Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹೀಗೊಂದು ಸಂವಾದ…
Share:
Poems April 6, 2023 ಕೆ.ಆರ್ ಮಂಗಳಾ

ಹೀಗೊಂದು ಸಂವಾದ…

ಶಿಷ್ಯೆ: ಮರೆವಿನ ಹಿಡಿತಕೆ ಮನ ಸಿಲುಕಿಹುದು
ಬಯಕೆಯ ಸೆಲೆಗೆ ಮರುಳಾಗಿಹುದು
ಕಾಣುವೆನೆಂತು ಜೀವದ ಸೊಬಗ
ಅರಿಯುವುದೆಂತು ಪ್ರಾಣದ ಹೊಲಬ
ಗೊತ್ತಿಲ್ಲದ ನಡಿಗೆ ಕತ್ತಲ ದಾರಿ
ಕಾಲಿಡಲೆಲ್ಲಿ ಹೇಳು ಗುರು
ಗುರು: ಕಂಡುದ ಹಿಡಿಯದ ಅಜ್ಞಾನಕೆ ಮರುಗುವೆ
ಕಾಣದ ಠಾವಿನ ಕನಸಿಗೆ ಕನಿಕರಿಸುವೆ
ಇಳಿಯದೆ ಕಾಣದು, ಹುಡುಕದೆ ದಕ್ಕದು
ನಡೆಯದೆ ಸೋತರೆ ಹೇಗಮ್ಮಾ…

ಶಿಷ್ಯೆ: ಎಲ್ಲಿಂದಲೋ ಬಂದು ಎತ್ತೆತ್ತಲೋ ಎಳೆವ
ನೋವು- ನಗು- ಉದ್ವೇಗದ ಸರಿಗಮ
ಪ್ರೀತಿ- ಪ್ರೇಮ- ವ್ಯಾಮೋಹದ ಪದನಿಸ
ದ್ವೇಷ, ರೋಷ, ಕುಹಕ, ಸೇಡು
ಒಂದೇ ಎರಡೇ ಉನ್ಮಾದದ ಅಲೆಬಲೆ
ಯಾವುದು ದಿಟ, ಯಾವುದು ಸೆಟೆ
ಕಂಗೆಟ್ಟಿರುವೆ ಹೇಳು ಗುರು
ಗುರು: ರುಚಿಗಳ ಸೆಳೆತಕೆ, ಬದಲಾಗುವ ಬಣ್ಣಕೆ
ನಿಲುಕುವುದಲ್ಲ ನಿಜದ ನೆಲೆ
ಇಲ್ಲದ ಸವಿಗೆ ನಾಲಿಗೆ ಚಾಚಿ
ಸುಮ್ಮನೆ ಬಳಲಿಕೆ ಯಾಕಮ್ಮಾ?

ಶಿಷ್ಯೆ: ದೇಹದಲಿರುವೆ, ಜ್ಞಾನದಲಿರುವೆ
ಬುದ್ಧಿಯಲಿರುವೆ, ಭಾವದಲಿರುವೆ
ಮಾತೂ ನನದೆ, ಮೌನವೂ ನನದೆ
ಅಲ್ಲಿಯೂ ನಾನೇ, ಇಲ್ಲಿಯೂ ನಾನೇ
ಎಲ್ಲೆಲ್ಲಿಯೂ ಥಕದಿಮಿ ಎನುತಿದೆ ‘ನಾನು’
ನಾನಿಲ್ಲದ ಠಾವಾದರೂ ಎಲ್ಲಿದೆ…
ಯಾರೀ ‘ನಾನು’ ಹೇಳು ಗುರು…
ಗುರು: ಗಗನದ ಕುಸುಮಕೆ ಕೈ ಚಾಚಿರುವೆ
ಕನಸಿನ ಸಿರಿಗೆ ಮನಸೋತಿರುವೆ
ಹುಸಿಯಲಿ ನಿಂತು ಹುಸಿಯನೇ ಹೊದ್ದು
ನಾ… ನಾ… ಎಂದರೆ ಹೇಗಮ್ಮಾ?

ಶಿಷ್ಯೆ: ಕಣ್ಣಿಗೆ ರಾಚಿದೆ ಅಹಮಿನ ದೂಳು
ಕಾಲಿಗೆ ನಾಟಿದೆ ಭವದ ಮುಳ್ಳು
ಕಲ್ಪಿತವನು ನಿಜವೆಂದೇ ಅಪ್ಪಿದೆ
ನಿತ್ಯವು ಸರಿದು ಆಯಸ್ಸು ಕರಗುವ
ಕಾಲದ ಓಟಕೆ ಭಯ ಬಿದ್ದಿರುವೆ
ಶಿವನನು ಕಾಣುವ ಬಯಲನು ಹೊಂದುವ
ಭಾಗ್ಯವು ದಕ್ಕೀತೆ ಹೇಳು ಗುರು
ಗುರು: ಕಣ್ಣಿನ ಕಸವನು, ಕಾಲಿನ ಮುಳ್ಳನು
ತೆಗೆಯಲು ಅಲ್ಲೇ ಇಹ ಅಕಲ್ಪಿತ ಶಿವನು
ಇಲ್ಲದ ಮನವನು ಜಾಡಿಸಿ ಕೊಡವಲು
ತನ್ನಲಿ ತಾನೇ ನಿಜ ನಿರ್ಬಯಲು.

Previous post ಸುಳ್ಳು ಅನ್ನೋದು…
ಸುಳ್ಳು ಅನ್ನೋದು…
Next post ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು

Related Posts

ಕಣ್ಣ ದೀಪ
Share:
Poems

ಕಣ್ಣ ದೀಪ

September 7, 2021 ಜ್ಯೋತಿಲಿಂಗಪ್ಪ
ನನ್ನ ಮನೆಯ ಅಂಗಳದಲ್ಲಿ ಒಬ್ಬ ಬುದ್ಧನಿದ್ದಾನೆ ಶೋ ಕೇಸಿನಲ್ಲಿ ಒಬ್ಬ ಬುದ್ಧನಿದ್ದಾನೆ ಗೋಡೆಯ ಮೇಲೆ ಒಬ್ಬ ಬುದ್ಧನಿದ್ದಾನೆ ಎಲ್ಲೆಲ್ಲೂ ಬುದ್ಧ ಬುದ್ಧ ಒಳಗೆ ಖಾಲಿ ಗೋಡೆಯ ಹಿಂದೆ...
ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...

Comments 2

  1. K S Mallesh
    Apr 7, 2023 Reply

    ಪದ್ಮಾಲಯ ನಾಗರಾಜ್ ಅವರ ಲೇಖನ ಮತ್ತು ನಿಮ್ಮ ಹೀಗೊಂದು ಸಂವಾದ ಕವನ ಎರಡೂ ಮನಸೆಳೆದವು. ಎಳೆ ಎಳೆಯಾಗಿ ಬಿಡಿಸಿ ಬಿಡಿಸಿ ನಾನುವನ್ನು ಇಬ್ಬರೂ ತೋರಿದ್ದೀರಿ. ಇಬ್ಬನಿಯ ಹನಿಯಂತೆ ನಿಮ್ಮ ಕವನ ಪದ್ಮಾಲಯ ಅವರ ನಾನುವಿನ ವಿರಾಟ್ ರೂಪವನ್ನು ಹೃದ್ಯವಾಗಿ ಪ್ರತಿಬಿಂಬಿಸಿದೆ. ಪದ್ಮಾಲಯ ರವರ ಈ ಲೇಖನದಲ್ಲಿ ಸ್ವಾತಂತ್ರ್ಯ ಮುಂತಾದ ಪದಗಳ ಮಹತ್ವವನ್ನು ತಿಳಿದೆ. ಕೆಲವು ಉದಾಹರಣೆಗಳ ಮೂಲಕ ನಾನುವಿನ ಮೆರೆದಾಟಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮತ್ತೆ ಓದಿ ಮಗದೊಮ್ಮೆ ಓದಿ ಮನನಮಾಡಿಕೊಳ್ಳಬೇಕಾದ ಲೇಖನ. ನಿಮ್ಮ ಕವನವೂ ಕೂಡ ದಾರಿಯ ಬೇಲಿಯ ಹಸಿರ ಮಧ್ಯೆ ಅರಳಿನಿಂತ ಹೂವಂತಿದೆ.

  2. ಪಂಚಾಕ್ಷರಿ ಹಳೇಬೀಡು
    Apr 9, 2023 Reply

    “ಅಕಲ್ಪಿತ ಶಿವ ಇಲ್ಲದ ಮನವ ಜಾಡಿಸಿ ಕೊಡವಲು ನಿರ್ವಯಲು!” ಅದ್ಭುತ ಸಾಲುಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಹುಡುಕಾಟ
ಹುಡುಕಾಟ
July 21, 2024
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
Copyright © 2025 Bayalu