Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
Share:
Articles April 29, 2018 ಡಾ. ಶಶಿಕಾಂತ ಪಟ್ಟಣ

ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ

ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರನಾಯಕ ಮಡಿವಾಳ ಮಾಚಿದೇವರು. ಕಲ್ಯಾಣ ಕ್ರಾಂತಿಯು ತನ್ನ ಕೊನೆಯ ದಿನಗಳಲ್ಲಿ ರಕ್ತಸಿಕ್ತವಾಗಿ ಮಾರ್ಪಟ್ಟಾಗ, ವಚನಗಳಿಗೆ ಸನಾತನಿಗಳಿಂದ ಆಪತ್ತು ವಿಪತ್ತು ಬಂದೊದಗಿದಾಗ, ವಚನಗಳ ಸಂರಕ್ಷಣೆಗೆ ಮುಂದಾದ ಧೀರ ಗಣಾಚಾರಿ ಮಾಚಿದೇವರು. ಶರಣರು ತಮ್ಮ ವಿಚಾರಗಳನ್ನು, ಚಿಂತನೆಗಳನ್ನು, ಪ್ರಗತಿಪರ ಆಲೋಚನೆಗಳನ್ನು ವಚನಗಳಲ್ಲಿ ನಿ���್ಭೀಡೆಯಿಂದ ದಾಖಲಿಸಿದ್ದರು. ಇವು ಮುಂದಿನ ಜನಾಂಗಕ್ಕೆ ಸುರಕ್ಷಿತವಾಗಿ ತಲುಪಲು ಅವುಗಳ ಸಂರಕ್ಷಣೆ ಅತ್ಯಗತ್ಯವಾಗಿತ್ತು. ಹೀಗಾಗಿ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಅವುಗಳನ್ನು ಒಂದೆಡೆ ಕ್ರೋಢೀಕರಿಸಿ, ಬಿಜ್ಜಳನ ಮಗ ಸೋವಿದೇವ ಹಾಗೂ ಅವನ ಸೈನ್ಯದ ದಾಳಿಯಿಂದ ಸಾಹಿತ್ಯ ಉಳಿಸಲು ಮಡಿವಾಳ ಮಾಚಿದೇವರು ಖಡ್ಗ ಹಿಡಿಯಬೇಕಾಯಿತು, ರಣರಂಗಕ್ಕೆ ಧುಮುಕ ಬೇಕಾಯಿತು.

ಬಸವ ನಿಷ್ಠ ವಚನಕಾರ ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರು ಇಂದಿನ ಬಿಜಾಪುರ ಜಿಲ್ಲೆಯ ಹಿಪ್ಪರಗಿ (ದೇವರ ಹಿಪ್ಪರಗಿ) ಯಲ್ಲಿ ಜನ್ಮ ತಾಳಿದರು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಚೆನ್ನಬಸವಣ್ಣ ಮತ್ತು ಮರುಳ ಶಂಕರದೇವರ ವಚನಗಳಲ್ಲಿ ಮಾಚಿದೇವರ ಪ್ರಸ್ತಾಪ ಬರುತ್ತದೆ. ಹೀಗೆ ಅವರೆಲ್ಲರ ಪ್ರೀತಿಗೆ ಪಾತ್ರರಾಗಿ ಅವರಿಂದ ಸ್ತುತಿಗೆ ಒಳಗಾಗುತ್ತಾರೆ ಮಡಿವಾಳ ಮಾಚಿದೇವರು.

ಅನೇಕ ಲಿಂಗಾಯತ ಕೃತಿಗಳಲ್ಲಿ ಮಡಿವಾಳ ಮಾಚಿದೇವರ ಶೌರ್ಯವನ್ನು ಕಥೆ ಹಾಗೂ ರೂಪಕಗಳಲ್ಲಿ ಚಿತ್ರಿಸಲಾಗಿದೆ. ಜನಪದಿಗರಂತೂ ಮಾಚಿದೇವರ ನಿಷ್ಠೆ, ಭಕ್ತಿ, ಬದ್ಧತೆಯನ್ನು ಕೊಂಡಾಡಿದ್ದಾರೆ. ಮಾಚಿದೇವರ ಹುಟ್ಟು ದೇವರ ಹಿಪ್ಪರಗಿಯಲ್ಲಾದರೂ ಅವರ ಕಾರ್ಯಕ್ಷೇತ್ರವು ಕಲ್ಯಾಣವಾಗಿತ್ತು. ಶರಣರ ಬಟ್ಟೆಗಳನ್ನು ಮಡಿ ಮಾಡುವ, ಅಂದರೆ ಶರಣರ ಬಟ್ಟೆಗಳನ್ನು ಒಗೆದು, ಹಸನುಗೊಳಿಸಿ ಶುಭ್ರ ಮಾಡಿ ಅವುಗಳನ್ನು ಅವರವರ ಮನೆಗಳಿಗೆ ತಲುಪಿಸುವ ಪಾವನ ಕಾಯಕವನ್ನು ಮಾಚಿದೇವರು ಕೈಗೊಂಡಿದ್ದರು.

ಪುರಾಣವೊಂದರಲ್ಲಿ ಬರುವ ಮಾಚಿದೇವರ ಕಾಯಕ ನಿಷ್ಠೆಯ ಕಥೆ ಹೀಗಿದೆ. ಇವರ ಕಾಯಕವನ್ನು ಕಂಡು ಬೆರಗಾಗಿ ಆಸ್ಥಾನದ ಅನೇಕ ಮಂತ್ರಿಗಳು ದೊರೆ ಬಿಜ್ಜಳನ ಬಳಿ ರಾಣಿಯರ ಬಟ್ಟೆಗಳನ್ನು ಮಡಿ ಮಾಡಿಸಲು ಸಲಹೆ ನೀಡುತ್ತಾರೆ. ರಾಜ ಬಿಜ್ಜಳನು ಮಡಿವಾಳ ಮಾಚಿದೇವನಿಗೆ ಆಜ್ಞೆ ಹೊರಡಿಸಿ ಬಿಜ್ಜಳನ ಮತ್ತು ಅರಸು ಮನೆತನದ ಬಟ್ಟೆಗಳನ್ನು ಮಡಿ ಮಾಡಲು ಸೂಚಿಸುತ್ತಾನೆ. ಇದಕ್ಕೊಪ್ಪದ ಮಾಚಿದೇವರು ರಾಜನ ಆಜ್ಞೆಯನ್ನು ತಿರಸ್ಕರಿಸುತ್ತಾರೆ. ಇದರಿಂದ ಕುಪಿತಗೊಂಡ ರಾಜಭಟರು ರಾಜ ಬಿಜ್ಜಳನಿಗೆ ಮಡಿವಾಳ ಮಾಚಿದೇವರ ನಿರಾಕರಣೆಯನ್ನು ಬಿತ್ತರಿಸುತ್ತಾರೆ. ಆತನಿಗೆ ಎಂಥ ಸೊಕ್ಕಿರಬೇಡ ಎಂದು ದೊರೆ ಬಿಜ್ಜಳ ಕೆರಳುತ್ತಾನೆ. ಮಾಚಿದೇವರನ್ನು ಕರೆತರಲು ಮದಕರಿ ಸೇನೆಯನ್ನು ಕಳಿಸಿಕೊಡುತ್ತಾನೆ. ಆನೆ ಸೈನ್ಯವು ಮಾಚಿದೇವರ ಮನೆಗೆ ಬಂದು ರಾಜಾಜ್ಞೆ ಪಾಲಿಸಲು ಸೂಚಿಸುತ್ತದೆ. ಆಗ ಕೋಪಗೊಂಡ ಮಾಚಿದೇವರು ತಾನು ಭಕ್ತರ ಬಟ್ಟೆ ವಸ್ತ್ರ ಮಡಿ ಮಾಡುವೆನೆ ಹೊರತು ಭವಿಗಳ ಬಟ್ಟೆಯನ್ನಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಸೈನಿಕರು ಮಾಚಿದೇವರನ್ನು ಬಂಧಿಸಿ ಆನೆಗೆ ಕಟ್ಟಿ ಎಳೆದುಕೊಂಡು ಹೋಗಲು ಮುಂದಾದಾಗ, ಉಗ್ರರಾದ ಅವರು, ತಮ್ಮ ವೀರಗತ್ತಿಯಿಂದ ಆನೆಯನ್ನು ಕೊಂದು ಬಿಡುತ್ತಾರೆ. ಸೈನಿಕರು ಮಾಚಿದೇವರ ಕಾರ್ಯವನ್ನು ಬಿಜ್ಜಳನಿಗೆ ಹೇಳುತ್ತಾರೆ. ಬಿಜ್ಜಳ ಬಸವಣ್ಣನವರನ್ನು ಕರೆದುಕೊಂಡು ಮಾಚಿದೇವರ ಮನೆಗೆ ಬಂದು ಕಾರಣ ಕೇಳುತ್ತಾನೆ. ಆಗ ಮಾಚಿದೇವರು ಸತ್ಯ ಶುದ್ಧ ಕಾಯಕ ಮಾಡುವ ಶರಣರ ಬಟ್ಟೆಯನ್ನು ಮಾತ್ರ ತಾವು ಮಡಿ ಮಾಡುವುದಾಗಿ ಹೇಳುತ್ತಾರೆ. ಇದು ವರ್ಗ ಸಂಘರ್ಷದ ಮೊದಲ ಕ್ರಾಂತಿಯ ಕಹಳೆ ಎಂದರೆ ತಪ್ಪಾಗಲಾರದು. ಆಗ ಬಿಜ್ಜಳ ಮಹಾರಾಜನು ಮಡಿವಾಳ ಮಾಚಿದೇವರಲ್ಲಿ ಕ್ಷಮೆ ಕೇಳುತ್ತಾನೆ.

ಮಡಿವಾಳ ಮಾಚಿದೇವರ ದೀಕ್ಷಾ ಗುರು ಮಲ್ಲಿಕಾರ್ಜುನ ಹಾಗೂ ಪೂರ್ವಾಶ್ರಮದ ದೈವವು ಕಲ್ಲಿನಾಥ. ಹೀಗಾಗಿ ಇವರ ವಚನಗಳಲ್ಲಿ ಕಲಿದೇವರ ದೇವಾ ಎಂಬ ಅಂಕಿತವನ್ನು ಕಾಣುತ್ತೇವೆ. ಮಡಿವಾಳ ಮಾಚಿದೇವರ ಒಟ್ಟು 146 ವಚನಗಳು ದೊರೆತಿವೆ. ಅವರ ವಚನಗಳಲ್ಲಿ ನಿಷ್ಠುರತೆ, ಗಣಾಚಾರ, ಕಲಿತನ, ಸಾಮಾಜಿಕ ಕಳಕಳಿ, ವಿಡಂಬನೆ ಮತ್ತು ಟೀಕೆಗಳನ್ನು ಕಾಣುತ್ತೇವೆ.

ಅಕ್ಕನಾಗಮ್ಮ ತನ್ನ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ:

ಅಂಗದಿಂದುದಯವಾದಾತ ಮಡಿವಾಳಯ್ಯ.
ಲಿಂಗದಿಂದುದಯವಾದಾತ ರೇವಣಸಿದ್ಧಯ್ಯ.
ಭಸ್ಮದಿಂದುದಯವಾದಾತ ಸಿದ್ಧರಾಮಯ್ಯ.
ಪಾದೋದಕದಿಂದ ಉದಯವಾದವಳು ಅಕ್ಕಮಹಾದೇವಿ.
ಮಂತ್ರದಿಂದುದಯವಾದಾತ ನಿಮ್ಮ ಸೋದರಮಾವ ಬಸವಯ್ಯ.
ಪ್ರಸಾದದಿಂದುದಯವಾದಾತ ನೀನಲ್ಲವೆ ಚೆನ್ನಬಸವಯ್ಯ.
ಬಸವಣ್ಣಪ್ರಿಯ ಚೆನ್ನಸಂಗಯ್ಯ.

ಶರೀರ ಸಹಜ ಧರ್ಮಕ್ಕೆ ಜನಿಸಿದವರು ಮಡಿವಾಳಯ್ಯನು, ಲಿಂಗ ಅಂದರೆ ಸಮಷ್ಟಿ ಭಾವಕ್ಕೆ ಹುಟ್ಟಿದವರು ರೇವಣಸಿದ್ಧರು, ಭಸ್ಮದಿಂದ ಹುಟ್ಟಿದವರು ಸಿದ್ಧರಾಮರು, ಜ್ಞಾನದ ಪಾಠಕ್ಕಾಗಿ ಹುಟ್ಟಿದವಳು ಅಕ್ಕಮಹಾದೇವಿ, ಮಂತ್ರದಿಂದುದಯವಾದಾತ ನಿಮ್ಮ ಸೋದರಮಾವ ಬಸವಯ್ಯ, ಎಂದೆನ್ನುತ್ತಾ ಪ್ರಸಾದ ಪ್ರಸನ್ನತೆಯಿಂದ ಹುಟ್ಟಿದವ ನೀನು ಚೆನ್ನಬಸವಣ್ಣ ಎಂದು ಹೇಳುತ್ತಾ ಅವರವರ ಹುಟ್ಟಿನ ಸಾರ್ಥಕತೆಯನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ ಅಕ್ಕನಾಗಮ್ಮ.

ಅದೇ ರೀತಿಯಲ್ಲಿ ಮಹಾಜ್ಞಾನಿ ಅಲ್ಲಮರು ತಮ್ಮ ವ್ಯಕ್ತಿತ್ವದಲ್ಲಿ ಮಡಿವಾಳ ಮಾಚಿದೇವರ ಸ್ಥಾನವನ್ನು ಹೀಗೆ ಗುರುತಿಸುತ್ತಾರೆ:
ಎನ್ನ ಕಾಯವ ಬಸವಣ್ಣನಳವಡಿಸಿಕೊಂಡ.
ಎನ್ನ ಮನವ ಚನ್ನಬಸವಣ್ಣನಳವಡಿಸಿಕೊಂಡ.
ಎನ್ನ ಭಾವವ ಮಡಿವಾಳಯ್ಯನಳವಡಿಸಿಕೊಂಡ-
ಇಂತೀ ಮೂವರು ಒಂದೊಂದನಳವಡಿಸಿಕೊಂಡ ಕಾರಣ
ಗುಹೇಶ್ವರಾ, ನಿಮ್ಮ ಶರಣರೆಂಬ ತ್ರಿಮೂರ್ತಿಗಳಿಗೆ
ನಮೋ ನಮೋ ಎನುತಿರ್ದೆನು.

ಕಾಯ, ಮನಸ್ಸು ಮತ್ತು ಭಾವ (ಆತ್ಮ ) ಇವು ಚೈತನ್ಯದ ಸಂಯೋಜನೆ. ಬಸವಣ್ಣನವರು ಅಲ್ಲಮರ ಕಾಯವನ್ನು ಅಳವಡಿಸಿಕೊಂಡರು. ಮನವನ್ನು ಚೆನ್ನಬಸವಣ್ಣ ಅಳವಡಿಸಿಕೊಂಡರು. ಭಾವವನ್ನು ಮಡಿವಾಳಯ್ಯನವರು ಅಳವಡಿಸಿಕೊಂಡರು. ಹೀಗಾಗಿ ಗುಹೇಶ್ವರ ಲಿಂಗದಲ್ಲಿ ನಾನು ಬಯಲಾದೆನು ಎಂದು ಅಲ್ಲಮರು ತಮ್ಮ ನಿರಾಳತೆಯನ್ನು ವ್ಯಕ್ತಪಡಿಸುತ್ತಾರೆ.

ಬಸವಣ್ಣನವರು ಮಡಿವಾಳ ಮಾಚಿದೇವರ ಕರ್ತೃತ್ವದ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದರೆನ್ನುವುದು ಈ ಕೆಳಗಿನ ವಚನದಲ್ಲಿ ವ್ಯಕ್ತವಾಗುತ್ತದೆ:

ಎನ್ನ ಭಕ್ತಿಯ ಶಕ್ತಿಯು ನೀನೆ,
ಎನ್ನ ಯುಕ್ತಿಯ ಶಕ್ತಿಯು ನೀನೆ,
ಎನ್ನ ಮುಕ್ತಿಯ ಶಕ್ತಿಯು ನೀನೆ.
ಎನ್ನ ಮಹಾಘನದ ನಿಲವಿನ ಪ್ರಭೆಯನುಟ್ಟು
ತಳವೆಳಗಾದ ಸ್ವಯಜ್ಞಾನಿ
ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕಗಳ ನಿಲವ
ಮಡಿವಾಳನಿಂದರಿದು ಬದುಕಿದೆನಯ್ಯಾ, ಪ್ರಭುವೆ.

ತಮ್ಮ ಭಕ್ತಿಯಾ ಶಕ್ತಿ, ಯುಕ್ತಿಯಾ ಶಕ್ತಿ, ಮುಕ್ತಿಯಾ ಶಕ್ತಿ, ಮಹಾ ಘನದ ನಿಲುವನುಟ್ಟು ಬದುಕಿದ ಸ್ವಯಂ ಜ್ಞಾನಿಗಳು ಮಡಿವಾಳಯ್ಯನವರು ಎಂದು ನೆನೆಯುತ್ತಾರೆ ಬಸವಣ್ಣನವರು. ಅವರ ಜ್ಞಾನದಿಂದ ಅಕ್ಕಮಹಾದೇವಿಯವರ ಅರಿವಿನ ವಿಸ್ತಾರವು ತಮಗೆ ಅರಿವಾಯಿತೆಂದು ಹೇಳಿದ್ದಾರೆ.

ವೈರಾಗ್ಯ ಮೂರ್ತಿ ಅಕ್ಕಮಹಾದೇವಿ ಕಲ್ಯಾಣಕ್ಕೆ ಬಂದು ಎಲ್ಲ ಶರಣರ ಭಾವಗಳಲ್ಲಿ ಬೆರೆತು ಮಹಾ ಮನೆಯ ಮಗಳಾಗಿ, ತಾನು ಕಂಡ ಶರಣರ ದಿವ್ಯ ವ್ಯಕ್ತಿತ್ವವನ್ನು ಹರುಷದಿಂದ ಕೊಂಡಾಡಿದ್ದಾಳೆ:

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ,
ಸಿದ್ಧರಾಮಯ್ಯನೆ ಜಂಗಮ,
ಮಡಿವಾಳಯ್ಯನೆ ಜಂಗಮ,
ಚೆನ್ನಬಸವಣ್ಣನೆನ್ನ ಪರಮಾರಾಧ್ಯರು.
ಇನ್ನು ಸುಖಿಯಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.

ಬಸವಣ್ಣ ತನ್ನ ಅರಿವಿನ ಗುರು, ಅಲ್ಲಮರು ತನ್ನ ಯೋಗದ ಲಿಂಗ ಸ್ವರೂಪಿಗಳು, ಸಿದ್ಧರಾಮರು ಮತ್ತು ಮಡಿವಾಳಯ್ಯನವರು ತಮಗೆ ಜಂಗಮ ಸ್ವರೂಪಿಗಳು, ಜ್ಞಾನ ಮತ್ತು ಕ್ರಿಯೆಗಳನ್ನು ಸಮನ್ವಯಿಸಿದವರು. ಚೆನ್ನಬಸವಣ್ಣ ತನಗೆ ಪರಮಾರಾಧ್ಯ ಎಂದು ತನ್ನ ಪರಮ ಸುಖದ ಆಧ್ಯಾತ್ಮಿಕ ಬದುಕನ್ನು ಹೇಳುತ್ತಾಳೆ.

ದಿಟ್ಟ ಶರಣೆ ಆಯ್ದಕ್ಕಿ ಲಕ್ಕಮ್ಮ ಕಲ್ಯಾಣದಲ್ಲಿ ನೆಲೆನಿಂತು, ಶರಣರ ಸಂಕುಲದಲ್ಲಿ ತಾನು ಕಂಡುಕೊಂಡ ಬೇರೆ ಬೇರೆ ಭಾವಗಳನ್ನು ಈ ರೀತಿಯಾಗಿ ಹೇಳಿದ್ದಾಳೆ:

ಬಸವಣ್ಣನ ಪ್ರಸಾದವಕೊಂಡು ಎನ್ನ ಕಾಯ ಶುದ್ಧವಾಯಿತ್ತಯ್ಯಾ.
ಚೆನ್ನಬಸವಣ್ಣನ ಪ್ರಸಾದವಕೊಂಡು ಎನ್ನ ಜೀವ ಶುದ್ಧವಾಯಿತ್ತಯ್ಯಾ.
ಮಡಿವಾಳಯ್ಯನ ಪ್ರಸಾದವಕೊಂಡು ಎನ್ನ ಭಾವ ಶುದ್ಧವಾಯಿತ್ತಯ್ಯಾ.
ಶಂಕರದಾಸಿಮಯ್ಯನ ಪ್ರಸಾದವಕೊಂಡು ಎನ್ನ ತನು ಶುದ್ಧವಾಯಿತ್ತಯ್ಯಾ.
ಸಿದ್ಧರಾಮಯ್ಯನ ಪ್ರಸಾದವಕೊಂಡು ಎನ್ನ ಮನ ಶುದ್ಧವಾಯಿತ್ತಯ್ಯಾ.
ಘಟ್ಟಿವಾಳಯ್ಯನ ಪ್ರಸಾದವಕೊಂಡು ಎನ್ನ ಪ್ರಾಣ ಶುದ್ಧವಾಯಿತ್ತಯ್ಯಾ.
ಅಕ್ಕನಾಗಾಯಮ್ಮನ ಪ್ರಸಾದವಕೊಂಡು ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ.
ಮುಕ್ತಾಯಕ್ಕಗಳ ಪ್ರಸಾದವಕೊಂಡು ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ.
ಪ್ರಭುದೇವರ ಪ್ರಸಾದವಕೊಂಡು ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ.
ಇವರು ಮುಖ್ಯವಾದ ಏಳುನೂರೆಪ್ಪತ್ತು ಅಮರಗಣಂಗಳ
ಪ್ರಸಾದವಕೊಂಡು ಬದುಕಿದೆನಯ್ಯಾ
ಮಾರೇಶ್ವರಪ್ರಿಯ ಅಮರೇಶ್ವರ.
ನಿಮ್ಮ ಶರಣರ ಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ನಮೋ ಎನುತಿರ್ದೆನು.

ಮಹಾಜ್ಞಾನಿ ಅಲ್ಲಮರಂತೆ ಮಡಿವಾಳ ಮಾಚಿದೇವರಲ್ಲಿ ಆಯ್ದಕ್ಕಿ ಲಕ್ಕಮ್ಮ ತನ್ನ ಭಾವ ಶುದ್ಧಿಯನ್ನು ಕಾಣುತ್ತಾಳೆ ಎಂದರೆ ಮಾಚಿದೇವರು ಎಷ್ಟೊಂದು ಪರಿಶುದ್ಧಾತ್ಮರಾಗಿದ್ದರು ಎಂದು ತಿಳಿದು ಬರುತ್ತದೆ.

ಚೆನ್ನಬಸವಣ್ಣ ಇವರೆಲ್ಲರಿಗಿಂತ ಅತ್ಯಂತ ಭಿನ್ನವಾಗಿ ಬಸವಣ್ಣ, ಅಲ್ಲಮ ಮತ್ತು ಮಡಿವಾಳರನ್ನು ತಮ್ಮಲ್ಲಿ ಅಳವಡಿಸಿಕೊಂಡು ಹೇಗೆ ಬದುಕಿದೆ ಎಂಬುದನ್ನು ಹೀಗೆ ಹೇಳಿದ್ದಾರೆ:
ಎನ್ನಂತರಂಗವೆ ಬಸವಣ್ಣ. ಬಹಿರಂಗವೆ ಮಡಿವಾಳಯ್ಯ,
ಈ ಉಭಯದ ಸಂಗವೆ ಪ್ರಭುದೇವರು!
ಇಂತೀ ಮೂವರ ಕರುಣದ ಕಂದನಾಗಿ ಬದುಕಿದೆ ಕಾಣಾ
ಕೂಡಲಚೆನ್ನಸಂಗಮದೇವಾ.
ಅಂತರಂಗ ಬಸವಣ್ಣನಾದರೆ, ಬಹಿರಂಗ ಸ್ವರೂಪ ಗಣಾಚಾರ ಮೂರ್ತಿ ಮಡಿವಾಳ ಮಾಚಿದೇವರು. ಇವರಿಬ್ಬರ ಸಮನ್ವಯ ಮೂರ್ತಿ ಅಲ್ಲಮರು. ಇಂತಪ್ಪ ತ್ರಿವಿಧ ಕಾರುಣ್ಯ ಪುರುಷರ ಕರುಣದಿಂದ ತಾವು ಬದುಕಿದುದಾಗಿ ಚೆನ್ನಬಸವಣ್ಣನವರು ಹೆಮ್ಮೆ ಅಭಿಮಾನದಿಂದ ಹೇಳುತ್ತಾರೆ.

ಮಡಿವಾಳ ಮಾಚಿದೇ��� ಅತ್ಯಂತ ದಿಟ್ಟ ಗಣಾಚಾರಿಯಾಗಿ ಕಲ್ಯಾಣದ ಎಲ್ಲ ಶರಣರ ಪ್ರೀತಿ ವಿಶ್ವಾಸ ಗಳಿಸಿದರು. ಪ್ರತಿ ನಿತ್ಯ ಬಸವಣ್ಣನವರ ಮಹಾಮನೆಗೆ, ಅನುಭವ ಮಂಟಪಕೆ ನಿಕಟವಾಗುತ್ತಾ, ಶರಣರ ಆತ್ಮೀಯತೆಯನ್ನು ಸಂಪಾದಿಸಿಕೊಂಡರು. ಮಾಚಿದೇವರಿಗೆ ಲಿಂಗ ತತ್ವದ ರೂವಾರಿಗಳಾದ ಬಸವಣ್ಣನವರೆಂದರೆ ಅತ್ಯಂತ ಪ್ರೀತಿಯ ಮೌಲಿಕ ವ್ಯಕ್ತಿ. ಅವರನ್ನು ತಮ್ಮ ಅನೇಕ ವಚನಗಳಲ್ಲಿ ಸ್ಮರಿಸಿದ್ದಾರೆ:

ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ.
ಸನ್ನಿಹಿತವು ಬಸವಣ್ಣನಿಂದ.
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ.
ಜಂಗಮ ಬಸವಣ್ಣನಿಂದ.
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.
ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ, ಕಲಿದೇವರದೇವಾ.

ಕಲ್ಯಾಣದ ತುಂಬೆಲ್ಲ ಬಸವನೆಂಬ ಬಳ್ಳಿ ಪಸರಿಸಿದೆ. ಆ ಬಳ್ಳಿಗೆ ಲಿಂಗವೆಂಬ ಅನೇಕ ತಾತ್ವಿಕ ಗೊಂಚಲಗಳು. ಒತ್ತಿ ಹಿಂಡಿದರೆ ಭಕ್ತಿಯ ರುಚಿಯಾದ ರಸವು. ಆಯತ, ಸ್ವಾಯತ, ಸನ್ನಿಹಿತ, ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ ಬಸವಣ್ಣನಿಂದ ಹುಟ್ಟಿಕೊಂಡಿವೆ. ಅತ್ತ ಇತ್ತ ಚದುರಿ ಹೋದ ನೀವೆಲ್ಲಾ ಕೇಳಿ, ಬಸವಣ್ಣನವರನ್ನು ನೆನೆಯುತ್ತಾ ಮಜ್ಜನಕ್ಕೆರೆಯದಿದ್ದರೆ ನಿಮ್ಮ ಭಕ್ತಿಗೆ ಅರ್ಥವಿಲ್ಲ ಎಂದು ಸಮಗ್ರ ಸಮತೆಯ ಕ್ರಾಂತಿಯ ರೂವಾರಿ ಬಸವಣ್ಣ ಎಂದು ಕೃತಜ್ಞತೆಯಿಂದ ನೆನೆಯುವ ಮಾಚಿದೇವರ ವಚನಗಳಲ್ಲಿ ಕಲ್ಯಾಣದ ಕುರಿತು ಐತಿಹಾಸಿಕ ದಾಖಲೆಗಳು ದೊರೆಯುತ್ತವೆ.

ಶರಣರು ಸ್ಥಿತಪ್ರಜ್ಞರು. ಅವರಿಗೆ ಸುಖ ಕಷ್ಟಗಳು ಬಿಸಿಲು ನೆರಳಿನಂತೆ, ಹೀಗಾಗಿ ಮಡಿವಾಳ ಮಾಚಿದೇವರು ತಮಗೆ ಸುಖ ಬಂದಲ್ಲಿ ದುಃಖ ಬಂದಲ್ಲಿ ಬಸವಣ್ಣನಾ ನೆನೆವೆನು, ಲಿಂಗಾರ್ಚನೆ, ಜಂಗಮಾರ್ಚನೆ ಮಾಡುವಲ್ಲಿ ಬಸವಣ್ಣನ ನೆನೆಯುವೆ, ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ. ಇದು ಕಾರಣ, ಬಸವಣ್ಣ ಬಸವಣ್ಣ ಎನುತಿರ್ದೆನು ಎಂದು ಹೇಳುತ್ತಾ ಬಸವಣ್ಣ ವ್ಯಕ್ತಿ ಮಾತ್ರವಾಗಿರದೆ ಶರಣ ಸಂಕುಲಕೆ ಶಕ್ತಿಯಾಗಿದ್ದರು, ಮಂತ್ರಪುರುಷರಾಗಿದ್ದರು ಎಂದು ಅಭಿಮಾನದಿಂದ ನುಡಿಯುತ್ತಾರೆ.

ಬಸವಣ್ಣನವರ ಗಡಿಪಾರಿನ ನಂತರ ಕಲ್ಯಾಣ ಕ್ರಾಂತಿಯ ಹೋರಾಟದಲ್ಲಿ ಚೆನ್ನಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಶರಣ ಸೇನೆಯನ್ನು ಹುರುದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ ಮುನ್ನಡೆಯುತ್ತಾರೆ. ಮಾದನ ಹಿಪ್ಪರಗಿ, ಬೆಳಗಾವಿ, ಕಾದ್ರೊಳ್ಳಿ, ಹುಣಶೀಕಟ್ಟಿ, ಮೂಗಬಸವ, ಮುರಗೋಡ, ತಲ್ಲೂರು, ಕಾರಿಮನಿ, ಕಟಕೋಳ, ಚಂದರಗಿ ಮಾರ್ಗವಾಗಿ ಬಂದು ಗೊಡಚಿಗೆಯಲ್ಲಿ ಮಾಚಿದೇವರು ಐಕ್ಯರಾಗುತ್ತಾರೆ. ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಿಂದ 15 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿರುವ ಮುದಿ ವೀರಣ್ಣನ ಗುಡಿಯೇ ಶರಣ ಮಡಿವಾಳ ಮಾಚಿದೇವರ ಐಕ್ಯಸ್ಥಳ. ಮುದಿ ವೀರಣ್ಣನ ಕೈಯಲ್ಲಿ ಖಡ್ಗ ಮತ್ತು ಎದೆಯ ಮೇಲೆ ಇಷ್ಟಲಿಂಗದ ಕರಡಗಿ ಇದೆ. ಮಡಿವಾಳ ಮಾಚಿದೇವನನ್ನು ಪುರಾಣಗಳಲ್ಲಿ ವೀರಭದ್ರನ ಅವತಾರವೆಂದು ಬಿಂಬಿಸುತ್ತಾರೆ. ಹೀಗಾಗಿ ಜಾನಪದ ಸಾಹಿತಿಗಳು, ಅನೇಕ ಸಂಶೋಧಕರು, ತಜ್ಞರು ಮಡಿವಾಳ ಮಾಚಿದೇವರ ಐಕ್ಯಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಅಭಿಮತಕ್ಕೆ ಬಂದಿದ್ದಾರೆ. ಮಡಿವಾಳ ಮಾಚಿದೇವರ ಶಿಲ್ಪ ಕಲೆಯ ಮೂರ್ತಿಗಳನ್ನು ಗದಗ, ಮುಳಗುಂದ, ಶಿಂಗಟಾಲೂರು ಮುಂತಾದ ಪ್ರದೇಶಗಳಲ್ಲಿ ಕಾಣುತ್ತೇವೆ.

ಶರಣರ ಒಂದು ತಂಡ ತೊರಗಲ್ಲ, ಮುನವಳ್ಳಿ, ಸವದತ್ತಿ, ಧಾರವಾಡ ಮಾರ್ಗದಲ್ಲಿ ಉಳವಿಗೆ ಹೋಯಿತು. ಇನ್ನೊಂದು ತಂಡದ ಶರಣರು ಉಣಕಲ್, ಹುಬ್ಬಳ್ಳಿ, ಎಣ್ಣೆ ಹೊಳೆ, ನುಲಿಗನೂರು ಮುಂತಾದ ಪ್ರದೇಶಗಳಲ್ಲಿ ಚದುರಿದರು.
ವೀರಭದ್ರ ದೇವರ ಗುಗ್ಗಳದಲ್ಲಿಯೂ ಅಂಬಿಗರ ಚೌಡಯ್ಯನವರ ವಚನ, ಮಡಿವಾಳ ಮಾಚಿದೇವರ ವಚನ, ಅಲ್ಲಮರ ಬೆಡಗಿನ ವಚನಗಳು ಹೇಳಲ್ಪಡುತ್ತವೆ. ಗುಗ್ಗಳದಲ್ಲಿನ ಪುರವಂತರ ಉಡುಪು, ಅಲ್ಲಿರುವ ಸಂಬಾಳ ವಾದ್ಯಗಳು ಕಲ್ಯಾಣದ ಚಾಲುಕ್ಯ ಕಳಚೂರ್ಯರ ಸೈನಿಕ ಸೇನೆಯ ವಾದ್ಯ ಪೋಷಾಕುಗಳಾಗಿವೆ.
ಕಲ್ಯಾಣ ಕ್ರಾಂತಿಯ ಕೊನೆಯ ಘಟ್ಟದ ಹೋರಾಟದಲ್ಲಿ ಮಾಚಿದೇವರು ತಮ್ಮ ಪರಾಕ್ರಮದಿಂದ ವಚನ ಸಾಹಿತ್ಯ ಉಳಿಸುವಲ್ಲಿ ಅನುಪಮ ಸೇವೆಗೈದಿದ್ದಾರೆ. ಮಡಿವಾಳ ಮಾಚಿದೇವರು ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ಶರಣ, ದಿಟ್ಟ ಗಣಾಚಾರಿ.

Previous post ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ
Next post ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…

Related Posts

ದುಡಿಮೆಯೆಲ್ಲವೂ ಕಾಯಕವೇ?
Share:
Articles

ದುಡಿಮೆಯೆಲ್ಲವೂ ಕಾಯಕವೇ?

November 10, 2022 ಡಾ. ಪಂಚಾಕ್ಷರಿ ಹಳೇಬೀಡು
‘ಕಾಯಕವೇ ಕೈಲಾಸ’ ಎಂಬ ಜಗತ್ಪ್ರಸಿದ್ದ ನಾಣ್ಣುಡಿಯನ್ನು ಇಂಗ್ಲಿಷ್ ಭಾಷೆಯಲ್ಲಿ ಸರಳವಾಗಿ ‘ವರ್ಕ್ ಈಸ್ ವರ್ಷಿಪ್’ ಎಂದು ಹೇಳುವುದನ್ನು ನಾವೆಲ್ಲಾ ನೋಡಿಯೇ/ ಕೇಳಿಯೇ...
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
Share:
Articles

ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ

September 7, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮನುಷ್ಯ ಯಾವಾಗಲೂ ನೆಮ್ಮದಿ, ಸುಖ, ಶಾಂತಿಯಿಂದ ಬಾಳಬೇಕೆಂದು ಬಯಸುತ್ತಾನೆ. ಸಾಕಷ್ಟು ವೇತನ ಬರುವ ಉದ್ಯೋಗ, ದೊಡ್ಡ ಮನೆ, ಓಡಾಡಲು ವಾಹನ, ರಾಜಕೀಯ ಸ್ಥಾನ-ಮಾನ, ಪ್ರಚಾರ,...

Comments 3

  1. Madapathi.V.V
    Jul 7, 2018 Reply

    ಅದ್ಭುತವಾದ ಚಿಂತನೆ..
    ಶರಣು ಶರಣಾರ್ಥಿಗಳು ಅಣ್ಣಾ ಶರಣರೆ.

  2. Prasanna Hosur
    Jul 20, 2020 Reply

    ನಿಮ್ಮ ಆರ್ಟಿಕಲ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಆದರೆ ಇನ್ನೂ ಸ್ವಲ್ಪ ಮಾಹಿತಿಗಳು ಮಿಸ್ ಆಗಿವೆ ಮಡಿವಾಳ ಮಾಚಿದೇವರ ಕುರಿತು .
    ತಮಗೆ ಶರಣು ಶರಣಾರ್ಥಿಗಳು🙏💐

  3. ಡಾ ಸರ್ವಮಂಗಳ ಸಕ್ರಿ
    Jul 26, 2020 Reply

    ಅರ್ಥ ಪೂರ್ಣ ವೈಚಾರಿಕ ಸಂಶೋಧನಾ ಲೇಖನ ಡಾ ಶಶಿಕಾಂತ ಪಟ್ಟಣ ಸರ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ನಾನು ಯಾರು?
ನಾನು ಯಾರು?
December 8, 2021
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಲಿಂಗಾಚಾರ
ಲಿಂಗಾಚಾರ
May 6, 2021
ಆ ಬಿರುಗಾಳಿ ಹುಟ್ಟಲೊಡನೆ…
ಆ ಬಿರುಗಾಳಿ ಹುಟ್ಟಲೊಡನೆ…
January 8, 2023
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
August 2, 2019
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
Copyright © 2023 Bayalu