ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
ನೆತ್ತಿ ಸುಡುವ ಬಿಸಿಲಿನಲ್ಲಿ
ತನ್ನ ನೆರಳ ತಾ ತುಳಿದುಕೊಂಡು.
ಮನೆಗೆ ಹೋಗದೆ,
ಮಡದಿ ಮಕ್ಕಳಿಗೆ ತಿಳಿಸದೆ,
ಮತ್ತೆ ಮರಳಿ ಬಾರದ,
ಹೊರಳಿ ತಿರುಗಿ ನೋಡದ,
ಭಾರ ತುಂಬಿದ ಎದೆಯಲ್ಲಿ.
ನಿರಾಳ ನಿರ್ಲಿಪ್ತ ಹೆಜ್ಜೆಗಳಲ್ಲಿ
ಹೊರಟೆ ಬಿಟ್ಟ ಬಸವಣ್ಣ.
ದಾರಿಯಲಿ ಶರಣರ ಅಳಲು
ಮಧ್ಯೆ ಚೆನ್ನಬಸವನ ಭೇಟಿ
ಭುಜ ತಟ್ಟಿ ಹೇಳಿದ ಬಸವಣ್ಣ-
ಅನುಭವ ಮಂಟಪಕೆ
ಕಾದಿದೆ ಕುತ್ತು,
ವಚನಗಳ ಉಳಿಸಿಕೊಳ್ಳಿ
ಅವು ಜಗದ ಸೊತ್ತು.
ವೈದಿಕರ ಕ್ರೋಧದಲಿ
ಹೊತ್ತಿದೆ ಕಿಚ್ಚು.
ವಿಷಮತೆ ಕುಣಿಯುತಿದೆ
ಜಾತಿ ವರ್ಗದ ಹುಚ್ಚು.
ಮರ್ತ್ಯದ ಮಹಾಮನೆಗೆ
ಕೊನೆ ಶರಣು ಹೇಳುತಲಿ
ನಸು ನಗುತ ನಡೆದನು
ಮಹಾಬೆಳಗಿನತ್ತ.
ಬಿಟ್ಟು ಹೋದ ಬಸವಣ್ಣ
ನೆತ್ತಿ ಸುಡುವ ಬಿಸಿಲಿನಲ್ಲಿ
ತನ್ನ ನೆರಳ ತಾ ತುಳಿದುಕೊಂಡು.
Comments 1
Dr Shashikant Pattan
Jun 5, 2018ಬಯಲಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ನನ್ನ ಎರಡು ಕವನಗಳು ಬಿಟ್ಟು ಹೋದ ಬಸವಣ್ಣ ಮತ್ತು ಇದ್ದ ಅಲ್ಲಮ ಇಲ್ಲದಂತೆ ,ಪ್ರಕಟಗೊಂಡಿವೆ .ಇಂದು ನನ್ನ ಮಿತ್ರರೊಬ್ಬರು ತಿಳಿಸಿದರು. ಕವನದ ಕೊನೆಗೆ ನನ್ನ ಹೆಸರು ಕಾಣಲಿಲ್ಲ.ಇದು ಯಾವ ಕಾರಣಕ್ಕೆ ಎಂದು ತಿಳಿಯಬಹುದೇ ??