
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ವಚನ ಸಾಹಿತ್ಯದಲ್ಲಿ ತುಂಬಾ ಜನಪ್ರಿಯವಾದ ಹಲವಾರು ವಚನಗಳಿವೆ. ಸಾಮಾನ್ಯವಾಗಿ ವೇದಿಕೆ, ಉಪನ್ಯಾಸಗಳಲ್ಲಿ ಉಪನ್ಯಾಸಕರುಗಳು ಕಂಠಪಾಠ ಮಾಡಿಕೊಂಡು ಜನರನ್ನು ಮೆಚ್ಚಿಸಲು ಹೇಳುವ ವಚನಗಳ ಹೊರತಾಗಿ, ಕನ್ನಡ ನುಡಿಯನ್ನು ಮಾತನಾಡಲು ಸಾಧ್ಯವಾದ ಹಾಗೂ ಎಲ್ಲಾ ಕನ್ನಡಿಗರಿಗೂ ಚಿರಪರಿಚಿತವಾದ ವಚನಗಳೂ ಇವೆ. ನನಗೆ ಗೊತ್ತಿರುವ ಹಾಗೆ ಅವಿದ್ಯಾವಂತರೂ ಹೇಳಬಲ್ಲ ಬಹುಮುಖ್ಯವಾದ ವಚನವೊಂದು ನನಗೆ ಆಗಾಗ ನೆನಪಿಗೆ ಬರುತ್ತದೆ. ಈ ವಚನ ಎಲ್ಲರಿಗೂ ಗೊತ್ತಿದೆ ಅನ್ನೋ ಕಾರಣಕ್ಕೋ ಅಥವಾ ತುಂಬಾ ಸರಳವಾಗಿದೆ ಅನ್ನೋ ಕಾರಣಕ್ಕೋ ಈ ವಚನದ ಪ್ರಾಮುಖ್ಯತೆಯನ್ನು ಬಹಳ ಮಂದಿ ಉತ್ಪ್ರೇಕ್ಷೆ ಮಾಡಿಬಿಡುತ್ತಾರೆ. ಈಗಾಗಲೇ ನಿಮಗೂ ಆ ವಚನ ಯಾವುದೆಂದು ಹೊಳೆದಿರಬಹುದು:
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ
ಶಿವಶರಣರ ಬದುಕನ್ನು, ಅವರು ನಡೆದಾಡಿದ ಹಾದಿಯನ್ನು ಅತ್ಯಂತ ಸಂಕ್ಷಿಪ್ತವಾಗಿಯೂ, ಅತ್ಯಂತ ಸರಳವಾಗಿಯೂ ನಿರೂಪಿಸುವಂತಹ ಇಂತಹ ವಚನಗಳು ಶರಣ ಸಾಹಿತ್ಯದಲ್ಲಿ ಅತ್ಯಂತ ಮಹತ್ವಪೂರ್ಣವಾದವು. ಈ ಪಟ್ಟಿಗೆ ಸೇರುವ ಇನ್ನೂ ಅನೇಕ ವಚನಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇಂದಿನ ಆಧುನಿಕ ಬದುಕಿನ ಅಗತ್ಯಗಳಿಗೆ ಜೋತುಬಿದ್ದಿರುವ ನಮ್ಮ ಜೀವನದೊಂದಿಗೆ ಈ ವಚನವನ್ನು ಅನ್ವಯಿಸಿ ನೋಡಿದಾಗ, ಈ ವಚನ ನಿರ್ದೇಶಿಸುವ ನೈತಿಕ ಬದುಕು ಇಂದಿನ ಕಾಲಕ್ಕೆ ಅಸಾಧ್ಯವೆಂಬಷ್ಟೇ ಕಡುಕಷ್ಟವೆನಿಸುತ್ತದೆ. ನಾವೆಷ್ಟು ದೂರ ಸಾಗಿಬಂದಿದ್ದೇವೆಂದರೆ ಶರಣರ ಜೀವನದಲ್ಲಿ ಯಾವುದು ಅನೈತಿಕವೋ ಅದೆಲ್ಲವೂ ನಾಗರೀಕರಾದ ನಮ್ಮಲ್ಲಿ ತೀರಾ ಸಾಮಾನ್ಯ ಸಂಗತಿಗಳಾಗಿಬಿಟ್ಟಿವೆ. ವಿಪರ್ಯಾಸವೆಂದರೆ ಇವು ವಿಜೃಂಭಣೆಗಳೂ ಆಗಿವೆ. ಸಮಾಜ ಹಾಗೂ ವೈಯಕ್ತಿಕವಾಗಿ ನೈತಿಕ ಜೀವನದ ಬಗ್ಗೆ ಸಣ್ಣದೊಂದು ಕ್ರಿಯಾಶೀಲವಾದ ಎಚ್ಚರ ಸಾಧ್ಯವಿಲ್ಲದಾದಾಗ ನಾವು ಆದರ್ಶ ವ್ಯಕ್ತಿಗಳ ಕುರಿತಾಗಿ ಆಡುವ ಮಾತು, ವಿಶ್ಲೇಷಣೆ ಹಾಗೂ ಬರಹಗಳು ಎಷ್ಟೇ ಶಕ್ತಿಯುತವಾಗಿದ್ದರೂ ಅವೆಲ್ಲವೂ ಹುಸಿ ಸಿದ್ಧಾಂತಗಳಾಗಿ ಮರೆಗೆ ಸರಿದು ಬಿಡುತ್ತವೆ ಎಂಬುದನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಈ ಎಲ್ಲಾ ಪ್ರತಿಕೂಲ ಪರಿಣಾಮಗಳ ಹೊರತಾಗಿ ಶಿವಶರಣರನ್ನು ಕನ್ನಡಿಗರಾದ ನಾವು ಮಾತ್ರ ಬಹುದೊಡ್ಡ ಆದರ್ಶ ವ್ಯಕ್ತಿಗಳನ್ನಾಗಿ ಪರಿಭಾವಿಸಿದ್ದೇವೆ, ಹಾಗೂ ಪರಿಭಾವಿಸಲೇ ಬೇಕಾಗಿದೆ. ಈ ಪ್ರಕೃತಿಯು ಮನುಷ್ಯ ಕುಲ ನೈತಿಕವಾಗಿ ಬಾಳಲೇ ಬೇಕಾದ ಪರಿಸ್ಥಿತಿಗಳನ್ನು ಎಂದಾದರೂ ತಂದೊಡ್ಡಿ ಬಿಡಬಹುದು. ಮುಂದೇನಾಗುತ್ತದೆಂಬುದನ್ನು ಯಾರಿಂದ ಹೇಳಲಾದೀತು?
ಏನೇ ಆಗಲಿ… ಈ ಪೃಥ್ವಿಯ ಮೇಲೆ ಮಾನವ ಕುಲ ಅಸ್ತಿತ್ವದಲ್ಲಿರುವವರೆಗೂ ನೈತಿಕತೆಗೆ ಬಹುದೊಡ್ಡ ಶಕ್ತಿ ಇದ್ದೇ ಇರುತ್ತದೆ. ಆದ್ದರಿಂದ ನೈತಿಕತೆಯ ಜೀವಂತಿಕೆಯನ್ನು ಕಾಪಿಟ್ಟುಕೊಂಡು ಉಸಿರಾಡಿದ ಕಥನಗಳು ಹಾಗೂ ಆದರ್ಶ ವ್ಯಕ್ತಿಗಳ ಮೌಲ್ಯಗಳನ್ನು ನಾವು ಈ ಲೋಕದ ಎದಿರಿಟ್ಟು ಮಾತನಾಡುತ್ತಲೇ ಇರಬೇಕಾಗುತ್ತದೆ.
ನಾವಿಂದು ಚರ್ಚೆಗೆ ತೆಗೆದುಕೊಂಡಿರುವ ವಚನಕ್ಕೂ ಏಳು ನೈತಿಕತೆಗಳ ಕಾರಣದಿಂದ ಬೇರೆಬೇರೆಯದೇ ಆದ ಮೂರು ವಿಶೇಷಗಳಿವೆ. ಈ ವಚನವು ಅತ್ಯಂತ ಸಂಕೀರ್ಣವಾದ ಮೂರು ಪ್ರಶ್ನೆಗಳಿಗೆ ಐದು ಸಾಲಿನ ಒಂದೇ ಉತ್ತರವನ್ನು ನೀಡುತ್ತದೆ. ಅಂತರಂಗ ಶುದ್ಧಿಯ ಲಕ್ಷಣವೇನು? ಬಹಿರಂಗ ಶುದ್ಧಿಯ ವಿವರಣೆ ಏನು? ಕೂಡಲ ಸಂಗಯ್ಯನೊಲಿಯುವ ಪರಿ ಯಾವುದು? ಈ ಮೂರು ಪ್ರಶ್ನೆಗಳಿಗೂ ಐದು ಸಾಲಿನ ಒಂದೇ ಉತ್ತರ!!!
ಪ್ರಶ್ನೆಗಳೇನೋ ಆಕರ್ಷಕವಾಗಿವೆ! ಅವುಗಳ ಉತ್ತರಗಳು ಕೂಡ ಕೈಗೆ ದಕ್ಕಿಬಿಟ್ಟವೇನೋ ಎಂಬಂತೆ ಒಂದು ಕ್ಷಣ ಭ್ರಮೆಯನ್ನುಂಟು ಮಾಡಿ ಇಲ್ಲವಾಗುತ್ತವೆ. ನಮ್ಮೊಳಗೆ ಮಾತು ಮತ್ತು ಕೃತಿಯ ಮಧ್ಯೆ ಉಂಟಾಗಿರುವ ದೊಡ್ಡದಾದ ಕಂದಕದ ನೆನಪಾಗಿ ಐದು ಸಾಲುಗಳೂ ಜೀವನದಲ್ಲಿ ಅಸಾಧ್ಯವೆನಿಸಿ ಹತಾಶರಾಗುತ್ತೇವೆ. ಆ ಹತಾಶೆ ಆದರ್ಶ ವ್ಯಕ್ತಿಗಳನ್ನು ದೈವದ ಸ್ಥಾನಕ್ಕೇರಿಸಿ ಭಜಿಸುವ ಗುಲಾಮನಾಗುತ್ತದೆ. ಈ ಜಾಯಮಾನದಿಂದಾಗಿಯೇ ನಮ್ಮಲ್ಲಿ ನೈತಿಕತೆ ಒಂದು ಬೋಧನಾ ವಿಧಾನವಾಗಿಯಷ್ಟೇ ಉಳಿದುಕೊಂಡು ಜೀವನ ವಿಧಾನದೊಂದಿಗೆ ಸಂಬಂಧ ಕಳೆದುಕೊಂಡಿರುತ್ತದೆ.
ಹಾಗೆಂದ ಮಾತ್ರಕ್ಕೆ ನಾವು ನಿರಾಶರಾಗಬೇಕಿಲ್ಲ. ಯಾವುದೇ ಕಾಲ, ದೇಶ, ಭಾಷೆಗಳೇ ಇರಲಿ, ಎಲ್ಲಾ ವಿಷಯಗಳಲ್ಲೂ ಹಾಗೂ ಎಲ್ಲಾ ಸಂದರ್ಭಗಳಲ್ಲೂ ಮನುಷ್ಯ ಅನೈತಿಕವಾಗಿರಲು ಸಾಧ್ಯವಿಲ್ಲ. ಒಂದರಲ್ಲಿ ಕಳೆದು ಹೋಗಿದ್ದರೂ ಮತ್ತೊಂದು ವಿಷಯ ಹಾಗೂ ಸಂದರ್ಭದಲ್ಲಿ ಮನುಷ್ಯ ನೈತಿಕವಾಗಿ ಮೆರೆಯುತ್ತಾನೆ. ನಿರ್ಭಯ, ನಿರಾತಂಕದಿಂದ ಕೂಡಿದ ಸತ್ಫಲವನ್ನು ಅನುಭವಿಸಿಯೂ ಇರುತ್ತಾನೆ. ಯಾವುದೇ ಕ್ಷಣದಲ್ಲಿಯೂ ಮನುಷ್ಯ ನೈತಿಕವಾಗಿ ತನ್ನನ್ನು ರೂಪಿಸಿಕೊಳ್ಳಲು ಈ ಪ್ರಕೃತಿ ಅವಕಾಶ ಕೊಟ್ಟೇ ಇರುತ್ತದೆ.
ನಮ್ಮ ಶರಣರಲ್ಲಿ ನೈತಿಕ ಬದುಕು ಮಾನವೀಯತೆಯ ನೆಲೆಯಿಂದ ತಮ್ಮನ್ನು ತಾವು ಪುನರ್ ಸೃಷ್ಟಿಸಿಕೊಂಡ ಫಲ ಅಥವಾ ಪರಿಣಾಮ. ಅವರೂ ನಮ್ಮಂತೆ ಮನುಷ್ಯರೇ ಅಲ್ಲವೇ? ನಾವಿಂದು ಎದುರಿಸುತ್ತಿರುವ ಎಲ್ಲಾ ಕೇಡು, ಕ್ರೌರ್ಯ ಹಾಗೂ ಜೀವವಿರೋಧವಾದ ಸಂಘರ್ಷಗಳನ್ನು ಅವರೂ ಉಂಡವರೇ ಅಲ್ಲವೇ? ಈ ಸಂದಿಗ್ಧತೆಗಳ ಎದುರಿಗೆ ಅವರು ತಮ್ಮನ್ನು ತಾವು ಲೋಕ ಹಿತಕ್ಕನುಗುಣವಾಗಿ ಮರುಸೃಷ್ಟಿಸಿಕೊಂಡ ವಿಧಾನದ ಹಿಂದೆ ಕಠಿಣವಾದ ಪರಿಶ್ರಮಗಳಿವೆ. ಸತ್ಯವನ್ನು ಒಪ್ಪಿ ಅದರಂತೆ ನಡೆದ ದಿಟ್ಟತನವಿದೆ. ಈ ನಿಟ್ಟಿನಲ್ಲಿ ಅವರು ತೋರಿದ ಶ್ರದ್ಧೆ, ಸಾಹಸ, ನಿಷ್ಠೆ ಇದೆಯಲ್ಲಾ, ಅದಕ್ಕಂತೂ ನಾವೆಲ್ಲಾ ಶರಣೆನ್ನಲೇ ಬೇಕು. ಶರಣರ ವಿಚಾರವಾಗಿ ಬಸವಣ್ಣನವರನ್ನು ನೆನೆಯದೇ ಇರಲು ಸಾಧ್ಯವೇ ಇಲ್ಲಾ. ಶರಣರ ಪರಿಶ್ರಮಗಳು ಹಾದಿ ತಪ್ಪದೇ ಇರಲು ಅವರು ಕಾಯಕ, ದಾಸೋಹ, ಲಿಂಗಾನುಭವ ಎಂಬ ಗುರುತರವಾದ ವಿದ್ಯಮಾನಗಳನ್ನು ರೂಪಿಸಿ ಹಂಚಿದ್ದರು. ಹಾಗಾಗಿ ಬಹುಮುಖ್ಯವಾದ ಈ ಮೂರು ವಿದ್ಯಮಾನಗಳೂ ಬಸವಣ್ಣನವರ ಸೃಜನಶೀಲ ಪ್ರತಿಭೆ.
ವಚನಗಳ ಓದಿಗೆ ಸಂಬಂಧಿಸಿದಂತೆ ಎರಡು-ಮೂರು ವಾಕ್ಯಗಳನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ವಚನಗಳನ್ನು ಕಾರಣ-ಕಾರ್ಯ-ಪರಿಣಾಮದ ಸಂಬಂಧದಲ್ಲಿ ಓದಿಕೊಂಡರೆ ವಚನಗಳಲ್ಲಿನ ಗೊಂದಲ, ಗೋಜಲುಗಳು, ಹಾಗೆಯೇ ವಿರೋಧಾಭಾಸಗಳು ಇಲ್ಲವಾಗಿ ವಚನದ ಓದು ಬದುಕಿಗೆ ತುಂಬಾ ಆಪ್ತವಾಗುತ್ತಾ ಹೋಗುತ್ತದೆ. ಈ ಮೂರರ ಸೂತ್ರದ ಆಧಾರದಲ್ಲಿ ವಚನದ ಅಭಿವ್ಯಕ್ತಿ ಸಾಗಿದೆ ಎಂಬ ಗ್ರಹಿಕೆ ನಮ್ಮ ಓದುವಿಕೆಯನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ. ನಿಸರ್ಗ ತತ್ವವು ಕೂಡಾ ಈ ಮೂರನ್ನೂ ಅವಲಂಬಿಸಿದೆ. ಬಸವ ತತ್ವ ನಿಸರ್ಗ ತತ್ವದ ಭಾಗವಾಗುತ್ತಾ, ಅರ್ಥಕ್ಕೂ ಮೀರಿದ ವಿಶಾಲವಾದ ಅದರ ಜೀವನ ಮೀಮಾಂಸೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಒಂದು ಕಾರ್ಯದ ಹಿಂದೆ ಬಲವಾದ ಕಾರಣಗಳೂ ಇರುವ ಹಾಗೆ ಪ್ರತಿಯೊಂದಕ್ಕೂ ಅದರದೇ ಆದ ಪರಿಣಾಮಗಳೂ ಇರುತ್ತವೆ. ಈ ದೃಷ್ಟಿಯಿಂದ ಯಾವುದೇ ಒಂದು ವಚನವನ್ನು ಅದು ಕಾರಣದ್ದೋ, ಕಾರ್ಯದ್ದೋ, ಇಲ್ಲಾ ಪರಿಣಾಮದ್ದೋ ಎಂದು ಗ್ರಹಿಸಲು ಸಾಧ್ಯವಾದರೆ ಅದರ ಹಿಂದು ಮುಂದಿನ ಕಾರಣ, ಕಾರ್ಯ, ಪರಿಣಾಮದ ವಚನಗಳು ಅರಿವಿಗೆ ಸಿಗುತ್ತಾ ಹೋಗುತ್ತವೆ. ನಾವು ಮೇಲೆ ತೆಗೆದುಕೊಂಡಿರುವ ವಚನವು ಶರಣರ ಪರಿಶ್ರಮದ ಫಲ. ಆದ್ದರಿಂದ ಅದು ಪರಿಣಾಮದಲ್ಲಿ ನುಡಿಯುತ್ತಿದೆ. ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ, ಕೂಡಲಸಂಗನ ಒಲಿಸುವ ಪರಿ. ಇವು ಅವರು ಸಾಧಿಸಿಕೊಂಡ ಫಲವೇ ಅಲ್ಲವೇ? ಈ ಐದು ಸಾಲಿನ ನೈತಿಕ ಜೀವನ ಅವರು ಪಡಕೊಂಡ ಫಲವಾದ್ದರಿಂದ ಅದರ ಹಿಂದೆ ಬಲವಾದ ಕಾರ್ಯವೂ ಜರುಗಿರಬೇಕಲ್ಲವೇ? ಶರಣರು ಪರಿಶುದ್ಧ ಜೀವನವನ್ನು ಪ್ರಾಪ್ತಗೊಳಿಸಿಕೊಳ್ಳಲು ಅಳವಡಿಸಿಕೊಂಡ ಕಾರ್ಯಶೀಲತೆಯನ್ನು ಗುರುತಿಸುವುದಂತೂ ಕಷ್ಟವೇನಲ್ಲಾ. ಅವೇ ಕಾಯಕ, ದಾಸೋಹ ಮತ್ತು ಲಿಂಗಾನುಭವ. ಚಂಚಲ ಸ್ವಭಾವದ ಮನಸ್ಸು ಯಾವ ಕ್ಷಣದಲ್ಲಾದರೂ ನೈತಿಕತೆಯನ್ನು ಹುಟ್ಟಿಸುತ್ತದೆ ಅಥವಾ ಯಾವ ಕ್ಷಣದಲ್ಲಾದರೂ ಮುರಿದುಕೊಳ್ಳುತ್ತದೆ. ಅದು ಸ್ಥಿರವಾಗಿ ನಿಲ್ಲುವಂತಾಗಬೇಕಾದರೆ ಅತ್ಯಂತ ಪರಿಣಾಮಕಾರಿ ಕ್ರಿಯಾಪ್ರಸಂಗದ ಜೊತೆ ಒಡನಾಡಲೇ ಬೇಕಾದ ಶ್ರದ್ಧಾಪೂರ್ವಕ ಪ್ರಯತ್ನದ ಪರಿಕರ ಇರಬೇಕಾಗುತ್ತದೆ. ಅಂತಹದ್ದೊಂದು ಅತ್ಯಪರೂಪದ ಕ್ರಿಯಾ ಪ್ರಸಂಗವೇ ಕಾಯಕ, ದಾಸೋಹ ಮತ್ತು ಲಿಂಗಾನುಭವ. ಈ ಮೂರೂ ಸಾಧಕನಲ್ಲಿ ಅಭೂತಪೂರ್ವವಾದ ಕ್ರಿಯೆಯನ್ನುಂಟು ಮಾಡಬೇಕು. ಅಂದರೆ ಕಾಯಕ, ದಾಸೋಹ, ಲಿಂಗಾನುಭವ- ಈ ಮೂರನ್ನೂ ಜೀವನದಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಪರಿಪೂರ್ಣವಾದ ನೈತಿಕ ಜೀವನ ಪ್ರಾಪ್ತವಾಗುತ್ತದೆ. ಇದರಿಂದಾಗಿ ಬಸವಣ್ಣನವರು ರೂಪಿಸಿದ ಈ ಮೂರರ ಐಡಿಯಾಲಜಿಕಲ್ಲಾದ ಸೃಜನಶಕ್ತಿಗೆ ಅಲ್ಲಮರಂತೂ ಬೆರಗಾಗಿ ಬಸವಣ್ಣನವರನ್ನು ಹಾಡಿ ಹೊಗಳಿರುವುದನ್ನು ವಚನಗಳಲ್ಲಿ ಕಾಣುತ್ತೇವೆ. ಆದ್ದರಿಂದ ಈ ಮೂರು ಅಂಶಗಳನ್ನು ಭಕ್ತನಾಗ ಬಯಸುವಂತಹವರು ಶರಣಮಾರ್ಗದಲ್ಲಿ ಪಾಲಿಸಲೇ ಬೇಕಿತ್ತು. ಇವು ಶರಣರ ಬಹುಮುಖ್ಯವಾದ ಪ್ರಾಥಮಿಕ ಅರ್ಹತೆಗಳು ಸಹ ಆಗಿದ್ದವು.
ಕಾಯಕ: ಕಾಯಕವನ್ನು ನಾವು ದುಡಿಮೆ ಎಂದು ಮಾತ್ರ ಅರ್ಥೈಸಿಕೊಂಡಿದ್ದೇವೆ. ಕಾಯಕ ಶಾರೀರಿಕ ಶ್ರಮವೆಂಬುದೇನೋ ಸರಿ. ಕಾಯಕವನ್ನು ದುಡಿಮೆಯ ಹಂತಕ್ಕೆ ಸೀಮಿತಗೊಳಿಸಿರುವುದು ದೊಡ್ಡ ವ್ಯಂಗ್ಯ. ಕಾಯಕ ಸಿದ್ಧಾಂತಕ್ಕೆ ದುಡಿಮೆಗೂ ಮೀರಿದ ಆಳಅಗಲಗಳಿವೆ. ಹನ್ನೆರಡನೇ ಶತಮಾನಕ್ಕೆ ಸೇರಿದ ಕಾಯಕ ಸಿದ್ಧಾಂತಕ್ಕಿರುವ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಹಿನ್ನೆಲೆಗಳನ್ನು ಗ್ರಹಿಸಿದಾಗ ಫ್ರೆಂಚ್ ಕ್ರಾಂತಿಗೂ ಮೇಲಾದ ಒಂದು ಕ್ರಾಂತಿಯುಗವಾಗಿ ಕಾಣಬಹುದು. ಬಸವಣ್ಣ ನ್ಯಾಯ ವಿಜ್ಞಾನಿಯಾಗಿ ಮತ್ತು ಎಚ್ಚರ ತಪ್ಪುವ ಮನಸ್ಸುಗಳಿಗೆ ಮನೋವೈಜ್ಞಾನಿಕ ಚಿಕಿತ್ಸೆಯನ್ನೊದಗಿಸಿದ ಮನೋವಿಜ್ಞಾನಿಯಾಗಿ ಹಾಗೂ ನಿಸರ್ಗದ ಅರಿವಿನಲ್ಲಿ ಜೀವಿಸುವ ಸ್ವಾತಂತ್ರ್ಯವನ್ನು ಶರಣ ಸಮಾಜಕ್ಕೆ ದಕ್ಕಿಸಿಕೊಟ್ಟ ತತ್ವಜ್ಞಾನಿಯಾಗಿ ಕಾಣುತ್ತಾರೆ. ಆದ್ದರಿಂದ ಕಾಯಕ ಸಿದ್ಧಾಂತವು ಶರಣರು ಬಾಳಿದ ಕಾಲಘಟ್ಟದಲ್ಲಿದ್ದ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ವೈಪರೀತ್ಯಗಳ ಎದುರಿಗೆ ಇವುಗಳಲ್ಲಿ ಪರಿವರ್ತನೆಯುಂಟಾಗಲು ಕಟ್ಟಿದ ಸತ್ಯ!
ಈ ಶತಮಾನದ ರಾಜಕೀಯ ಸ್ಥಿತ್ಯಂತರಗಳು ಕಳೆದ ಯುಗಗಳಲ್ಲಿ ಇದ್ದಂತೆ ಇರದೆ ತಮ್ಮ ದಿಕ್ಕನ್ನು ಪೂರ್ತಿಯಾಗಿ ಅಧಿಕಾರ ಕೇಂದ್ರಗಳನ್ನಾಗಿ ಬದಲಿಸಿಕೊಂಡಿದ್ದವು. ಅಂದರೆ ಬುಡಕಟ್ಟು ಅಸ್ತಿತ್ವಗಳು ಸಂಪೂರ್ಣವಾಗಿ ನಾಶಗೊಂಡ ಪರಿಣಾಮದಿಂದ ಅಧೀನ ರಾಜರ ಆಳ್ವಿಕೆಗಳು ಮುನ್ನೆಲೆಗೆ ಬಂದಿದ್ದವು. ಈ ಆಡಳಿತ ವ್ಯವಸ್ಥೆಯ ಬಹುಮುಖ್ಯ ವೈಪರೀತ್ಯವೆಂದರೆ ಆಳುವ ಮತ್ತು ಆಳಿಸಿಕೊಳ್ಳುವವರ ಮಧ್ಯೆ ಎಂದೂ ಸರಿಗಟ್ಟಲಾಗದಾ ವರ್ಗ ವಿಭಜನೆಯಿರುತ್ತದೆ. ಬುಡಕಟ್ಟುಗಳಲ್ಲಿದ್ದ ಹಾಗೆ ಅಧೀನ ರಾಜರ ಆಳ್ವಿಕೆಯಲ್ಲಿ ಪೂರ್ತಿಯಾಗಿ ಪ್ರಜಾಸತ್ತೆಯನ್ನು ನಿರೀಕ್ಷಿಸುವುದು ಕಷ್ಟ. ವರ್ಗ ವಿಭಜನೆಯು ಆಳುವವರಲ್ಲಿ ಅಧಿಕಾರದ ದೆಸೆಯಿಂದ ಶ್ರೇಷ್ಟತೆಯ ಭ್ರಮೆಯನ್ನು, ಆಳಿಸಿಕೊಳ್ಳುವವರಲ್ಲಿ ಕೊನೆಯಾಗದಾ ದಮನ ಭೀತಿಯನ್ನೂ ಗಟ್ಟಿಗೊಳಿಸಿಕೊಂಡು ಹೋಗುತ್ತಿರುತ್ತದೆ. ಅಧಿಕಾರವಿದ್ದವರು ಶ್ರಮಿಕರಿಂದ ದೋಚಿಕೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದರೆ, ದುಡಿಯುವವರಿಗೆ ಪ್ರತಿಫಲವಿಲ್ಲದೆ ಅಭದ್ರತೆಯಲ್ಲಿಯೇ ಜೀವಿಸಬೇಕಾಗುತ್ತದೆ. ಉತ್ಪಾದಿಸಲ್ಪಟ್ಟ ಸಂಪನ್ಮೂಲಗಳು ಇಂತಹ ರಾಜಕೀಯ ಸ್ಥಿತ್ಯಂತರಗಳಲ್ಲಿ ಸಮಾನವಾಗಿ ಹಂಚಿಕೆಯಾಗುವುದು ಸಾಧ್ಯವೇ ಇಲ್ಲ. ಅದು ಒಂದು ವರ್ಗಕ್ಕೆ ಸಂಗ್ರಹಣೆಯನ್ನೂ, ಮತ್ತೊಂದು ವರ್ಗಕ್ಕೆ ಜೀವನೋಪಾದಿಗಳಲ್ಲಿ ದಾರಿದ್ರ್ಯವನ್ನೂ ನೀಡುತ್ತದೆ. ಈ ಅಂಶವನ್ನು ವಚನ ಭಾಷೆಯಲ್ಲಿ ‘ಮೋಕ್ಷ ಭ್ರಾಂತಿ, ನರಕ ಭೀತಿಗಳ ನಿರಾಕರಣೆ’ ಎಂದಿದ್ದಾರೆ. ಆಳುವವರಲ್ಲಿ ಸದಾ ಹೆಚ್ಚಿಸಿಕೊಳ್ಳುತ್ತಲೇ ಇರಬೇಕಾದ ಸಂಗ್ರಹಣೆ ಮೋಕ್ಷ ಭ್ರಾಂತಿಯಾದರೆ, ಆಳಿಸಿಕೊಳ್ಳುವವರಿಗೆ ನಿರ್ಗತಿಕತನದಿಂದ ನರಕ ಭೀತಿಯಿಂದ ಕೂಡಿದ ಜೀವನ ಪ್ರಾಪ್ತವಾಗುತ್ತದೆ. ಶರಣರಿಗೆ ಇವೆರಡೂ ಇರಲಿಲ್ಲ.
ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾಯಕ ಸಿದ್ಧಾಂತದ ಆಳದಲ್ಲಿ ರಾಜಕೀಯವಾಗಿರಬಹುದಾದ ಕೆಲವು ಅಂಶಗಳನ್ನು ನಾವು ಹೀಗೆ ಪತ್ತೆ ಮಾಡಬಹುದು:
• ಕಾಯಕ ಸಿದ್ಧಾಂತದ ಪ್ರಾಥಮಿಕ ತಿಳುವಳಿಕೆಯೇ socio-economic ರಾಜಕೀಯದ ಎದುರಿಗೆ ಹೂಡಿದ ಬಂಡಾಯದಿಂದ ಪ್ರಾರಂಭವಾಗುತ್ತದೆ.
• ಅಧಿಕಾರ ನಿರಸನವು ಸಾಧ್ಯವಿಲ್ಲದಿದ್ದರೆ ಸಂಪನ್ಮೂಲಗಳ ಸಮಾನ ಹಂಚಿಕೆ ಸಾಧ್ಯವಿಲ್ಲಾ. ಸಂಪನ್ಮೂಲಗಳ ಸಮಾನ ಹಂಚಿಕೆ ಆಗಬೇಕಾದರೆ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕಾಯಕ ಮಾಡಲೇ ಬೇಕು.
• ಅಧಿಕಾರವು ಸಕಲ ಜೀವಿಗಳ ಕ್ಷೇಮಕ್ಕಾಗಿ ಇರುವುದಾದರೆ ಅದೊಂದು ಸಾಮಾನ್ಯ ಕಾಯಕವಾಗಿ ಮಾತ್ರ ಇರುತ್ತದೆ.
• ಕಾಯಕದಲ್ಲಿ ಶ್ರೇಷ್ಠವಾದ ಕಾಯಕ ಅಥವಾ ತುಚ್ಛವಾದ ಕಾಯಕ ಎಂಬುದು ಇಲ್ಲ. ಕಾಯಕವು ಎಲ್ಲಾ ಜೀವಿಗಳಲ್ಲೂ ಇರುವ ಜೀವಿಸುವ ಘನತೆ!
• ಜೈವಿಕ ತತ್ವದಿಂದ ಕೂಡಿದ ಕಾಯಕವು ದೇಹದ ಪ್ರತಿ ಕಣಕಣದಲ್ಲಿರುವ ಅರಿವನ್ನು ಎಚ್ಚರದಲ್ಲಿಡುತ್ತದೆ. ಎಚ್ಚರ ಅಥವಾ ಅರಿವು ನೈತಿಕತೆಯ ಕೈದೀವಿಗೆಯ ನಿರಂತರ ಮುಂಬೆಳಗು (ಜ್ಯೋತಿರ್ಲಿಂಗ).
• ಅರಿವು ಗುರುವಾಗುವ ಬೆಡಗು ವಂಚನೆಯಿಲ್ಲದ ಕಾಯಕದಿಂದ ಮಾತ್ರ ಸಾಧ್ಯ.
ಇಂತಹ ಮೌಲ್ಯಯುತವಾದ ಕಾಯಕ ಸಿದ್ಧಾಂತಕ್ಕೆ ಸಮಾಜದ ಬೇರೆ ಬೇರೆ ಸ್ತರಗಳಿಂದ ಬಂದಿದ್ದ ಶರಣ ಸಮೂಹವನ್ನೆಲ್ಲಾ ಉದಾಹರಿಸಬಹುದು. ಅವರೆಲ್ಲರೂ ತಮ್ಮತಮ್ಮ ಕೌಶಲ್ಯ, ಕಸುಬುಗಳ ಮೂಲಕ ಕಾಯಕ ಸಿದ್ಧಾಂತದ ಘನತೆಯನ್ನು ಮತ್ತಷ್ಟು ಮೇಲಕ್ಕೆ ತೆಗೆದುಕೊಂಡು ಹೋಗಿದ್ದರು.
ಸಂಸ್ಕೃತ ಭಾಷೆಯ ಪಾಂಡಿತ್ಯದಿಂದುಂಟಾದ ಹುಸಿ ಮಹಾಜ್ಞಾನದ ಬೆನ್ನುಮೂಳೆಯನ್ನು ಮುರಿಯಬಲ್ಲ ರಾಜಕೀಯ ಶಕ್ತಿಯಾಗಿಯೂ ಕಾಯಕ ಸಿದ್ಧಾಂತವನ್ನು ಗ್ರಹಿಸಬಹುದು.
ಕಾಶ್ಮೀರದ ಮಹಾದೇವ ಭೂಪಾಲ ಮೋಳಿಗೆಯ ಮಹಾದೇವನಾಗಿ, ಮಹಾರಾಣಿ ಗಂಗಾದೇವಿ ಮಹಾದೇವಮ್ಮಳಾಗಿ, ಯುವರಾಣಿ ನಿಜದೇವಿ ಬೊಂತಾದೇವಿಯಾಗಿ ತಮ್ಮ ರಾಜ್ಯಾಧಿಕಾರ ಮತ್ತು ರಾಜಭೋಗಗಳನ್ನು ತ್ಯಜಿಸಿ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಯಕ ಮಾಡುತ್ತಾ ಜೀವಿಸಿದ ಅಂಶವು ಆ ಕಾಲದ ಅಧಿಕಾರ ಕೇಂದ್ರಗಳ ರಾಜಕೀಯದ ಮುಂದೆ ಹೂಡಿದ ಪರ್ಯಾಯ ಅಧಿಕಾರ ನಿರಾಕರಣೆಯ ಕ್ರಾಂತಿಯಾಗಿದೆ.
ಒಂದು ಸಮಸಮಾಜದ ಮಹತ್ವಾಕಾಂಕ್ಷೆ ಸತ್ಫಲ ನೀಡಬೇಕೆಂದರೆ ಆ ಸಮಾಜದಲ್ಲಿರುವ ಎಲ್ಲಾ ಶೋಷಣೆಗಳ ಮೂಲದಲ್ಲಿರುವ ಅಧಿಕೃತವಾದ ಭ್ರಮೆಗಳನ್ನು ಹೋಗಲಾಡಿಸಬೇಕು. ಅಧಿಕಾರ ಮತ್ತು ಸಂಗ್ರಹಣೆಯ ಭ್ರಮೆಗಳೇ ಎಲ್ಲಾ ಶೋಷಣೆಗಳ ಮೂಲವೆಂದು ಬಸವಣ್ಣನವರು ಚೆನ್ನಾಗಿ ಅರಿತಿದ್ದರು. ಈ ಭ್ರಮೆಗಳನ್ನು ಹತ್ತಿಕ್ಕಲು ಪ್ರಭಾವಶಾಲಿಯಾಗಿದ್ದದ್ದು ಕಾಯಕ ಸಿದ್ಧಾಂತ! ಈ ಕಾಯಕ ಸಿದ್ಧಾಂತದ ಮಹತ್ವಾಕಾಂಕ್ಷೆಯೇ ಎಲ್ಲರೂ ಸಮಾನವಾಗಿ ದುಡಿಯಬೇಕು. ತಾವು ದುಡಿದದ್ದರಿಂದ ಬಂದಂತಹ ಉತ್ಪಾದನೆಗಳನ್ನು ಯಾರೇ ಆಗಲಿ ವ್ಯಕ್ತಿಗತವಾದ ಹಿತಗಳಿಗೆ ಸಂಗ್ರಹಿಸಿಕೊಳ್ಳದೇ ಹಂಚಿಕೊಂಡು ಬರಿದಾಗಿ ಬಯಲಾಗಿರಬೇಕು. ಈ ತತ್ವ ವ್ಯಕ್ತಿಗತ ಬದುಕಿಗಿಂತ ಸಮುದಾಯದ ಬದುಕು ಎಷ್ಟು ಉದಾತ್ತವಾದುದೆಂಬುದನ್ನು ಅರಿವಾಗಿಸುತ್ತದೆ.
ಯಾವುದೇ ಒಂದು ಸಮಾಜದ ಸಾಮಾಜಿಕ ವ್ಯವಸ್ಥೆಗಳು ಆ ಸಮಾಜವನ್ನು ಆಳುತ್ತಿರುವ ಮತ್ತು ಈಗಾಗಲೇ ಆಳಿದ ಅಧಿಕಾರ ಶಕ್ತಿಗಳ ರಾಜಕೀಯ ಧೋರಣೆಗಳಿಂದ ಪ್ರಭಾವಗೊಂಡು ರೂಪಿಸಲ್ಪಟ್ಟಿರುತ್ತವೆ. ಮೇಲಾಗಿ ನಿಸರ್ಗ ತತ್ವಕ್ಕೆ ವಿರೋಧವಾಗಿರುತ್ತವೆ. ಅಂತಹ ಅಧಿಕಾರಯುಕ್ತವಾದ ರಾಜಕೀಯಗಳನ್ನು ಕುಂದಿಸದೇ/ ಪ್ರಶ್ನಿಸದೇ/ ಮರು ರೂಪಿಸದೇ ಮಾನವ ಕುಲಕ್ಕಿರುವ ಸ್ವಾತಂತ್ರ್ಯವನ್ನು ಒದಗಿಸಲಾಗದೆಂಬುದು ಬಸವಣ್ಣನವರ ಪರ್ಯಾಯ ರಾಜಕೀಯ ಅಸ್ಮಿತೆಯಾಗಿದೆ. ಆ ಹೆಜ್ಜೆ ಗುರುತುಗಳು ಕಾಯಕ ಮತ್ತು ದಾಸೋಹಗಳನ್ನು ಅವು ಹೇಗೆ ರೂಪಿಸಲ್ಪಟ್ಟಿವೆಯೋ ಹಾಗೆ ಮುನ್ನಡೆಸುವುದರಲ್ಲಿವೆ. ಈ ದಿಶೆಯಲ್ಲಿ ಬಸವ ತತ್ವವನ್ನು ಸ್ವಾನುಕೂಲ ಭ್ರಮೆಯಾಗಿಸಿಕೊಂಡಿರುವವರು ತಮ್ಮ ತಮ್ಮ ನಿಲುವುಗಳನ್ನು ಮರು ವಿಮರ್ಶೆಗೆ ಒಳಪಡಿಸಿಕೊಳ್ಳಲೇ ಬೇಕಾಗಿದೆ.
ಎರಡನೆಯದಾಗಿ ಕಾಯಕ ಮತ್ತು ದಾಸೋಹಕ್ಕಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ನೋಡೋಣ…
ಈ ನೆಲದಲ್ಲಿ ಸುಮಾರು ಕ್ರಿ.ಶ 7ನೇ ಶತಮಾನದಿಂದೀಚೆಗೆ ಹನ್ನೆರಡನೇ ಶತಮಾನದವರೆವಿಗೂ ಇದ್ದ ಧಾರ್ಮಿಕ ಬೆಳವಣಿಗೆಗಳನ್ನು ಗಮನಿಸಿದಾಗ, ತೀವ್ರವಾದ ಮತೀಯ ಭಿನ್ನತೆಗಳಿಂದಾಗಿ ಅತಿಯಾದ ಯೌಗಿಕ ಅಥವಾ ಮತೀಯ ಅತಿಗಳು ಹುಟ್ಟಿಕೊಂಡವು. ಈ ಕಾಲಕ್ಕೆ ಬೌದ್ಧ, ಜೈನ ಹಾಗೂ ವೈದಿಕ ಧರ್ಮಗಳು ಪ್ರಧಾನ ಧರ್ಮಗಳಾಗಿ ಕಂಡರೂ ಅವುಗಳಲ್ಲೂ ಅಸಂಖ್ಯಾತ ಪಂಥಗಳು ಉದ್ಭವಿಸಿ ಮತೀಯ ಅತಿಗಳಿಂದಾಗಿ ವಿಘಟನೆಗೊಂಡಿದ್ದವು. ಈ ಕಾಲವು ಕಠೋರವಾದ ತಂತ್ರಪಂಥಗಳ ಯುಗವಾಗಿಯೂ ಕಾಣುತ್ತದೆ. ಶೈವ ತಂತ್ರದಲ್ಲೇ ಅನೇಕ ತಂತ್ರ ಶಾಖೆಗಳು ಹುಟ್ಟಿಕೊಂಡ ಹಾಗೆ ಬೌದ್ಧರಲ್ಲೂ ಅನೇಕ ತಂತ್ರಾಚರಣೆಗಳಿದ್ದ ಕಾಲವಿದು. ಆಯಾ ಧರ್ಮಗಳಲ್ಲಿದ್ದ ಮೂಲ ಸಿದ್ಧಾಂತಗಳಲ್ಲಿ ಭಿನ್ನತೆ ಹಾಗೂ ವಿರೋಧಾಭಾಸಗಳು ತಂತ್ರಪಂಥಗಳಿಂದ ತೀವ್ರವಾಯಿತೆಂದು ಅನಿಸಿದರೂ ಅತಿಶಯೋಕ್ತಿಯೇನಲ್ಲ.
ತಂತ್ರಪಂಥಗಳಲ್ಲಿ ದಿನನಿತ್ಯದ ಆಚಾರ-ವಿಚಾರ, ಆಹಾರ-ವಿಹಾರ ಮತ್ತು ಉಡುಗೆ- ತೊಡುಗೆಯಲ್ಲಿ ತಮ್ಮದೇ ಆದ ಬೇರೆಬೇರೆ ಧೋರಣೆಗಳನ್ನು ವ್ಯಕ್ತಪಡಿಸಿದರೂ ಈ ಪಂಥಗಳಲ್ಲೂ ಮೂಲ ತತ್ವದ ಬಗ್ಗೆ ಒಂದು ಸಾಮ್ಯತೆ ಕೂಡಾ ಇತ್ತು. ಪರಿಭಾಷೆಗಳಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಬಹುಪಾಲು ಪಂಥಗಳ ಮುಖ್ಯಗುರಿ ಪಾರಮಾರ್ಥಿಕ ಸತ್ಯದ ಅನ್ವೇಷಣೆ. ಅಂದರೆ ಪಾರಮಾರ್ಥಿಕ ಸತ್ಯದ ಕಡೆ ಹೆಚ್ಚು ಒಲವನ್ನು ತೋರಿಸಿದ್ದರಿಂದಾಗಿ ಪಂಥಗಳು ಲೋಕಜೀವನದ ಬಗ್ಗೆ ಅತೀವವಾದ ಅಸಡ್ಡೆಯನ್ನು ತೋರುತ್ತಿದ್ದವು. ಈ ಕಾಲದಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದ ಅತಿಯೆಂದರೆ- ಪಾರಮಾರ್ಥಿಕ ಜ್ಞಾನಕ್ಕಾಗಿ ಲೌಕಿಕ ಜೀವನದ ಕುರಿತಾದ ವ್ಯಾಮೋಹವನ್ನು ತೊರೆಯಬೇಕು.
ಎಂಟನೇ ಶತಮಾನದಲ್ಲಿ ಶಂಕರಾಚಾರ್ಯರೂ ಸಹ ಈ ಅತೀಂದ್ರೀಯತೆಯನ್ನೇ ಹೆಚ್ಚು ಜನಪ್ರೀಯಗೊಳಿಸಿದ್ದರು. ಬ್ರಹ್ಮವೇ ಸತ್ಯ, ಕಣ್ಣೆದುರಿನ ಈ ಜಗತ್ತು ಸುಳ್ಳು (ಜಗನ್ಮಿಥ್ಯಾ ಬ್ರಹ್ಮ ಸತ್ಯಂ). ಲೋಕಜೀವನದ ಕುರಿತು ಅವರ ಅಸಡ್ಡೆ ಯಾವ ತೆರನಾಗಿತ್ತೆಂದರೆ, ‘ಎಲ್ಲಿನದು ನಿನ್ನ ಹೆಂಡತಿ? ಎಲ್ಲಿನವರು ನಿನ್ನ ಮಕ್ಕಳು? ಈ ಸಂಸಾರವೇ ಒಂದು ವಿಚಿತ್ರ ಸಂಗತಿ’ (ಕಾತೋ ಕಾಂತಃ ಕಾತೇ ಪುತ್ರಃ ಸಂಸಾರೋ ಅಯಮತೀವ ವಿಚಿತ್ರತಃ).
ಈ ಸಿದ್ಧಾಂತಗಳ ಫಲವಾಗಿ ವಿಧವಿಧವಾದ ಯೌಗಿಕ ಮತ್ತು ತಾಂತ್ರಿಕ ಆಚರಣೆಗಳು, ಬಗೆಬಗೆಯ ಗುರುಪಂಥಗಳು, ಸಂನ್ಯಾಸಾ ದೀಕ್ಷೆಗಳು, ಜ್ಞಾನವೈರಾಗ್ಯ ಶಾಖೆಗಳೂ ಹುಟ್ಟಿಕೊಳ್ಳಲು ಕಾರಣವಾದವು.
ಸುಮಾರು ಹತ್ತನೇ ಶತಮಾನದವರೆಗೂ ಬಂದ ಬೌದ್ಧ ಸಹಜಯಾನಿಗಳು ಪಾರಮಾರ್ಥಿಕ ಅತಿಗಳನ್ನು (ಅಲೌಕಿಕ ಅತಿಯೆಂದರೂ ಆದೀತು) ಹೀಗಳೆದು ಲೋಕಸತ್ಯದಲ್ಲಿ ಬಾಳಬೇಕೆಂದು ಕರೆಕೊಟ್ಟಿದ್ದರು. ಸರಹಪಾದನಂತಹ ಅನೇಕ ಸಿದ್ಧರು ಲೌಕಿಕ ಜೀವನವನ್ನೇ ಪಾರಮಾರ್ಥಿಕ ಎಂದರು. ಆದರೆ ಈ ಕರೆಯನ್ನು ಒಂದು ಸಮಾಜದ ಸಮಷ್ಠಿ ಬದುಕಿನ ಭಾಗವಾಗಿಸುವಲ್ಲಿ ಸಂತಮಹಂತರು ವಿಫಲರಾದರು. ಏಕೆಂದರೆ ಕಾಲಾಂತರದ ಅನೇಕ ರಾಜಾಧಿಕಾರಗಳು ಉದ್ದೇಶಪೂರ್ವಕವಾಗಿ ಈ ಸಂತಮಹಂತರ ಪ್ರಯತ್ನಗಳನ್ನು ಹತ್ತಿಕ್ಕುತ್ತಲೇ ಬಂದವು… ಕಾರಣವೇನೆಂದರೆ ಸಮಾಜವನ್ನು ವಿಘಟಿಸುವುದರ ಮೂಲಕ ಧರ್ಮಾಧಿಕಾರಗಳಿಗೆ ಸಂಪನ್ಮೂಲ ಸಂಗ್ರಹಣೆ ಸುಲಭ ಸಾಧ್ಯವಾಗುತ್ತದೆ! ಈ ಬಗೆಯಲ್ಲಿ ಶಂಕರಾಚಾರ್ಯರು ತಮ್ಮ ಕಾಲಕ್ಕೆ ಎಲ್ಲಾ ಬೌದ್ಧರ ಇಂತಹ ಪ್ರಯತ್ನಗಳನ್ನು ಮುಚ್ಚಿಹಾಕಿದರು. ಆದ್ದರಿಂದಲೇ ಅವರು ಬಹುಮುಖ್ಯ ಹಿಂದೂ ಧರ್ಮ ಸಂಸ್ಥಾಪನಾಚಾರ್ಯರೆನಿಸಿಕೊಂಡರು.
ಈ ರೀತಿಯ ಅಲೌಕಿಕ ಜ್ಞಾನ ದಾಹದ ಅತಿಗಳನ್ನು ಅಲ್ಲಗಳೆದು ಅವುಗಳ ಜಾಗದಲ್ಲಿ ಮಾನವ ಜೀವನವನ್ನು ಸುಧಾರಿಸಬಲ್ಲ ಮೌಲ್ಯಗಳನ್ನು ಮುನ್ನೆಲೆಗೆ ತರುವುದಕ್ಕಾಗಿ ಹನ್ನೆರಡನೇ ಶತಮಾನದ ಶರಣರು ಕಾಯಕದ ಮೂಲಕ ಹೊಸ ಕ್ರಾಂತಿಗೆ ಹಾದಿಯನ್ನು ತೆರೆದರು.
ಅಲೌಕಿಕ ಜ್ಞಾನವನ್ನು ನಂಬುವ ಮತ್ತು ಅನುಸರಿಸುವ ಒಬ್ಬ ವ್ಯಕ್ತಿಯಿಂದ ಯಾವುದೇ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಈಗಾಗಲೇ ಸಮಾಜದಲ್ಲಿರುವ ಅಸಮಾನತೆಗಳು, ಜಾತಿಗಳು, ಕಲಹಗಳು, ದಾರಿದ್ರ್ಯಗಳು, ತಲ್ಲಣಗಳು, ರೋಗರುಜಿನದಂತಹ ಅಸಹಾಯಕತನಗಳು, ರಾಜ-ಗುಲಾಮನೆಂಬ ದುರಂತಮಯ ತಾರತಮ್ಯಗಳು ಇತ್ಯಾದಿಗಳೆಲ್ಲವೂ ಅವರ ಪ್ರಕಾರ ಮಾಯೆಯಾಗಿರುತ್ತದೆ. ಅಂದರೆ ಭ್ರಮೆ! ಅಥವಾ ಇವೆಲ್ಲವುಗಳನ್ನೂ ಅನುಭವಿಸುತ್ತಿರುವ ವ್ಯಕ್ತಿಯ ಹಿಂದಿನ ಜನ್ಮದ ಪಾಪದ ಫಲವಾಗಿ ಬಂದಿರುವಂತಹವಾಗಿರುತ್ತವೆ. ಇದು ಬ್ರಹ್ಮಲಿಖಿತ. ಸೃಷ್ಟಿಕರ್ತನು ಮೊದಲೇ ಈ ಸಮಾಜದ ಆಗುಹೋಗುಗಳನ್ನು ಅವರವರ ಕರ್ಮ ಫಲಕ್ಕನುಗುಣವಾಗಿ ಬರೆದಿಟ್ಟಿರುತ್ತಾನೆ. ಹಾಗಾಗಿ ಇವುಗಳಲ್ಲಿ ಯಾವ ಬದಲಾವಣೆಯನ್ನೂ ತರಲಾಗದು. ಎಲ್ಲವೂ ಅವರವರ ಕರ್ಮ ಫಲಕ್ಕನುಗುಣವಾಗಿ ನಡೆಯುತ್ತದೆ ಎಂಬುದು ಅಲೌಕಿಕರ ಲೋಕ ವಿವರಣೆ.
ಈ ಕರ್ಮಸಿದ್ಧಾಂತವೇ ಎಂದೆಂದಿಗೂ ನಮ್ಮ ಸಾಮಾಜಿಕ ಸ್ಥಿತಿಗತಿಗಳನ್ನು ನಿರ್ಧರಿಸುತ್ತಿರುತ್ತದೆ ಎಂಬುದು ಮಾನವತೆಯನ್ನು ನಂಬುವವರಿಗೆ ಕಳವಳವನ್ನುಂಟು ಮಾಡುವ ಅಂಶ.
ದೇವರು ಬದಲಿಸಲಾಗದೇ ಅವರವರ ಕರ್ಮವೆಂದು ಅಸಹಾಯಕವಾಗಿರುವಾಗ ನಮ್ಮ ಸಮಾಜ ಮತ್ತು ಮನುಷ್ಯನ ಹಿತದೃಷ್ಟಿಯಿಂದ ನಮಗಾಗಿ ನಾವಾದರೂ ಈ ಸಮಾಜವನ್ನು ಬದಲಿಸಿಕೊಳ್ಳಲೇ ಬೇಕಲ್ಲವೇ? ಈ ಮೂಲಭೂತ ಪ್ರಶ್ನೆಯಲ್ಲೇ ಕಾಯಕ ಸಿದ್ಧಾಂತದ ಮಹತ್ವಪೂರ್ಣ ಅಂಶಗಳು ಅಡಗಿವೆ. “ನಾ ದೇವನಲ್ಲದೆ ನೀ ದೇವನೇ?” ಎಂದು ವಚನಗಳು ಕರ್ಮಸಿದ್ಧಾಂತವನ್ನು ಮರುಪ್ರಶ್ನಿಸುತ್ತವೆ. ದೇವರ ಕೈಯಲ್ಲಾಗದೇ ಇರುವುದನ್ನು ನಾವು ಸುಧಾರಿಸುತ್ತೇವೆ ಎಂಬುದು ಶರಣರ ದಿಟ್ಟ ಹೆಜ್ಜೆ. ಹಾಗಾಗಿ ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಬಂದದ್ದು ಕಾಯಕ ಸಿದ್ಧಾಂತ! ಕರ್ಮಸಿದ್ಧಾಂತವನ್ನು ಕಲ್ಪಿತ ಅಥವಾ ಮಾನವ ನಿರ್ಮಿತ ಎಂದು ಶರಣರು ಜರಿಯುತ್ತಾರೆ. ಶರಣರಲ್ಲಿ ಕರ್ಮವು ಒಂದು ಭ್ರಮೆ, ಅದು ವಾಸ್ತವವಲ್ಲ. ಕಾಯಕವು ಜಗತ್ತಿನ ವಸ್ತುಸ್ಥಿತಿಯೊಂದಿಗೆ ಬೆರೆತು ಮನುಷ್ಯ ಕುಲದ ಎಲ್ಲಾ ಸಂಕಟಗಳಿಗೆ ಮೈಯೊಡ್ಡಿ ಪರಿಹಾರವನ್ನು ಒದಗಿಸುವಲ್ಲಿ ಪರಿಶ್ರಮ ಹಾಕುತ್ತದೆ.
ಕಾಯಕ ಸಿದ್ಧಾಂತವು ಮಾನವ ಕುಲದಲ್ಲಿ ಅತ್ಯಗತ್ಯವಾಗಿರಬೇಕಾದ ಸಹಬಾಳ್ವೆ, ಸಹಕಾರ, ಸಾಮರಸ್ಯ, ಸರ್ವರಿಗೂ ಸಮಪಾಲು, ಸಮಬಾಳನ್ನು ಪುನರ್ ಸ್ಥಾಪಿಸಿತು. ಜಾತಿ, ಮತ, ಪಂಥಗಳ ಹಂಗು ಮುರಿದು ಮಾನವ ಬದುಕಿನಲ್ಲಿ ಒಬ್ಬರನ್ನೊಬ್ಬರು ಆತುಕೊಂಡು ಬಾಳಲು ಬೇಕಾದ ನಂಬುಗೆ ವಿಶ್ವಾಸಗಳನ್ನು ಕಾಯಕ ಸಿದ್ಧಾಂತ ನಿಜಗೊಳಿಸಿತು. ಸದಾ ಹರಿಯುತ್ತಿರುವ ನೀರು ಹೇಗೆ ಪರಿಶುದ್ಧವಾಗುತ್ತಾ ಹೋಗುತ್ತದೆಯೋ ಹಾಗೆ ಶರಣರ ಚಲನಶೀಲವಾದ ಕಾಯಕ ಈ ಸಮಾಜದ ಕೇಡು, ಕ್ರೌರ್ಯಗಳನ್ನು ತೊಳೆತೊಳೆದು ಸಮಾಜ ಮತ್ತು ವ್ಯಕ್ತಿ ನಿರ್ಭಯವಾಗಿ ಜೀವಿಸುವ ಹಕ್ಕುಗಳನ್ನು ತಂದುಕೊಟ್ಟಿತು.
ಶಾಸ್ತ್ರ ಘನವೆಂಬೆನೆ ಕರ್ಮವ ಭಜಿಸುತ್ತಿದೆ.
ವೇದ ಘನವೆಂಬೆನೆ ಪ್ರಾಣವಧೆಯ ಹೇಳುತ್ತಿದೆ.
ಶ್ರುತಿ ಘನವೆಂಬೆನೆ ಮುಂದಿಟ್ಟು ಅರಸುತ್ತಿದೆ.
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ,
ತ್ರಿವಿಧದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮದೇವನ.
ನಾವಿದುವರೆಗೂ ಕಾಯಕ ಸಿದ್ಧಾಂತಕ್ಕಿರುವ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಗಳಲ್ಲಿ ಕೆಲವನ್ನು ಮಾತ್ರ ನೋಡಿದೆವು. ಹಾಗಾದರೆ ಕಾಯಕ ಸಿದ್ಧಾಂತಕ್ಕೆ ಪಾರಮಾರ್ಥಿಕ ನೆಲೆ ಇಲ್ಲವೇ? ಎಂಬ ಪ್ರಶ್ನೆ ಕೂಡಾ ಮುಖ್ಯವಾದದ್ದೇ.
ಶರಣರ ಪಾರಮಾರ್ಥಿಕ ನೆಲೆಯ ವಿಶಿಷ್ಟತೆ ಅನನ್ಯವಾದದ್ದು. ಅದು ಸ್ವತಂತ್ರ ಶೋಧನೆಯಿಂದ ಕಂಡುಕೊಂಡ ಲೋಕಸತ್ಯ. ಮತೀಯ ಪಂಥಗಳೆಲ್ಲವೂ, ಕಾಣದ ದೇವರ ಕಡೆ ಕೈದೋರಿ ಕೈತೊಳೆದುಕೊಂಡರೆ ಶರಣರು ನಿಸರ್ಗದಲ್ಲಿರುವ ಪ್ರತ್ಯಕ್ಷ ಸತ್ಯದಲ್ಲಿ ತಮ್ಮ ಪಾರಮಾರ್ಥಿಕ ನೆಲೆಯನ್ನು ಕಂಡುಕೊಳ್ಳುತ್ತಾರೆ.
ಶರಣರ ಪಾರಮಾರ್ಥಿಕ ನೆಲೆ ಈ ಅನಂತ ನಿಸರ್ಗಕ್ಕೆ ಕ್ಷಣಕ್ಷಣ ಚಲನಶೀಲತೆಯನ್ನು ಒದಗಿಸುತ್ತಲೇ ಇರುವ ಪ್ರಾಣಾಧಾರ ಚೈತನ್ಯವನ್ನು ಅನುಸಂಧಾನ ಮಾಡುವಲ್ಲಿದೆ. ಪ್ರಾಣಲಿಂಗವು ಶರಣರಿಗೆ ಈ ಅಖಂಡತೆಯ ವರ್ತಮಾನಿಕ ಸತ್ಯ. ಶರಣರಲ್ಲಿ ಈ ಅನುಸಂಧಾನ ಪ್ರಕ್ರಿಯೆ ಪ್ರಾಣಲಿಂಗ ಸಂಬಂಧವೆಂದು ಕರೆಸಿಕೊಂಡಿದೆ. ಪ್ರಾಣಲಿಂಗ ಈ ವಿಶ್ವದ ಸೃಷ್ಟಿಯ ಮೂಲಕಾರಣವಲ್ಲ. ಸದಾ ಬದಲಾಗುತ್ತಲೇ ಇರುವ ವಿಶ್ವದ ವಸ್ತುಸ್ಥಿತಿಯ ಅರಿವು. ನಿಸರ್ಗದ ಅಂತಃಸತ್ವದ ಆಳದಲ್ಲಿ ಆದಿ ಮಧ್ಯಂತ ರಹಿತವಾಗಿ ಅಡಗಿರುವ ಪ್ರಾಣವಿಸ್ಮಯದ ನಿಜ ಬೆಡಗು.
ಪ್ರಾಣಲಿಂಗ ಸಕೀಲ ಸಂಬಂಧ ಎಂತಹ ಗಂಡೆದೆ ಇರುವಂತಹವರಿಗೂ ಸುಲಭ ಸಾಧ್ಯವಲ್ಲ. ಅದು ಸಾಧ್ಯವಾಗಬೇಕಾದರೆ ಶರಣ ತನ್ನಲ್ಲಿರುವ ಎಲ್ಲಾ ಶ್ರದ್ಧೆಯನ್ನು, ಧೈರ್ಯವನ್ನು, ಸತ್ಯವನ್ನು ಒಪ್ಪಿಕೊಂಡು ನಡೆಯಲೇ ಬೇಕಾದ ಮನೋಬಲವನ್ನು ಬಳಸಿ, ಮನಸ್ಸು ಮತ್ತು ಶರೀರಗಳ ಜೊತೆ ಸಾಮರಸ್ಯ ತರಲು ಕಾಯಕ ಮಾಡಬೇಕು. ಇದೊಂದು ಬಗೆಯ ಕಾಯದೊಳಗಣ ಕಾಯಕ. ಅಂತರಂಗದೊಳಗೆ ಚಿತ್ತಶುದ್ಧಿಗಾಗಿ ಮಾಡುವ ಸಂಘರ್ಷವೇ ಶರಣರಲ್ಲಿ ಲಿಂಗಪೂಜೆ ಎನಿಸಿಕೊಂಡಿದೆ. ಅದು ಪ್ರತಿಕ್ಷಣ ಪ್ರತಿದಿನ ನಡೆಯಲೇ ಬೇಕಾದ ಪೂಜೆ. ಚಿತ್ತದ ಮನೋ ಭೂಮಿಕೆಯಲ್ಲಿರುವ ಕ್ರೂರಾತಿ ಕ್ರೂರ ಮೃಗಗಳನ್ನು ಹಿಡಿಹಿಡಿದು ಕೊಲ್ಲುವ ರಣರಂಗವಾಗಿಯೂ ಇದು ಶರಣರಲ್ಲಿ ಅಭಿವ್ಯಕ್ತಿಗೊಂಡಿದೆ. ಈ ಯುದ್ಧದಲ್ಲಿ ಗೆದ್ದರೆ ಪ್ರಾಣಲಿಂಗ, ಸೋತರೆ ಮತ್ತದೇ ಭವಸಂಸಾರದ ಕೊಚ್ಚೆ ಕೊಳೆಯಲ್ಲಿ ಬದುಕುವ ಹಂದಿಯ ಬದುಕು!
ಸಂಸಾರವೆಂಬಡವಿಯಲ್ಲಿ ಹುಲಿಯುಂಟು, ಕರಡಿಯುಂಟು.
ಶರಣನಂಜನಂಜ, ಮಹಾಧೀರ ಶರಣನಂಜನಂಜ,
ಕೂಡಲಸಂಗನ ಶರಣಂಗೆ ನಿರ್ಭಯ.
ಶರಣರ ಪ್ರಕಾರ ಅಂತರಂಗದ ಆಳದಲ್ಲಿರುವ ಐದು ಬಗೆಯ ಶತೃಗಳು ಬಹಳ ಅಪಾಯಕಾರಿ. ಆ ಶತೃಗಳನ್ನು ಪೂರ್ಣವಾಗಿ ಹತಮಾಡದೆ ಮುಂದಿನ ನಡಿಗೆಗೆ ಹಾದಿಯಿಲ್ಲ. ಕಾಯಗುಣ ಮನೋಗುಣಗಳನ್ನು ಉತ್ಪಾದಿಸುವ ಐದು ಶತೃಗಳು ನಮ್ಮೊಳಗೇ ಇದ್ದಾರೆ.
ಕಾಯಗುಣ, ಮನೋಗುಣಗಳನ್ನು ಶರಣರು ಪ್ರಪಂಚು, ಕದಳಿ, ಹಿಂದಿನದು, ಮಲ, ಚಿತ್ತ, ಸಂಸಾರ, ಭ್ರಾಂತು, ಭವ ಎಂದು ವಿಭಿನ್ನ ಬಗೆಯಾಗಿ ವಿವರಿಸಿಕೊಟ್ಟಿದ್ದಾರೆ.
ಕಾಯಗುಣ, ಮನೋಗುಣಗಳು ಒಂದೇನಾ, ಬೇರೆಬೇರೇನಾ? ಎಂಬ ಅನುಮಾನ ಕೂಡಾ ಇದೆ. ಇವೆರಡನ್ನು ಒಂದೆಂತಾಗಲಿ, ಬೇರೆ ಬೇರೆ ಅಂತಾಗಲಿ ಹೇಳಲಾಗದಿದ್ದರೂ ಇವು ಒಂದನ್ನೊಂದು ಅನುಸರಿಸುತ್ತವೆ. ಬೇರಿನ ಕಾರ್ಯವನ್ನು ಮರದ ಮೇಲಿರುವ ಚಿಗುರೆಲೆ ಅನುಸರಿಸುವಂತೆ ಮನೋಗತವಾಗಿರುವ ಗುಣಗಳನ್ನು ಕಾಯವು ಕಾರ್ಯರೂಪಕ್ಕೆ ತರುತ್ತದೆ. ಮನಸ್ಸು ಮತ್ತು ಶರೀರ ಬೇರೆ ಬೇರೆ ಅಲ್ಲದಿದ್ದಾಗ್ಯೂ ಮನಸ್ಸು ಹೇಳುವುದನ್ನೆಲ್ಲಾ ಶರೀರ ಪಾಲಿಸುತ್ತದೆ. ಆದ್ದರಿಂದ ಅದು ಮನಸ್ಸಿನ ಗುಲಾಮನಂತೆ ವರ್ತಿಸುತ್ತದೆ. ಹಾಗಾದರೆ ಮನಸ್ಸು ಒಂದೇನಾ ಅಂತ ನೋಡಿದರೆ ಅಲ್ಲಿ ಐದು ಜನರು ಒಂದು ಕಾಯದಲ್ಲಿ ಆಳ್ವಿಕೆ ಮಾಡುತ್ತಿವೆ. ಆಳ್ವಿಕೆ ಎನ್ನುವ ಶಬ್ದ ನಿಯಂತ್ರಣ, ಪರಿಪಾಲನೆ, ಅಥವಾ ಆಧಿಪತ್ಯ ಎಂಬ ಪದಗಳಿಗೆ ಸಮಾನವಾದದ್ದು. ವಚನಗಳ ರೀತ್ಯಾ ನಮ್ಮ ಕಾಯ ಅಥವಾ ದೇಹವನ್ನು ನಿಯಂತ್ರಿಸುತ್ತಿರುವ ಮನಸ್ಸು ಐದು ಬಗೆಯ ಚಿತ್ತಗಳಿಂದಾಗಿದೆ. ಐದು ಚಿತ್ತಗಳು ಐದು ಬಗೆಯ ಗಮನಗಳು ಎಂದು ನೆನಪಿರಲಿ. ಐದು ಇಂದ್ರಿಯಗಳಿಂದಾವೃತವಾಗಿರುವ ಒಂದು ದೇಹವನ್ನು ಐದು ಚಿತ್ತಗಳಿಂದಾದ ಮನಸ್ಸು ನಿಯಂತ್ರಿಸುತ್ತಿದೆ. ಈಗ ಇಲ್ಲಿ ಎರಡು ಕಾಯಗಳಿವೆ. ಒಂದು ಮನೋಕಾಯ, ಇನ್ನೊಂದು ದೇಹಕಾಯ. ಮನೋಕಾಯವು ಐದು ಚಿತ್ತಗಳ ಗುಂಪು. ದೇಹ ಕಾಯ ಐದು ಇಂದ್ರಿಯಗಳ ಗುಂಪು. ಐದು ಚಿತ್ತಗಳ ಗುಂಪಿನ ಮನಸ್ಸು, ಐದು ಇಂದ್ರಿಯಗಳಿಂದ ಕೂಡಿದ ದೇಹವನ್ನು ನಿಯಂತ್ರಿಸುತ್ತಿದೆ. ಅರ್ಥಾತ್ ಗುಲಾಮನನ್ನಾಗಿಸಿಕೊಂಡಿದೆ.
ಒಂದೆತ್ತಿಗೈವರು ಗೊಲ್ಲರು,
ಅಯ್ವರಯ್ವರಿಗೆ ಐದೈದಾಗಿ ಐವರಾಳಯ್ಯಾ.
ತಮ್ಮ ತಮ್ಮಿಚ್ಛೆಗೆ ಹರಿಹರಿದಾಡಿ
ತಾವು ಕೆಟ್ಟು, ಎತ್ತನು ಕೆಡಿಸಿದರಯ್ಯಾ.
ಎತ್ತಿನ ಹೊಯ್ಲಿನ್ನಾರಿಗೆ ಹೇಳುವೆ
ಕೂಡಲಸಂಗಮದೇವಯ್ಯಾ.
ಈ ವಚನವನ್ನು ಓದುವಾಗ ‘ಗೊಲ್ಲರು’ ಎಂಬ ಪದ ನಿಯಂತ್ರಿಸುವವರು ಎಂದಾಗುತ್ತದೆ. ಇಲ್ಲಿ ಎತ್ತು ದುಡಿಮೆಯ ರೂಪಕವಾಗಿರುವುದರಿಂದ ದುಡಿಯುವ ಕಾಯವನ್ನೇ ಹೇಳುತ್ತಿದೆ ಅಲ್ಲವೇ? ಐದು ಇಂದ್ರಿಯಗಳಿಂದ ಕೂಡಿದ ಈ ದೇಹವೆಂಬ ಎತ್ತನ್ನು ಇನ್ನೈವರು ಆಳುತ್ತಾರೆ ಎಂಬುದು ಒಂದಾದರೆ, ಆ ಐವರು ತಮಗೆ ಇಚ್ಛೆ ಬಂದಂತೆ ಹರಿದಾಡಿ ತಾವೂ ಕೆಟ್ಟು ಎತ್ತನ್ನೂ ಕೆಡಿಸಿದರು ಎಂದಾಯ್ತು. ಈ ಕೆಡಿಸಿದ ಫಲ ಕೆಡಿಸಿದವರಿಗೂ ಬಂತು, ಕೆಟ್ಟ ದೇಹಕ್ಕೂ ಬಂತು. ಈ ವಚನವು ಚಂಚಲವಾಗಿರುವ ಐದು ಚಿತ್ತಗಳಿಂದಾದ ಮನೋಗುಣಗಳು ಕಾಯಗುಣಗಳಲ್ಲಿ ಹೇಗೆ ಕಾರ್ಯ ರೂಪವನ್ನು ಪಡೆದುಕೊಳ್ಳುತ್ತವೆ ಎಂಬುದನ್ನು ವಿವರಿಸಿರುವ ರೀತಿ ಅದ್ಭುತವಾದ ಮನೋವೈಜ್ಞಾನಿಕ ವಿಶ್ಲೇಷಣೆಯಂತೆ ಕೂಡ ಕಾಣುತ್ತದೆ.
ಈಗ ಶರಣರು ಗುರುತಿಸಿದ ಐದು ಚಿತ್ತಗಳಾವುವು? ನೋಡೋಣ. ಈ ಐದು ಚಿತ್ತಗಳಿಂದ ಕೂಡಿದ ಮನಸ್ಸನ್ನೇ ಶರಣರು ಭವಸಂಸಾರ ಎಂದು ಕರೆದದ್ದು.
1. ಸದಾ ತುಡಿಯುತ್ತಿರುವ ಸುಖಾಪೇಕ್ಷೆಗಳು/ ಆಸೆ
2. ತಲ್ಲಣಿಸುತ್ತಿರುವ ದ್ರೋಹ
3. ಸೋಮಾರಿತನ/ ಜಡತೆ
4. ಅತೃಪ್ತತೆ ಮತ್ತು ಪಶ್ಚಾತ್ತಾಪ/ ಚಂಚಲತೆ
5. ಸಂದೇಹ/ ದಂದುಗ
ಸದಾ ತುಡಿಯುತ್ತಿರುವ ಸುಖಾಪೇಕ್ಷೆಗಳು/ ಆಸೆ:
ತಾನು ಈ ಜಗತ್ತಿನೊಂದಿಗೆ ವ್ಯವಹರಿಸುವಲ್ಲಿ ‘ನಾನು’ ವಿಶಿಷ್ಟ ಅಥವಾ ಶ್ರೇಷ್ಠ ಎಂಬುದನ್ನು ಅತಿಯಾಗಿ ಗಮನಕ್ಕೆ ತೆಗೆದುಕೊಳ್ಳುವ ಮೂಲದಿಂದ ಆಸೆಯ ಚಿತ್ತ ಜನ್ಮಪಡೆಯುತ್ತದೆ. ತನ್ನ ಶ್ರೇಷ್ಠತೆಯನ್ನು ನಿಜಗೊಳಿಸಲು ಅದಕ್ಕೆ ಪೂರಕವಾಗಿ ಮತ್ತೊಂದು ಬೇಕು. ತಾನು, ಎದಿರು ಎಂಬ ಎರಡು ಪ್ರತ್ಯೇಕತೆಗಳು ಉಂಟಾದಾಗ ತಾನು ಎದಿರನ್ನು ಸುಖಿಸಲು ಬಯಸುತ್ತದೆ. ಈ ಬಯಕೆ ಆಸೆ-> ಪ್ರಯತ್ನ -> ತೃಪ್ತಿ ಎಂಬ ಎಂದೂ ಕೊನೆಗೊಳ್ಳದ ಚಕ್ರಕ್ಕೆ ಸಿಲುಕಿ ಜೀವನ ಪರ್ಯಂತವೆಲ್ಲಾ ಅದರ ಗಮನಕ್ಕಾಗಿ, ಸಮಯ, ಶಕ್ತಿ ವ್ಯರ್ಥವಾಗುತ್ತಾ ಸಾಗುತ್ತದೆ. ತನ್ನ ಎದುರಿನಲ್ಲಿರುವ ಸಮಸ್ತ ಲೋಕವೂ ತನ್ನ ಅನುಭವಿಸುವಿಕೆಗಾಗಿಯೇ ಇದೆ ಎಂಬ ಭ್ರಾಂತಿ ಲೋಕ ಸತ್ಯವನ್ನು ಅರಿಯುವ ಬದಲು ಲೋಕ ಸಂಕಷ್ಟಕ್ಕೆ ಗುರಿಯಾಗಿಸುತ್ತದೆ. ವಸ್ತು ಜಗತ್ತಿನ ಸಮಸ್ತ ಜೀವಿ ಹಾಗೂ ವಸ್ತುಗಳಲ್ಲಿ ಒಂದರಿಂದ ಮತ್ತೊಂದನ್ನು ಪ್ರತ್ಯೇಕಿಸಲಾಗದಂತೆ ಎಲ್ಲರೂ ಎಲ್ಲವನ್ನೂ ಒಳಗೊಂಡಿರುವುದರಿಂದ, ಎರಡು ಅಥವಾ ಇನ್ನಾವುದೇ ಸಂಖ್ಯೆಯ ಪ್ರತ್ಯೇಕತೆಗಳು ಇಲ್ಲಿ ಸಾಧ್ಯವಿಲ್ಲ.
2. ತಲ್ಲಣಿಸುತ್ತಿರುವ ದ್ರೋಹ
ತನ್ನ ಶ್ರೇಷ್ಠತೆ ಅಥವಾ ಸುಖಾಪೇಕ್ಷೆ ಸಾಧ್ಯವಿಲ್ಲವೆನಿಸಿದಾಗ ಅಥವಾ ತನ್ನ ಶ್ರೇಷ್ಠತೆಯನ್ನು ಎದಿರು ಸ್ವೀಕರಿಸದಿದ್ದಾಗ, ದ್ವೇಷದ, ಅಸೂಯೆಯ, ಎದುರನ್ನು ಹಿಂಸಿಸುವ ಚಿತ್ತ ಹುಟ್ಟಿಕೊಳ್ಳುತ್ತದೆ. ಈ ಚಿತ್ತ ಭಾವಾವೇಶಗಳ ಮೂಲದ್ದು. ತನ್ನ ಆಲೋಚನೆಗಳು ಸಫಲವಾದಲ್ಲಿ ಈ ಚಿತ್ತ ಸಂತೋಷಪಡುತ್ತದೆ. ಇಲ್ಲವೇ ದುಃಖಕ್ಕೀಡಾಗುತ್ತದೆ. ಯಾವುದೇ ಭಾವನೆಗಳು ಕ್ಷಣಿಕವಾಗಿರುವುದರಿಂದ ಅವುಗಳನ್ನು ನಿಜವೆಂದು ಭಾವಿಸುವ ಚಿತ್ತಕ್ಕೆ ಲೋಕಸತ್ಯ ಎಂದಿಗೂ ಅರಿವಾಗದು.
3. ಸೋಮಾರಿತನ/ ಜಡತೆ
ತನ್ನಲ್ಲಿರುವ ಈ ಮೇಲಿನ ಚಿತ್ತಗಳಿಗೆ ಅನುಕೂಲದ ಕೊರತೆಯಾದಾಗ ಇಡೀ ಚಿತ್ತದಲ್ಲಿ ಬದುಕಿನ ಕುರಿತು ಹತಾಶೆ ಮೂಡಿಬಿಡಬಹುದು. ಅಶಾಶ್ವತವಾದ ಈ ಬದುಕಿನಲ್ಲಿ ನಾನ್ಯಾಕೆ ಯಾವ್ಯಾವುದಕ್ಕೋ ಪ್ರಯತ್ನ ಮಾಡಿ ಸೋಲಬೇಕು? ಎಂಬ ಅಭಿಪ್ರಾಯಗಳು ಮೂಡಿ ಸೋಮಾರಿತನದಿಂದ ಜಡವಾಗಿದ್ದು ಬಿಡಬಹುದು. ಇದೊಂದು ಸ್ವಾನುಕೂಲ ಭ್ರಮೆ. ಇದು ನಿಜವಲ್ಲ. ಜಗತ್ತಿನ ಪ್ರತಿ ಕಣವೂ ತನ್ನ ಜೈವಿಕ ಇರುವಿಕೆಗಾಗಿ ಹೋರಾಟ ಮಾಡುತ್ತಿರುತ್ತದೆ. ಈ ಹೋರಾಟದಲ್ಲಿ ತಾನು ಬದುಕಿ, ಸುತ್ತಲಿರುವುದನ್ನು ಬದುಕಿಸುತ್ತದೆ. ಆದ್ದರಿಂದ ನಾವೂ ಹೋರಾಟ ಮಾಡುತ್ತಿರಲೇ ಬೇಕಾಗುತ್ತದೆ.
4. ಅತೃಪ್ತತೆ ಮತ್ತು ಪಶ್ಚಾತ್ತಾಪ:
ಕೊನೆಗೊಳ್ಳದಾ ಸುಖಾಪೇಕ್ಷೆಗಳಲ್ಲಿ ಅತೃಪ್ತತೆಗಳಿವೆ, ಪಶ್ಚಾತ್ತಾಪಗಳಿರುತ್ತವೆ. ಕಳೆದು ಹೋಗಿರುವ ಅವುಗಳ ಕುರಿತು ಯೋಚಿಸುವುದು ಸಲ್ಲ. ಪ್ರತಿ ವರ್ತಮಾನದ ಕ್ಷಣ ಹೊಸದಾಗಿ ಹೊಮ್ಮುತ್ತಿರುತ್ತದೆ. ಅದನ್ನು ಗ್ರಹಿಸಿ, ಸಾಗಬೇಕು.
5. ದಂದುಗ/ ಸಂದೇಹ
ಸಂತೆಯನ್ನು ಹೋಲುವ ಈ ಸಂಸಾರದಲ್ಲಿ ಮಿಥ್ಯ ಯಾವುದೋ, ಸತ್ಯ ಯಾವುದೋ ತಿಳಿಯದೇ ಚಿತ್ತ ಪ್ರಕ್ಷಿಪ್ತವಾಗಬಹುದು. ಬದುಕು ಕತ್ತಲಾವರಿಸಿಕೊಳ್ಳಬಹುದು. ಗುರುವನ್ನು ನಂಬಿ ಆ ಹಾದಿಯಲ್ಲಿ ಮುನ್ನುಗ್ಗಲು ತನ್ನ ಸಾಮರ್ಥ್ಯ, ಶಕ್ತಿ, ಸಮಯವನ್ನು ಉಪಯೋಗಿಸಿ ಮುನ್ನಡೆಯಬೇಕು.
ಈ ಎಲ್ಲಾ ವಿವರಣೆಯನ್ನು ಮತ್ತೊಂದು ರೀತಿಯಲ್ಲಿ ಹೇಳುತ್ತದೆ ಹಡಪದ ಅಪ್ಪಣ್ಣನವರ ಪತ್ನಿ ಲಿಂಗಮ್ಮ ತಾಯಿಯವರ ಈ ವಚನ-
ಆಸೆಯುಳ್ಳನ್ನಕ್ಕ ರೋಷ ಬಿಡದು;
ಕಾಮವುಳ್ಳನ್ನಕ್ಕ ಕಳವಳ ಬಿಡದು;
ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು;
ಭಾವವುಳ್ಳನ್ನಕ್ಕ ಬಯಕೆ ಸವೆಯದು;
ನಡೆಯುಳ್ಳನ್ನಕ್ಕ ನುಡಿಗೆಡದು.
ಇವೆಲ್ಲವು ಮುಂದಾಗಿದ್ದು ಹಿಂದನರಿದೆನೆಂಬ
ಸಂದೇಹಿಗಳಿರಾ, ನೀವು ಕೇಳಿರೋ.
ನಮ್ಮ ಶರಣರು ಹಿಂದ ಹೇಗೆ ಅರಿದರೆಂದಡೆ;
ಆಸೆಯನಳಿದರು, ರೋಷವ ಹಿಂಗಿದರು,
ಕಾಮನ ಸುಟ್ಟರು, ಕಳವಳವ ಹಿಂಗಿದರು,
ಕಾಯಗುಣವಳಿದರು, ಜೀವನ ಬುದ್ಧಿಯ ಹಿಂಗಿದರು,
ಭಾವವ ಬಯಲುಮಾಡಿದರು, ಬಯಕೆಯ ಸವೆದರು.
ಹಿಂದನರಿದು ಮುಂದೆ ಲಿಂಗವೆ ಗೂಡಾದ ಶರಣರ ಈ ಸಂದೇಹಿಗಳೆತ್ತ ಬಲ್ಲರು,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?
ಮನೋಗುಣಗಳು ಕಾಯಗುಣಗಳಲ್ಲಿ ಕಾರ್ಯ ರೂಪಕ್ಕಿಳಿಯುವ ಪ್ರಸಂಗವನ್ನು ಈ ವಚನ ಬಹಳ ಚೆನ್ನಾಗಿ ನಿರೂಪಿಸುತ್ತದೆ. ಶರಣ ಪಥದಲ್ಲಿ ಸಾಗುವ ಮನಸ್ಸಿರುವ ಓದುಗರು ಸ್ವಲ್ಪ ಶ್ರಮ ಹಾಕಿ, ಈ ವಚನವನ್ನು ನನ್ನ ವಿವರಣೆಗಳಿಗೆ ಅನುಗುಣವಾಗುವಂತೆ ಅನ್ವಯಿಸಿಕೊಳ್ಳಬಹುದು. ಮನೋಗುಣದಲ್ಲಿ ಹುಟ್ಟುವ ಆಸೆ, ಕಾಯಗುಣದಲ್ಲಿ ಕಾಮವಾಗಿ, ರೋಷವಾಗಿ, ಕಳವಳ(ದ್ವಂದ್ವ)ವಾಗಿ, ಮತ್ತೆ ಬಯಕೆ ಭಾವವಾಗಿ ರೂಪು ಪಡೆಯುವ ಬಗೆ ಇಲ್ಲಿ ಸ್ಪಷ್ಟವಾಗಿ ರೂಪಿಸಲ್ಪಟ್ಟಿದೆ. ಇದೆಲ್ಲವೂ ಬಹಳ ಕಷ್ಟ, ನಮಗೇಕೆ, ಏನು ಬರುತ್ತೋ ಅದು ಬರಲಿ, ಜೀವನವನ್ನು ಹೀಗೆ ನಡೆಸಿ, ಹಾಗೆ ಹೋಗಿ ಬಿಡೋಣವೆಂದು ಅನಿಸಿಬಿಡಬಹುದು. ಆದರೆ ಅತ್ಯಂತ ಸುಲಭವಾಗಿ ಶರಣ ಮಾರ್ಗದಲ್ಲಿ ನಡೆಯುವ ಬಗೆಯನ್ನೂ ಶರಣರು ಹೇಳಿ ಹೋಗಿದ್ದಾರೆ:
ಬೇಕೆಂಬುದು ಕಾಯಗುಣ,
ಬೇಡೆಂಬುದು ವೈರಾಗ್ಯಗುಣ.
ಬೇಕೆಂಬುದು ಇನಿತಿಲ್ಲ;
ಬೇಡೆಂಬುದು ಇನಿತಿಲ್ಲ.
ಈ ಉಭಯವ ಅತಿಗಳೆದು ಭೋಗಿಸಬಲ್ಲಡೆ
ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣನೆಂಬೆ.
ಬಂಧುಗಳೇ… ನಾವು ಈ ಲೇಖನದಲ್ಲಿ ಅಂತರಂಗ ಶುದ್ಧಿಯ ಕುರಿತು ಪ್ರಾರಂಭಿಸಿದೆವು. ಅಂತರಂಗ ಶುದ್ಧಿ ಎಂದರೆ ಐದು ಬಗೆಯ ಚಿತ್ತಗಳು ತಣಿದ ಸ್ಥಿತಿ. ಈ ತಣಿದ ಸ್ಥಿತಿಯಲ್ಲಿ ಮನಸ್ಸು ಒಂದಾಗಿರುತ್ತದೆ (ಅದ್ವಯ). ಐದು ಚಿತ್ತಗಳ ಚಲನ ಪ್ರವೃತ್ತಿಗಳು ನಿಲುಗಡೆಯಾದ ಸ್ಥಿತಿ ಕೂಡಾ ಹೌದು. ಬಹುಶಃ ಜಗತ್ತಿನ ಎಲ್ಲಾ ತಲ್ಲಣಗಳ, ದುಃಖಗಳ, ಭವಗಳ ಮೂಲ ಈ ಐದು ಚಿತ್ತವೇ ಆಗಿದೆ. ಶರಣರು ನಡೆದ ಈ ಹಾದಿ ಎಂದೆಂದಿಗೂ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಸಹಾಯಕಾರಿ ಎಂದುಕೊಂಡಿದ್ದೇನೆ.
ಐದು ಮನವ ಕುಟ್ಟಿ ಒಂದು ಮನವ ಮಾಡು, ಕಂಡಾ ಮದವಳಿಗೆ!
ಇದು ನಮ್ಮ ಬಾಳುವೆ, ಮದವಳಿಗೆ!
ಇದು ನಮ್ಮ ವಿಸ್ತಾರ, ಮದವಳಿಗೆ!
ಮದವಳಿದು ನಿಜವುಳಿದ ಬಳಿಕ ಅದು ಸತ್ಯ ಕಾಣಾ,
ಕೂಡಲಸಂಗಮದೇವಾ.
(ಮುಂದುವರಿಯುವುದು)
Comments 23
ಕೆ ಎಸ್ ಮಲ್ಲೇಶ್
Jun 15, 2024ಪದ್ಮಾಲಯ ಸರ್, ನಿಮ್ಮ ಲೇಖನ ಅದೆಷ್ಟು ಸಮರ್ಥವಾಗಿ ಕಾಯಕದ ಮಹತ್ವದ ಬಗ್ಗೆ ಸಾಲು ಸಾಲಿನಲ್ಲೂ ತಿಳಿಸುತ್ತದೆ, ಎಚ್ಚರಿಸುತ್ತದೆ, ಕಲಿಸುತ್ತದೆ! ಓದುತ್ತಿದ್ದಂತೆಲ್ಲ ನನ್ನೊಳಗಿನ ಕೊರತೆ ಎದ್ದು ಎದುರು ನಿಂತಂತಾಯಿತು. ಸಮಾಜಮುಖಿಯಾಗುವಲ್ಲಿ ಕೇವಲ ವ್ಯಕ್ತಿಗತ ನೆಲೆಗಟ್ಟಿನೊಳಗಿದ್ದರಷ್ಟೇ ಸಾಲದು ಎನ್ನುವ ನಿಮ್ಮ ವಿಚಾರ ನನ್ನೊಳಗೊಮ್ಮೆ ನೋಡಿಕೊಳ್ಳುವಂತಾಯಿತು.
ಇತಿಹಾಸದಲ್ಲಿ ಧಾರ್ಮಿಕ ಮಾರ್ಗಗಳ ಮಗ್ಗಲುಗಳನ್ನು, ಅಬ್ಬಾ, ಅದೆಷ್ಟು ಯಥಾವತ್ತಾಗಿ ನಿರೂಪಿಸುತ್ತೀರಿ.
ನನಗೆ ನಿಮ್ಮ ವಾಕ್ಯಗಳಲ್ಲಿನ ವಿಶಿಷ್ಟ ಪದಗಳ ಸಂಯೋಜನೆ ಔಚಿತ್ಯಪೂರ್ಣವೆನಿಸಿ ಮನಸ್ಸನ್ನು ಸೂರೆಗೊಂಡದ್ದು ನಿಜ. ಅದಕ್ಕಿಂತಲೂ ಹೆಚ್ಚಾಗಿ ಆ ವಾಕ್ಯಗಳೇ ಚಾಟಿಯ ಹಗ್ಗವೆನಿಸಿ ಏಟುಕೊಟ್ಟದ್ದೂ ನಿಜ. ಅವು ನಿಜಗುರುವೊಬ್ಬ ಶಿಷ್ಯನ ತಪ್ಪಿಂಗೆ ಮುನಿದು ಕೊಟ್ಟವೇ ಹೊರತು ಪ್ರಾಣಕ್ಕಲ್ಲ. ಅವು ಮನಸ್ಸನ್ನು ಎಚ್ಚರಗೊಳಿಸುತ್ತವೆ. ಶಿಲೆ ಶಿಲ್ಪವಾಗುವ ಬಗೆಯಲ್ಲಿ.
ಮಂದಿಯ ಬಹುಭಾಗವೆಲ್ಲ ಹಿಡಿಯಬಾರದ ದಾರಿಹಿಡಿದು ಅಯೋಮಯ ಸ್ಥಿತಿಯೆಡೆಗೆ ಮುನ್ನುಗ್ಗುತ್ತಿರುವಾಗ ವ್ಯಕ್ತಿಯಾಗಿ ಹೇಗೆ ಮುಂದುವರೆಯಬೇಕು ಎನ್ನುವ ದೊಡ್ಡ ಪ್ರಶ್ನೆ ಕಾಡುತ್ತದೆ.
ಹೀಗಿದ್ದಾಗಲೂ ನನ್ನೊಳಗನ್ನೇ ಇನ್ನಷ್ಟು ಹಸನು ಮಾಡಿಕೊಳ್ಳಬೇಕು ಎನ್ನುವ ನಿಲುವು ಸರಿಯೆನ್ನಿಸಿದರೂ ಸಾತ್ವಿಕತೆ ಮೌನವಾದಷ್ಟೂ ಸಮಾಜದಲ್ಲಿ ವಿಷಮತೆ ವಿಜೃಂಭಿಸುತ್ತದೆ ಎನ್ನುವುದು ನೋವುತರುತ್ತದೆ.
ಮಲ್ಲೇಶ್
Eshwsr Kadol
Jun 16, 2024ಶರಣರಾದ ಪದ್ಮಾಲಯ ನಾಗರಾಜ ಅವರ ಲೇಖನಗಳನ್ನು ಓದುವುದೇ ವಿಭಿನ್ನವಾದ ಅನುಭವ. ಅವರ ವಿಚಾರಗಳು ವಿನೂತನವಾಗಿದ್ದು, ವಚನಗಳ ನಮ್ಮ ಸಾಮಾನ್ಯ ತಿಳುವಳಿಕೆಯನ್ನು ಬೇರೆ ದಿಕ್ಕಿಗೇ ಒಯ್ಯುತ್ತವೆ….. ಶರಣು ಸರ್👏🏾
ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.
Jun 17, 2024ಬಯಲು ರೆಗ್ಯುಲರ್ ಆಗಿ ಓದುತ್ತಿದ್ದೇನೆ…
ಹೆಸರೇ ಹೇಳುವಂತೆ ಆ ಬಯಲು ನಮ್ಮೆಲ್ಲರ ಓರೆ ಕೋರೆ ಕನ್ನಡಿಯಂತೆ ತೋರಿಸಿ ಹೀಗಿದ್ದೀರಿ… ಮುಂದೆ ಹೇಗೆ ಸಾಗುತ್ತೀರಿ ಯೋಚಿಸಿ ಗಂಭೀರ ಚಿಂತನೆಗೆ ಹಚ್ಚುತ್ತದೆ.. ಎಲ್ಲವ ಸಮಗ್ರ ಒಳಗೊಳ್ಳುತ್ತದೆ.
ಪದ್ಮಾಲಯ ನಾಗರಾಜ್ ಅಣ್ಣಾವ್ರು ನಮಗೆ ಸರಳ, ಇದರಲ್ಲೇನಿದೆ ಅನ್ನುವ ವಚನವ ವಿವಿಧ ಆಯಾಮಗಳಲ್ಲಿ ಬಿಡಿಸುತ್ತಾ ತೋರಿದಾಗ, ಓಹ್ ಮೈ ಗಾಡ್.. ಹೀಗೂ ಉಂಟೇ? ಇದ್ಯಾವುದೂ ನನಗೆ ಹೋಳಿಲೇ ಇಲ್ವಲ್ಲ ಅಂತ ಪರಮಾಶ್ಚರ್ಯ, ಪರಮ ಅನಂದ, ಪಾವಿತ್ರ್ಯ ಭಾವ ಎಲ್ಲಾ ಒಟ್ಟಿಗೇ ಮೂಡುತ್ತವೆ..
ಅವರಿಗೆ ಧನ್ಯವಾದ ಹಾಗೂ ಕೃತಜ್ಞತೆಗಳನ್ನು ಹೇಗೆ ಹೇಳಬೇಕು ಗೊತ್ತಾಗುತ್ತಿಲ್ಲ.
ಡಿ ಪಿ ಪ್ರಕಾಶ್
Jun 17, 2024ಲೇಖನ ಸೊಗಸಾಗಿ ಪ್ರಾರ೦ಭವಾಗಿದೆ. ಕಾಯಕ ತತ್ವ ಹೇಗೆ ಲೌಕಿಕ ಮತ್ತು ಅಲೌಕಿಕ ಎ೦ಬ ಪರಿಕಲ್ಪನೆಗಳನ್ನು ಅಳಸಿಹಾಕಿ ವ್ಯಷ್ಟಿ ಹಾಗೂ ಸಮಷ್ಟಿಗಳನ್ನು ಒ೦ದರೊಳಗೊ೦ದು ಸ್ಥಾಪಿಸುವ ಪ್ರಬಲ ಶಕ್ತಿ ಎ೦ಬುದನ್ನು ತೋರಿಸಲು ಅದರ ಹೊಸ್ತಿಲ ಮು೦ದೆ ಓದುಗರನ್ನು ತ೦ದು ನಿಲ್ಲಿಸಿದ್ದೀರಿ. ಮಧ್ಯಯುಗೀನ ಆಳ್ವಿಕೆ ಹಾಗೂ ಅದರ ಜೀವ ವಿರೋಧಿ ನಿಲುವನ್ನು ಮನ ಮುಟ್ಟುವ೦ತೆ ತಿಳಿಸಿದ್ದೀರಿ. ರಾಜ ಸತ್ತೆ ಹಾಗೂ ಪುರೋಹಿ ಮನದಿ೦ದ ನಿರ್ಮಿತಗೊ೦ಡ ಸಾ೦ಸ್ಕೃತಿಕ ವಲಯಗಳಲ್ಲಿ ಹುಟ್ಟು ಪಡೆಯುವ ಅಸಹಜ ಜೀವನಕ್ರಮ ಹೇಗೆ ಅಮಾನವೀಯವಾದದ್ದು ಎ೦ಬುದನ್ನು ಮನೋಜ್ಞವಾಗಿ ಚಿತ್ರಿಸಿದ್ದೀರಿ. ಇವಿಷ್ಟೂ ಮುಖ್ಯ ವಿಷಯಕ್ಕೆ ಓದುಗರನ್ನು ಕೊ೦ಡೊಯ್ಯುವಲ್ಲಿ ಹಾಕಿಕೊಟ್ಟ ಭೂಮಿಕೆಯೇ ಸರಿ. ಆದರೆ ಕಾಯಕ ಸಿದ್ಧಾ೦ತದ ಹ೦ದರ ಹಾಗೂ ಅದರಲ್ಲಡಗಿರುವ ಪರಿವರ್ತನಾ ಶಕ್ತಿಯ ಬಗ್ಗೆ ಆಸಕ್ತ ಓದುಗರಿಗೆ ಪರಿಚಯಿಸುವ ಕೆಲಸ ಹಾಗೆ ಉಳಿದಿದೆ ಎ೦ಬುದು ನನ್ನ ಅಭಿಪ್ರಾಯ. ಬಹುಶಃ ಪುಸ್ತಕ ರೂಪದಲ್ಲಿ ತರಬೇಕೆ೦ದು ಉಳಿಸಿಕೊ೦ಡಿದ್ದೀರೇನೋ(?) ಅಥವಾ ಸದರಿ ಲೇಖನ ಮೊದಲನೇ ಕ೦ತಿನದೆ೦ದು ಸೂಚಿಸಲು ಬಯಲು ಸ೦ಪಾದಕಿ ಮರೆತಿರಬಹುದೇನೋ(?) ಅದೇನೇ ಇರಲಿ ಕೈಗೆತ್ತಿಕೊ೦ಡ ಈ ಮಹಾನ್ ಸಿದ್ಧಾ೦ತದ ಒಳ-ಹೊರಗು ಎಲ್ಲವೂ ನಿಮ್ಮ ಸ್ಪಷ್ಟ ಬರವಣಿಗೆಯಲ್ಲಿ ಮೂಡಿಬರಲಿದೆಯೆ೦ದು ನ೦ಬಿದ್ದೇನೆ.
ಕಾಯಕ ಸಿದ್ಧಾ೦ತ ಮಾನವ ಇತಿಹಾಸದಲ್ಲೇ ಒ೦ದು ಮಹತ್ತರ ತಿರುವು. ಸಮಾಜ ಚಲನಶೀಲವಾಗಬೇಕೆ೦ದರೆ ಮೊದಲು ನಮ್ಮ ಆಲೋಚನೆಗಳು ಪ್ರಗತಿಶೀಲವಾಗಿರಬೇಕು ಎ೦ಬುದನ್ನು ಬಸವಣ್ಣನವರು ತೋರಿಸಿಕೊಟ್ಟರು. ಹೇಗೆ ನೂಲಿನ೦ತೆ ಸೀರೆಯೋ ಹಾಗೆ ವ್ಯಕ್ತಿಯ೦ತೆ ಸಮಾಜ ಎ೦ಬುದನ್ನು ಬಹು ಸೂಕ್ಷ್ಮವಾಗಿ ಅರಿತಿದ್ದರಿ೦ದಲೇ ಕಾಯಕ ಮತ್ತು ದಾಸೋಹ ಗಳೆ೦ಬ ಸಮ್ಯಕ್ ಸೂತ್ರಗಳನ್ನು ವ್ಯಕ್ತಿ ಕೇ೦ದ್ರಿತ ಮಾಡಿ ಅದರ ಹರವಿಗೆ ಸಮಾಜವನ್ನು ಆನಿಸಿ ನಿಲ್ಲಿಸುತ್ತಾರೆ ಬಸವೇಶ್ವರರು.
ಕಾಯಕ ಪ್ರಕೃತಿಯು ವ್ಯಕ್ತಿಯಲ್ಲಿ ಪ್ರಗತಿಶೀಲತೆ (Progressiveness)ಯನ್ನು ನೆಲೆಗೊಳಿಸುತ್ತದೆ. ಕಾಯಕವು ವ್ಯಕ್ತಿಯ ಪರಾವಲ೦ಬಿ ಗುಣವನ್ನು ನಾಶಪಡಿಸುವುದರ ಜೊತೆಗೆ ಅವನಲ್ಲಿ ಜವಾಬ್ದಾರಿಯನ್ನು ಬೆಳೆಸುತ್ತದೆ. ತನಗೆ ದಕ್ಕಿದ ಅವಕಾಶದಲ್ಲಿಯೇ ತನ್ನ ತನು-ಮನವನರ್ಪಿಸಿ ಶ್ರದ್ಧೆಯಿ೦ದ ಕೆಲಸ ಮಾಡುವ೦ತೆ ಮಾಡುತ್ತದೆ. ಅ೦ದರೆ ನ್ಯಾಯ ಸಮ್ಮತವಾದ ಹಾಗೂ ಸತ್ಯದಿ೦ದ ಕೂಡಿದ ಹಾಗೂ ಪ್ರಕೃತಿ ನಿಯಮಕ್ಕೆ ಪೂರಕವಾಗಿ ನಿಲ್ಲುವ೦ತೆ ತನ್ನ ಕೆಲಸ ಮಾಡುವುದೇ ಕಾಯಕ. ಆದುದರಿ೦ದಲೇ ಕಾಯಕವೆ೦ಬುದು ಯಾವಾಗಲೂ ಸಕಾರಾತ್ಮಕ ಕ್ರಿಯೆ. ಅದು ಪರಿಸರವನ್ನು ಉಳಿಸುತ್ತದೆ. ಅದು ಮಾನವ-ಮಾನವ ಸ೦ಬ೦ಧವನ್ನು ರಕ್ಷಿಸುತ್ತದೆ. ಅದು ನಾಡನ್ನು ಕಟ್ಟಲು ಪೂರಕವಾಗಿ ನಿಲ್ಲುತ್ತದೆ. ಅದು ಸತ್ಯ ಶುದ್ಧ ಪ್ರಕ್ರಿಯೆಯಾದ್ದರಿ೦ದ ಈ ಅನ೦ತ ಸೃಷ್ಟಿಯೊದಿಗೆ ಅನುಸ೦ಧಾನಕ್ಕೆ ಸೇತುವೆಯಾಗಿ ನಿಲ್ಲುತ್ತದೆ. ಇ೦ತಹ ಮಹೋನ್ನತ ತತ್ವದಿ೦ದ ಬಸವಣ್ಣನವರು ವ್ಯಕ್ತಿಯಲ್ಲಿ ಪ್ರಗತಿಶೀಲತೆಯನ್ನು ಬೆಳೆಸುವುದರ ಜೊತೆಗೆ ಅದು ನಾಡು ಬೆಳೆಸುವಲ್ಲಿ ಹೆಗಲು ಶಕ್ತಿಯಾಗಿ ನಿಲ್ಲುವ೦ತೆ ಮಾಡುತ್ತಾರೆ.
ಕಾಯಕದಿ೦ದ ಸ೦ಪಾದಿಸಿದ ದ್ರವ್ಯ ತನಗಲ್ಲದೆ ಸಮಾಜಕ್ಕೂ ಸೇರಬೇಕೆ೦ಬ ಭಾವನೆಯು ಸಮಾಜದಿ೦ದ ಪಡೆದದ್ದನ್ನು ಸಮಾಜಕ್ಕೆ ಹಿ೦ದುರಿಗಿಸುವ೦ತೆ ಮಾಡುತ್ತದೆ. ಇ೦ಥ ಭಾವನೆ ಭಿತ್ತುವ ದಾಸೋಹ ತತ್ವವು ವ್ಯಕ್ತಿಯಲ್ಲಿ ಸಾಮಾಜಿಕ ಜವಾಬ್ದಾರಿ(Social Responsibility)ಯನ್ನು ಬೆಳೆಸುತ್ತದೆ. ಇದು ಬಾಹಿರ ಶಕ್ತಿಗಳಿ೦ದ ಹೇರಲ್ಪಟ್ಟದ್ದಲ್ಲ. ಆ೦ತರಿಕವಾಗಿ ಗಟ್ಟಿಯಾಗಿ ನಿ೦ತದ್ದು. ಈ ರೀತಿಯ ಸಾಮಾಜಿಕ ಜವಾಬ್ದಾರಿಯಿ೦ದ ನಾಡಿನಲ್ಲಿ ನೈಸರ್ಗಿಕ ಸ೦ಪನ್ಮೂಲದ ದುರ್ಬಳಕೆ ತಪ್ಪುವುದರ ಜೊತೆಗೆ ವ್ಯಕ್ತಿ ಕೇ೦ದ್ರಿತ ಸ೦ಪನ್ಮೂಲ ಕ್ಕ್ರೋಢೀಕರಣಕ್ಕೆ ಅ೦ತ್ಯ ಹಾಡುತ್ತದೆ. ದಾಸೋಹದಿ೦ದ ಫಲ ಅನುಭವಿಸುವವರಲ್ಲಿ ಉತ್ತರದಾಯಿತ್ವವೂ (Accountability) ಬೆಳೆಯುವ೦ತೆ ಮಾಡುತ್ತದೆ. ಇದರಿ೦ದ ಏಕಕಾಲದಲ್ಲಿ ಸಮಾಜದಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಉತ್ತರದಾಯಿತ್ವ ಮೇಳೈಸುವ೦ತೆ ಮಾಡುತ್ತಾರೆ. ಇದರಿ೦ದ ಸಮಾಜದಲ್ಲಿ ಚಲನಶೀಲತೆ (Dynamism) ಬೆಳೆಯುತ್ತದೆ. ಬಸವೇಶ್ವರರ ವ್ಯಕ್ತಿ – ಸಮಾಜ ಬೆಸೆಯುವ ಇ೦ತಹ ಸಮ್ಯಕ್ ದೃಷ್ಟಿ ಜಗತ್ತಿನ ಅನೇಕ ಜ್ವಲ೦ತ ಸಮಸ್ಯೆಗಳಿಗೆ ಸಾರ್ವಕಾಲಿಕ ಮದ್ದು ನೀಡಬಲ್ಲದು. ವ್ಯಷ್ಟಿ-ಸಮಷ್ಠಿಗಳ ಸಮಾಗಮವನ್ನು ಸಾರುವ ಕಾಯಕ-ದಾಸೋಹ ತತ್ವಗಳು ಈ ನಾಡು ಜಗತ್ತಿಗೆ ನೀಡಿದ ಅನರ್ಘ್ಯ ರತ್ನಗಳು.
ಗಾ೦ಧೀಜಿಯವರ ‘ಧರ್ಮದರ್ಶಿತ್ವ’ ತತ್ವವೂ ಇದನ್ನೇ ಪ್ರತಿಪಾದಿಸುತ್ತದೆ. ಸ೦ಪಾದಿಸಿದರಲ್ಲಿ ನಮಗೆಷ್ಟು ಬೇಕೋ ಅಷ್ಟನ್ನು ಉಪಯೋಗಿಸಿ ಉಳಿದ ಸ೦ಪಾದನೆಗೆ ನಾವು ಧರ್ಮದರ್ಶಿಗಳಾಗಿ ಅದು ದುರ್ಬಲರ ಅಗತ್ಯತೆಗೆ ವಿನಿಯೋಗವಾಗುವ೦ತೆ ನೋಡಿಕೊಳ್ಳುವುದೇ ಆದ್ಯ ಕರ್ತವ್ಯವಾಗಿದೆ.
ಇ೦ತಹ ಮಹೋನ್ನತ ತತ್ವಗಳ ಪರಿಚಯ ಮು೦ದುವರಿಯುವ ನಿಮ್ಮ ಮು೦ದಿನ ಲೇಖನಗಳಲ್ಲಿ ನಿರೀಕ್ಷಿಸುತ್ತೇನೆ.
ಪಾರ್ವತಮ್ಮ ರಟ್ಟಿಹಳ್ಳಿ
Jun 22, 2024ಕಾಯಕಕ್ಕೆ ಬಹಳ ದೊಡ್ಡ ಮಹತ್ವ ಇದೆ ಅಂತ ಗೊತ್ತಿತ್ತು. ಹೀಗೆ ಅದರ ಹಿನ್ನೆಲೆ, ಅದರ ಆಳ, ಅದರ ಪ್ರಾಮುಖ್ಯತೆ ಖಂಡಿತವಾಗಿಯೂ ನನಗೆ ತಿಳಿದಿರಲಿಲ್ಲ. ಯಾರಿಂದಲೂ ಕೇಳಿರಲೂ ಇಲ್ಲ. ನಿಮ್ಮ ಜ್ಞಾನ ದಾಸೋಹಕ್ಕೆ ಅನಂತ ಶರಣು🙏🏿🙏🏿
Sundar Danappa
Jun 22, 2024ನೀವು ಈ ಹಿಂದೆ ಬರೆದ ಗುರು-ಶಿಷ್ಯ ಸಂಬಂಧ ಲೇಖನವು ನನ್ನಲ್ಲಿದ್ದ ಕತ್ತಲೆಯನ್ನು ಕಳೆಯುವಂತಿತ್ತು. ಕಾಯಕದ ಕುರಿತಾದ ಈ ಲೇಖನ ಅದರ ಮುಂದುವರೆದ ಭಾಗದಂತೆ ಕಾಣುತ್ತಿದೆ. ಹೀಗೆ ಅನುಭಾವದ ಹಿನ್ನೆಲೆಯಲ್ಲಿ ಬಂದಂತಹ ವಿಚಾರಗಳು ತೀರಾ ಅಪರೂಪ. ಕಾಯಕ, ದಾಸೋಹ, ಲಿಂಗಾನುಭವಗಳನ್ನು ಒಂದು ಸರಳರೇಖೆಯಲ್ಲಿ ಗುರುತಿಸುತ್ತಿರುವುದು… ಅವುಗಳಿಗೆ ಹೊಸ ಅರ್ಥವ್ಯಾಖ್ಯಾನ ನೀಡಿದ್ದು ನನಗೆ ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗದಿದ್ದರೂ ಮತ್ತೊಮ್ಮೆ ಓದಬೇಕೆನಿಸುತ್ತಿದೆ. ಕಾಯಕಕ್ಕೆ ವಿವರಣಾತ್ಮಕ ವಿವರಣೆ ನಿಮ್ಮಿಂದ ಮತ್ತಷ್ಟು ಬೇಕೆನಿಸುತ್ತಿದೆ.
ಭೈರಲಿಂಗೇಶ ಹುಣಸೂರು
Jun 22, 2024ಅಬ್ಬಾ! ಎಂತಹ ಬರಹ!! ಏನು ವಿಚಾರಗಳು ಸ್ವಾಮಿ, ಒಂದೊಂದು ಸಾಲೂ ನಿಂತು ಮಾತನಾಡುತ್ತಿರುವಂತಿವೆ, ಅಲುಗಾಡಿಸಿ ಎಚ್ಚರಿಸುವಂತಿವೆ, ಬೈದು ತೋರಿಸುವಂತಿವೆ. ತಮ್ಮ ಪಾದಗಳಿಗೆ ಶರಣು, ಶರಣು.
Ramesh Hadapad
Jun 22, 2024ಒಳ್ಳೆಯ ಬರಹ ಚೆನ್ನಾಗಿದೆ ಸರ್. thank you.
Vijaya Kapparad, Dharawad
Jun 23, 2024ಶರಣರ ವಚನಗಳೊಂದಿಗೆ ವಿಸ್ತಾರವಾಗಿ ಲೇಖನ ಮೂಡಿಬಂದಿದೆ ತುಂಬಾ ಚೆನ್ನಾಗಿದೆ🙏
Chandraswamy Bidar
Jun 25, 2024ತೀರಾ ಸರಳವೆಂದುಕೊಂಡಿದ್ದ, ಹೆಚ್ಚು ಕಡಿಮೆ ನೀವು ಹೇಳಿದಂತೆ ಉಪೇಕ್ಷೆಗೆ ಒಳಗಾಗಿದ್ದ ‘ಕಳಬೇಡ, ಕೊಲಬೇಡ….’ ವಚನದ ಹಿಂದೆ ಇಷ್ಟೊಂದು ಮಹತ್ತರವಾದ ಸಂಗತಿಗಳು ಅಡಗಿವೆ ಎಂದು ಕಲ್ಪಿಸಿಯೂ ಕೊಂಡಿರಲಿಲ್ಲ. ನಿಮ್ಮ ಮಾರ್ಗದರ್ಶನಕ್ಕೆ ವಂದನೆಗಳು ಸರ್.
ಮಂಜುನಾಥ್, ಗುರುಮಾರ್ಗ
Jun 26, 2024ಕಾಯಕ ಎಂದರೆ ನಾನು ದುಡಿಮೆ ಮತ್ತು ಕಷ್ಟಪಟ್ಟು, ನ್ಯಾಯಯುತವಾಗಿ ದುಡಿಯುವುದು ಎಂದುಕೊಂಡಿದ್ದೇನೆ, ಆದರೆ ಪದ್ಮಾಲಯ ಸರ್ ಕಾಯಕ ದುಡಿಮೆಯ ಹಂತಕ್ಕೆ ಸೀಮಿತಗೊಳಿಸಿರುವುದು ದೊಡ್ಡ ವ್ಯಂಗ್ಯ ಅಂತಾರೆ, ಕಾಯಕಕ್ಕೆ ದುಡಿಮೆಗೂ ಮೀರಿದ ಆಳ ಅಗಲಗಳಿವೆ ಎನ್ನುತ್ತಾರೆ. 12ನೇ ಶತಮಾನಕ್ಕೆ ಸೇರಿದ ಕಾಯಕ ಸಿದ್ಧಾಂತಕ್ಕಿರುವ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಹಿನ್ನೆಲೆಗಳನ್ನು ಗ್ರಹಿಸಿದಾಗ ಫ್ರೆಂಚ್ ಕ್ರಾಂತಿಗೂ ಮೇಲಾದ ಒಂದು ಕ್ರಾಂತಿ ಯುಗವಾಗಿ ಕಾಣಬಹುದು ಎನ್ನುತ್ತಾರೆ. ಕಾಯಕದಲ್ಲಿ ಶ್ರೇಷ್ಠ ಕಾಯಕ ಅಥವಾ ತುಚ್ಚ ಕಾಯಕ ಎಂಬುದು ಇಲ್ಲ, ಕಾಯಕವೂ ಎಲ್ಲಾ ಜೀವಿಗಳಲ್ಲೂ ಇರುವ ಜೀವಿಸುವ ಘನತೆ, ಅರಿವು ಗುರುವಾಗುವ ಬೆಡಗು ವಂಚನೆ ಇಲ್ಲದ ಕಾಯಕದಿಂದ ಮಾತ್ರ ಸಾಧ್ಯ.
ಮನೋ ಕಾಯವೂ ಐದು ಚಿತ್ತಗಳ ಗುಂಪು, ದೇಹಕಾಯ ಐದು ಇಂದ್ರಿಯಗಳ ಗುಂಪು, ಐದು ಚಿತ್ತಗಳ ಗುಂಪಿನ ಮನಸ್ಸು 5 ಇಂದ್ರಿಯಗಳಿಂದ ಕೂಡಿದ ದೇಹವನ್ನು ನಿಯಂತ್ರಿಸುತ್ತದೆ, ಅರ್ಥಾತ್ ಗುಲಾಮನನ್ನಾಗಿಸಿ ಕೊಂಡಿದೆ.”ಒಂದತ್ತಿ ಗೈವರು ಗೊಲ್ಲರು”- ಎಷ್ಟು ಆಳವಾಗಿ ವಿಶ್ಲೇಷಣೆ ಮಾಡಿದ್ದೀರಾ ಸರ್, ಅಂತರಂಗದ ಶುದ್ದಿಯ ಕುರಿತು ಎಷ್ಟು ಆಳವಾಗಿ ಹೇಳಿದ್ದೀರಿ ನಾವು ನಿಮ್ಮ ಸಂಪರ್ಕದಿಂದ ಧನ್ಯರಾದೆವು, ಲೇಖನದ ಸಾರವನ್ನು ಅಟ್ಲೀಸ್ಟ್ 10% ಆದರೂ ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಪಡುತ್ತೇನೆ. ಮುಂದಿನ ಭಾಗಕ್ಕಾಗಿ ಕಾಯುತ್ತಾ ತಮಗೂ ಹಾಗೂ ಇದನ್ನು ಪ್ರಕಟಿಸಿದ ಬಯಲು ತಂಡಕ್ಕೂ ವಂದನೆಗಳು.🙏🙏🙏
Panchakshari H V
Jun 27, 2024ದುಡಿಮೆಯೇ ಕಾಯಕ ಎಂಬ ಭ್ರಮೆಯನ್ನು ಬಿಡಿಸಿ ಕಾಯಕದ ವಿವಿಧ ಮಜಲುಗಳನ್ನು ತಿಳಿಸುವಲ್ಲಿ ಈ ಲೇಖನ ಸುಂದರವಾಗಿ ಚಿತ್ರಿಸುತ್ತದೆ.
“ಅಂತರಂಗದೊಳಗೆ ಚಿತ್ತಶುದ್ಧಿಗಾಗಿ ಮಾಡುವ ಸಂಘರ್ಷವೇ ಶರಣರಲ್ಲಿ ಲಿಂಗಪೂಜೆ ಎನಿಸಿಕೊಂಡಿದೆ. ಅದು ಪ್ರತಿಕ್ಷಣ ಪ್ರತಿದಿನ ನಡೆಯಲೇ ಬೇಕಾದ ಪೂಜೆ. ಚಿತ್ತದ ಮನೋ ಭೂಮಿಕೆಯಲ್ಲಿರುವ ಕ್ರೂರಾತಿ ಕ್ರೂರ ಮೃಗಗಳನ್ನು ಹಿಡಿಹಿಡಿದು ಕೊಲ್ಲುವ ರಣರಂಗವಾಗಿಯೂ ಇದು ಶರಣರಲ್ಲಿ ಅಭಿವ್ಯಕ್ತಿಗೊಂಡಿದೆ. ಈ ಯುದ್ಧದಲ್ಲಿ ಗೆದ್ದರೆ ಪ್ರಾಣಲಿಂಗ, ಸೋತರೆ ಮತ್ತದೇ ಭವಸಂಸಾರದ ಕೊಚ್ಚೆ ಕೊಳೆಯಲ್ಲಿ ಬದುಕುವ ಹಂದಿಯ ಬದುಕು!”
ಅರ್ಥಪೂರ್ಣ ನುಡಿಗಳು ಸರ್.
Prabhudeva B Patil
Jun 27, 2024ವಚನಗಳನ್ನು ಕಾರ್ಯ-ಕಾರಣ-ಪರಿಣಾಮಗಳಲ್ಲಿ ಜೋಡಿಸಿದರೆ ಹೆಚ್ಚು ಸೂಕ್ತ ಎಂದು ಸಲಹೆ ಕೊಟ್ಟಿದ್ದೀರಿ. ಹೇಗೆ ತಿಳಿಯಲಿಲ್ಲ. ಕೆಲವು ಉದಾಹರಣೆಗಳ ಮೂಲಕ ಹೇಳುವಿರಾ?
Nataraj, Bidadi
Jun 27, 2024ಸಂಗ್ರಹಯೋಗ್ಯ ಬರಹ. ಪದೇಪದೇ ಗಟ್ಟಿಯಾಗಿ ಓದಿ, ಮನನ ಮಾಡಿಕೊಂಡು, ಸಾಧ್ಯವಾದರೆ ಆಚರಿಸಲೇ ಬೇಕಾದ ಒತ್ತಡವನ್ನು ನೈತಿಕವಾಗಿ ಹಾಕುವ ಶಕ್ತಿಶಾಲಿ ಮಾತುಗಳು ಇಲ್ಲಿವೆ. ಪೂರ್ತಿ ಲೇಖನ ಅರ್ಥವಾಗಿದೆ ಎಂದು ಸುಳ್ಳು ಹೇಳಲಾರೆ. ಬಿಡುವು ಸಿಕ್ಕಾಗ ಮತ್ತೆ ಓದುತ್ತೇನೆ. ಶ್ರೇಷ್ಠ ಚಿಂತಕರಾದ ನಾಗರಾಜ್ ಅವರಿಗೂ ಓದಿಸಿದ್ದಕ್ಕೆ ತಮಗೂ ಧನ್ಯವಾದಗಳು ಅಕ್ಕಾ.
ವಿರೂಪಾಕ್ಷ ಮ.
Jun 27, 2024ಅಧಿಕಾರ ಕೂಡಾ ಇತರೆ ಎಲ್ಲಾ ಕಾಯಕಗಳಂತೆ ಸಾಮಾನ್ಯ ಕಾಯಕ ಆದಾಗ ಅದರಿಂದ ಆಗುವ ಶೋಷಣೆ, ಭ್ರಷ್ಟಾಚಾರ, ಅನಾಚಾರ, ದಬ್ಬಾಳಿಕೆ, ಸ್ಥಾನಮಾನದ ಪೈಪೋಟಿ, ಮೇಲು-ಕೀಳಿನ ಹೇರಿಕೆ ಎಲ್ಲವೂ ತಪ್ಪುತ್ತವೆ. ಆದರೆ ಇಂತಹ ಆದರ್ಶವನ್ನು ನಿರೀಕ್ಷಿಸುವ ಕಾಲದಲ್ಲಿ ನಾವಿದ್ದೇವೆಯೇ? ನೈತಿಕತೆಯನ್ನು ಬದುಕಿ, ನೈತಿಕತೆಯನ್ನು ಎತ್ತಿ ಹಿಡಿದ ಶರಣರೆಲ್ಲಿ? ನೈತಿಕತೆ ಎಂದಾಕ್ಷಣ ಉಢಾಪೆ ಮಾಡುವ ನಾವೆಲ್ಲಿ?
Shraddhananda swamiji, Vijayapura
Jun 29, 2024Very good article 🙏🏿
ಬಸವರಾಜ ಹಂಡಿ
Jun 30, 2024ಬಹಳ ಸೂಕ್ಷ್ಮಮನಸ್ಸಿನಿಂದ ಕಾಯಕ, ದಾಸೋಹ ಮತ್ತು ಪ್ರಾಣಲಿಂಗ ಬಗ್ಗೆ ಸಂಶೋಧನೆ ಮಾಡಿ ಈ ಲೇಖನ ಬರೆದಿದ್ದಾರೆ. ಕಾಯಕ ಸಿದ್ಧಾಂತಕ್ಕೆ ಕಾರಣವಾದ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಎಲ್ಲ ಅಂಶಗಳನ್ನು ಬಹಳ ಆಳವಾಗಿ ಅಧ್ಯಯನ ಮಾಡಿ, ಬಸವಾದಿ ಶರಣರು ಕಾಯಕ ಸಿದ್ಧಾಂತವನ್ನು ಕಾರ್ಯರೂಪಕ್ಕೆ ತಂದರು. ಕಾಯಕ ದಾಸೋಹದಿಂದ ಅಭೂತಪೂರ್ವ ಬದಲಾವಣೆ ಕೆಲವೇ ವರ್ಷಗಳಲ್ಲಿ ಸಮಾಜದಲ್ಲಿ ತರಲು ಸಾದ್ಯವಾಯಿತು.
ಪದ್ಮಾಲಯ ನಾಗರಾಜ್ ಗುರುಗಳು ಕಾಯಕದ ಬಗ್ಗೆ ಬರೆಯಲು ಒಂದು ದಿವಸ ಸ್ವತಃ ಶುದ್ಧ ಕಾಯಕ ಮುಂಜಾನೆಯಿಂದ ಸಂಜೆವರಗೆ ಮಾಡಿ, ಕಾಯಕದಿಂದ ಬಂದ ಉತ್ಪನ್ನವನ್ನು ದಾಸೋಹ ಮಾಡುವ ಮುಖಾಂತರ ಆದ ಅನುಭವವನ್ನು ಆಧಾರವಾಗಿಟ್ಟುಕೊಂಡು ಈ ಲೇಖನ ಬರೆದಿದ್ದಾರೆ.
ಕಾಯಕ ದಾಸೋಹದಿಂದ ಹಠಾತ್ ಆಗಿ ನಮ್ಮ ಮನಸ್ಸು ಪ್ರಾಣಲಿಂಗದ ಕಡೆ ಹೊರುಳುತ್ತದೆ ಮತ್ತು ಅಂತರಂಗ-ಬಹಿರಂಗ ಶುದ್ಧತೆಯ ಅನುಭವ ಆಗುತ್ತದೆ.
ಈ ಲೇಖನದಲ್ಲಿ ಉಲ್ಲೇಖಿಸಿದ ವಚನಗಳನ್ನು ನೋಡಿದರೆ ಬಸವಣ್ಣ, ಅಲ್ಲಮ ಹಾಗು ಹಡಪದ ಅಪ್ಪಣ್ಣ ಅವರ ಪುಣ್ಯಶ್ರೀ ಲಿಂಗಮ್ಮ ತಾಯಿಯವರು ಸಾಮಾಜಿಕ ಮತ್ತು ಮಾನಸಿಕ ವಿಜ್ಞಾನಿಗಳಾಗಿ ಕಂಡು ಬರುತ್ತಾರೆ.
ಈ ಲೇಖನವನ್ನು 2-3 ಸಲ ಓದಿದ್ದೇನೆ. ಇನ್ನು 3-4 ಸಲ ಓದುವ ಯೋಜನೆ ಇದೆ. ಪ್ರತಿ ಸಲ ಓದುವಾಗ ಒಂದು ಹೊಸ ಒಳನೋಟ ಹಾಗು ಹೊಸ ಅನುಭವ ಆಗುತ್ತದೆ.
ಅತಿ ವಿರಳವಾದ ಜ್ಞಾನ ದಾಸೋಹ ನೀಡಿದ ನಾಗರಾಜ ಗುರುಗಳಿಗೆ ಶರಣು ಶರಣಾರ್ಥಿಗಳು. ಬಯಲು ತಂಡಕ್ಕೆ ಸಹ ಧನ್ಯವಾದಗಳು.
ಮುರುಘೇಂದ್ರ ಬಳಗೂರು
Jun 30, 2024ನಿಜಕ್ಕೂ ನಾವು ಬಸವಣ್ಣನವರ ಮಾತುಗಳಂತೆ ನಡೆಯುತ್ತಿದ್ದೇವೆಯೇ? ಲೇಖನದ ಉದ್ದಕ್ಕೂ ನನ್ನನ್ನ ಕಾಡಿದ ಪ್ರಶ್ನೆ. “ಒಂದು ಸಮಸಮಾಜದ ಮಹತ್ವಾಕಾಂಕ್ಷೆ ಸತ್ಫಲ ನೀಡಬೇಕೆಂದರೆ ಆ ಸಮಾಜದಲ್ಲಿರುವ ಎಲ್ಲಾ ಶೋಷಣೆಗಳ ಮೂಲದಲ್ಲಿರುವ ಅಧಿಕೃತವಾದ ಭ್ರಮೆಗಳನ್ನು ಹೋಗಲಾಡಿಸಬೇಕು. ಅಧಿಕಾರ ಮತ್ತು ಸಂಗ್ರಹಣೆಯ ಭ್ರಮೆಗಳೇ ಎಲ್ಲಾ ಶೋಷಣೆಗಳ ಮೂಲವೆಂದು ಬಸವಣ್ಣನವರು ಚೆನ್ನಾಗಿ ಅರಿತಿದ್ದರು. ಈ ಭ್ರಮೆಗಳನ್ನು ಹತ್ತಿಕ್ಕಲು ಪ್ರಭಾವಶಾಲಿಯಾಗಿದ್ದದ್ದು ಕಾಯಕ ಸಿದ್ಧಾಂತ!” ಹೆಚ್ಚುಗಾರಿಕೆಯ ಪೈಪೋಟಿಗೆ ಬಿದ್ದ ನಮಗೆ ಆ ಭ್ರಮೆಗಳಿಂದ ಹೊರಬರಲು ಸಾಧ್ಯವೇ? ಇಂತಹ ಹತ್ತಾರು ಪ್ರಶ್ನೆಗಳನ್ನು ನನ್ನಲ್ಲಿ ಹುಟ್ಟಿಸಿದ ಲೇಖನ ಇದು.
ವೀರೇಶ್ ನಿಡಗುಂದಿ
Jul 1, 2024ಕಾಯಕಕ್ಕೂ, ನಮ್ಮೊಳಗಿರುವ ಶತೃಗಳ ಹೋರಾಟಕ್ಕೂ ಅಂತರ್ ಸಂಬಂಧವಿದೆ ಎಂದು ಹೊಸ ವಿಷಯವನ್ನು ಲೇಖಕರು ತಿಳಿಸಿಕೊಟ್ಟಿದ್ದಾರೆ. ಶರಣರು ಕೊಟ್ಟ ಕಾಯಕದ ಬುತ್ತಿ ಬಿಚ್ಚಿ ಊಟಕ್ಕೆ ಇಟ್ಟಿದ್ದಾರೆ. ಹಸಿವಿದ್ದಷ್ಟು ಅನ್ನವಿದೆ. ಊಟಕ್ಕಿಟ್ಟ ಕೈಗಳು ಅಕ್ಷಯಪಾತ್ರೆ.
Sadashiva D
Jul 4, 2024ಕಾಯಕ ಎಂದಾಕ್ಷಣ ಅದು 12ನೇ ಶತಮಾನಕ್ಕೆ ಸೇರಿದ ಶಬ್ದವಲ್ಲ, ಕೇವಲ ದುಡಿಮೆಯೂ ಅಲ್ಲ. ಅರಿವನ್ನು ಗುರುವಾಗಿಸುವುದು ಕಾಯಕ, ದೇಹದ ಪ್ರತಿ ಕಣವೂ ಎಚ್ಚರದಲ್ಲಿರುವಂತೆ ನೋಡಿಕೊಳ್ಳುವುದು ಕಾಯಕ, ನೈತಿಕತೆಯನ್ನು ನಮ್ಮಲ್ಲಿ ನೆಲೆಗೊಳಿಸುವುದು ಕಾಯಕ, ಮನುಷ್ಯನ ಘನತೆಯನ್ನು ಹೆಚ್ಚಿಸುವುದು ಕಾಯಕ, ಚಿತ್ತಶುದ್ಧಿಗಾಗಿ ಶ್ರಮಿಸುವುದು ಕಾಯಕ…. ಹೊಸ ಹೊಸ ವಿಚಾರಗಳ ಈ ಘನವಾದ ಲೇಖನವನ್ನು ಬರೆದವರಿಗೂ, ಪ್ರಕಟಿಸಿದವರಿಗೂ ನನ್ನ ನಮ್ರ ನಮಸ್ಕಾರಗಳು.
Vishwanath Gokak
Jul 11, 2024I was looking at some of your blog posts on this site and I think
this site is very instructive!
Vasanth Biradar
Jul 11, 2024You made really good points on your post. Definitely worth bookmarking for revisiting. I took long time to read and understand this topic. Thank you for your valuable insights sir.
Vidya Patil, Bengaluru
Jul 15, 2024ಇಂದಿನ ದಿನಗಳಲ್ಲಿ ನೈತಿಕತೆ ಬಗ್ಗೆ ಮಾತನಾಡಿದಾಗ ವಿದ್ಯಾರ್ಥಿಗಳು ನಮ್ಮನ್ನು ನೋಡುವ ದೃಷ್ಟಿ ಬೇರೆ ತೆರನಾಗಿರುತ್ತದೆ, ಗಾಂಧೀ, ವಿವೇಕಾನಂದರ ಆದರ್ಶಗಳ ನ್ನು SHOWCASE ನಲ್ಲಿಟ್ಟ ವಸ್ತುಗಳಂತೆ ನೋಡುತ್ತಾರೆ, ನೈತಿಕತೆ ನಮ್ಮ ಜೀವನ ವಿಧಾನದೊಂದಿಗೆ ಸಂಬಂಧ ಅಳವಡಬೇಕು ಎಂಬ ಮಾತು ಅಷ್ಟೇ ಸತ್ಯ. ಮಾತು- ಕೃತಿಯ ಮಧ್ಯದ ಗೋಡೆಯಿಂದ ಹತಾಶರಾಗಿ ನಾವು ಹೇಗೆ ನೈತಿಕ ವ್ಯಕ್ತಿಗಳ ಗುಲಾಮರಾಗುತ್ತೇವೆ ಎಂದು ಹೇಳುತ್ತಾ, ಯಾವುದೇ ಕ್ಷಣದಲ್ಲಿ ಮನುಷ್ಯ ನೈತಿಕವಾಗಿ ತನ್ನನ್ನು ರೂಪಿಸಿಕೊಳ್ಳ ಲು ಈ ಪ್ರಕೃತಿ ಅವಕಾಶ ಮಾಡಿ ಕೊಟ್ಟಿರುತ್ತದೆ ಎಂಬ ನುಡಿ ನೈತಿಕತೆ ಬಗ್ಗೆ ನಾವು ತುಂಬಾ
ಎಚ್ಚರವಾಗಿರಬೇಕು ಎನಿಸುತ್ತದೆ. ಕಾಯಕ, ದಾಸೋಹ, ಲಿಂಗನುಭವ ಭಕ್ತನಾಗಲು ಪ್ರಾಥಮಿಕ ಅರ್ಹತೆ ಎಂದು ಗುರುತಿಸಿ ಈ ತತ್ವಗಳ ಕಟ್ಟುನಿಟ್ಟಾದ ಪಾಲನೆಯಿಂದ ನೈತಿಕ ಜೀವನ ಪ್ರಾಪ್ತಿವಾಗುವುದು ಮತ್ತು ಕಾಯಕವು ಎಲ್ಲಾ ಜೀವಿಗಳಲ್ಲೂ ಇರುವ ಜೀವಿಸುವ ಘನತೆ, ನಮ್ಮಲ್ಲಿರುವ ಅರಿವನ್ನು ಎಚ್ಚರದಲ್ಲಿಡುತ್ತದೆ, ಅರಿವು ಗುರುವಾಗುವ ಪರಿ ವಂಚನೆ ಇಲ್ಲದ ಕಾಯಕದಿಂದ ಮಾತ್ರ ಸಾಧ್ಯ ಎಂಬುದನ್ನು ತಿಳಿಸಿದ್ದಾರೆ.
ಶರಣರು ಸಾಮಾಜಿಕ, ಧಾರ್ಮಿಕ ಮತ್ತು ಪಾರಮಾರ್ಥಿಕ ನೆಲೆಯಲ್ಲಿ ಸಮಾನತೆಯನ್ನು 12ನೇ ಶತಮಾನದಲ್ಲೇ ತಂದು ಅಧಿಕಾರ ಮತ್ತು ಸಂಗ್ರಹಣೆ ಶೋಷಣೆಯ ಮೂಲ ಎಂದು ತಿಳಿದು ಕರ್ಮಸಿದ್ಧಾಂತವನ್ನು ತೊಡೆದು ಕಾಯಕ ಸಿದ್ಧಾಂತ ಕೊಡುವುದರ ಮೂಲಕ ಅಸಮಾನತೆ ಯನ್ನು ಅಳಿಸಿ ಹಾಕಿದರು ಎಂಬುದನ್ನು ಗುರುಗಳು ಸ್ಪಷ್ಟ ವಾಗಿ ತಿಳಿಸಿ, ಕಾಯಕ ಸಹಬಾಳ್ವೆ, ಸಹಕಾರ, ಸಾಮರಸ್ಯ, ಸಮಬಾಳು, ಸಮಪಾಲು, ನಂಬಿಗೆ, ವಿಶ್ವಾಸ .ಗಳಿಗೆ ಒತ್ತನ್ನು ಕೊಟ್ಟು ಸಮಾಜದ ಕೇಡನ್ನು ತೊಳೆದು ಹಾಕಿತು, ಮನಸ್ಸು- ಶರೀರದ ಸಾಮರಸ್ಯ ತರಲು ಕಾಯಕ ಎಂಬ technique ನ್ನು ಕೊಟ್ಟು, ಚಿತ್ತಶುದ್ಧಿಗಾಗಿ ಮಾಡುವ ಸಂಘರ್ಷವೇ ಲಿಂಗಪೂಜೆ ಎಂದರು.
ಪ್ರಾಣಲಿಂಗ ಸದಾ ಬದಲಾಗುತ್ತಲಿರುವ ವಿಶ್ವದ ವಸ್ತು ಸ್ಥಿತಿಯ ಅರಿವು. ಕಾಣದ ದೇವರ ತೋರಿಸದೆ ನಿಸರ್ಗ ಸತ್ಯದಲ್ಲಿ ಪಾರರ್ಮಾರ್ಥಿಕ ನೆಲೆ ಕಂಡುಕೊಂಡರು.
ಐದು ಚಿತ್ತಗಳು ಐದು ಇಂದ್ರಿಯಗಳನ್ನು ಅಧೀನದಲ್ಲಿ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವುದನ್ನು ಸೂಕ್ಶ್ಮವಾಗಿ ಗಮನಿಸಿ, ಶರಣರು ಕಂಡುಕೊಂಡ ಸತ್ಯ ವನ್ನು ತಿಳಿಸಿದ್ದಾರೆ. ನಮ್ಮಗಳ ಆಸೆ, ತಲ್ಲಣಿಸುವ ಮನಸ್ಸು, ಮನಸ್ಸಿನ ಜಡತೆ, ಅತೃಪ್ತತೆ, ಸಂದೇಹ ಮನೋಭಾವಗಳ ಅರಿವಾದಲ್ಲಿ ದೇಹ ಮತ್ತು ಮನಸ್ಸಿನ ಸಾಮರಸ್ಯ ಸಾಧಿಸಬಹುದು, ಮನ ಒಮ್ಮನವಾಗಬೇಕು ಎಂದು ಶರಣರು ವಚನಗಳಲ್ಲಿ ಸಾರಿ ಸಾರಿ ಹೇಳಿದ್ದಾರೆ.
ಪದ್ಮಾಲಯ ಗುರುಗಳು ಹೇಳಿದ ಒಂದು ಮಾತು ನನ್ನನ್ನು ಎಚ್ಚರಿಸಿತು, ನಾವೆಲ್ಲೂರು ನಮ್ಮದೇ ಆದ comfort zone ನಲ್ಲಿ ಸದಾ ಕಾರ್ಯನಿರ್ವಹಿಸುತ್ತಿರುತ್ತೇವೆ. ಆದರೆ ನಮ್ಮನ್ನು ನಾವು ಪುನರ್ ಸೃಷ್ಟಿ ಮಾಡಿಕೊಳ್ಳುವುದರಲ್ಲಿ ಶ್ರಮವಿದೆ ಶರಣರು ಬಹುಶ್ರಮದಿಂದ ತಮ್ಮನ್ನು ತಾವು ಪುನರ್ ಸೃಷ್ಟಿಸಿಕೊಂಡು ಇಂತಹ ತತ್ತ್ವಗಳನ್ನು ನಮಗೆ ಕೊಟ್ಟರು, ನಮ್ಮ ಕಾಯಕ ದಲ್ಲಿ ನಾವು ನಮ್ಮದೇ ಆದ ಬದಲಾವಣೆ ಕಂಡುಕೊಂಡು ವಯಕ್ತಿಕವಾಗಿ ಮತ್ತು ನಮ್ಮ ಸುತ್ತಲಿರುವ ಸಮಾಜಕ್ಕೆ ಏನಾದರೂ ಚಿಕ್ಕದಾದ ಕೊಡುಗೆ ನೀಡಬೇಕೆನಿಸುತ್ತದೆ, ಇಂತಹ ಅನುಭವಗಳನ್ನು ಉಣಬಡಿಸಿದ ಗುರುಗಳಿಗೆ ಅನಂತ ಧನ್ಯವಾದಗಳು.