Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹೀಗೊಂದು ಸಂವಾದ…
Share:
Poems April 6, 2023 ಕೆ.ಆರ್ ಮಂಗಳಾ

ಹೀಗೊಂದು ಸಂವಾದ…

ಶಿಷ್ಯೆ: ಮರೆವಿನ ಹಿಡಿತಕೆ ಮನ ಸಿಲುಕಿಹುದು
ಬಯಕೆಯ ಸೆಲೆಗೆ ಮರುಳಾಗಿಹುದು
ಕಾಣುವೆನೆಂತು ಜೀವದ ಸೊಬಗ
ಅರಿಯುವುದೆಂತು ಪ್ರಾಣದ ಹೊಲಬ
ಗೊತ್ತಿಲ್ಲದ ನಡಿಗೆ ಕತ್ತಲ ದಾರಿ
ಕಾಲಿಡಲೆಲ್ಲಿ ಹೇಳು ಗುರು
ಗುರು: ಕಂಡುದ ಹಿಡಿಯದ ಅಜ್ಞಾನಕೆ ಮರುಗುವೆ
ಕಾಣದ ಠಾವಿನ ಕನಸಿಗೆ ಕನಿಕರಿಸುವೆ
ಇಳಿಯದೆ ಕಾಣದು, ಹುಡುಕದೆ ದಕ್ಕದು
ನಡೆಯದೆ ಸೋತರೆ ಹೇಗಮ್ಮಾ…

ಶಿಷ್ಯೆ: ಎಲ್ಲಿಂದಲೋ ಬಂದು ಎತ್ತೆತ್ತಲೋ ಎಳೆವ
ನೋವು- ನಗು- ಉದ್ವೇಗದ ಸರಿಗಮ
ಪ್ರೀತಿ- ಪ್ರೇಮ- ವ್ಯಾಮೋಹದ ಪದನಿಸ
ದ್ವೇಷ, ರೋಷ, ಕುಹಕ, ಸೇಡು
ಒಂದೇ ಎರಡೇ ಉನ್ಮಾದದ ಅಲೆಬಲೆ
ಯಾವುದು ದಿಟ, ಯಾವುದು ಸೆಟೆ
ಕಂಗೆಟ್ಟಿರುವೆ ಹೇಳು ಗುರು
ಗುರು: ರುಚಿಗಳ ಸೆಳೆತಕೆ, ಬದಲಾಗುವ ಬಣ್ಣಕೆ
ನಿಲುಕುವುದಲ್ಲ ನಿಜದ ನೆಲೆ
ಇಲ್ಲದ ಸವಿಗೆ ನಾಲಿಗೆ ಚಾಚಿ
ಸುಮ್ಮನೆ ಬಳಲಿಕೆ ಯಾಕಮ್ಮಾ?

ಶಿಷ್ಯೆ: ದೇಹದಲಿರುವೆ, ಜ್ಞಾನದಲಿರುವೆ
ಬುದ್ಧಿಯಲಿರುವೆ, ಭಾವದಲಿರುವೆ
ಮಾತೂ ನನದೆ, ಮೌನವೂ ನನದೆ
ಅಲ್ಲಿಯೂ ನಾನೇ, ಇಲ್ಲಿಯೂ ನಾನೇ
ಎಲ್ಲೆಲ್ಲಿಯೂ ಥಕದಿಮಿ ಎನುತಿದೆ ‘ನಾನು’
ನಾನಿಲ್ಲದ ಠಾವಾದರೂ ಎಲ್ಲಿದೆ…
ಯಾರೀ ‘ನಾನು’ ಹೇಳು ಗುರು…
ಗುರು: ಗಗನದ ಕುಸುಮಕೆ ಕೈ ಚಾಚಿರುವೆ
ಕನಸಿನ ಸಿರಿಗೆ ಮನಸೋತಿರುವೆ
ಹುಸಿಯಲಿ ನಿಂತು ಹುಸಿಯನೇ ಹೊದ್ದು
ನಾ… ನಾ… ಎಂದರೆ ಹೇಗಮ್ಮಾ?

ಶಿಷ್ಯೆ: ಕಣ್ಣಿಗೆ ರಾಚಿದೆ ಅಹಮಿನ ದೂಳು
ಕಾಲಿಗೆ ನಾಟಿದೆ ಭವದ ಮುಳ್ಳು
ಕಲ್ಪಿತವನು ನಿಜವೆಂದೇ ಅಪ್ಪಿದೆ
ನಿತ್ಯವು ಸರಿದು ಆಯಸ್ಸು ಕರಗುವ
ಕಾಲದ ಓಟಕೆ ಭಯ ಬಿದ್ದಿರುವೆ
ಶಿವನನು ಕಾಣುವ ಬಯಲನು ಹೊಂದುವ
ಭಾಗ್ಯವು ದಕ್ಕೀತೆ ಹೇಳು ಗುರು
ಗುರು: ಕಣ್ಣಿನ ಕಸವನು, ಕಾಲಿನ ಮುಳ್ಳನು
ತೆಗೆಯಲು ಅಲ್ಲೇ ಇಹ ಅಕಲ್ಪಿತ ಶಿವನು
ಇಲ್ಲದ ಮನವನು ಜಾಡಿಸಿ ಕೊಡವಲು
ತನ್ನಲಿ ತಾನೇ ನಿಜ ನಿರ್ಬಯಲು.

Previous post ಸುಳ್ಳು ಅನ್ನೋದು…
ಸುಳ್ಳು ಅನ್ನೋದು…
Next post ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು

Related Posts

ಒಂದಾಗಿ ನಿಂತೆ…
Share:
Poems

ಒಂದಾಗಿ ನಿಂತೆ…

April 6, 2024 ಕೆ.ಆರ್ ಮಂಗಳಾ
ಆಗೀಗ ನೀರು ಕಾಣುವ ಮಧುಮಾಲತಿ ಬಳ್ಳಿಯಲಿ ತೊನೆವ ಕೆಂಪು-ಬಿಳಿ ಹೂಗಳು ಪಕ್ಕದಲ್ಲೇ ನಸುಗಂಪಿನ ದುಂಡು ಮಲ್ಲಿಗೆಯ ದಂಡು ದೇಟಿನ ತುಂಬ ಬಣ್ಣಬಣ್ಣದ ದಾಸವಾಳ, ಅರೆಬೆತ್ತಲಾದ ಸಂಪಿಗೆ...
ಸುಮ್ಮನೆ ಇರು
Share:
Poems

ಸುಮ್ಮನೆ ಇರು

December 6, 2020 ಜ್ಯೋತಿಲಿಂಗಪ್ಪ
ನಾನು ನೋಡಿದ್ದೇನು ಕೇಳಿದ್ದೇನು ಬಿಡು ನಾನಿರುವುದೇ ಹೀಗೆ ನೋಡೆ ಕೇಳೆ ಕಣ್ಣ ಕೊಳೆ ಕಿವಿಯ ಕಸ ತೊಳೆ ಇರುವೆ ಇರುವ ಹಾಗೆ ನಿನ್ನ ಬೆಳಕಲಿ ನನ್ನ ನೆಳಲ ತುಂಬದಿರು ಕೇಡು ನನದಲ್ಲ...

Comments 2

  1. K S Mallesh
    Apr 7, 2023 Reply

    ಪದ್ಮಾಲಯ ನಾಗರಾಜ್ ಅವರ ಲೇಖನ ಮತ್ತು ನಿಮ್ಮ ಹೀಗೊಂದು ಸಂವಾದ ಕವನ ಎರಡೂ ಮನಸೆಳೆದವು. ಎಳೆ ಎಳೆಯಾಗಿ ಬಿಡಿಸಿ ಬಿಡಿಸಿ ನಾನುವನ್ನು ಇಬ್ಬರೂ ತೋರಿದ್ದೀರಿ. ಇಬ್ಬನಿಯ ಹನಿಯಂತೆ ನಿಮ್ಮ ಕವನ ಪದ್ಮಾಲಯ ಅವರ ನಾನುವಿನ ವಿರಾಟ್ ರೂಪವನ್ನು ಹೃದ್ಯವಾಗಿ ಪ್ರತಿಬಿಂಬಿಸಿದೆ. ಪದ್ಮಾಲಯ ರವರ ಈ ಲೇಖನದಲ್ಲಿ ಸ್ವಾತಂತ್ರ್ಯ ಮುಂತಾದ ಪದಗಳ ಮಹತ್ವವನ್ನು ತಿಳಿದೆ. ಕೆಲವು ಉದಾಹರಣೆಗಳ ಮೂಲಕ ನಾನುವಿನ ಮೆರೆದಾಟಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮತ್ತೆ ಓದಿ ಮಗದೊಮ್ಮೆ ಓದಿ ಮನನಮಾಡಿಕೊಳ್ಳಬೇಕಾದ ಲೇಖನ. ನಿಮ್ಮ ಕವನವೂ ಕೂಡ ದಾರಿಯ ಬೇಲಿಯ ಹಸಿರ ಮಧ್ಯೆ ಅರಳಿನಿಂತ ಹೂವಂತಿದೆ.

  2. ಪಂಚಾಕ್ಷರಿ ಹಳೇಬೀಡು
    Apr 9, 2023 Reply

    “ಅಕಲ್ಪಿತ ಶಿವ ಇಲ್ಲದ ಮನವ ಜಾಡಿಸಿ ಕೊಡವಲು ನಿರ್ವಯಲು!” ಅದ್ಭುತ ಸಾಲುಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ಸಂತೆಯ ಸಂತ
ಸಂತೆಯ ಸಂತ
September 7, 2020
ಮನಸ್ಸು
ಮನಸ್ಸು
September 7, 2020
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ಲಿಂಗಾಯತ ಧರ್ಮ ಸಂಸ್ಥಾಪಕರು
ಲಿಂಗಾಯತ ಧರ್ಮ ಸಂಸ್ಥಾಪಕರು
April 6, 2024
Copyright © 2026 Bayalu