ಹೀಗೊಂದು ಸಂವಾದ…
ಶಿಷ್ಯೆ: ಮರೆವಿನ ಹಿಡಿತಕೆ ಮನ ಸಿಲುಕಿಹುದು
ಬಯಕೆಯ ಸೆಲೆಗೆ ಮರುಳಾಗಿಹುದು
ಕಾಣುವೆನೆಂತು ಜೀವದ ಸೊಬಗ
ಅರಿಯುವುದೆಂತು ಪ್ರಾಣದ ಹೊಲಬ
ಗೊತ್ತಿಲ್ಲದ ನಡಿಗೆ ಕತ್ತಲ ದಾರಿ
ಕಾಲಿಡಲೆಲ್ಲಿ ಹೇಳು ಗುರು
ಗುರು: ಕಂಡುದ ಹಿಡಿಯದ ಅಜ್ಞಾನಕೆ ಮರುಗುವೆ
ಕಾಣದ ಠಾವಿನ ಕನಸಿಗೆ ಕನಿಕರಿಸುವೆ
ಇಳಿಯದೆ ಕಾಣದು, ಹುಡುಕದೆ ದಕ್ಕದು
ನಡೆಯದೆ ಸೋತರೆ ಹೇಗಮ್ಮಾ…
ಶಿಷ್ಯೆ: ಎಲ್ಲಿಂದಲೋ ಬಂದು ಎತ್ತೆತ್ತಲೋ ಎಳೆವ
ನೋವು- ನಗು- ಉದ್ವೇಗದ ಸರಿಗಮ
ಪ್ರೀತಿ- ಪ್ರೇಮ- ವ್ಯಾಮೋಹದ ಪದನಿಸ
ದ್ವೇಷ, ರೋಷ, ಕುಹಕ, ಸೇಡು
ಒಂದೇ ಎರಡೇ ಉನ್ಮಾದದ ಅಲೆಬಲೆ
ಯಾವುದು ದಿಟ, ಯಾವುದು ಸೆಟೆ
ಕಂಗೆಟ್ಟಿರುವೆ ಹೇಳು ಗುರು
ಗುರು: ರುಚಿಗಳ ಸೆಳೆತಕೆ, ಬದಲಾಗುವ ಬಣ್ಣಕೆ
ನಿಲುಕುವುದಲ್ಲ ನಿಜದ ನೆಲೆ
ಇಲ್ಲದ ಸವಿಗೆ ನಾಲಿಗೆ ಚಾಚಿ
ಸುಮ್ಮನೆ ಬಳಲಿಕೆ ಯಾಕಮ್ಮಾ?
ಶಿಷ್ಯೆ: ದೇಹದಲಿರುವೆ, ಜ್ಞಾನದಲಿರುವೆ
ಬುದ್ಧಿಯಲಿರುವೆ, ಭಾವದಲಿರುವೆ
ಮಾತೂ ನನದೆ, ಮೌನವೂ ನನದೆ
ಅಲ್ಲಿಯೂ ನಾನೇ, ಇಲ್ಲಿಯೂ ನಾನೇ
ಎಲ್ಲೆಲ್ಲಿಯೂ ಥಕದಿಮಿ ಎನುತಿದೆ ‘ನಾನು’
ನಾನಿಲ್ಲದ ಠಾವಾದರೂ ಎಲ್ಲಿದೆ…
ಯಾರೀ ‘ನಾನು’ ಹೇಳು ಗುರು…
ಗುರು: ಗಗನದ ಕುಸುಮಕೆ ಕೈ ಚಾಚಿರುವೆ
ಕನಸಿನ ಸಿರಿಗೆ ಮನಸೋತಿರುವೆ
ಹುಸಿಯಲಿ ನಿಂತು ಹುಸಿಯನೇ ಹೊದ್ದು
ನಾ… ನಾ… ಎಂದರೆ ಹೇಗಮ್ಮಾ?
ಶಿಷ್ಯೆ: ಕಣ್ಣಿಗೆ ರಾಚಿದೆ ಅಹಮಿನ ದೂಳು
ಕಾಲಿಗೆ ನಾಟಿದೆ ಭವದ ಮುಳ್ಳು
ಕಲ್ಪಿತವನು ನಿಜವೆಂದೇ ಅಪ್ಪಿದೆ
ನಿತ್ಯವು ಸರಿದು ಆಯಸ್ಸು ಕರಗುವ
ಕಾಲದ ಓಟಕೆ ಭಯ ಬಿದ್ದಿರುವೆ
ಶಿವನನು ಕಾಣುವ ಬಯಲನು ಹೊಂದುವ
ಭಾಗ್ಯವು ದಕ್ಕೀತೆ ಹೇಳು ಗುರು
ಗುರು: ಕಣ್ಣಿನ ಕಸವನು, ಕಾಲಿನ ಮುಳ್ಳನು
ತೆಗೆಯಲು ಅಲ್ಲೇ ಇಹ ಅಕಲ್ಪಿತ ಶಿವನು
ಇಲ್ಲದ ಮನವನು ಜಾಡಿಸಿ ಕೊಡವಲು
ತನ್ನಲಿ ತಾನೇ ನಿಜ ನಿರ್ಬಯಲು.
Comments 2
K S Mallesh
Apr 7, 2023ಪದ್ಮಾಲಯ ನಾಗರಾಜ್ ಅವರ ಲೇಖನ ಮತ್ತು ನಿಮ್ಮ ಹೀಗೊಂದು ಸಂವಾದ ಕವನ ಎರಡೂ ಮನಸೆಳೆದವು. ಎಳೆ ಎಳೆಯಾಗಿ ಬಿಡಿಸಿ ಬಿಡಿಸಿ ನಾನುವನ್ನು ಇಬ್ಬರೂ ತೋರಿದ್ದೀರಿ. ಇಬ್ಬನಿಯ ಹನಿಯಂತೆ ನಿಮ್ಮ ಕವನ ಪದ್ಮಾಲಯ ಅವರ ನಾನುವಿನ ವಿರಾಟ್ ರೂಪವನ್ನು ಹೃದ್ಯವಾಗಿ ಪ್ರತಿಬಿಂಬಿಸಿದೆ. ಪದ್ಮಾಲಯ ರವರ ಈ ಲೇಖನದಲ್ಲಿ ಸ್ವಾತಂತ್ರ್ಯ ಮುಂತಾದ ಪದಗಳ ಮಹತ್ವವನ್ನು ತಿಳಿದೆ. ಕೆಲವು ಉದಾಹರಣೆಗಳ ಮೂಲಕ ನಾನುವಿನ ಮೆರೆದಾಟಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮತ್ತೆ ಓದಿ ಮಗದೊಮ್ಮೆ ಓದಿ ಮನನಮಾಡಿಕೊಳ್ಳಬೇಕಾದ ಲೇಖನ. ನಿಮ್ಮ ಕವನವೂ ಕೂಡ ದಾರಿಯ ಬೇಲಿಯ ಹಸಿರ ಮಧ್ಯೆ ಅರಳಿನಿಂತ ಹೂವಂತಿದೆ.
ಪಂಚಾಕ್ಷರಿ ಹಳೇಬೀಡು
Apr 9, 2023“ಅಕಲ್ಪಿತ ಶಿವ ಇಲ್ಲದ ಮನವ ಜಾಡಿಸಿ ಕೊಡವಲು ನಿರ್ವಯಲು!” ಅದ್ಭುತ ಸಾಲುಗಳು.