ನೆಲದ ನಿಧಾನ
ನನ್ನ ಶರಣರು ಅವರು
ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು
ಕಕ್ಕುಲತೆಯಿಂದ ಬದುಕ ಕಟ್ಟಿದವರು
ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು
ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು.
ನನ್ನ ಶರಣರು ಅವರು-
ಸತ್ಯದ ಕೂರಲಗ ಕಟ್ಟಿಕೊಂಡವರು
ಅನ್ಯಾಯ ಅಸಮತೆಗೆ ಸಿಡಿದೆದ್ದು ನಿಂತವರು
ಸ್ವರ್ಗ ನರಕಗಳನ್ನು ದೂರ ಅಟ್ಟಿದವರು
ಹೋಮ-ಹವನಗಳಿಗೆ ನೀರು ಬಿಟ್ಟವರು.
ನನ್ನ ಶರಣರು ಅವರು-
ಸಾವ ಲೆಕ್ಕಿಸದೆ ಸಾಹಿತ್ಯ ಉಳಿಸಿದವರು
ನುಡಿಯಲ್ಲಿ ನಡೆ ನಿಲಿಸಿ ನಿರಾಳರಾದವರು
ಬಯಲ ಹೊಲಬಿನಲಿ ಕರಗಿ ಹೋದವರು
ನಿತ್ಯ ಪ್ರಜ್ಞೆಯಾಗಿ ನನ್ನ ಕಾಡುವವರು.
Comments 1
padmalaya nagraj
May 10, 2019exellent poem