ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಇಂದಿನ ದಿನಮಾನಗಳಲ್ಲಿ ಒಬ್ಬ ವ್ಯಕ್ತಿ ಭಕ್ತನೆನಿಸಿಕೊಳ್ಳುವುದೆಂದರೆ ಆತ/ಆಕೆ ಮಡಿವಂತನಾಗಿ, ದೇಗುಲಕ್ಕೆ ಹೋಗಿ, ಅಥವಾ ಮನೆಯ ದೇವರ ಕೋಣೆಯಲ್ಲಿ ದೇವ ನಾಮ ಸ್ಮರಣೆ ಮಾಡುವುದು, ಕಾಣಿಕೆಗಳನ್ನು ದೇವರಿಗೆ ಅರ್ಪಿಸುವುದು, ಇತ್ಯಾದಿ ಆಚರಣೆಗಳನ್ನು ಮಾಡಬೇಕಾಗುತ್ತದೆ. ಒಬ್ಬ ವ್ಯಕ್ತಿ ವ್ಯವಹಾರದಲ್ಲಿ ಮೋಸಗಾರನಾಗಿದ್ದರೂ, ಕಳ್ಳನಾಗಿದ್ದರೂ ದೇಗುಲಕ್ಕೆ ಹೋಗುತ್ತಾನೆಂದರೆ, ದೇವರಿಗೆ ಕೈಮುಗಿಯುತ್ತಾನೆಂದರೆ, ದೇವರನ್ನು ನಂಬುತ್ತಾನೆಂದರೆ ಆತನನ್ನು ದೇವಭಕ್ತನೆಂದು ಈ ಜಗತ್ತು ಭಾವಿಸುತ್ತದೆ. ಇಂತಹ ಹಲವಾರು ಉದಾಹರಣೆಗಳು ಲೆಕ್ಕವಿಲ್ಲದಷ್ಟು ನಮ್ಮ ಕಣ್ಣಮುಂದೆ ದಿನನಿತ್ಯ ನಡೆಯುತ್ತಿವೆ.
ವ್ಯಕ್ತಿಯೊಬ್ಬ ಭೂಮಿಯ ಒಡಲನ್ನು ಬಗೆದು ಕಳ್ಳತನದಿಂದ ಅದಿರನ್ನು ಮಾರಿ ಅಕ್ರಮದಿಂದ ಸಂಪಾದಿಸಿದ ಹಣದಲ್ಲಿ ಯಾವುದೋ ಒಂದು ಪ್ರಸಿದ್ಧ ದೇವಾಲಯದ ದೇವತಾ ಮೂರ್ತಿಗೆ ಹತ್ತಾರು ಕೋಟಿ ಬೆಲೆಬಾಳುವ ವಜ್ರಖಚಿತ ಚಿನ್ನದ ಕಿರೀಟವನ್ನು ದಾನವಾಗಿ ಕೊಡುತ್ತಾನೆ! ಆತನು ದೇವರ ಪರಮ ಭಕ್ತನೆನಿಸಿಕೊಳ್ಳುತ್ತಾನೆ!! ಮತ್ತೊಬ್ಬ ರಾಜಕಾರಣಿ ನ್ಯಾಯಯುತವಾಗಿ ಜನರಿಗೆ ಸಲ್ಲಬೇಕಾದ ಸರ್ಕಾರದ ಹಣವನ್ನು ಲೂಟಿ ಮಾಡಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇರುವ ಎಲ್ಲಾ ದೇವಾಲಯಗಳಿಗೂ ಎಡತಾಕುತ್ತಾನೆ! ಹರಕೆ ಹೊರುತ್ತಾನೆ, ರಾಜ್ಯದ ಕ್ಷೇಮಕ್ಕಲ್ಲ! ತನ್ನ ಪರಿವಾರದ ಕ್ಷೇಮಕ್ಕಾಗಿ, ಸ್ವಾರ್ಥ ಸಾಧನೆಗಾಗಿ! ಆತನೂ ದೈವ ಭಕ್ತನೆನಿಸಿಕೊಳ್ಳುತ್ತಾನೆ!! ಮತ್ತೊಬ್ಬ ಮಹಾನುಭಾವ ಸದಾ ತನ್ನ ಕುಟುಂಬವೇ ಅಧಿಕಾರ ನಡೆಸಬೇಕೆಂಬ ದುರಾಸೆಯಿಂದ ಅನೇಕ ಕಲ್ಪಿತ ದೇವತೆಗಳ ಹಿಂದೆ ಬಿದ್ದು ಪುರೋಹಿತರ ಮಾತುಗಳನ್ನು ಭಕ್ತಿಯಿಂದ ನಂಬಿ, ಹೋಮ ಹವನಗಳು ತಮ್ಮನ್ನು ಕಾಪಾಡುತ್ತವೆಂದು ಮಾಡಬಾರದ ಅನಾಚಾರಗಳನ್ನು ಮಾಡುತ್ತಿರುತ್ತಾನೆ. ಜಗತ್ತಿನ ಕಣ್ಣಿನಲ್ಲಿ ಆತನೂ ಪರಮ ದೈವೀ ಭಕ್ತ!!! ಮತ್ತೊಬ್ಬ ಭಕ್ತಶಿಖಾಮಣಿ ತನ್ನನ್ನು ಕೈತುತ್ತು ನೀಡಿ ಸಾಕಿ ಬೆಳೆಸಿದ ತಂದೆ ತಾಯಿಯರನ್ನು ಬೀದಿಗೆ ತಳ್ಳಿ ದೇವರನ್ನು ಅರಸಿ ಪವಿತ್ರ ಕ್ಷೇತ್ರಗಳೆಂದು ಅನೇಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ, ಪ್ರವಚನಗಳನ್ನು ಕೇಳಿ/ಹೇಳಿ ಭಕ್ತಿ ಗೀತೆಗಳನ್ನು ಮೈಮರೆತು ಹಾಡಿ, ಕಾಣಿಕೆ ಕೊಟ್ಟಮಾತ್ರಕ್ಕೆ ಆತನೂ ದೇವ ಭಕ್ತನೆನಿಸಿಕೊಳ್ಳುತ್ತಾನೆ!!! ಇದೆಲ್ಲಾ ಲೋಕದ ಅಜ್ಞಾನಿಗಳ ಕಣ್ಣಿಗೆ ಭಕ್ತಿಯಾಗಿ, ಅಂಥಾ ವ್ಯಕ್ತಿಗಳು ಭಕ್ತರಾಗಿ ಕಾಣಿಸಿಕೊಳ್ಳುತ್ತಾರೆ, ವಾಸ್ತವದಲ್ಲಿ ಅದೆಲ್ಲ ಭಕ್ತಿಯಾಗುವುದಿಲ್ಲ, ಅಂಥವರೆಲ್ಲಾ ಭಕ್ತರಾಗುವುದಿಲ್ಲ.
ಹಾಗಾದರೆ ಭಕ್ತಿ ಎಂದರೇನು? ಭಕ್ತನೆಂದರೆ ಯಾರು? ಭಕ್ತನ ಗುಣಲಕ್ಷಣಗಳೇನು? ಬಸವಾದಿ ಶರಣರು ಈ ಜಗತ್ತಿಗೆ ನಿಜ ಭಕ್ತಿಯನ್ನು ತೋರಿಸಿಕೊಟ್ಟಿದ್ದಾರೆ.
ಶರಣರು ಯಾವುದನ್ನು ಭಕ್ತಿ ಎಂದಿದ್ದಾರೆ, ಭಕ್ತ ಎಂದರೆ ಯಾರು, ಭಕ್ತ ಹೇಗಿರಬೇಕು ಎಂಬ ವಿಚಾರಗಳನ್ನು ಕೇವಲ ಬೋಧಿಸದೇ ತಾವು ಸ್ವತಃ ನಡೆದು ತೋರಿಸಿದ್ದಾರೆ. ಭಕ್ತಿ ಮತ್ತು ಭಕ್ತನ ಪರಿಪೂರ್ಣತೆಯನ್ನು ನಾವು ಬಸವಾದಿ ಶರಣರಲ್ಲಿ ಕಾಣಬಹುದು. ಭಕ್ತ ಮತ್ತು ದೇವರನ್ನು ಬೆಸೆಯುವ ಸೇತುವೆಯೇ ಭಕ್ತಿ. ಶರಣರ ವಚನಗಳಲ್ಲಿ ಪದೇ ಪದೇ ಬಳಕೆಯಾಗುವ ದೇವರು ಎಂಬ ಶಬ್ದ ಕಣ್ಣಿಗೆ ಕಾಣದ ಯಾವುದೋ ಅಗೋಚರ ಶಕ್ತಿಯ ಕುರಿತಾದದ್ದಲ್ಲ. ಕಣ್ಣಿಗೆ ಕಾಣುವ ಈ ಲೋಕದಲ್ಲಿ/ ಸೃಷ್ಟಿಯಲ್ಲಿ ದೇವರ ಚೈತನ್ಯವು ಅಖಂಡವಾಗಿ ತುಂಬಿತುಳುಕುತ್ತಿದೆ. ಆ ಚೈತನ್ಯವಿರದ ಸೂಜಿ ಮೊನೆಯಷ್ಟೂ ಜಾಗ ಈ ಸೃಷ್ಟಿಯಲ್ಲಿಲ್ಲ. ಅಣುರೇಣು ತೃಣ ಕಾಷ್ಠಗಳಲ್ಲಿ ಓತಪ್ರೋತವಾಗಿ ಬಿಟ್ಟೂಬಿಡದೆ ಆ ಪರಮ ಚೈತನ್ಯವಿದೆ. ಅಂಥಾ ಪರಮ ಚೈತನ್ಯದ ಇರುವು ನಮಗೆ ಗೋಚರವಾಗಬೇಕಾದರೆ, ಆ ಅಖಂಡ ಪರಮ ಚೈತನ್ಯವನ್ನು ಅನುಭವಿಸಬೇಕಾದರೆ, ನಾವು ಮೊದಲು ಅಖಂಡತೆಯ ಅರಿವನ್ನು ಹೊಂದುವುದು ಅನಿವಾರ್ಯ! ನಮಗೆ ಅಖಂಡತೆಯ ಅರಿವುಂಟಾಗಲು ಭಕ್ತಿಯೆಂಬ ಪೃಥ್ವಿಯ ತಳಹದಿ ಬೇಕು. ಆ ಭಕ್ತಿಯ ನೆಲೆಗಟ್ಟಿನ ಮೇಲೆ ಸುಂದರ ಅರ್ಥಪೂರ್ಣ ಆಧ್ಯಾತ್ಮಿಕ ಸೌಧ ನಿರ್ಮಿಸಬಹುದು.
ಭಕ್ತಿ ಪಂಜರ:
ಭಕ್ತಿ ಎಂಬ ಪಂಜರ ನಮಗೆ ಅವಶ್ಯ. ಭಕ್ತಿ ಪಂಜರ ಎಂಬುದು ಬಂಧನದ ಸಂಕೋಲೆಯಲ್ಲ, ಬದಲಿಗೆ ರಕ್ಷಾಕವಚ, ಈ ಭಕ್ತಿಯ ಪಂಜರವು ಸೀಮಿತವಾದುದಾಗಿರದೆ ಜಗದಗಲ ಮುಗಿಲಗಲ ವಿಶ್ವವ್ಯಾಪಿಯಾದುದಾಗಿದೆ. ಅದಕ್ಕೇ ಬಸವಣ್ಣನವರು “ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು ಕೂಡಲಸಂಗಮದೇವಾ” ಎಂದು ಪ್ರಾರ್ಥಿಸುತ್ತಾರೆ. ಶರಣರು ಭಕ್ತಿಗೆ ಹೊಸ ಭಾಷ್ಯ ಬರೆಯುತ್ತಾರೆ, ಹೊಸ ವ್ಯಾಖ್ಯಾನ, ಹೊಸ ಹೊಳಪು ಕೊಡುತ್ತಾರೆ. ತುಕ್ಕು ಹಿಡಿದು ಸವಕಳಿಯಾಗಿದ್ದ “ಭಕ್ತಿ’ ಪದ ಶರಣರ ಕಾಲದಲ್ಲಿ ಪರಿಪೂರ್ಣಗೊಂಡ ಹೊಸ ರೂಪದಲ್ಲಿ ಪ್ರಜ್ವಲಿಸುತ್ತದೆ. ಆ ಬೆಳಕಿನಲ್ಲಿ ಜಗತ್ತು ಮಿಂದೇಳುತ್ತದೆ. ಚೆನ್ನಬಸವಣ್ಣನವರು “ಬಸವ ಬಿಲ್ಲಾಳಾಗಿ, ಹೊಸಭಕ್ತಿ ಅಂಬಾಗಿ, ಎಸೆದನಯ್ಯಾ ಆ ಲಿಂಗವನು ಗುರಿಮಾಡಿ. ಶಿಶುವ ಬಾಣ ಕೊಂದು, ಬಸುರಮಧ್ಯವ ತಾಗೆ, ಹೊಸದೆಸೆಗಳೆಲ್ಲಾ ಕಾಣಬಂದವಯ್ಯಾ! ಭಸ್ಮದೆಣ್ಣೆಯ ಹೂಸಿ ಕೂಡಲಚೆನ್ನಸಂಗನಲ್ಲಿ ಬಸವಪೂಯದ ಬಂದು ಆರೈದ ಲಿಂಗವನು.” ಎಂದು ಹೇಳುವಲ್ಲಿ ನವೀಕರಣಗೊಂಡ ಭಕ್ತಿ ಬಸವಣ್ಣನವರಿಂದ ಆರಂಭವಾಯಿತು ಎಂಬುದು ಸ್ಪಷ್ಟವಾಗುವುದು.
ಭಕ್ತಿಪಥ:
ಭಕ್ತಿಗೆ ಬಸವಣ್ಣನವರು ಕೊಟ್ಟ ಹೊಳಹು ಎಂಥಾದ್ದು? ಅದರ ನೆಲೆ ಕಲೆಗಳೇನು ಎಂಬುದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಅದರಂತೆ ನಡೆಯಬೇಕು ಹಾಗೂ ಅದರ ಅನುಭಾವವನ್ನು ಆನಂದಿಸಬೇಕು. ಬಸವಣ್ಣನವರ ಭಕ್ತಿ ಮಾರ್ಗವು ಒಮ್ಮುಖವಾದುದಲ್ಲ, ಭಕ್ತನ ಆಚರಣೆಗಳು ವೃತ್ತದ ೩೬೦ ಡಿಗ್ರಿ ಯನ್ನು ವ್ಯಾಪಿಸುವುದು. ಒಂದು ವೃತ್ತ ಸಂಪೂರ್ಣ ವೃತ್ತವಾಗಬೇಕಾದರೆ ಅದರ ಯಾವುದೇ ಭಾಗವೂ ವಿರೂಪವಾಗಿರಬಾರದು, ಕತ್ತರಿಸಲ್ಪಟ್ಟಿರಬಾರದು, ಹಾಗೇ ಭಕ್ತಿ ಪರಿಪೂರ್ಣ ಭಕ್ತಿಯಾಗಬೇಕಾದರೆ ಅದರ ಯಾವ ಅಂಗವೂ ವಿಹೀನವಾಗಿರಬಾರದು. ಆಗ ಮಾತ್ರ ಆ ಭಕ್ತಿ ಅಖಂಡ ಚೈತನ್ಯವೆಂಬ ಪರಮಾತ್ಮನಿಗೆ ತಲುಪುವುದು. ಪರಿಪೂರ್ಣ ಭಕ್ತಿಯು ಪ್ರಮುಖವಾಗಿ ಮೂರು ಅಂಗಗಳನ್ನು ಒಳಗೊಂಡಿದೆ, ಆ ಅಂಗಗಳೇ ೧) ಅರಿವು ೨) ಆಚಾರ ಮತ್ತು ೩) ಅನುಭಾವ.
ದೇವರಿಗೆ ಭಕ್ತನ ಭಕ್ತಿಯ ನಿವೇದನೆಯಾಗುವುದು ಆಚಾರವೆಂಬ ಮುಖದಲ್ಲಿ, ಆಚಾರ ಪ್ರಕಟವಾಗುವುದು ಭಕ್ತನ ಬಹಿರಂಗದ ಆಚರಣೆಗಳಲ್ಲಿ. ಆ ಆಚಾರಕ್ಕೆ ಪೂರಕ ಭಕ್ತನ ಅಂತರಂಗದ ಅರಿವು, ಆಚಾರದ ಮುಖದಿಂದ ವೇದ್ಯವಾದ ಅನುಭವ ಸ್ವಯಾನುಭಾವವಾಗಿ ಭಕ್ತನು ಆನಂದ ಪರವಶನಾಗುವನು. ಇದು ಭಕ್ತಿಯ ಪರಿಪೂರ್ಣತೆ. ಈ ಮೂರೂ ಒಳಗೊಳ್ಳದಿದ್ದರೆ ಆ ಭಕ್ತಿ ಪರಿಪೂರ್ಣವಾಗುವುದಿಲ್ಲ, ಭಕ್ತ ಅರೆಭಕ್ತನೆನಿಸುವನು. ಜೇಡರ ದಾಸಿಮಯ್ಯ ಶರಣರು, “ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ. ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ ನರಕದಲ್ಲಿಕ್ಕಯ್ಯಾ, ರಾಮನಾಥ.” ಅರೆಭಕ್ತರ ಅವಸ್ಥೆ ಮತ್ತು ಅರೆಭಕ್ತಿಯ ನಿರರ್ಥಕತೆಯನ್ನು ಈ ವಚನದಲ್ಲಿ ತಿಳಿಸುತ್ತಾರೆ.
ಚೆನ್ನಬಸವಣ್ಣನವರು ಪಂಚಾಚಾರಗಳ ಅಳವಡಿಕೆಯಿಂದ ಹೇಗೆ ವ್ಯಕ್ತಿಯೊಬ್ಬ ಪರಿಪೂರ್ಣತೆಯನ್ನು ಹೊಂದಬಹುದು ಎಂದು ಈ ವಚನದಲ್ಲಿ ಹೇಳುತ್ತಾರೆ. “ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ: ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ. ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ.”
ಶರಣ ಉರಿಲಿಂಗಪೆದ್ದಿ “ಲಿಂಗವಂತನು ಲಿಂಗಾಚಾರ, ಸದಾಚಾರ, ಭೃತ್ಯಚಾರ, ಗಣಾಚಾರ, ಶಿವಾಚಾರ, ಸರ್ವಾಚಾರಸಂಪನ್ನನೆನಿಸಿಕೊಳಬಹುದಲ್ಲದೆ ಭಕ್ತನೆನಿಸಿಕೊಳಬಾರದು. ಅನೇಕ ವ್ರತನಿಯಮಂಗಳ ಹಿಡಿದು ನಡೆದು ವ್ರತಸ್ಥನೆನಿಸಿಕೊಳಬಹುದಲ್ಲದೆ ಭಕ್ತನೆನಿಸಿಕೊಳಬಾರದು. ಕರುಣಿ ಶಾಂತ ನಿಸ್ಪೃಹನೆನಿಸಿಕೊಳಬಹುದಲ್ಲದೆ ಭಕ್ತನೆನಿಸಿಕೊಳಬಾರದು. ತನುವ ಕೊಟ್ಟು, ಮನವ ಕೊಟ್ಟು, ಧನವ ಕೊಟ್ಟು ದಾತೃವೆನಿಸಿಕೊಳಬಹುದಲ್ಲದೆ ಭಕ್ತನೆನಿಸಿಕೊಳಬಾರದು” ಎಂದು ಹೇಳುವ ಮೂಲಕ ಭಕ್ತನು ಈ ಎಲ್ಲಾ ಗುಣಗಳ ಆಗರ, ಅಂಥಾ ಭಕ್ತಿ ಮಾತ್ರ ನಮ್ಮನ್ನು ಕಾಯನಿಷ್ಪತ್ತಿ, ಭಾವನಿಷ್ಪತ್ತಿಯೆಡೆಗೆ ಕೊಂಡೊಯ್ಯುವುದು ಎನ್ನುತ್ತಾರೆ. ಆದ್ದರಿಂದಲೇ ಪ್ರಭುದೇವರು- “ದೇವನಾಗಲು ಬಹುದು ಬಸವಣ್ಣನಾಗಲು ಬಾರದು” ಎಂದು ಹೇಳಿ ಬಸವಣ್ಣನಂಥಾ ಭಕ್ತ ಮತ್ಯಾರೂ ಇಲ್ಲ ಎನ್ನುವರು. ಅಂಥಾ ಪರಿಪೂರ್ಣತೆ ಬಸವಣ್ಣನವರಲ್ಲಿ. ಆ ಪರಿಪೂರ್ಣತೆಯ ಸಂಪಾದನೆಯೇ ಭಕ್ತನ ಜೀವನದ ಗುರಿ.
ಪರಿಪೂರ್ಣತೆಯ ಸಂಪಾದನೆ:
ಚೆನ್ನಬಸವಣ್ಣನವರು “ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ? ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ? ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ? ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ? ಭಾವ ಶುದ್ಧವುಳ್ಳವಂಗೆ ಹೂವಿನ ಹಂಗೇಕೆ? ಕೂಡಲಚೆನ್ನಸಂಗಯ್ಯಾ, ನಿಮ್ಮನರಿದಾತಂಗೆ ನಿಮ್ಮ ಹಂಗೇಕೆ?” ಎಂದು ಪ್ರಶ್ನಿಸುತ್ತಾರೆ.
ಶರಣರ ಪ್ರಕಾರ ಭಕ್ತಿಯ ಪರಿಪೂರ್ಣತೆ ಎಂದರೆ ಅದು ಜೀವನದ ಪರಿಪೂರ್ಣತೆಯೇ ಆಗಿದೆ. ಹಾಗಾದರೆ ಜೀವನದ ಪರಿಪೂರ್ಣತೆ ಹೇಗೆ ಸಾಧಿಸಬೇಕು? ಶರಣರ ವಚನಗಳಿಂದ ಅದನ್ನು ಅರಿಯಲು ಪ್ರಯತ್ನಿಸೋಣ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಗಳ ದಾಸನಾಗದೇ ಅವುಗಳ ಅಧೋಮುಖ ಪ್ರವೃತ್ತಿಯನ್ನು ಪಲ್ಲಟಗೊಳಿಸಿ ಊರ್ಧ್ವಮುಖಿಯನ್ನಾಗಿಸುವುದು. ಶಿವ ಎಂಬುದು ಅಖಂಡ ಸೃಷ್ಟಿಯಲ್ಲಿ ಅಖಂಡವಾಗಿರುವ ಚೈತನ್ಯ, ಆ ಮೂಲ ಚೈತನ್ಯವು ಪ್ರತಿಯೊಂದು ಜೀವಿಯಲ್ಲಿಯೂ, ಜಡದಲ್ಲಿಯೂ ನೀರಿನ ಮೇಲಣ ತಾವರೆಯಂತೆ ನೆಲೆಸಿದೆ. ಒಬ್ಬ ವ್ಯಕ್ತಿ ಮತ್ತೊಬ್ಬನ ವಸ್ತುವನ್ನು ಕದ್ದರೆ, ಅಪಹರಿಸಿದರೆ, ಹಿಂಸಿಸಿದರೆ, ಕೊಂದರೆ, ಸುಳ್ಳು ಹೇಳಿದರೆ, ಇನ್ನೊಬ್ಬರೊಡನೆ ಕೋಪಿಸಿಕೊಂಡರೆ, ಮತ್ತೊಬ್ಬರನ್ನು ನೋಡಿ ಅಸಹ್ಯಪಟ್ಟುಕೊಂಡರೆ, ಜರಿದರೆ, ಹೀಯಾಳಿಸಿದರೆ, ಅವರ ಮನಸ್ಸಿಗೆ ಘಾಸಿ ಮಾಡಿದರೆ, ಅದು ಮೂಲತಃ ಶಿವ ಚೈತನ್ಯಕ್ಕೇ ಮಾಡಿದ ಅಪಚಾರವಾದಂತಾಯಿತು. ಅದಕ್ಕೆಂದೇ ಬಸವಣ್ಣನವರು ಏಳು ಅಂಶಗಳುಳ್ಳ ಒಂದು ಸರಳ ಸೂತ್ರವನ್ನು ಕೊಟ್ಟಿದ್ದಾರೆ. ಆ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಾರ್ಥಕ ಜೀವನ ನಡೆಸಿ ಅರ್ಥಪೂರ್ಣ ಭಕ್ತಿಯನ್ನು ಅಳವಡಿಸಿಕೊಂಡಂತಾಗುವುದು.
“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ.”
ಈ ಸೂತ್ರಗಳಲ್ಲಿ ಯಾವುದೇ ಒಂದು ತಪ್ಪಿದರೂ ನಮ್ಮ ಭಕ್ತಿ ಅಪೂರ್ಣ! ಅದು ಭಕ್ತಿಯೇ ಅಲ್ಲ! ಬರೀ ಬೂಟಾಟಿಕೆ ಅಷ್ಟೇ! ಶರಣರು ದೈವೀ ಅನುಗ್ರಹಕ್ಕಾಗಿ ಯಾವುದೋ ಹೊರಗಿನ ಶಕ್ತಿಯನ್ನು ಪೂಜಿಸಲು ಹೇಳಲಿಲ್ಲ, ಬದಲಿಗೆ ಅರ್ಥಪೂರ್ಣ ಆಚರಣೆಗಳನ್ನು ಜೀವನಪೂರ್ತಿ ಆಳವಡಿಸಿಕೊಂಡರೆ ಅದೇ ಪೂಜೆ, ಅದೇ ದೇವರನ್ನು ಒಲಿಸಿಕೊಳ್ಳುವ ಪರಿ ಎಂದರು. ಇದು ಶರಣರು ಈ ಲೋಕಕ್ಕೆ ಕೊಟ್ಟ ಸಮಗ್ರವಾದ ಭಕ್ತಿ ಮಾರ್ಗ.
ಭಕ್ತನೆನಿಸಿಕೊಂಡವನು ಅರ್ಥ ಪ್ರಾಣ ಅಭಿಮಾನದಲ್ಲಿ ವಂಚನೆಯಿಲ್ಲದಿರಬೇಕು ಹಾಗೂ ಆತನ ಮನದ ಲಂಪಟತನ ಹಿಂಗಿರಬೇಕು. ಇದು ಅತೀ ಸೂಕ್ಷ್ಮ ವಿಚಾರ, ಇಲ್ಲಿ ಬಹಿರಂಗದ ವಿಚಾರಗಳಿಗಿಂತ ಅಂತರಂಗದ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ನಾವು ಸಂಪಾದಿಸಿದ/ಸಂಪಾದಿಸುವ ಹಣದಲ್ಲಿ ಮೋಸ ಕಪಟತನವಿರಬಾರದು, ಹಾಗೂ ಅದರ ಬಳಕೆಯಲ್ಲೂ ಕಪಟತನವಿರಬಾರದೆಂದು ಸೂಕ್ಷ್ಮವಾಗಿ ಅರುಹಿದ್ದಾರೆ. ಈ ಗುಣಗಳಿಲ್ಲದವನಲ್ಲಿ ಹೃದಯಶುದ್ಧವಿರದು, ಆದ್ದರಿಂದ ಹದುಳಿಗರಾದರವರಲ್ಲಿಪ್ಪ ಕೂಡಲಸಂಗಮದೇವ ಎಂದು ಹೇಳುತ್ತಾರೆ ಬಸವಣ್ಣನವರು. ಅಹಂಕಾರಿಯಾಗದೆ ಶರಣೆನ್ನು, ಮನವೆ, ಕೂಡಲಸಂಗನ ಶರಣರಲ್ಲಿ ಭಕ್ತಿಯ ನೋನುವಡೆ ಕಿಂಕಿಲನಾಗಿ ಬದುಕು ಮನವೆ ಎಂದು ಮನಕ್ಕೆ ಅಹಂಕಾರವೆಂಬ ಅಜ್ಞಾನವನ್ನು ಕಳಚುವಂತೆ ಪ್ರೇರೇಪಿಸುತ್ತಾರೆ. “ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ” ಎಂದು ಹೇಳುವಲ್ಲಿ ಜಂಗಮವನ್ನು ಕಡೆಗಣಿಸಿದ ಭಕ್ತಿ ಭಕ್ತಿಯೇ ಅಲ್ಲ ಎನ್ನುತ್ತಾರೆ ಬಸವಣ್ಣನವರು. ಹಮ್ಮು ಬಿಮ್ಮು ಭಕ್ತನಿಗೆ ಶೋಭಿಸದು, ಭಕ್ತನು ಸದಾ ಕಿಂಕಿಲನಾಗಿರಬೇಕು. ಪ್ರತಿಯೊಬ್ಬ ಮಾನವನೂ ಸಮಸ್ತ ಮಾನವರ ಏಳಿಗೆಯನ್ನು ಬಯಸಬೇಕು “ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು, ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ, ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವಾ.”
ಮಾನವ ಮಾನವರಲ್ಲಿ ಭಿನ್ನತೆಯನ್ನು ಅರಸದೇ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನಿಯಮದಂತೆ ಬದುಕಬೇಕೆಂಬುದು ಧರ್ಮಪಿತರ ಆಶಯ. “ಹಿಡಿದುದ ಬಿಡದಿದ್ದಡೆ ಕಡೆಗೆ ಚಾಚುವ, ಅಲ್ಲದಿದ್ದಡೆ ನಡುನೀರಲದ್ದುವ ನಮ್ಮ ಕೂಡಲಸಂಗಮದೇವ” ಭಕ್ತನು ಸತ್ಪಥವನ್ನೇ ಹಿಡಿಯಬೇಕು, ಹಿಡಿದ ಸತ್ಪಥವನ್ನು ಬಿಡದೇ ಕ್ರಮಿಸಿ ಈಜಿ ದಡ ಸೇರಬೇಕು. ದೃಢವಿಲ್ಲದ ಭಕ್ತಿ ತಳಒಡೆದ ಮಡಕೆಯಂತೆ. ಕೂಡಲಸಂಗಮದೇವರ ಭಕ್ತಿ ಅಳಿಮನದವರಿಗೆ ಅಳವಡದಯ್ಯಾ ಎನ್ನುತ್ತಾರೆ ಬಸವಣ್ಣನವರು.
“ಭಕ್ತಿ ಸುಭಾಷೆಯ ನುಡಿಯ ನುಡಿವೆ,
ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ.
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ”
ಭಕ್ತನಲ್ಲಿ ನಡೆ-ನುಡಿ, ಅಂತರಂಗ-ಬಹಿರಂಗಗಳು ಏಕೀಭವಿಸಿರಬೇಕು, ನಮ್ಮ ಮಾತು ನಯ-ವಿನಯಗಳಿಂದ ಕೂಡಿದ್ದು ಅದು ಕೇಳುಗರಿಗೆ ಸುಭಾಷೆಯಾಗಿರಬೇಕು, ನಾವಾಡುವ ಮಾತು ಇತರರ ಮನದ ಅಜ್ಞಾನದ ಕತ್ತಲೆಯನ್ನು ಕಳೆದು ಅವರಲ್ಲಿ ಸುಜ್ಞಾನದ ಬೆಳೆಯನ್ನು ಬೆಳೆಯಬೇಕು. ನಡೆ ನುಡಿ ಒಂದಾಗದ ಭಕ್ತಿ ಅದು ಕೇವಲ ಶುಷ್ಕಭಕ್ತಿ, ಸುಟ್ಟ ಮಡಕೆಯ ಒಳಗೆ ಒಂದು ಬೀಜ ಬಿತ್ತಿದರೆ ಅದು ಮೊಳೆತು ಬೆಳೆಯಬಲ್ಲುದೇ? ಖಂಡಿತಾ ಸಾಧ್ಯವಿಲ್ಲ ಹಾಗೇ ಸದಾಚಾರವಿಲ್ಲದ ಭಕ್ತಿ ಕೂಡಾ ಎಂದಿಗೂ ಸುಫಲವನ್ನೀಯಲು ಸಾಧ್ಯವಿಲ್ಲ ಎಂಬುದು ಶರಣರ ಅಭಿಮತ.
“ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು, ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ” ನಮ್ಮ ಮಾತು ಸರಳ, ನೇರ ಹಾಗೂ ಪಾರದರ್ಶಕವಾಗಿರಬೇಕು, ಮಾತೆಂಬುದು ಜ್ಯೋತಿರ್ಲಿಂಗ, ನುಡಿಯೆಂಬುದು ಪರತತ್ವ. ಮಾತು ಇನ್ನೊಬ್ಬರನ್ನು ಹೀಯಾಳಿಸುವಂತಿರಬಾರದು, ಅವರ ಬಾಳಿಗೆ ಬೆಳಕಾಗುವಂತಿರಬೇಕು.
ಸತ್ಯಕ್ಕ ಎಂಬ ಶರಣೆ ಭಕ್ತನೊಬ್ಬನ ಪ್ರಾಮಾಣಿಕತೆ ಹೇಗಿರಬೇಕೆಂದು ತಿಳಿಸುತ್ತಾರೆ- “ಲಂಚವಂಚನಕ್ಕೆ ಕೈಯಾನದಭಾಷೆ, ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ ನಾನು ಕೈ ಮುಟ್ಟಿ ಎತ್ತಿದೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಅರ್ಚನೆ ಪೂಜನೆ ನೇಮವಲ್ಲ; ಮಂತ್ರತಂತ್ರ ನೇಮವಲ್ಲ; ಧೂಪ ದೀಪಾರತಿ ನೇಮವಲ್ಲ; ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.” ಶರಣರು ನಡೆದ ಪಥ ಸದಾ ಬೆಳದಿಂಗಳಾಗಿ ಹುಣ್ಣಿಮೆ ಚಂದ್ರನಂತೆ ನಮ್ಮ ಭಕ್ತಿಪಥಕ್ಕೆ ಬೆಳಕನ್ನು ಚೆಲ್ಲುತ್ತಾ ನಮ್ಮನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುತ್ತದೆ. ಹೀಗಿರದ ಭಕ್ತಿ ಭಕ್ತಿಯೇ ಅಲ್ಲ ಎನ್ನುತ್ತಾರೆ ಶರಣೆ ಸತ್ಯಕ್ಕನವರು.
ಚೆನ್ನಬಸವಣ್ಣನವರು ಭಕ್ತನ ನಡೆಯ ಕುರಿತು ಬೆಳಕು ಚೆಲ್ಲುತ್ತಾರೆ “ಭಕ್ತ ಶಾಂತನಾಗಿರಬೇಕು, ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು, ಭೂತಹಿತವಹ ವಚನವ ನುಡಿಯಬೇಕು, ಗುರುಲಿಂಗ ಜಂಗಮದಲ್ಲಿ ನಿಂದೆಯಿಲ್ಲದಿರಬೇಕು, ಸಕಲ ಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು, ತನುಮನಧನವ ಗುರುಲಿಂಗ ಜಂಗಮಕ್ಕೆ ಸವೆಸಲೇಬೇಕು, ಅಪಾತ್ರದಾನವ ಮಾಡಲಾಗದು, ಸಕಲೇಂದ್ರಿಯಗಳ ತನ್ನ ವಶವ ಮಾಡಬೇಕು, ಇದೇ ಮೊದಲಲ್ಲಿ ಬೇಹ ಶೌಚ ನೋಡಾ. ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇ ಸಾಧನ ಕೂಡಲಚೆನ್ನಸಂಗಮದೇವಾ.” ಈ ಗುಣಗಳು ಅಳವಡದಾತನು ಹೇಗೆ ಭಕ್ತನಾದಾನು?
ದೇಶಿಕೇಂದ್ರ ಸಂಗನಬಸವಯ್ಯ ಶರಣರು, “ಪರಧನಕ್ಕೆ ಇಚ್ಫೈಸುವನ್ನಕ್ಕರ, ಪರಸ್ತ್ರೀಗೆ ಮೋಹಿಸುವನ್ನಕ್ಕರ, ಪರದೈವವ ಭಜಿಸುವನ್ನಕ್ಕರ, ಪರಪಾಕವ ಕೊಂಬನ್ನಕ್ಕರ, ಪರಹಿಂಸೆಗೆಡದನ್ನಕ್ಕರ ಮಹೇಶ್ವರನೆನಲಾಗದು. ಹುಸಿ ನಾಶವಾಗದನ್ನಕ್ಕರ, ಕಳವು ಕುಚೇಷ್ಟೆಯ ನೀಗದನ್ನಕ್ಕರ, ಉಪಾಧಿಯನುಸರಣೆಯ ದಾಟದನ್ನಕ್ಕರ ಮಹೇಶ್ವರನೆನಲಾಗದು. ಭವಿಯಸಂಪರ್ಕ ಬಿಚ್ಚದನ್ನಕ್ಕರ, ವೇಷಗಳ್ಳರ ಜರಿದು ನೂಕದನ್ನಕ್ಕರ, ಲೋಕಲೌಕಿಕಚರಿಯ ಹರಿಯದನ್ನಕ್ಕರ, ಸ್ವತಂತ್ರತ್ವಾನುಭಾವಿಯಾಗದನ್ನಕ್ಕರ ಮಹೇಶ್ವರನೆನಲಾಗದು. ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವೆಂದು ನಷ್ಟಬದ್ಧರಿಗೆರಗುವ ಭ್ರಷ್ಟಭವಿಗಳಿಗೊಮ್ಮೆ ಮಹೇಶ್ವರನೆಂದರೆ ಅಘೋರನರಕ ತಪ್ಪದು” ಎಂದು ಭಕ್ತಿಯ ನಿಜವಾದ ಮಾರ್ಗವನ್ನು ತೋರಿಸುತ್ತಾರೆ.
ಶರಣರು ಅರಿತು ಆಚರಿಸಿ ಅನುಭಾವಿಸಿದ ಇಂಥಾ ಘನತರವಾದ ನೈಜ ಭಕ್ತಿಯ ಪಥವನ್ನು ನಾವೆಲ್ಲರೂ ಅರಿತು ಆಚರಿಸಿ ಅನುಭಾವಿಸಬೇಕೇ ಹೊರತು ಕೇವಲ ಕೃತಕ ಭಕ್ತಿಯ ಆಚರಣೆಯಿಂದ ಯಾವ ಪ್ರಯೋಜನವೂ ಇಲ್ಲ!!! ಶರಣರು ಅನುಭಾವಿಸಿದ ಭಕ್ತಿ ಹೊರಗಣ ವಸ್ತುಗಳನ್ನು ತನಗೆ ಪೂರೈಸೆಂದು ದೇವರಿಗೆ ಮೊರೆಹೊಕ್ಕಿದ್ದಲ್ಲ. ತಮ್ಮನ್ನು ತಾವು ನೀತಿವಂತರನ್ನಾಗಿ, ಸತ್ಯವಂತರನ್ನಾಗಿ, ಸದಾಚಾರ ನಡತೆಯುಳ್ಳವರನ್ನಾಗಿ ರೂಪಿಸಿಕೊಳ್ಳುವ ಮೂಲಕ ಜೀವನದ ಪರಿಪೂರ್ಣತೆಯೆಡೆಗೆ ಪಯಣಿಸುವುದೇ ನಿಜವಾದ ಭಕ್ತಿ. ಅಂಥಾ ಭಕ್ತಿಯ ಪಥವನ್ನು ಅಳವಡಿಸಿಕೊಂಡರೆ ನಾವೂ ಜೀವನದ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯ. ಅಂಥದೊಂದು ಪ್ರಾಮಾಣಿಕ ಪ್ರಯತ್ನ ನಮ್ಮಿಂದ ನಡೆಯಲಿ.
Comments 13
D P Prakash
Dec 4, 2018ಶರಣರ ಭಕ್ತಿ ಪಥ ಮತ್ಯಾವುದೇ ಧಾರ್ಮಿಕ ಚಳವಳಿಗಳಿಗಿ೦ತ ಅತ್ಯ೦ತ ವಿಶಿಷ್ಟವಾದುದು. ಅದು ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳ್ಳದೇ ಸಮಾಜದ ಸರ್ವಾ೦ಗವನ್ನೂ ವ್ಯಾಪಿಸುವ ಹಾಗೂ ಆ ಮೂಲಕ ವ್ಯಕ್ತಿಯ ಆ೦ತರಿಕ ಮತ್ತು ಬಾಹಿರ ಚಟುವಟಿಕೆಗಳನ್ನು ಶುದ್ಧಿಗೊಳಿಸುವ ಸಾಧನವೂ ಆಗಿದೆ. ಇದನ್ನು ಅತ್ಯ೦ತ ಸಮರ್ಥವಾಗಿ ತಮ್ಮ ಲೇಖದಲ್ಲಿ ಶರಣ ಪ೦ಚಾಕ್ಷರಿಯವರು ವಿಶ್ಲೇಷಿಸಿದ್ದಾರೆ.
ಶಾರದಾ ಸೊಣಬದ
Dec 5, 2018ಭಕ್ತಿ ಅನ್ನುವುದು ಗೊಂದಲದ ಶಬ್ದವೇ. ಯಾವುದು ಭಕ್ತಿ? ನಂಬುವುದು, ಪೂಜೆ ಮಾಡಉವುದು, ವ್ರತ ಮಾಡೋದು, ಜಪ ಮಾಡೋದು, ತಪ ಮಾಡೋದು, ಕಾಯಿ ಒಡೆಯೋದು, ಹರಕೆ ಹೊರೋದು, ಗುಡಿಗೆ ಹೋಗೋದು……. ಇಂಥ ಆಚರಣೆಗಳೇ ನಮಗೆ ಗೊತ್ತು, ಬಸವಣ್ಣನವರ ಭಕ್ತಿ ಬಲು ಕಠಿಣ ಅಣ್ಣೋರೆ.
ಶುಭಾ
Dec 8, 2018ಭಕ್ತಿಯ ವಿವಿಧ ಮುಖಗಳು. ಉತ್ತಮ ಲೇಖನ
veena narihal
Dec 9, 2018ಭಕ್ತಿ ಎಂದರೆ ಸ್ವಾರ್ಥದ ಆಸೆಗಳ ಪೂರೈಕೆಯಲ್ಲ. ತನಗಾಗಿ ಏನನ್ನೂ ಬಯಸದ ಪ್ರಾರ್ಥನೆಯೂ ಅಲ್ಲ. ಅದು ಸಂಪೂರ್ಣ ವ್ಯಕ್ತಿತ್ವ ವಿಕಾಸ ಎಂದು ವಚನಗಳ ಮೂಲಕ ತಿಳಿಸಿದ ನಿಮ್ಮ ಲೇಖನ ಚೆನ್ನಾಗಿದೆ ಅಣ್ಣಾ.
ಜಾ್ಹ್ನವಿ ದಿನಕರ್
Dec 10, 2018ಆಧ್ಯಾತ್ಮಿಕ ಸೌಧಕ್ಕೆ ಭಕ್ತಿಯೇ ಸೋಪಾನ, ಅದೂ ಬಸವೇಶ್ವರರು ಹೇಳುವ ಭಕ್ತಿ ಎನ್ನುವ ನಿಮ್ಮ ಮಾತು ಅರ್ಥಪೂರ್ಣ, ಹೊಸ ವಿಚಾರಗಳಿಗೆ ಹಚ್ಚುವ ಲೇಖನ.
ganesh j.k
Dec 11, 2018ಭಕ್ತಿ ಪಥ, ಭಕ್ತಿ ಪಂಜರ ಎನ್ನುವ ಶಬ್ದಪುಂಜಗಳಿಗೆ ವಿವರಣೆ ಇನ್ನೂ ಬೇಕಾಗಿತ್ತು. ಸರ್ವಾಂಗೀಣ ವಿಕಾಸದ ಮೂಲ ಭಕ್ತಿ ಎನ್ನುವ ವಿಚಾರ ಸರಿಯಾಗಿದೆ. ಪರಿಪೂರ್ಣ ವಿಕಾಸದಲ್ಲೆ ಇವು ಸೇರಿ ಹೋಗುತ್ತವೆ. ಎಷ್ಟು ಜನರಿಗೆ ಇದು ಅರ್ಥವಾಗುತ್ತದೆ?
SIDDHALINGAIAH TUMKUR
Dec 11, 2018ಭಕ್ತಿಯನ್ನು ವಿವರಿಸುವ ಚಿತ್ರ ಸ್ಪಷ್ಟವಾಗಿಲ್ಲ. ಎಷ್ಟು ನೋಡಿದರೂ ಗೊತ್ತಾಗಲಿಲ್ಲ. ಆದರೆ ನಿಮ್ಮ ಬರಹ ಭಕ್ತಿಯನ್ನು ಸುಂದರವಾಗಿ ತೋರಿಸಿದೆ.
Karunakara jevargi
Dec 13, 2018ಭಕ್ತಿ ಪಥ, ಭಕ್ತಿ ಪಂಜರ ಒಂದಕ್ಕೊಂದು ವಿರುದ್ಧವಾಗಿ ಕಂಡರೂ ಈ ಶಬ್ದಗಳ ಒಳ ಅರ್ಥ ಒಂದೇ ಎಂದು ಹೇಳಿದ್ದಿರಿ, ಆದರೆ ಇವೆರಡೂ ವಿಭಿನ್ನ ಸನ್ನಿವೇಶಗಳಲ್ಲಿ ವ್ಯಕ್ತವಾದ ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ ಅಲ್ಲವೆ?
gowramma matagal
Dec 16, 2018ದೃಢವಿಲ್ಲದ ಭಕ್ತಿ ತಳ ಒಡೆದ ಮಡಕೆಯಂತೆ, ಕೂಡಲಸಂಗಮದೇವರ ಭಕ್ತಿ ಅಳಿಮನದವರಿಗೆ ಅಳವಡದಯ್ಯ- ಎನ್ನುವ ಬಸವಣ್ಣನವರ ಮಾತು ಅಕ್ಷರಶ ಸತ್ಯ. ನೀವು ಹೇಳುವುದೇ ನಿಜವಾದ ಭಕ್ತಿ ಆದಲ್ಲಿ ಅದು ನಮ್ಮಿಂದ ಸಾಧ್ಯವೇ? ಒಂದೇ ಸಮನೆ ಪ್ರಶ್ನೆ ಕೊರೆಯುತ್ತಿದೆ ತಲೆಯಲ್ಲಿ.
Shekhar G.P
Dec 17, 2018ಶೇಖರ ಗುರುಪಾದಪ್ಪ ಪಾವಟೆ
ಭಕ್ತಿಗೆ ನೂರೆಂಟು ಮುಖಗಳಿವೆ, ಶ್ರದ್ಧಾ ಭಕ್ತಿಯಲ್ಲಿ ಅಂಧಭಕ್ತಿಯೂ ಒಂದು. ಯಾವುದಕ್ಕೆ ಫಲ ಸಿಗುತ್ತೆ, ಯಾವುದಕ್ಕೆ ಸಿಗುವುದಿಲ್ಲ ಎಂದು ಹೇಗೆ ಹೇಳುತ್ತೀರಿ? ದೇವಸ್ಥಾನಗಲಿಗೆ ಅಂಡಲೆಯುವ ಜನರಿಗೆ ಈ ಲೇಖನ ಕೊಟ್ಟರೆ ಅವರ ರಿಯಾಕ್ಷನ್ ಹೇಗಿರುತ್ತದೆ ಅಂತ ಯೋಚಿಸುತ್ತಿದ್ದೆ. ಆಧುನಿಕ ಮನಸ್ಸುಗಳಿಗೆ ಮಾತ್ರ ಇಂಥ ವಿಚಾರಗಳು ಅರ್ಥವಾಗುತ್ತವೆ ಸರ್.
Shivaraj Bannuru
Dec 22, 2018ಬಯಲು ಬ್ಲಾಗ್ ನನ್ನ ಗಮನಕ್ಕೆ ಬಂದದ್ದು ಮೊನ್ನೆ ಮೊನ್ನೆ. ಉತ್ಕೃಷ್ಟವಾದ ಓದು ತಾಣ. ಮನಸ್ಸು-ಹೃದಯ ತುಂಬುತ್ತದೆ. ಎಲ್ಲ ಲೇಖನಗಳು ಚೆನ್ನಾಗಿವೆ. ಇನ್ನು ಮುಂದೆ ನಾನು ನಿಮ್ಮ ರೆಗ್ಯುಲರ್ ಓದುಗ.
ಬಸವರಾಜ ಹಂಡಿ
Dec 27, 2018ಭಕ್ತಿಯು ಎಲ್ಲ ಆಯಾಮಗಳನ್ನು ಒಳಗೊಂಡಿದೆ. ಭಕ್ತಿಯು ಪರಿಪೂರ್ಣ ವೃತ್ತ.
ಪಂಚಾಕ್ಷರಿ ಶರಣರು ಭಕ್ತಿಯನ್ನು ಎಲ್ಲ ಆಯಾಮಗಳಿಂದ ವಿಶ್ಲೇಷಿಸಿ ಭಕ್ತಿಯ ಬಗ್ಗೆ ಭಕ್ತಿ ಪೂರ್ವಕವಾಗಿ/ದೃಷ್ಟಿಯಿಂದ ಬರೆದಿದ್ದಾರೆ.
ತಾಂತ್ರಿಕ( technical ) ಶೈಲಿಯಿಂದ ಈ ಲೇಖನವನ್ನು ಬರೆದಿದ್ದಾರೆ. ಜನ ಅಜ್ಞಾನದಿಂದ ಯಾವದೇನೆಲ್ಲ ಭಕ್ತಿ ಎಂದು ಕರೆಯುತ್ತಾರೆ ಅಂತ ಮೊದಲಿಗೆ ಉದಾಹರಣೆಗಳ ಮುಖಾಂತರ ಸೊಗಸಾಗಿ ತಿಳಿಸಿದ್ದಾರೆ.
ಶರಣ ಚಳವಳಿಯ ಕೇಂದ್ರ ಬಿಂದು – ಭಕ್ತಿ.
ಭಕ್ತಿ ಪುನರ್ಜನ್ಮ ತಾಳಿದ್ದು 12 ನೆಯ ಶತಮಾನದಲ್ಲಿ.
ಭಕ್ತಿಗೆ ಪುನರ್ಜನ್ಮ ಕೊಟ್ಟುವರು ಬಸವಣ್ಣ ಹಾಗು ಬಸವಾದಿ ಶರಣರು.
ಭಕ್ತಿಯನ್ನು ವ್ಯಾಖ್ಯಾನ ಮಾಡುವದು ಅಸಾಧ್ಯ. ಎಲ್ಲವನ್ನು ಒಳಗೊಂಡಿದೆ. ಎಲ್ಲದಕ್ಕು ಮೂಲ ಭಕ್ತಿನೆ.
ವಚನಗಳ ಆಯ್ಕೆ ಹಿಡಿದುಕೊಂಡು, ಎಲ್ಲವು ಸುಂದರವಾಗಿ ಹಾಗು ಸರಳವಾಗಿ ಮೂಡಿ ಬಂದಿದೆ.
ಪಂಚಕ್ಷರಿ ಶರಣರಗೆ ನಮ್ಮೆಲ್ಲ ಬಸವ ಅನುಯಾಯಿಗಳಿಂದ ಈ ಜ್ಞಾನ ದಾಸೋಹಕ್ಕೆ ಶರಣು ಶರಣಾರ್ಥಿಗಳು ???
ತಿಪ್ಪೇಸ್ವಾಮಿ, ಎ
May 10, 2021ಭಕ್ತಿಯ ಬಗ್ಗೆ ..ಪತ್ರಿಕೆ ಗಳು…ಇದ್ದರೆ..ವಿಳಾಸ ಕಳುಹಿಸಿ.. ಧನ್ಯವಾದಗಳು..