹಳಕಟ್ಟಿ, ಎಂ.ಎಂ ಕಲಬುರ್ಗಿ, ವೀರಣ್ಣ ರಾಜೂರು, ಟಿ.ಆರ್.ಚಂದ್ರಶೇಖರ ಅವರಂತಹ ನೂರಾರು ವೈಜ್ಞಾನಿಕ ಮನೋಭಾವದ ಸಂಶೋಧಕರ ಕಠಿಣ ಪರಿಶ್ರಮ ಅಡಗಿದೆ.
ಎಲ್ಲೆಲ್ಲೊ ಹೇಗೋ, ಏಕೋ ಮುಚ್ಚಿಡಲಾಗಿದ್ದ, ತಿರಸ್ಕರಿತ, ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲ್ಪಟ್ಟಿದ್ದ 22 ಸಾವಿರಕ್ಕೂ ಹೆಚ್ಚು ವಚನಗಳ ಸಂಗ್ರಹಣೆ, ಸಾವಿರಾರು ಶರಣರ ಚರಿತ್ರೆಗಳ ಬರವಣಿಗೆ, ಹತ್ತಾರು ಶಿಲಾಶಾಸನಗಳ ಶೋಧನೆ, ವಚನಗಳ ಬಹುಮುಖಿ ಅಧ್ಯಯನಗಳು, ವಚನಗಳ ಅರ್ಥೈಸುವಿಕೆ, ವಿವಿಧ ಭಾಷೆಗಳಲ್ಲಿ ವಚನಗಳ ಭಾಷಾಂತರಗಳು ಅಸಾಮಾನ್ಯ ಕೆಲಸಗಳೇ ಸರಿ. ಅವುಗಳನ್ನು 15 ಸಂಪುಟಗಳಲ್ಲಿ ಕರ್ನಾಟಕ ಸರ್ಕಾರವೇ ಎರಡು ಬಾರಿ ಪ್ರಕಟಿಸಿದೆ.
ಅದಕ್ಕೂ ಹೆಚ್ಚಾಗಿ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ವಿರಕ್ತ ಮಠಗಳು ಬಸವಣ್ಣನವರ ತತ್ವಗಳನ್ನು ಹೇಗೆ ಎಲ್ಲ ಅಡೆತಡೆಗಳ, ವಿರೋಧಗಳ ನಡುವೆಯೂ ಉಳಿಸಿಕೊಂಡು ಬಂದವು, ಬೆಳೆಸಿದವು ಮತ್ತು ಬಸವ ತತ್ವಗಳನ್ನು ಒಂಬೈನೂರು ವರ್ಷ ಪರಿಪಾಲಿಸಿದವು ಎನ್ನುವುದಂತೂ ಅತ್ಯಂತ ಸೋಜಿಗದ ಸಂಗತಿ.
ಸುಮಾರು 1880ರಿಂದ ಬೆಳೆದುಬಂದ ಶರಣ ಧರ್ಮ ಸಂಬಂಧಿ ಪತ್ರಿಕೆಗಳೂ ಮಹತ್ವದ ಪಾತ್ರ ವಹಿಸಿವೆ. ಸ್ಟಾರ್ ಆಫ್ ಮೈಸೂರು, ಶಿವಾನುಭವ, ಮಹಾಮನೆ, ಬಸವ ಬೆಳಗು, ಬಸವ ಜರ್ನಲ್, ಬಸವ ಪಥ, ಬಸವ ದರ್ಶನ, ಮಹಾರಾಷ್ಟ್ರದ ‘ಸಂಗಮ’, ಆಂಧ್ರಪ್ರದೇಶದ ‘ಬಸವ ಪ್ರಭ’ ಇತ್ಯಾದಿ ನಿಯತಕಾಲಿಕ ಪತ್ರಿಕೆಗಳು ಲಿಂಗಾಯತದ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.
ಜೊತೆಜೊತೆಗೆ, ಸಿದ್ಧಾಂತ ಶಿಖಾಮಣಿಯನ್ನು ವೈಜ್ಞಾನಿಕವಾಗಿ, ಐತಿಹಾಸಿಕವಾಗಿ ವಿಶ್ಲೇಷಿಸಿ ಅದರ ಸತ್ಯಾಸತ್ಯತೆಯನ್ನು 1942ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆದು ಬಿಚ್ಚಿಟ್ಟ ಎಂ.ಆರ್ ಸಾಖರೆಯವರ ‘ಲಿಂಗಾಯತ ಧರ್ಮದ ಇತಿಹಾಸ ಮತ್ತು ದರ್ಶನ’ ಎಂಬ ಗ್ರಂಥವಾಗಲಿ, ಕ್ರಿಸ್ತಿಯನ್ ಧರ್ಮದ ಉತ್ತಂಗಿ ಚೆನ್ನಪ್ಪನವರಿಂದ 1940ರ ದಶಕದಲ್ಲಿ ಬರೆಯಲ್ಪಟ್ಟ ‘ಅನುಭವ ಮಂಟಪ’ದ ಐತಿಹಾಸಿಕ ಅಧ್ಯಯನ ಮಹತ್ವದ ಸಾಧನೆಗಳು. ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಸೇಯಿಂಗ್ಸ್ ಆಫ್ ಬಸವಣ್ಣ’, ಆರ್.ಆರ್.ದಿವಾಕರ ಅವರ ‘ವಚನಶಾಸ್ತ್ರ’, ಎಂ.ಆರ್. ಶ್ರೀನಿವಾಸಮೂರ್ತಿಯವರ ‘ವಚನಶಾಸ್ತ್ರ ಸಾರ’, ಜೊತೆಗೆ ಹತ್ತೊಂಬತ್ತನೆಯ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಕುರಿತು ಪಾಶ್ಚಾತ್ಯ ಲೇಖಕರಾದ ಸಿ.ಪಿ.ಬ್ರೌನ್, ಉರ್ತ, ವಿಲ್ಸನ್, ಕಿಟೆಲ್, ಮೋಗ್ಲಿಂಗ್, ಜೆಂಕಿನ್ಸ, ಎಂಥೋವೆನ್, ಎಡ್ಗರ ಥಸ್ರ್ಟನ್, ಅಬೆ ದುಬೈ, ಆರ್ಥರ ಮೈಲ್ಸ, ಫ್ರಾನ್ಸಿಸ್ ಬುಕಾನನ್ ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಎಚ್.ಜೆ. ಸ್ಟ್ರೋಕ್ಸ್, ಎ.ಪಿ.ರೈಸ್, ಬಿ.ಎಲ್.ರೈಸ್, ಜೇಮ್ಸ ಕ್ಯಾಂಬೆಲ್, ವಿಲಿಯಮ್ ಮೆಕಾರ್ಮಿಕ್, ಜೆ.ಎನ್.ಫರಕೈರ್, ಮೈಕೆಲ್ ಬ್ಲೇಕ್, ಜಾನ್ ಪೀಟರ ಶೌಟೆನ್ ಅವರ ಗ್ರಂಥಗಳು ಲಿಂಗಾಯತವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಬಹಳಷ್ಟು ಪ್ರಮುಖ ಪಾತ್ರ ವಹಿಸಿವೆ.
ಇತ್ತೀಚೆಗೆ 2003ರಲ್ಲಿ ಮೈಸೂರು ಜಿಲ್ಲೆಯ ಕುಂದೂರಿನ ಡಾ. ಇಮ್ಮಡಿ ಶಿವಬಸವಸ್ವಾಮಿಗಳು ಸಾಧಾರವಾಗಿ ಬರೆದ ‘ಸಿದ್ಧಾಂತ ಶಿಖಾಮಣಿ ಹಾಗೂ ಶ್ರೀಕರಭಾಷ್ಯ ನಿಜನಿಲುವು’ ಎಂಬ ಗ್ರಂಥವು ಮತ್ತು 2011ರಲ್ಲಿ ಹಂಪಿ ವಿಶ್ವವಿದ್ಯಾಲಯವು ಪ್ರಕಟಿಸಿದ ತರುಣ ಲೇಖಕ ಬೋರಟ್ಟಿ ವಿಜಯಕುಮಾರ ಅವರ ‘ಹಿರಿಯರ ಹಿರಿತನ ಹಿಂದೇನಾಯಿತು’ ಎಂಬ ಗ್ರಂಥ ಹಾಗೂ 2015ರಲ್ಲಿ ಬ್ರಾಹ್ಮಣ ವಿದ್ವಾಂಸರಾದ ಬಸರೂರು ಸುಬ್ಬಾರಾವ ಅವರ ‘ಲಿಂಗಾಯತ ಫಿಲಾಸಫಿ’ ಗ್ರಂಥವು ಲಿಂಗಾಯತದ ಅತ್ಯಂತ ಮಹತ್ವದ ಅಂಶಗಳ ಮೇಲೆ ಅಸಾಧಾರಣ ಬೆಳಕು ಚೆಲ್ಲಿವೆ.
ಈ ಎಲ್ಲವುಗಳ ಹಿನ್ನೆಲೆಯಲ್ಲಿ ಮೂಡಿಬರುವ ನಿರ್ಣಯವೆಂದರೆ ಎಲ್ಲ ಜನರನ್ನು ಎಲ್ಲ ಕಾಲಕ್ಕೂ ಮೂರ್ಖರನ್ನಾಗಿ ಮಾಡುವುದು ಸಾಧ್ಯವಿಲ್ಲ. ವೈಜ್ಞಾನಿಕ ಯುಗದಲ್ಲಿ ಕಟ್ಟುಕತೆಗಳು, ಮೂಢ ನಂಬಿಕೆಗಳು, ಬಹಳ ದಿನ ಬದುಕಲಾರವು. ಈ ಅಂಶಗಳನ್ನು ವಯೋವೃದ್ಧರಾದ ಡಾ.ಚಿದಾನಂದ ಮೂರ್ತಿಯವರು ಬೇಗ ತಿಳಿದುಕೊಂಡಷ್ಟು ಅವರಿಗೇ ಕ್ಷೇಮ. ತಮ್ಮ ಸ್ವಾರ್ಥವನ್ನು ಬದಿಗಿಟ್ಟು, ಸತ್ಯವನ್ನು ಒಪ್ಪಿಕೊಂಡರೆ ಎಲ್ಲರಿಗೂ ಒಳ್ಳೆಯದು. ಅವರಲ್ಲಿ ಪಂಚಾಚಾರ್ಯರೂ ಸೇರುತ್ತಾರೆ!
Comments 2
Thimmanagoyda
Jan 4, 2020ಮಾನ್ಯ ಜಾಮದಾರ ಸರ್ ಗೆ ಹೃದಯ ಪೂರ್ವಕ ವಂದನೆಗಳು. ಅದ್ಭುತ ಲೇಖನೆ ಬರೆದಿದ್ದಿರಿ, ನಾವೆಲ್ಲ ಸತ್ಯಾ ಸತ್ಯತೆಯನ್ನು ಅರಿಯ ಬೇಕಾಗಿದೆ, ಬೇಗನೆ ಅರಿತಷ್ಟು ಒಳ್ಳೆಯದು ಇಂದಿನ ಜನಾಂಗ ಅರಿತು ಕೊಳ್ಳುವದು ಅವಶ್ಯವಾಗಿದೆ.
ನಿಜಗುಣ ಮೂರ್ತಿ
Jan 8, 2023ಮಾನ್ಯ ಜಮಾದಾರ ಸಾಹೇಬ್ರೇ… ನಿಮ್ ಬಗ್ಗೆ ತಿಳೀದೇನೇ ನಾವು ಬಹುತೇಕರು ಸುಮ್ನಿದ್ದಿದ್ ತಪ್ಪಾಯ್ತು … ಕ್ಷಮೆಯಿರಲಿ ನಮ್ಮಪ್ಪಾ … ನಮ್ಮೆಲ್ಲಾ ಲಿಂಗಾಯ್ತರಿಗೂ … ಬಸವ ನಾಣೆ… ನೀನೇ ಗತಿ ಕಣಪ್ಪಾ… ಈ ಪಂಚೆ ಪೀಠ.. ಹಿಂದೂ ಮಿಲಿಟೆಂಟ್ಸ್.. ಸಿದ್ದು… ಯಡ್ಡಿ … ಮೋದಿ ಇವ್ರಿಗೆಲ್ಲಾ ಹೆಂಗ್ ಮಟ್ ಬೇಕು … ಮಾನ್ಯತೆ ಗೋಸ್ಕರ.. ಹೇಳ್ ಕೊಡಪ್ಪಾ… ನೀನೇ ಮುಂದೆ… ನಾವೆಲ್ಲಾ ನಿನ್ ಹಿಂದೆ… ಮುಂಡಾಮೋಚ್ತು… ಈ ಪಂಚೆ ಪೀಠಗಳೆಲ್ಲಾ ಹಿಂದೂ ಬಾಲ ಹಿಡ್ಕೊಂಡೇ ಓಗ್ತಾ ಇಲ್ಲಿ.. ಅರಚ್ಕೊಂಡು… ನಾವೆಲ್ಲ ಹಿಂದೂ.. ನಾವೆಲ್ಲ ಒಂದೂ ಅಂತ… ಅವರ ಅಡ್ಡ ದಾರಿ ಅವ್ರಿಗೆ… ನಮ್ಮ ಹೆದ್ದಾರಿ ನಮಗೆ …… ನಿಜಗುಣ ಕನಕಪುರ